ಮಾನವ-ಆನೆ ಸಂಘರ್ಷ ತಡೆಯಲು 9 ಆನೆ ಕಾರ್ಯಪಡೆ: ಸಿಎಂ ಸಿದ್ದರಾಮಯ್ಯ

Update: 2024-08-12 13:33 GMT

ರಾಜ್ಯದಲ್ಲಿ ಮಾನವ-ಆನೆ ಸಂಘರ್ಷವನ್ನು ತಡೆಯಲು ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, 9 ಆನೆ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಸೋಮವಾರ(ಆ.12) ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ವಿಶ್ವ ಆನೆ ದಿನ ಪ್ರಯುಕ್ತ ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ರಚಿಸಲಾಗಿರುವ ಈ ಕಾರ್ಯಪಡೆಗಳು ಕಳೆದ ಒಂದು ವರ್ಷದಲ್ಲಿ 1,200 ಕ್ಕೂ ಹೆಚ್ಚು ಸಂಘರ್ಷದ ಘಟನೆಗಳನ್ನು ತಡೆದು ಆನೆಗಳನ್ನು ಸುರಕ್ಷಿತವಾಗಿ ಅವುಗಳ ಆವಾಸ ಸ್ಥಾನಗಳಿಗೆ ಕಳುಹಿಸಿವೆ ಎಂದರು.

ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಮಾನವ-ಆನೆ ಸಂಘರ್ಷದ 2,500 ಕ್ಕೂ ಹೆಚ್ಚು ಘಟನೆಗಳು ನಡೆದಿವೆ. 350 ಕ್ಕೂ ಹೆಚ್ಚು ಜನರು ಸಾವು ಕಂಡಿದ್ದಾರೆ. ಗಣನೀಯ ಪ್ರಮಾಣದಲ್ಲಿ ಬೆಳೆ ನಷ್ಟವೂ ಆಗಿದೆ. ಇವೆಲ್ಲವನ್ನು ತಡೆಯಲು ಆನೆ ಕಾರ್ಯಪಡೆಯನ್ನು ರಚಿಸಿದ್ದೇವೆ. ಆನೆಗಳ ಜನಸಂಖ್ಯೆ ಮತ್ತು ಆವಾಸ ಸ್ಥಾನಗಳನ್ನು ರಕ್ಷಿಸುವತ್ತಲೂ ಗಮನ ನೀಡಿದ್ದೇವೆ ಎಂದು ಅವರು ಹೇಳಿದರು.

ಸರ್ಕಾರ ಮಾನವ-ಆನೆ ಸಂಘರ್ಷಗಳನ್ನು ತಡೆಯಲು ಹೆಚ್ಚಿನ ಹಣಕಾಸು ನೆರವು, ತಾಂತ್ರಿಕ ಆವಿಷ್ಕಾರಗಳು, ಸಮುದಾಯದ ತೊಡಗಿಸಿಕೊಳ್ಳುವ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಿದೆ. ಸೌರ ಬೇಲಿಗಳನ್ನು ನಿರ್ಮಿಸಲು ಸಂಪನ್ಮೂಲಗಳು ಮತ್ತ ಸಬ್ಸಿಡಿಗಳನ್ನು ಒದಗಿಸಲು ರೈತರ ಸಬಲೀಕರಣಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಸಹಾಯಧನ ಪ್ರಯತ್ನಗಳು 50 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ಕೃಷಿ ಭೂಮಿಯನ್ನು ರಕ್ಷಿಸಿವೆ. ಜೀವನೋಪಾಯವನ್ನು ರಕ್ಷಿಸಲು ಮತ್ತು ಮಾನವರು ಮತ್ತು ವನ್ಯ ಜೀವಿಗಳ ಸಹಬಾಳ್ವೆಯನ್ನು ಉತ್ತೇಜಿಸಲು ಇದು ಸಹಾಯ ಮಾಡಿದೆ. ಕರ್ನಾಟಕ ಅರಣ್ಯ ಸಾಮರಸ್ಯ ಯೋಜನೆಯಡಿ ಉದ್ದೇಶಿತ ಅರಣ್ಯ ಪ್ರದೇಶಗಳಲ್ಲಿ ಶೂನ್ಯ ಮಾನವ ಪ್ರಾಣಿ ಸಂಘರ್ಷ ಮೌಲ್ಯಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಈ ಸಮಗ್ರ ಯೋಜನೆಯು ನೀರಿನ ಭದ್ರತೆ, ಆವಾಸ ಸ್ಥಾನಗಳ ಸುಧಾರಣೆ ಮತ್ತು ಸಕ್ರಿಯ ಸಮುದಾಯ ಭಾಗವಹಿಸುವಿಕೆಯ ತಂತ್ರಗಳನ್ನು ಒಳಗೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಾವಿರಾರು ವರ್ಷಗಳಿಂದ ಜನರು ಆನೆಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ನಗರೀಕರಣ, ಹೆದ್ದಾರಿ, ಗಣಿಗಾರಿಕೆ ಕೈಗಾರಿಕಾ ಬೆಳವಣಿಗೆಗಳು ಮಾನವನ ವ್ಯಾಪ್ತಿಯನ್ನು ವಿಸ್ತರಿಸಿವೆ. ಹೀಗಾಗಿ ತಲೆದೋರಿರುವ ಮಾನವ-ಆನೆ ಸಂಘರ್ಷಗಳನ್ನು ತಡೆಯಲು ರೈಲ್ವೆ ಹಳಿಗಳನ್ನು ಬಳಸಿ ಬೇಲಿಗಳನ್ನು ಹಾಕಲಾಗುತ್ತಿದೆ. ಕಾಡಿನಂಚಿನಲ್ಲಿರುವ ಆದಿವಾಸಿಗಳು, ಬುಡಕಟ್ಟು ಜನರು ನಿಜವಾದ ಘರ್ಷಣೆಗಳ ಹೊರತಾಗಿಯೂ ಕಾಡುಪ್ರಾಣಿಗಳು ಮತ್ತು ಅರಣ್ಯದ ಸಂರಕ್ಷಣೆಯಲ್ಲಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅರಣ್ಯ ಸಹಿಷ್ಣುತೆಯಿಂದ ಕಾಡನ್ನು ಪ್ರಾಣಿಗಳನ್ನು ರಕ್ಷಿಸಿದ ಅವರು ವನ್ಯಜೀವಿಗಳ ನಿಜವಾದ ಸಂರಕ್ಷಣಾವಾದಿಗಳು ಎಂದು ಬಣ್ಣಿಸಿದರು.


Tags:    

Similar News