The Vijay Mallya Story | ಡೆಕ್ಕನ್ ನಾಶಕ್ಕೆ ಕೈಯಿಟ್ಟು ಸ್ವಯಂ ನಾಶವಾದ ಕಿಂಗ್ಫಿಶರ್ ಏರ್ಲೈನ್ಸ್
2014ರಲ್ಲಿ ಬಿಡುಗಡೆಯಾದ ‘The Vijay Mallya Story’ ಕೃತಿಯಲ್ಲಿ ಹಿರಿಯ ಪತ್ರಕರ್ತ ಕೆ.ಗಿರಿಪ್ರಕಾಶ್ ಅವರು ಮದ್ಯದ ದೊರೆ ವಿಜಯ ಮಲ್ಯ ಅವರು ಪೈಪೋಟಿಗೆ ಬಿದ್ದು ಹೇಗೆ ತಮ್ಮದೇ ವಿಮಾನಯಾನ ಸಂಸ್ಥೆಯ ನಾಶಕ್ಕೆ ಕಾರಣರಾದರು ಎಂಬುದನ್ನು ವಿವರಿಸಿದ್ದಾರೆ.;
'ಏರ್ ಡೆಕ್ಕನ್' ಸಂಸ್ಥೆಯನ್ನು 'ಮುಗಿಸಲು' ಪ್ರಯತ್ನಿಸುವ ಮೂಲಕ ವಿಜಯ್ ಮಲ್ಯ ಅವರು, ತಮಗೆ ಅರಿವಿಲ್ಲದಂತೆ ಕಿಂಗ್ಫಿಶರ್ ಏರ್ಲೈನ್ಸ್ ನ್ನು ಕೂಡ ತಾವೇ ನಾಶ ಮಾಡಲು ಹೊರಟಿದ್ದರು.
ಏರ್ ಡೆಕ್ಕನ್ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರ ಕನಸನ್ನು ಮಲ್ಯ ಅವರು ನುಚ್ಚುನೂರು ಮಾಡುವ ಹೊತ್ತಿಗೆ ಕಿಂಗ್ಫಿಶರ್ ಏರ್ಲೈನ್ಸ್ ಕೂಡ ತಲ್ಲಣದ ಮನೆಯಾಗಿತ್ತು. ಅಲ್ಲಾಗಲೇ ಸಾಕಷ್ಟು ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಆರಂಭದಲ್ಲೇನೋ ಯುಬಿ ಗ್ರೂಪ್ನ ಹಲವಾರು ಕಂಪನಿಗಳಿಂದಲೇ ವಿಮಾನಯಾನ ಸಂಸ್ಥೆಗೆ ಹಣ ಹರಿದುಬಂದಿತ್ತು. ಸಮೂಹವು ಹೆಚ್ಚುವರಿ ಸಿಬ್ಬಂದಿಯನ್ನು ವಿಮಾನಯಾನ ಸಂಸ್ಥೆಗೆ ವರ್ಗಾಯಿಸಿತು ಮತ್ತು ಜೆಟ್ ಏರ್ವೇಸ್ ಹಾಗೂ ಸಹಾರಾದಿಂದ ಕೆಲವು ಉನ್ನತ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿತು.
2006ರ ಹೊತ್ತಿಗೆ, ಕಿಂಗ್ಫಿಶರ್ ಏರ್ಲೈನ್ಸ್ ಪರಿಪೂರ್ಣವಾದ ತಂಡವನ್ನು ಹೊಂದಿತ್ತು. ಅಂತಹ ಹೊತ್ತಿನಲ್ಲಿ ದಾಸ್ತಾನುಗಳ ಮೇಲೆ ನಿಗಾಯಿಡಲಿಕ್ಕೆಂದು ನಿಯೋಜಿತವಾದ ಸಂಸ್ಥೆ ಎಸ್ಎಪಿ ಎಜಿ (SAP AG)ಎಂಟರ್ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ಸಾಫ್ಟ್ವೇರ್. ಆಗ ಅದು ಬಹುಶಃ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಉತ್ಪನ್ನವಾಗಿತ್ತು,.ಉತ್ತಮ ಸಿಬ್ಬಂದಿ, ಅತ್ಯುತ್ತಮ ವ್ಯವಸ್ಥೆಗಳನ್ನು ಹೊಂದಿದ್ದ, ದೇಶದ ಅತಿದೊಡ್ಡ ವಿಮಾನ ಸಮೂಹವಾದ ಕಿಂಗ್ಫಿಶರ್ ಏರ್ಲೈನ್ಸ್ ದೇಶದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ವಿಮಾನಯಾನ ಸಂಸ್ಥೆಯಾಗುವ ನಿಟ್ಟಿನಲ್ಲಿ ಸರ್ವಸನ್ನದ್ಧವಾಗಿತ್ತು.
ಆದರೆ ಅಂದುಕೊಂಡಂತೆ ಯಾವುದೂ ಆಗಲಿಲ್ಲ ಎನ್ನುವುದು ವಿಷಾದದ ಸಂಗತಿ. ಎಲ್ಲವನ್ನೂ ಸರ್ವಸನ್ನದ್ಧ ಸ್ಥಿತಿಯಲ್ಲಿ ಇರಿಸುವುದು ಒಂದು ಸಂಗತಿಯಾದರೆ ಮಲ್ಯ ಅವರ ದೃಷ್ಟಿಕೋನವನ್ನು, ಚಿಂತನೆಯನ್ನು ಅನುಷ್ಠಾನಕ್ಕೆ ತರುವುದು ಮಹತ್ವದ ಕೆಲಸವಾಗಿತ್ತು. ಒಬ್ಬ ನಾಯಕನಾಗಿ, ಆಡಳಿತ ಮಂಡಳಿ ಮತ್ತು ಉನ್ನತ ನಿರ್ವಹಣೆಗೆ ಅಗತ್ಯವಿರುವ ಎಲವನ್ನೂ ಅವರು ಒದಗಿಸಿದ್ದರು. ಅವರೂ ಕೂಡ ಅವಿರತವಾದ ಶ್ರಮ ಹಾಕಿದ್ದರು. ದೊಡ್ಡ ಮೊತ್ತದ ಹಣವನ್ನೂ ವಿನಿಯೋಗಿಸಿದ್ದರು. ಅತ್ಯುತ್ತಮ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದರು. ಆದರೆ ನಿಜಕ್ಕೂ ಕೊರತೆ ಇದ್ದುದು ಒಂದು ವಿಮಾನ ಸಂಸ್ಥೆಯನ್ನು ಮುನ್ನಡೆಸಲು ಬೇಕಾದ ಮತ್ತು ಅಂತಹ ಉದ್ಯಮದ ಅನುಭವವಿರುವ ವ್ಯಕ್ತಿ. 2010ರ ಅಂತ್ಯದ ತನಕ ಅವರ ಏರ್-ಲೈನ್ಸ್ ಗೆ ಒಬ್ಬ ಸಿಇಒ ಕೂಡ ಇರಲಿಲ್ಲ.
ಕಾರ್ಯಭಾರಕ್ಕಿರಲಿಲ್ಲ ನಾಯಕರು
ಸಂಸ್ಥೆಯ ಒಳಗಿದ್ದವರೇ ನೀಡುವ ಮಾಹಿತಿಯ ಪ್ರಕಾರ ಕಂಪನೆಯ ಪ್ರತಿಯೊಬ್ಬ ಉಪಾಧ್ಯಕ್ಷ ತಾನೇ ವಿಮಾನ ಸಂಸ್ಥೆಯನ್ನು ನಡೆಸುತ್ತಿದ್ದೇನೆ ಎಂಬ ಭ್ರಮೆಯಲ್ಲಿದ್ದರು. ಸದಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತಿದ್ದ ಮಲ್ಯ ವಿಮಾನ ಸಂಸ್ಥೆಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲು ಸಾಧ್ಯವಾಗದೇ ಹೋದರು. ಅವರು ತಾವೇ ನಿಂತು ಗಗನಸಖಿಯರನ್ನು ಆಯ್ಕೆ ಮಾಡಿದರು ಮತ್ತು ಯಾವತ್ತೂ ಗ್ರಾಹಕರಿಗೆ ಲಭ್ಯರಿರುತ್ತಿದ್ದರು ಎಂಬುದು ಸತ್ಯ. ಆದರೆ ಅವು ಒಂದು ವಿಮಾನ ಸಂಸ್ಥೆಯನ್ನು ಮುನ್ನಡೆಸಲು ಬೇಕಾದ ಗುಣಗಳಾಗಿರಲಿಲ್ಲ. ಅದಕ್ಕೊಬ್ಬ ಪೂರ್ಣಾವಧಿಯ ಸಿಇಒ ಬೇಕಾಗಿತ್ತು. ಆತ ಕಂಪನಿಯ ದೃಷ್ಟಿಕೋನವನ್ನು ಜಾರಿಗೆ ತರುವುದು ಮಾತ್ರವಲ್ಲದೆ ದಿನನಿತ್ಯದ ಕಾರ್ಯಭಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗಬೇಕಾಗಿತ್ತು.
ಅಷ್ಟಕ್ಕೂ ಕಿಂಗ್-ಫಿಷರ್ ಏರ್-ಲೈನ್ಸ್ ಕಂಪನಿಯಲ್ಲಿ ಯಾರಿದ್ದರು? ಅವರೆಲ್ಲರೂ ಯೂಬಿ ಸಮೂಹ ಸಂಸ್ಥೆಗಳಿಂದ ವರ್ಗವಾಗಿ ಬಂದವರು. ಅವರನ್ನು ನೇರವಾಗಿ ವಿಮಾನಯಾನ ಸಂಸ್ಥೆಗೆ ನೇಮಕಮಾಡಿಕೊಳ್ಳಲಾಗಿತ್ತು. ಅಲ್ಲಿ ಅವರಿಗೆ ಬೇಕಾದ ಅನುಭವ ಚಿಕ್ಕಾಸೂ ಇರಲಿಲ್ಲ.
ಆರಂಭದ ದಿನಗಳಲ್ಲಿ ಮಲ್ಯ ತಮ್ಮ ಸಿಬ್ಬಂದಿಗಾಗಿ ಐಷಾರಾಮಿ ಸ್ಟಾರ್ ಹೋಟೆಲ್ ಗಳಲ್ಲಿ ಪಾರ್ಟಿಗಳನ್ನು ಏರ್ಪಡಿಸಿದರು. ಅವರ ಕುಟುಂಬದವರನ್ನು ಕರೆಸಿದರು. ಎಲ್ಲರನ್ನೂ ಸಂತುಷ್ಟಗೊಳಿಸಿದರು. ಅವರ ಅಧಿಕಾರಿಗಳು ಇತರ ವಿಮಾನಯಾನ ಸಂಸ್ಥೆಯ ನೌಕರರಿಗೆ ದುಪ್ಪಟ್ಟು ಸಂಬಳದ ಆಸೆ ತೋರಿಸಿ ನೇಮಕಮಾಡಿಕೊಳ್ಳಲು ಆರಂಭಿಸಿದರು. ತಮ್ಮ ಸಂಸ್ಥೆಗೆ ಬೇಕಾದ ಸೂಕ್ತ ವ್ಯಕ್ತಿಯನ್ನು ಆರಿಸಿದರೇ? ಇಲ್ಲವೇ ಇಲ್ಲ. ದುರಾದೃಷ್ಟದ ಸಂಗತಿ ಎಂದರೆ ಉಳಿದ ಏರ್-ಲೈನ್ಸ್ ನಿಂದ ಸಿಬ್ಬಂದಿಯನ್ನು ‘ಬೇಟೆಯಾಡುವುದು’ ಮುಖ್ಯವಾಯಿತೇ ಹೊರತು ಸಮರ್ಥರನ್ನು ಆಯ್ಕೆಮಾಡುವುದು ಆದ್ಯತೆಯಾಗಲಿಲ್ಲ.
ಕಿಂಗ್ಫಿಶರ್ ತನ್ನ ಮಾರಾಟ ಮತ್ತು ಆದಾಯಕ್ಕೆ ಸಂಬಂಧಿಸಿದ ಕೆಲಸಕ್ಕೆ ಜೆಟ್ ನಿಂದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿತು. ಯಾಕೆಂದರೆ ಅಷ್ಟರಲ್ಲಾಗಲೇ ಸಾಕಷ್ಟು ಸಂಖ್ಯೆಯ ಪೈಲಟ್ ಗಳು ಬಂದು ತುಂಬಿಕೊಂಡಿದ್ದರು. ಅವರೆಲ್ಲರೂ ಉಳಿದ ಏರ್ಲೈನ್ಸ್ ಸಂಸ್ಥೆಯಿಂದ ಬಂದವರಾಗಿದ್ದರು. ಏರ್ ಡೆಕ್ಕನ್ ಮತ್ತು ಕಿಂಗ್ಫಿಶರ್ ಏರ್ಲೈನ್ಸ್ ಎರಡೂ ಪರಸ್ಪರ ಸ್ಪರ್ಧಿಗಳಾದ್ದರಿಂದ ‘ಯಾವ ಸಿಬ್ಬಂದಿಯನ್ನೂ ಬೇಟೆಯಾಡುವಂತಿಲ್ಲ’ ಎಂಬ ಒಪ್ಪಂದ ಮಾಡಿಕೊಂಡವಾದರೂ ಅದು ಕಾಗದಪತ್ರಗಳಿಗಷ್ಟೇ ಸೀಮಿತವಾಗಿತ್ತು.
ಅದ್ದೂರಿ ವೆಚ್ಚದ ಭಾರ
ಭಾರೀ ವೇತನ ಪಾವತಿ ಮತ್ತು ಅತ್ಯಂತ ವೈಭೋಗದಿಂದ ಕೂಡಿದ ಅದ್ದೂರಿ ಕಚೇರಿಗಳ ನಿರ್ವಹಣೆಗೆ ತಗುಲಿದ ಭಾರೀ ವೆಚ್ಚಗಳ ಭಾರವನ್ನು ವಿಮಾನಯಾನ ಸಂಸ್ಥೆ ಹೊರುವುದು ಕಷ್ಟವಾದಾಗ ಮಲ್ಯ ಅನೇಕ ಬ್ಯಾಂಕುಗಳಿಂದ ಸಾಲಗಳನ್ನು ತರಲು ಶುರುವಿಟ್ಟುಕೊಂಡರು. ಅವುಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೂ ಇದ್ದವು. ಎಸ್.ಬಿ.ಐ ಕೂಡ ಅದರಲ್ಲಿ ಒಂದು. ಬ್ಯಾಂಕುಗಳೋ ಸಮರ್ಪಕ ಭದ್ರತೆಯ ಗೋಜಿಗೆ ಹೋಗದೇ ಸಾಲಗಳನ್ನು ವಿತರಿಸಿದವು. ಕೆಲವು ಬ್ಯಾಂಕ್ ಗಳು ಪಿಗ್ಗಿ ಬಿದ್ದಿದ್ದು ವಿಮಾನಯಾನ ಸಂಸ್ಥೆಯ ನಿಜವಾದ ಮೌಲ್ಯಕ್ಕಲ್ಲ, ಬದಲಾಗಿ ಮಲ್ಯ ಅವರ ಜನಪ್ರಿಯತೆಗೆ.
ಕಿಂಗ್ಫಿಶರ್ ಯಾವಾಗ ಸಾಲ ಮರುಪಾವತಿ ಮಾಡಲು ಆಗಲಿಲ್ಲವೋ ಕೆಲವು ಬ್ಯಾಂಕ್ ಗಳು ವಸೂಲಿ ಮಾಡಲು ಭದ್ರತೆ ಕೊರತೆ ಅನುಭವಿಸಿದವು. ಅವುಗಳಿಗೆ ಇದ್ದ ಒಂದೇ ಒಂದು ಅವಕಾಶವೆಂದರೆ ಬಾಕಿ ಇರುವ ಸಾಲವನ್ನು ಕಿಂಗ್ಫಿಶರ್ ಏರ್ಲೈನ್ಸ್ ನಲ್ಲಿದ್ದ ಷೇರುಗಳಿಗೆ ಪರಿವರ್ತನೆ ಮಾಡಿಕೊಳ್ಳುವುದು. ಆದರೆ ಇತ್ತ ಕಿಂಗ್ಫಿಶರ್ ಏರ್ಲೈನ್ಸ್ ಷೇರುಗಳೂ ಪಾತಾಳಕ್ಕೆ ಇಳಿಯತೊಡಗಿದವಲ್ಲ? ಆಗ ಅವರ ಬಳಿ ಉಳಿದದ್ದು ತುಂಡು ಕಾಗದಗಳು ಮಾತ್ರ.
ಆರಂಭದಲ್ಲಿ ಕೊಟ್ಟ ಸಾಲದ ಮೊತ್ತಗಳೆಲ್ಲ ಸಣ್ಣ-ಪುಟ್ಟದಾಗಿದ್ದವು. ಅವೆಲ್ಲವೂ ಕೆಲವೇ ನೂರು ಕೋಟಿಗಳಾಗಿದ್ದವು. ಅವುಗಳಲ್ಲಿ ಕೆಲವಕ್ಕೆ ಯುಬಿಯ ಸಮೂಹ ಸಂಸ್ಥೆಗಳು ಗ್ಯಾರಂಟಿ ನೀಡಿದ್ದವು. ಆ ಬಳಿಕ ಯುನೈಟೆಡ್ ಸ್ಪಿರಿಟ್ ಮತ್ತು ಯುಬಿ ಹೋಲ್ಡಿಂಗ್ ನಂತಹ ಸಮೂಹ ಸಂಸ್ಥೆಗಳು ತಮ್ಮ ಷೇರುಗಳನ್ನು ಅಡವಿಟ್ಟು ಹೆಚ್ಚುವರಿ ಸಾಲಗಳನ್ನು ಎತ್ತಲು ಆರಂಭಿಸಿದವು.
ಇದೇನು ಮದ್ಯೋದ್ಯಮವಲ್ಲ!
ಒಂದು ವಿಮಾನಯಾನ ಸಂಸ್ಥೆಯನ್ನು ಆರಂಭಿಸಲು ಮಲ್ಯ ಅವರಿಗೆ ಯಾರೋ ತಪ್ಪು ಸಲಹೆಯನ್ನು ನೀಡಿದಂತೆ ಕಾಣುತ್ತದೆ. ಯಾಕೆಂದರೆ ಅದು ಒಂದು ಮದ್ಯೋದ್ಯಮವನ್ನು ನಡೆಸಿದಷ್ಟು ಸುಲಭವಲ್ಲ. ಏರ್ಲೈನ್ಸ್ ನಲ್ಲಿ ಸಿಗುವ ಲಾಭ ಎಷ್ಟು ಕಡಿಮೆ ಎಂದರೆ ಅದು ಕೇವಲ ಶೇ.3ಕ್ಕಿಂತ ಕಡಿಮೆ. ಅಷ್ಟು ಮಾಡಿಯೂ ಅದು ದಾರದ ಮೇಲಿನ ನಡಿಗೆ.
ಹಾಗಾಗಿ ವೆಚ್ಚಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯ. ಕಾಗದಪತ್ರಗಳನ್ನು ಖರೀದಿ ಮಾಡುವುದರಿಂದ ಆರಂಭಿಸಿ ಸಿಬ್ಬಂದಿ ನೇಮಕದ ತನಕ ಎಲ್ಲವನ್ನೂ ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಕ್ಯಾಪ್ಟನ್ ಗೋಪಿನಾಥ್ ಅವರು ಇವೆಲ್ಲವನ್ನೂ ತೀರಾ ಕಟ್ಟುನಿಟ್ಟಾಗಿ, ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಅವರಿಗೆ ಪ್ರತಿ ಪೈಸೆಯ ಖರ್ಚಿನ ನಿಭಾವಣೆಯೂ ಮುಖ್ಯವಾಗಿತ್ತು. ಅವರು ಕಂಪನಿ ಕೆಲಸಕ್ಕೆ ತಮ್ಮ ಮಾರಾಟ ಸಿಬ್ಬಂದಿಯನ್ನು ಬಸ್ಸಿನಲ್ಲಿ ಕಳುಹಿಸಿದ ಉದಾಹರಣೆ ಕೂಡ ಇದೆ.
ಮಲ್ಯ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದರು. ಅವರು ಇತರ ಏರ್ಲೈನ್ಸ್ ನಿಂದ ಹಿಡಿದು ತಂದ ನೌಕರರಿಗೆ ಕೊಟ್ಟ ವೇತನದ ಹೆಚ್ಚಳ ಶೇ.75ಕ್ಕೂ ಅಧಿಕ ಎಂದರೆ ನಂಬಲಾರಿರಿ. ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಅವರು ಒಬ್ಬ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತುಹಾಕಿದ ಉದಾಹರಣೆ ಇಲ್ಲ. ಇದರಿಂದ ಮಲ್ಯ ಅವರಿಗೆ ಸಿಬ್ಬಂದಿಯ ಕೃತಜ್ಞತೆ-ಪ್ರೀತಿಯೇನೋ ಸಿಕ್ಕಿತು. ಆದರೆ ಕಿಂಗ್ಫಿಶರ್ ಏರ್ಲೈನ್ಸ್ ಅಧಿಕ ಸಿಬ್ಬಂದಿಯಿಂದ ತುಂಬಿ ತುಳುಕತೊಡಗಿತು. ಅದರ ವೇತನದ ಬಿಲ್ಲು ಪ್ರತಿ ತಿಂಗಳೂ ಭಾರವಾಗುತ್ತ ಹೋಯಿತು.
ತುಂಬಿತುಳುಕಿದ ನೌಕರರು
ಒಂದು ಕಾಲದಲ್ಲಿ ಕಿಂಗ್ಫಿಶರ್ ಏರ್ಲೈನ್ಸ್ ನಲ್ಲಿ ಸುಮಾರು ನಲವತ್ತು ಮಂದಿ ಅಧಿಕಾರಿಗಳು ಜನರಲ್ ಮ್ಯಾನೇಜರ್ ಅಥವಾ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು ಮತ್ತು ಅವರೆಲ್ಲ ಲಕ್ಷಗಟ್ಟಳೆ ವೇತನವನ್ನು ಜೇಬಿಗಳಿಸುತ್ತಿದ್ದರು. ಈ ಪುಸ್ತಕ್ಕಾಗಿ ಸಂದರ್ಶನ ಮಾಡಿದ ನೌಕರರೊಬ್ಬರು ಇದನ್ನು ಒಪ್ಪಿಕೊಳ್ಳುತ್ತಾರೆ, ಈ ರೀತಿಯ ದುಂದುವೆಚ್ಚವೇ ಏರ್ಲೈನ್ಸ್ ನ್ನು ಕುಗ್ಗಿಸುತ್ತ ಹೋಯಿತು ಎನ್ನುತ್ತಾರೆ.
ಇಂತಹ ದುಂದುವೆಚ್ಚಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ: ಒಂದು ವೇಳೆ ಒಬ್ಬ ಪ್ರಯಾಣಿಕ ತಡವಾಗಿ ಚೆಕ್-ಇನ್ ಕೌಂಟರ್ ಗೆ ಬಂದರೆ ಆತನನ್ನು ಹಿಂದಕ್ಕೆ ಕಳುಹಿಸುತ್ತಿರಲಿಲ್ಲ. ಬದಲಾಗಿ ಕೌಂಟರ್ ನಲ್ಲಿದ್ದ ಸಿಬ್ಬಂದಿ ಇನ್ನೊಂದು ಏರ್ಲೈನ್ಸ್ ನಲ್ಲಿ ಆತನಿಗಾಗಿ ಟಿಕೆಟ್ ಖರೀದಿ ಮಾಡುತ್ತಿದ್ದ. ಈ ಟಿಕೆಟ್ ಗಳ ವಿಚಾರದಲ್ಲಿ ಎಲ್ಲ ಏರ್ಲೈನ್ಸ್ ಗಳೂ ಡೈನಾಮಿಕ್ ಆದ ದರವನ್ನು ಹೊಂದಿರುತ್ತವೆ. ಹಾಗಾಗಿ ಕೊನೆ ಕ್ಷಣದಲ್ಲಿ ಯಾವುದೇ ಟಿಕೆಟ್ ಕೊಂಡರೂ ದುಬಾರಿಯಾಗಿರುತ್ತದೆ. ಉದಾಹರಣೆಗೆ, ಪ್ರಯಾಣಿಕರು ಸಾಕಷ್ಟು ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದ್ದರೆ ಅವರಿಗೆ ಅತ್ಯಂತ ಕಡಿಮೆ ದರದಲ್ಲಿ ಅಂದರೆ ಸುಮಾರು 4000 ರೂ.ಗೆ ಟಿಕೆಟ್ ಲಭ್ಯ. ಅದೇ ಟಿಕೆಟ್ ನ್ನು ವಿಮಾನ ಹೊರಡುವ ದಿನವೇ ಖರೀದಿಸಿದರೆ ಅತ್ಯಧಿಕ 12,000 ರೂ. ಗಳಷ್ಟು ದುಬಾರಿಯಾಗುತ್ತದೆ.
ಪ್ರಯಾಣಿಕರು ಈ ಏರ್ಲೈನ್ಸ್ ನ್ನು ಇಷ್ಟಪಡದೇ ಇನ್ನೇನು ಮಾಡುತ್ತಾರೆ. ಕಿಂಗ್ಫಿಶರ್ ಯಾನವನ್ನು ಅವರು ಬಿಡಲಿಲ್ಲ. ಒಂದೊಮ್ಮೆ ಕಿಂಗ್ಫಿಶರ್ ಏರ್ಲೈನ್ಸ್ ಮತ್ತೆ ಹಾರಾಟ ಆರಂಭಿಸಿದರೆ ಅದು ಸಂಪೂರ್ಣವಾಗಿ ಭಿನ್ನ ಅನುಭವವಾಗುತ್ತದೆ. ಯಾಕೆಂದರೆ ಅಂತಹ ಔದಾರ್ಯವನ್ನು ಅವರು ಭರಸಲು ಸಾಧ್ಯವೇ ಇಲ್ಲ.
ಇನ್ನೊಂದು ವಿದ್ಯಮಾನವನ್ನು ಉದಾಹರಣೆಯಾಗಿ ಪರಿಗಣಿಸುವುದಾದರೆ, ಒಂದು ವೇಳೆ ವಿಮಾನ ಹಾರಾಟ ವಿಳಂಬವಾಗಿ ಕೆಲವು ಪ್ರಯಾಣಿಕರು ಪ್ರತಿಭಟಿಸಿದರೆ ಅವರನ್ನು ಹತ್ತಿರದ ಪಂಚತಾರ ಹೋಟೆಲ್ ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರಿಗೆ ಹೊಟ್ಟೆ ಬಿರಿಯುವಷ್ಟು ತಿಂಡಿ ಮತ್ತು ಬಿಯರ್ ಕೊಡಲಾಗುತ್ತಿತ್ತು. ಯಾವುದೇ ಸ್ಟಾರ್ ಹೋಟೆಲ್ ಗೆ ಹೋದರೂ ಒಂದು ಪಿಂಟ್ ಬೀಯರ್ ವೆಚ್ಚ ಸುಮಾರು 250 ರೂ. ಆದರೆ ಏರ್-ಪೋರ್ಟ್ ನಲ್ಲಿದ್ದ ಏರ್ಲೈನ್ ಸಿಬ್ಬಂದಿ ಮಾತ್ರ ಜಿದ್ದಿಗೆ ಬಿದ್ದಾದರೂ ಅದನ್ನು ಮಾಡುತ್ತಿದ್ದರು. ಕೆಲವು ಪ್ರಯಾಣಿಕರು ಯಾವ ಮಟ್ಟಿಗೆ ತಿಳಿದುಕೊಂಡಿದ್ದರೆಂದರೆ ಮಲ್ಯ ಮದ್ಯದ ದೊರೆಯಾದ ಕಾರಣ ವಿಮಾನಯಾನ ವಿಳಂಬವಾದಾಗೆಲ್ಲ ತಮಗೆ ಅತ್ಯಂತ ಕಡಿಮೆ ಬೆಲೆ್ಗೆ ಮದ್ಯ ಸರ್ವ್ ಮಾಡಬಹುದು ಎಂದು.
ಯಾವುದೇ ಮೀಟಿಂಗ್ ಕರೆದರೂ ಮಲ್ಯ ಸಕಾಲಕ್ಕೆ ಹಾಜರಾದ ಉದಾಹರಣೆ ಇಲ್ಲವಾದರೂ ತಮ್ಮ ವಿಮಾನವನ್ನು ಮಾತ್ರ ಸರಿಯಾದ ಸಮಯಕ್ಕೆ ಹಾರಾಟ ನಡೆಸುವುದನ್ನು ಖಾತರಿಗೊಳಿಸಿದ್ದರು. ವಿಮಾನ ಹೊರಟ ತಕ್ಷಣ ಮತ್ತು ಬಂದಿಳಿದ ಕೂಡಲೇ ನಿಲ್ದಾಣದಲ್ಲಿದ್ದ ಸಿಬ್ಬಂದಿ ಅವರಿಗೊಂದು ಸಂದೇಶ ರವಾನಿಸುತ್ತಿದ್ದರು. ಒಂದು ಐದು ನಿಮಿಷ ವಿಳಂಬವನ್ನೂ ಅವರು ಸಹಿಸಿಕೊಳ್ಳುತ್ತಿರಲಿಲ್ಲ. ಅದಕ್ಕೆ ಜವಾಬ್ದಾರರಾದವರನ್ನು ಅವರು ತರಾಟಗೆ ತೆಗೆದುಕೊಳ್ಳುತ್ತಿದ್ದರು.
ಕೆ. ಗಿರಿಪ್ರಕಾಶ್ ಅವರ ʼದ ವಿಜಯ್ ಮಲ್ಯ ಸ್ಟೋರಿ" (The Vijay Mallya) ಕೃತಿಯನ್ನು Penguin Random House India ಪ್ರಕಟಿಸಿದೆ. (Rs 299 ಕ್ಕೆ ಲಭ್ಯ)
ದುಂದುವೆಚ್ಚಕ್ಕಿಲ್ಲದ ಅಂಕುಶ
ಕಿಂಗ್ಫಿಶರ್ ಏರ್ಲೈನ್ಸ್ ನಲ್ಲಿ ಕೆಲಸ ಮಾಡುವುದು ನಿಜಕ್ಕೂ ಅಚ್ಚರಿಯ ಅನುಭವವಾಗಿತ್ತು. ಅಲ್ಲಿ ಖರ್ಚುಮಾಡುವ ಹಣದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಒಂದು ಹಂತದಲ್ಲಿ ಎಲ್ಲ ಕಡೆಗಳಿಂದಲೂ ಹಣ ಸೋರಿಕೆಯಾಗುತ್ತಿತ್ತು ಮತ್ತು ಅದಕ್ಕೆ ಕಡಿವಾಣ ಹಾಕಲು ಯಾವುದೇ ವ್ಯವಸ್ಥೆ ಇರಲಿಲ್ಲ.
“ಇಲ್ಲಿ ಹಣವನ್ನು ನಿಜಕ್ಕೂ ಸಮರ್ಪಕವಾಗಿ ಬಳಸಲಾಗುತ್ತಿದೆಯೇ ಎಂಬ ಬಗ್ಗೆ ನಮಗೆ ಅನುಮಾನವಿದೆ” ಎಂದು ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೌಕರರೊಬ್ಬರು ಪತ್ರಕರ್ತರಿಗೆ ಹೇಳಿದ್ದರು. ಇನ್ನೊಂದು ತಮಾಷೆಯ ಮಾತು ಕೇಳಿ, ವಿದೇಶದ್ದೂ ಸೇರಿದಂತೆ ಬಹುತೇಕ ಎಲ್ಲ ಪತ್ರಿಕೆಗಳು ಮತ್ತು ನಿಯತಕಾಲಿಕಗಳನ್ನು ಪ್ರಯಾಣಿಕರಿಗಾಗಿ ತರಿಸಲಾಗುತ್ತಿತ್ತು. ಅವುಗಳನ್ನು ವಿಮಾನದೊಳಗೆ ಕಳುಹಿಸುವ ಬದಲು ಗೋದಾಮಿನಲ್ಲೇ ರಾಶಿಹಾಕಲಾಗುತ್ತಿತ್ತು. ಆದರೆ ಪತ್ರಿಕೆಗಳ ಬಿಲ್ ಮಾತ್ರ ಸಕಾಲದಲ್ಲಿ ಪಾವತಿ ಮಾಡಲಾಗುತ್ತಿತ್ತು.
ವಿಮಾನ ಹಾರಾಟದ ವೇಳೆ ಯಾವ ಪತ್ರಿಕೆಗಳನ್ನು ಓದಲು ಪ್ರಯಾಣಿಕರು ಬಯಸುತ್ತಿದ್ದರು ಎಂಬ ಬಗ್ಗೆ ಒಂದು ಸಮೀಕ್ಷೆಯನ್ನೂ ನಡೆಸಿರಲಿಲ್ಲ. ಕೆಲವು ಪತ್ರಿಕೆಗಳನ್ನು ನ್ಯೂಸ್ ಸ್ಟಾಂಡ್ ಗೆ ಹೋಗಿ ಖರೀದಿಸಲಾಗುತ್ತಿತ್ತು. ಅದನ್ನೇ ದೀರ್ಘಾವಧಿ ಚಂದಾದಾರರಾಗಿದ್ದರೆ ಅರ್ಧಕ್ಕರ್ಧ ಕಡಿಮೆ ದರಕ್ಕೆ ಸಿಗುತ್ತಿತ್ತು. ಹೀಗೆ ಹಳೆಯ ಪತ್ರಿಕೆಗಳು ಗೋದಾಮಿನಲ್ಲಿ ರಾಶಿ ಬಿದ್ದಿರುತ್ತಿದ್ದವಲ್ಲ, ಅವನ್ನಾದರೂ ಮಾರಾಟ ಮಾಡುವಂತೆ ಹಣಕಾಸು ವಿಭಾಗಕ್ಕೆ ದುಂಬಾಲು ಬೀಳಬೇಕಾಗುತ್ತಿತ್ತು. ಈ ಹಳೆಯ ಪತ್ರಿಕೆ ಮತ್ತು ನಿಯತಕಾಲಿಕಗಳ ಮಾರಾಟ ಮಾಡುವುದರಿಂದಲೇ ಪ್ರತಿ ತಿಂಗಳು ಕೆಲವು ಲಕ್ಷ ರೂ. ಬರುತ್ತಿತ್ತು.
ವಿದೇಶಿ ಹಾರಾಟದ ತಪ್ಪು ನಿರ್ಧಾರ
ಕಿಂಗ್ಫಿಶರ್ ಏರ್ಲೈನ್ಸ್ವಿಮಾನದ ಅಂತಾರಾಷ್ಟ್ರೀಯ ಹಾರಾಟದ್ದೇ ಇನ್ನೊಂದು ಭಿನ್ನ ಕಥೆ. 2008ರ ಸೆ.3ರಂದು ಮೊದಲ ಅಂತಾರಾಷ್ಟ್ರೀಯ ಹಾರಾಟವನ್ನು ಕೈಗೊಳ್ಳಲಾಯಿತು. ಅದು ಆರಂಭವಾಗಿದ್ದು ಬೆಂಗಳೂರು ಮತ್ತು ಲಂಡನ್ ನಡುವೆ. ಅದಾದ ಬಳಿಕ ಬೆಂಗಳೂರು-ಕೊಲಂಬೊ ವಿಮಾನ ಹಾರಾಟ ಆರಂಭವಾಯಿತು. ಲಂಡನ್ ನಿವಾಸಿಗಳು ದಕ್ಷಿಣ ಭಾರತದಲ್ಲಿ ಮತ್ತು ಶ್ರೀಲಂಕಾದಲ್ಲಿ ರಜಾದಿನಗಳನ್ನು ಕಳೆಯಲು ಯೋಚಿಸಿದರೆ, ಈ ಮಾರ್ಗವು ಅವರಿಗೆ ಸಾಕಷ್ಟು ಆಕರ್ಷಕವಾಗುತ್ತಿತ್ತು. ಈ ವಿಮಾನವು ಐಟಿ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಐಟಿ ಕಂಪನಿಗಳ ಉದ್ಯೋಗಿಗಳ ಅಗತ್ಯಗಳಿಗೂ ಸಹ ಸ್ಪಂದಿಸುತ್ತಿತ್ತು.
ಆದರೆ, ಕಿಂಗ್ಫಿಶರ್ ತನ್ನ ವಿಮಾನಯಾನ ಸೇವೆ ಪರಿಚಯಿಸಿದ್ದರಿಂದ ವಿಮಾನಯಾನ ಸಂಸ್ಥೆಗಳ ನಡುವೆ ದರ ಸಮರಕ್ಕೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಹಲವು ವಿದೇಶಿ ವಿಮಾನಯಾನ ಸಂಸ್ಥೆಗಳು ಈ ಮಾರ್ಗದಲ್ಲಿ ಆಕರ್ಷಕವಾದ ಕಡಿಮೆ ದರಗಳನ್ನು ನೀಡಲು ಪ್ರಾರಂಭಿಸಿದವು. ಸ್ಪರ್ಧೆಯನ್ನು ಎದುರಿಸಲು ಅವುಗಳ ಬಳಿ ಸಾಕಷ್ಟು ಹಣವಿದ್ದರಿಂದ ಇವೆಲ್ಲ ಸಾಧ್ಯವಾಯಿತು. ಆಚ್ಚರಿ ಎಂಬಂತೆ ಕಿಂಗ್ಫಿಶರ್ ಸಮರದಲ್ಲಿ ಪಾಲ್ಗೊಳ್ಳಲು ನಿರಾಕರಿಸಿತು, ತಮ್ಮ ಸೇವೆಗಳು ಉತ್ತಮವಾಗಿವೆ ಎಂದು ವಾದಿಸಿತು.
ಆದರೆ, ಇತ್ತ ಅದರ ದೇಶೀಯ ಹಾರಾಟ ತೊಂದರೆಗೆ ಸಿಲುಕಿದವು. ಅಂತರರಾಷ್ಟ್ರೀಯ ಕಾರ್ಯಾಚರಣೆ ವಿಸ್ತರಿಸಲು ಲಕ್ಷಾಂತರ ರೂಪಾಯಿ ಬೇಕಾಗಿದ್ದ ಹೊತ್ತಿನಲ್ಲಿಯೇ ಭರಿಸಲಾಗದ ಸ್ಥಿತಿಗೆ ಬಂದು ತಲುಪಿತ್ತು. ಬ್ಯಾಂಕ್ ಖಾತೆಗಳು ಖಾಲಿಯಾಗತೊಡಗಿದವು. ಒಬ್ಬ ಹಿರಿಯ ಅಧಿಕಾರಿಯ ಪ್ರಕಾರ, ಬ್ಯಾಂಕುಗಳು ಹಣ ನೀಡುವುದನ್ನು ನಿಲ್ಲಿಸಿದ ನಂತರ, ಕಿಂಗ್ಫಿಶರ್ ಪಾವತಿ ಮಾಡುವುದನ್ನು ನಿಲ್ಲಿಸಿತು.
ಮೊದಲ ಗಲಿಬಿಲಿ
2008ರ ಕೊನೆಯ ಹೊತ್ತಿಗೆ ಮಲ್ಯ ಅವರ ವಿಮಾನಯಾನ ಸಾಮ್ರಾಜ್ಯದಲ್ಲಿ ಮೊದಲ ಬಾರಿಗೆ ಗಲಿಬಿಲಿ ಕಾಣಿಸಿಕೊಳ್ಳಲು ಆರಂಭವಾಯಿತು. ಅಮೆರಿಕ ಮೂಲದ ಜಿಇಸಿಎಎಸ್ ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯದ ಭಾರತೀಯ ವಿಮಾನಯಾನ ನಿಯಂತ್ರಕರಲ್ಲಿ, ಒಂದು ದೂರು ದಾಖಲಿಸಿತು. ನಾಲ್ಕು ಎ320 ಗಳಿಗೆ ಸರಿಯಾದ ಬಾಡಿಗೆ ಪಾವತಿ ಮಾಡುತ್ತಿಲ್ಲ, ಹಾಗಾಗಿ ನಾವು ವಿಮಾನವನ್ನು ಮರುಸ್ವಾಧೀನಪಡಿಸಿಕೊಳ್ಳುತ್ತೇವೆ ಎಂಬುದು ಆ ದೂರಿನ ಒಕ್ಕಣಿಕೆಯಾಗಿತ್ತು.
ಈ ದೂರನ್ನು ಅಧಿಕೃತವಾಗಿ ನೀಡಲಾಗಿದ್ದರೂ ಮಲ್ಯ ಮಾತ್ರ ತಲೆಕೆಡಿಸಿಕೊಳ್ಳಲಿಲ್ಲ. ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಹತಾಶರಾದ ಜಿಇಸಿಎಎಸ್ ಕಿಂಗ್ಫಿಶರ್ ನ್ನು ಕೋರ್ಟ್ ಕಟಕಟೆಗೆ ಎಳೆಯಿತು. ಕರ್ನಾಟಕ ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿತು. ಆದರೆ ಕಿಂಗ್ಫಿಶರ್ ಕೋರ್ಟ್ ನಿಂದ ತಡೆಯಾಜ್ಷೆ ತರುವಲ್ಲಿ ಯಶಸ್ವಿಯಾಯಿತು ಎನ್ನುವುದು ಬೇರೆಯೇ ಮಾತು.
ಆದರೆ ಇಂತಹುದೊಂದು ಸಣ್ಣ ಸುದ್ದಿ ದೊಡ್ಡ ಹಡಗು ಮುಳಗಲು ಮುನ್ನುಡಿ ಬರೆಯಿತು. ಕಿಂಗ್ಫಿಶರ್ ನ ಷೇರುಗಳು ಮಾರುಕಟ್ಟೆಯಲ್ಲಿ ಲಗಾಟಿ ಹೊಡೆದವು. ವಿಲೀನಕ್ಕೂ ಮೊದಲು ಡೆಕ್ಕನ್ ಏವಿಯೇಷನ್ ಮತ್ತು ಕಿಂಗ್ಫಿಶರ್ ಏರ್ಲೈನ್ಸ್ ನಷ್ಟವು 2000 ಕೋಟಿ ರೂ.ಗಳಾಗಿತ್ತು ಈ ಪ್ರಕರಣದಲ್ಲಾದರೂ ಎರಡು ಋಣಾತ್ಮಕ ಸಂಗತಿಗಳು ಧನಾತ್ಮಕ ಫಲಿತಾಂಶ ಕೊಡಲಿಲ್ಲ ಎಂಬುದು ಸತ್ಯ.