ಹಿರಿಯ ಸಾಹಿತಿ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಮಾರಣಾಂತಿಕ ಹಲ್ಲೆ

ಕ್ಷುಲ್ಲಕ ವಿಷಯಕ್ಕೆ ಆರೋಪಿಗಳಾದ ಮಾಜಿ ಗ್ರಾ.ಪಂ ಸದಸ್ಯ ಮಂಜುನಾಥ, ತೇರಹಳ್ಳಿಯ ಮುನಿಯಪ್ಪ, ಬೈರಪ್ಪ, ಸುಬ್ಬು ಸೇರಿದಂತೆ ಇತರರು ಕೋಟಿಗಾನಹಳ್ಳಿ ರಾಮಯ್ಯರ ಜೊತೆ ಜಗಳಕ್ಕಿಳಿದಿದ್ದಾರೆ. ಬಳಿಕ ಎಪ್ಪತ್ತು ವರ್ಷ ವಯೋಮಾನದ ರಾಮಯ್ಯ ಹಾಗೂ ಅವರ ಪುತ್ರ ಮೇಘಾವರ್ಷ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

Update: 2024-04-11 07:17 GMT

ಕರ್ನಾಟಕ ದಲಿತ ಚಳುವಳಿಯ ಆತ್ಮಸಾಕ್ಷಿ, ಹಿರಿಯ ಸಾಹಿತಿ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಅವರ ಪುತ್ರ ಮೇಘಾವರ್ಷ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಕೋಲಾರದಲ್ಲಿ ನಡೆದಿದೆ.

ಇಂದು (ಏ.11) ಬೆಳಿಗ್ಗೆ ಕೋಲಾರ ತಾಲೂಕಿನ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಾಜಿ ಗ್ರಾ.ಪಂ ಸದಸ್ಯ ಮಂಜುನಾಥ ಮತ್ತು ತೇರಹಳ್ಳಿಯ ಮುನಿಯಪ್ಪ ಎಂಬ ಕಿಡಿಗೇಡಿಗಳು ಹಿರಿಯ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಿಡಿಗೇಡಿಗಳ ಹಲ್ಲೆಯಿಂದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಕಣ್ಣಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸದ್ಯ ಕೋಲಾರದ SNR ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಯಿಂದ ಕೋಟಿಗಾನ ಹಳ್ಳಿ ರಾಮಯ್ಯ ಅವರ ಕಣ್ಣು ಊದಿಕೊಂಡಿದ್ದು, ಹಿರಿಯ ಹೋರಾಟಗಾರನ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಘಟನೆಗೆ ಕಾರಣ?

ಪಾಪರಾಜನಹಳ್ಳಿ ಗ್ರಾಮದ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಜೋರಾದ ಧ್ವನಿಯಲ್ಲಿ ಧ್ವನಿವರ್ಧಕ ಬಳಕೆ ಮಾಡಲಾಗುತ್ತಿದೆ. ಇದೇ ರೀತಿ ಇಂದು ಬೆಳಗ್ಗೆಯೂ ಧ್ವನಿವರ್ಧಕ ಬಳಸಲಾಗಿತ್ತು. ಧ್ವನಿವರ್ಧಕದ ಅತಿಯಾದ ಧ್ವನಿಯಿಂದ ಓದಲು ತೊಂದರೆ ಆಗುತ್ತಿದೆ ಎಂದು ಆಕ್ಷೇಪಿಸಿದ ಕೋಟಿಗಾನಹಳ್ಳಿ ರಾಮಯ್ಯ ಅವರು ಧ್ವನಿವರ್ಧಕದ ಸೌಂಡ್ ಒಂದಿಷ್ಟು ಕಡಿಮೆ ಮಾಡುವಂತೆ ಹೇಳಿದರೆನ್ನಲಾಗಿದೆ.

ಕ್ಷುಲ್ಲಕ ವಿಷಯಕ್ಕೆ ಆರೋಪಿಗಳಾದ ಮಾಜಿ ಗ್ರಾ.ಪಂ ಸದಸ್ಯ ಮಂಜುನಾಥ, ತೇರಹಳ್ಳಿಯ ಮುನಿಯಪ್ಪ, ಬೈರಪ್ಪ, ಸುಬ್ಬು ಸೇರಿದಂತೆ ಇತರರು ಕೋಟಿಗಾನಹಳ್ಳಿ ರಾಮಯ್ಯರ ಜೊತೆ ಜಗಳಕ್ಕಿಳಿದಿದ್ದಾರೆ. ಬಳಿಕ ರಾಮಯ್ಯ ಹಾಗೂ ಅವರ ಪುತ್ರ ಮೇಘಾವರ್ಷ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

Tags:    

Similar News