Spike in Heart Attacks | ದೇಶದ ಗಮನ ಸೆಳೆದ ಕರ್ನಾಟಕದ ಹೃದಯಾಘಾತ ಪ್ರಕರಣಗಳ ದಿಢೀರ್ ಏರಿಕೆ : ಪ್ರಧಾನಿ ಜತೆ ಡಾ.ಸಿ.ಎನ್.ಮಂಜುನಾಥ್ ಚರ್ಚೆ
ಹಾಸನ ಜಿಲ್ಲೆಯಲ್ಲಿ ಕಳೆದ 39 ದಿನಗಳಲ್ಲಿ 18 ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ಕುರಿತು ಸಂಸದ ಹಾಗೂ ಹೃದಯ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ತೀರ್ಮಾನಿಸಿದ್ದಾರೆ.;
ರಾಜ್ಯದಲ್ಲಿ ಅತಿ ಹೆಚ್ಚು ವಯಸ್ಕರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ವಿಚಾರ ಈಗ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ.
ಹಾಸನ ಜಿಲ್ಲೆಯಲ್ಲಿ ಕಳೆದ 39 ದಿನಗಳಲ್ಲಿ 18 ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ಕುರಿತು ಸಂಸದ ಹಾಗೂ ಹೃದಯ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ತೀರ್ಮಾನಿಸಿದ್ದಾರೆ.
ಹೃದಯಘಾತ ನಿಯಂತ್ರಣ ಸಂಬಂಧ ಡಾ. ಸಿ.ಎನ್ ಮಂಜುನಾಥ್ ಅವರು ಈಗಾಗಲೇ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಮತ್ತು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆ ಚರ್ಚೆ ನಡೆಸಿದ್ದಾರೆ.
ಸ್ಟೆಮಿ ಯೋಜನೆ ಜಾರಿಗೆ ಮನವಿ
ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಲ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬೇಲೂರು, ಸಕಲೇಶಪುರ, ಆಲೂರು, ಅರಕಲಗೂಡು ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ (STEMI) ಯೋಜನೆ ಜಾರಿ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ಕುಮಾರ್ ಅವರು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಎದೆ ನೋವಿನಿಂದ ಬಳಲುತ್ತಿರುವವರಿಗೆ ಜಯದೇವ ಆಸ್ಪತ್ರೆ ಸಹಯೋಗದೊಂದಿಗೆ ಚಿಕಿತ್ಸೆ ನೀಡುವುದು ಸ್ಟೆಮಿ ಯೋಜನೆಯ ಉದ್ದೇಶವಾಗಿದೆ.
ಈ ಕಾರ್ಯಕ್ರಮದಡಿ ಎದೆ ನೋವು ಕಾಣಿಸಿಕೊಂಡಾಗ ರೋಗಿಗಳ ಇಸಿಜಿ ವರದಿಯನ್ನು ಜಯದೇವ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ವೈದ್ಯರು ವರದಿ ಪರಿಶೀಲಿಸಿ ಚಿಕಿತ್ಸೆಯ ಬಗ್ಗೆ ತಾಲೂಕು ಆಸ್ಪತ್ರೆ ವೈದ್ಯರಿಗೆ ಅಗತ್ಯ ಮಾರ್ಗದರ್ಶನ ಮಾಡಲಿದ್ದಾರೆ.
ಪ್ರಸ್ತುತ, ಹಾಸನ ಜಿಲ್ಲಾ ಆಸ್ಪತ್ರೆ, ಹೊಳೆನರಸೀಪುರ ಹಾಗೂ ಅರಸೀಕೆರೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಲ್ಲಿದೆ. ಈಗ ಈ ಯೋಜನೆಯನ್ನು ಉಳಿದ ಐದೂ ತಾಲ್ಲೂಕು ಆಸ್ಪತ್ರೆಗಳಿಗೆ ವಿಸ್ತರಣೆ ಮಾಡಬೇಕು ಎಂದು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.
86 ತಾಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ ಜಾರಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಡಿ ರಾಜ್ಯದ 86 ತಾಲೂಕು ಆಸ್ಪತ್ರೆಗಳಲ್ಲಿ ಸರ್ಕಾರ ಸ್ಟೆಮಿ ಯೋಜನೆ ಜಾರಿಗೊಳಿಸಿದೆ.
ತಾಲೂಕು ಆಸ್ಪತ್ರೆಗಳಲ್ಲಿ ಹಬ್ ಅ್ಯಂಡ್ ಸ್ಪೋಕ್ ಮಾದರಿ ಅಳವಡಿಕೆಯಿಂದ ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣ ಕಡಿಮೆ ಮಾಡಬಹುದಾಗಿದೆ.
ತುರ್ತು ಚಿಕಿತ್ಸಾ ವಿಭಾಗದಲ್ಲಿ ಹೃದಯಾಘಾತಕ್ಕೆ ತ್ವರಿತ ಚಿಕಿತ್ಸೆಗೆ ಸ್ಟೆಮಿ ಸಹಾಯಕವಾಗಲಿದೆ.
ರೋಗಿಗಳು ಎದೆನೋವಿನಿಂದ ಆಸ್ಪತ್ರೆಗೆ ಬಂದರೆ ಮೊದಲು ಇಸಿಜಿ ಮಾಡಿ ಮಾಹಿತಿಯನ್ನು ಜಯದೇವ ಹೃದ್ರೋಗ ಹಬ್ಗೆ ರವಾನಿಸಲಾಗುತ್ತದೆ. ಅಲ್ಲಿನ ನುರಿತ ವೈದ್ಯರು ಕಾಯಿಲೆ ಗುರುತಿಸಿ ಚಿಕಿತ್ಸೆ ಕುರಿತಂತೆ ತಾಲೂಕು ಆಸ್ಪತ್ರೆ ವೈದ್ಯರಿಗೆ ಮಾರ್ಗದರ್ಶನ ನೀಡುತ್ತಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಹೃದ್ರೋಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.
ಕಡಿಮೆಯಾದ ಮರಣ ಪ್ರಮಾಣ ಸಕಾಲಿಕ ಚಿಕಿತ್ಸೆ ಖಾತ್ರಿಪಡಿಸುವ STEMI ಕಾರ್ಯಕ್ರಮದಿಂದ ಸಾವುಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿ ಹೊಂದಲಾಗಿದೆ.
ರಾಜ್ಯದ 15 ಜಿಲ್ಲೆಗಳಲ್ಲಿ ಯೋಜನೆ ಜಾರಿ
ಕರ್ನಾಟಕದಲ್ಲಿ ಮೊದಲ ಹಂತದ STEMI ಕಾರ್ಯಕ್ರಮವನ್ನು 15 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ಕಲ್ಬುರ್ಗಿ, ಬಿಜಾಪುರ, ಯಾದಗಿರಿ, ರಾಯಚೂರು ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಜನರಲ್ ಆಸ್ಪತ್ರೆಗಳನ್ನು STEMI ಪತ್ತೆ ಮತ್ತು ಥ್ರಂಬೋಲಿಸಿಸ್ಗಾಗಿ ಸ್ಪೋಕ್ ಕೇಂದ್ರಗಳೆಂದು ಗುರುತಿಸಲಾಗಿದೆ. ಇಲ್ಲಿ ಇಸಿಜಿ ಹಾಗೂ ಚಿಕಿತ್ಸೆಯನ್ನು ಹೃದ್ರೋಗ ತಜ್ಞರ ಸಲಹೆ ಮೇರೆಗೆ ನೀಡಲಾಗುತ್ತದೆ. ಕ್ಲಿಷ್ಟಕರ ಪ್ರಕರಣಗಳನ್ನು ಹೆಚ್ಚಿನ ನಿರ್ವಹಣೆಗಾಗಿ CATH LAB ಸೌಲಭ್ಯವನ್ನು ಹೊಂದಿರುವ 3 ಹಬ್ಗಳಾದ ಬೆಂಗಳೂರು, ಮೈಸೂರು ಹಾಗೂ ಕಲಬುರಗಿಯ ಜಯದೇವ ಆಸ್ಪತ್ರೆಗಳಿಗೆ ರವಾನಿಸಲಾಗುತ್ತದೆ.
ಸ್ಟೆಮಿ ಯೋಜನೆ ಜಾರಿಯಾದ ಆರು ತಿಂಗಳಲ್ಲೇ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಎದೆನೋವಿನಿಂದ ಬಳಲುತ್ತಿದ್ದ 56,484 ರೋಗಿಗಳು ಬಂದಿದ್ದರು ಎಂಬುದು ಆರೋಗ್ಯ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಮೊದಲ ಹಂತದ ಕಾರ್ಯಕ್ರಮಕ್ಕೆ ಬಜೆಟ್ ಎಷ್ಟು?
ಸ್ಟೆಮಿ ಮೊದಲ ಹಂತದ ಕಾರ್ಯಕ್ರಮವನ್ನು 15 ಜಿಲ್ಲೆಗಳಲ್ಲಿ ಜಾರಿಗೆ ತಂದಿದ್ದು, 45 ಸ್ಪೋಕ್ ಆಸ್ಪತ್ರೆಗಳು ಮತ್ತು ಮೂರು ಹಬ್ ಆಸ್ಪತ್ರೆಗಳನ್ನು ನಿಗದಿ ಮಾಡಲಾಗಿದೆ. ಕಾರ್ಯಕ್ರಮ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ 3.8 ಕೋಟಿ ರೂ.ಮೀಸಲಿರಿಸಿದೆ.
ಎರಡನೇ ಹಂತದಲ್ಲಿ ಸ್ಟೆಮಿ ಕಾರ್ಯಕ್ರಮವನ್ನು ಉಳಿದ 16 ಜಿಲ್ಲೆಗಳಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ಹಂತದಲ್ಲಿ 41 ಸ್ಪೋಕ್ ಆಸ್ಪತ್ರೆಗಳು ಹಾಗೂ ಏಳು ಹಬ್ ಆಸ್ಪತ್ರೆಗಳನ್ನು ನಿಗದಿ ಮಾಡಲಾಗಿದೆ.
ಇದಕ್ಕಾಗಿ 5 ಕೋಟಿ ರೂ. ಬಜೆಟ್ ಅನುಮೋದಿಸಿದೆ. ಎರಡನೇ ಹಂತದಡಿ ಬಸ್, ರೈಲ್ವೆ ನಿಲ್ದಾಣ ಮತ್ತು ನ್ಯಾಯಾಲಯ ಸಂಕೀರ್ಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಸಾಧನಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದೆ.