The Federal Ground Report Part-3 | ಬೇಬಿ ಆಫ್ ಇರಾನ್ನಲ್ಲಿ ಮದ್ಯದಂಗಡಿ, ಚಿತ್ರಮಂದಿರ ಇಲ್ಲ, ಗ್ರಾಮಸ್ಥರಿಗಾಗಿ ಪ್ರತ್ಯೇಕ ಟಿವಿ!
ಅಲಿಪುರದಲ್ಲಿ ಇರಾನ್ ಪರಮೋಚ್ಛ ನಾಯಕ ಅಯತೊಲ್ಲಾ ಖಮೇನಿ ಭೇಟಿಯ ನೆನಪಿಗಾಗಿ ಅವರ ಗುರುಗಳ ಹೆಸರಿನಲ್ಲಿ ನಿರ್ಮಿಸಿರುವ ಐಕೆ ಆಸ್ಪತ್ರೆ (ಇಮಾಮ್ ಖೊಮೇನಿ ಆಸ್ಪತ್ರೆ)ಯಲ್ಲಿ ಅಗ್ಗದ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.;
ಅಲಿಪುರದ ವಿಹಂಗಮ ನೋಟ
ಕರ್ನಾಟಕದ ಪ್ರತಿ ಹಳ್ಳಿ-ಹಳ್ಳಿಯಲ್ಲೂ ಮದ್ಯ ಮಾರಾಟ ಸಾಮಾನ್ಯ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರದಲ್ಲಿ ಮಾತ್ರ ಮದ್ಯದಂಗಡಿ, ಚಿತ್ರಮಂದಿರ ಹಾಗೂ ಪೊಲೀಸ್ ಠಾಣೆಗೆ ಜಾಗವಿಲ್ಲ..!
ಗ್ರಾಮದ ಜನಸಂಖ್ಯೆ 30 ಸಾವಿರ ದಾಟಿದೆ. ಹೆಚ್ಚು ವಾಣಿಜ್ಯ-ವಹಿವಾಟು ನಡೆದರೂ ಮದ್ಯದಂಗಡಿ, ಚಿತ್ರಮಂದಿರಕ್ಕೆ ಅವಕಾಶ ನೀಡದ ಕಾರಣಕ್ಕೆ ಅಲಿಪುರ ಗ್ರಾಮ ಅಭಿವೃದ್ಧಿ ಜತೆಗೆ ಶಾಂತಿ ಸೌಹಾರ್ದತೆಗೂ ಹೆಸರಾಗಿದೆ.
"ಹೊರದೇಶಗಳಲ್ಲಿ ಚಿನ್ನಾಭರಣ, ಜೆಮ್ಸ್ ಸ್ಟೋನ್ ವ್ಯಾಪಾರ, ಸ್ಥಳೀಯವಾಗಿ ರಿಯಲ್ ಎಸ್ಟೇಟ್, ಕೃಷಿ ಹೀಗೆ ಎಲ್ಲ ರಂಗಗಳಲ್ಲಿ ತೊಡಗಿಸಿಕೊಂಡಿದೆ. ಹಾಗಾಗಿ, ಅಲಿಪುರದಲ್ಲಿ ಚಿತ್ರಮಂದಿರ, ಮದ್ಯದಂಗಡಿ ಹಾಗೂ ಪೊಲೀಸ್ ಠಾಣೆಗೆ ಗ್ರಾಮದ ಪರಮೋಚ್ಛ ಮಂಡಳಿಯಾಗಿರುವ ಅಂಜುಮನ್-ಇ- ಜಾಫರಿಯಾ ಸಂಸ್ಥೆ ಅವಕಾಶ ನೀಡಿಲ್ಲ. ಗ್ರಾಮದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ತಲೆದೋರಿದರೂ ನಾವೇ ಬಗೆಹರಿಸಿಕೊಳ್ಳುತ್ತೇವೆ" ಎಂದು ಗ್ರಾಮಸ್ಥ ಮಿರ್ ತಸ್ವೀರ್ ಅಬ್ಬಾಸ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಅಲಿಪುರದಿಂದ ಸುಮಾರು 15 ಕಿ.ಮೀ. ದೂರದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಿದೆ. ಗ್ರಾಮದಲ್ಲಿ ಏನೇ ಸಮಸ್ಯೆಯಾದರೂ ಅಂಜುಮನ್ ಜಾಫರಿಯಾ ಸಮಿತಿ ಇತ್ಯರ್ಥಪಡಿಸಲಿದೆ. ಹಾಗಾಗಿ ಪೊಲೀಸ್ ಠಾಣೆಯ ಅವಶ್ಯಕತೆ ಬಂದಿಲ್ಲ" ಎನ್ನುತ್ತಾರೆ.
ಹಿಂದೂ-ಮುಸ್ಲಿಂ ಸಾಮರಸ್ಯದ ಬದುಕು
ಅಲಿಪುರ ಗ್ರಾಮದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೂ ಮುಸ್ಲಿಮರೊಂದಿಗೆ ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಗಣೇಶ ಚತುರ್ಥಿ, ಅಯ್ಯಪ್ಪ ಮಾಲಾಧಾರಣೆ ಸಂದರ್ಭದಲ್ಲಿ ಅಂಜುಮನ್ ಸಮಿತಿ ಸೇವೆ ಒದಗಿಸಲಿದೆ. ಮೊಹರಂ ಹಬ್ಬದಲ್ಲಿ ಹಿಂದೂಗಳು ಕೂಡ ಭಾಗಿಯಾಗುತ್ತಾರೆ. ಮೊಹರಂ ಹತ್ತನೇ ದಿನ ಸುತ್ತಲಿನ ಎಲ್ಲ ಗ್ರಾಮಗಳ ಜನರು ಬಾಬಯ್ಯನ ಹಬ್ಬದಲ್ಲಿ ಭಾಗವಹಿಸುತ್ತಾರೆ ಎಂದು ಅಂಜುಮನ್ ಜಾಫರಿಯಾ ಸಮಿತಿ ಸದಸ್ಯ ಮಿರ್ ಶಬಾಹತ್ ಹುಸೇನ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಅಲಿಪುರದ ಅತಿ ದೊಡ್ಡ ಮಸೀದಿ
ಸಮಿತಿಯಿಂದ ಶೈಕ್ಷಣಿಕ ನೆರವು
ಅಲಿಪುರ ಗ್ರಾಮದಲ್ಲಿ ಶೇ 50ರಷ್ಟು ಬಡ ಕುಟುಂಬಗಳೂ ಇವೆ. ಅಂಜುಮನ್ ಸಮಿತಿಯಿಂದ ಬಡ ಮಕ್ಕಳಿಗೆ ಶಿಕ್ಷಣ, ಲೇಖನ ಸಾಮಗ್ರಿ, ಸಮವಸ್ತ್ರ ವಿತರಿಸಲಾಗುತ್ತದೆ. ಬಡ ಮಕ್ಕಳಿಗೆ ಶಾಲಾ ಶುಲ್ಕದಲ್ಲೂ ಶೇ20 ರಷ್ಟು ರಿಯಾಯ್ತಿ ನೀಡಲಾಗುತ್ತಿದೆ.
ಶುಲ್ಕ ಪಾವತಿ ಕಷ್ಟವಾದಾಗ ಕೊಂಚ ರಿಯಾಯ್ತಿ ನೀಡಲಾಗುತ್ತದೆ ಎಂದು ಗ್ರಾಮಸ್ಥ ಅವಿನಾಶ್(ಹೆಸರು ಬದಲಿಸಲಾಗಿದೆ) ʼದ ಫೆಡರಲ್ ಕರ್ನಾಟಕʼಕ್ಕೆಗೆ ತಿಳಿಸಿದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ
ಅಲಿಪುರದಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯದ(ಮದರಸಾ) ವ್ಯವಸ್ಥೆಯೂ ಇದೆ. ದೇಶದ ವಿವಿಧೆಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣವನ್ನೂ ನೀಡಲಾಗುತ್ತಿದೆ.
ಮಧ್ಯಪ್ರದೇಶ, ಆಂಧ್ರಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣದಿಂದ ಸುಮಾರು 65 ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬಂದಿದ್ದಾರೆ.
ಅಲಿಪುರದ ನಂಟು ಎಲ್ಲೆಲ್ಲಿದೆ?
ಅಲಿಪುರದ ಶಿಯಾ ಪಂಗಡದ ಮುಸ್ಲಿಮರು ಬೆಂಗಳೂರಿನ ರಿಚ್ಮಂಡ್ ಟೌನ್, ನೀಲಸಂದ್ರ, ಯಶವಂತಪುರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದ್ದಾರೆ. ಮೊಹರಂ ಹಾಗೂ ರಂಜಾನ್ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಹಬ್ಬ ಆಚರಣೆ ಮಾಡುತ್ತೇವೆ ಎಂದು ಅಲಿಪುರ ಗ್ರಾಮಸ್ಥ ಶಫೀರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಐಕೆ ಆಸ್ಪತ್ರೆಯಲ್ಲಿ ಅಗ್ಗದ ಚಿಕಿತ್ಸೆ
ಅಲಿಪುರದಲ್ಲಿ ಇರಾನ್ ಪರಮೋಚ್ಛ ನಾಯಕ ಅಯತೊಲ್ಲಾ ಖಮೇನಿ ಭೇಟಿಯ ನೆನಪಿಗಾಗಿ ಅವರ ಗುರುಗಳ ಹೆಸರಿನಲ್ಲಿ ನಿರ್ಮಿಸಿರುವ ಐಕೆ ಆಸ್ಪತ್ರೆ(ಇಮಾಮ್ ಖೊಮೇನಿ ಆಸ್ಪತ್ರೆ)ಯಲ್ಲಿ ಅಗ್ಗದ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಲಹಾ ದರ ಕೇವಲ 50ರೂ. ನಿಗದಿಪಡಿಸಿದ್ದು, ಇಲ್ಲಿ ಒಪಿಡಿ, ಎಮರ್ಜೆನ್ಸಿ, ಪಿಸಿಯೋಥೆರಪಿ, ಗೈನಕಾಲಾಜಿಸ್ಟ್ ಸೇರಿದಂತೆ ಸಣ್ಣ ಪುಟ್ಟ ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸಲಾಗುತ್ತದೆ. ರೋಗಿಗಳಿಗೆ ಗ್ರಾಮದ ಯಾವುದೇ ಮೂಲೆಗಾದರೂ 20 ರೂ.ರಿಯಾಯ್ತಿ ದರದಲ್ಲಿ ಆಟೊ ಪ್ರಯಾಣ ಸೇವೆ ಒದಗಿಸುತ್ತಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ನದೀಂ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಆಸ್ಪತ್ರೆಗೆ ಉದ್ಘಾಟನೆಗೆ 1991 ರಲ್ಲಿ ಅಂದಿನ ಮಾಜಿ ಉಪ ರಾಷ್ಟ್ರಪತಿ ಬಿ.ಡಿ. ಜತ್ತಿ, ರಾಜ್ಯಪಾಲ ಖುರ್ಷೀದ್ ಅಲಂ ಖಾನ್, ಇರಾನ್ ರಾಯಭಾರಿ ಇಬ್ರಾಹಿಂ ರಹೀಂಪುರ್ ಆಗಮಿಸಿದ್ದರು.
ರಾಜಕೀಯ ಅಷ್ಟಕ್ಕಷ್ಟೇ
ಅಲಿಪುರದಲ್ಲಿ ಶಿಯಾ ಮುಸ್ಲಿಮರ ರಾಜಕೀಯ ಪ್ರವೇಶ ಅಷ್ಟಕ್ಕಷ್ಟೇ. ವ್ಯವಹಾರ, ಉದ್ಯಮ ಹಾಗೂ ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ಜನರು ರಾಜಕೀಯಕ್ಕೆ ಹೆಚ್ಚು ಆಸಕ್ತಿ ತೋರುತ್ತಿಲ್ಲ.
ಜೆಡಿಎಸ್ ನಲ್ಲಿ ಮಿರ್ ರೋಷನ್ ಅಬ್ಬಾಸ್, ಕಾಂಗ್ರೆಸ್ ಪಕ್ಷದಲ್ಲಿ ಮಿರ್ ರೋಷನ್ ಅಲಿ ಅವರು ಸಂಘಟನಾತ್ಮಕ ಹುದ್ದೆ ಹೊಂದಿದ್ದರು. ಉಳಿದಂತೆ ಯಾರೂ ಕೂಡ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಎರಡು-ಮೂರು ಬಾರಿ ಅಲೀಪುರಕ್ಕೆ ಆಗಮಿಸಿದ್ದರು.
ಶಿಯಾ ಮುಸ್ಲಿಮರಿಗೆ ಪ್ರತ್ಯೇಕ ಕೇಬಲ್ ಚಾನೆಲ್
ಅಲಿಪುರದಲ್ಲಿ ಶಿಯಾ ಮುಸ್ಲಿಮರು ಶೇ 90ರಷ್ಟು ಇರುವುದರಿಂದ ಅಂಜುಮನ್ ಜಾಫರಿಯಾ ಸಮಿತಿ ಗ್ರಾಮಕ್ಕಾಗಿಯೇ ಪ್ರತ್ಯೇಕ ಕೇಬಲ್ ಚಾನೆಲ್ ಆರಂಭಿಸಿದೆ.
ʼಅಲಿ ಟಿವಿʼ ಹೆಸರಿನಲ್ಲಿ ಚಾನೆಲ್ನಲ್ಲಿ ಮಸೀದಿಯಲ್ಲಿ ನಿತ್ಯ ಪ್ರಾರ್ಥನೆ, ವಿಶೇಷ ಆಚರಣೆಗಳು, ಕುರಾನ್ ಪಠಣ, ಧಾರ್ಮಿಕ ಗುರುಗಳ ಸಂದೇಶ ಹಾಗೂ ಗ್ರಾಮಕ್ಕೆ ಭೇಟಿ ನೀಡುವ ಅತಿಥಿಗಳ ಮಾತು ಇರಲಿದೆ. ಪ್ರತಿಯೊಬ್ಬರೂ ಕೇಬಲ್ ಚಾನೆಲ್ ಗೆ ಮಾಸಿಕ 350ರೂ. ಪಾವತಿಸುತ್ತಾರೆ. ಚಾನೆಲ್ನಲ್ಲಿ ಯಾವುದೇ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ. ಅಲಿ ಟಿವಿ ಹೊರತುಪಡಿಸಿ ಬೇರಾವ ಚಾನೆಲ್ ಹಾಕಿಸಿಕೊಳ್ಳಬಾರದು ಎಂಬ ನಿರ್ಬಂಧವಿಲ್ಲ ಎಂದು ಮಿರ್ ತಸ್ವೀರ್ ಅಬ್ಬಾಸ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕಳ್ಳಸಾಗಾಣಿಕೆ ಆರೋಪವೂ ಇದೆ
2009 ರಲ್ಲಿ ಚಿನ್ನ ಹಾಗೂ ಬೆಲೆ ಬಾಳುವ ಹರಳುಗಳನ್ನು ಕಳ್ಳಸಾಗಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಅಲಿಪುರದ ಆರು ಮಂದಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. “ಅಲಿಪುರದಲ್ಲಿ ಇತ್ತೀಚೆಗೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ” ಎಂದು ಮಂಚೇನಹಳ್ಳಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಅಲಿಪುರ ಗ್ರಾಮದಲ್ಲಿ ಸುನ್ನಿ ಮುಸ್ಲಿಮರು ಕೂಡ ಬೆರಳೆಣಿಕೆ ಕುಟುಂಬಗಳಿವೆ. ಆದರೆ, ಹಿಂದೂ ಮತ್ತು ಮುಸ್ಲಿಮರು ಅನೋನ್ಯದಿಂದಲೇ ಬದುಕು ಸಾಗಿಸುತ್ತಾರೆ. ಕಳೆದ ಎರಡು ವರ್ಷದ ಹಿಂದೆ ಬಾಹ್ಯ ಶಕ್ತಿಗಳಿಂದ ಸಾಮರಸ್ಯ ಕದಡಿದ್ದ ಪ್ರಯತ್ನ ನಡೆದರೂ ಗ್ರಾಮಸ್ಥರು ಅದಕ್ಕೆ ಆಸ್ಪದ ನೀಡಿಲ್ಲ. ಜನಪ್ರತಿನಿಧಿಗಳು ಕೂಡ ಗ್ರಾಮದ ಅಭಿವೃದ್ಧಿಗೆ ನೆರವಾಗುತ್ತಿದ್ದು, ಶಾಂತಿ ಸೌಹಾರ್ದತೆ ನೆಲೆಸಲು ಕಾರಣವಾಗಿದೆ.
ಅಲಿಪುರದಲ್ಲಿ ಸುಗಂಧರಾಜ ಹೂವು ಬೆಳೆ
ಅಲಿಪುರದಲ್ಲಿ ಕೃಷಿ
ಅಲಿಪುರ ಗ್ರಾಮ ವಿದೇಶಗಳೊಂದಿಗೆ ವ್ಯಾಪಾರ ಸಂಬಂಧ ಇಟ್ಟುಕೊಂಡರೂ ಕೃಷಿ ಕಾರ್ಯವೂ ನಡೆಯುತ್ತಿದೆ. ಗ್ರಾಮ ಹಾಗೂ ಸುತ್ತಲಿನ ಸುಮಾರು 1000 ಎಕರೆಯ ವಿಸ್ತೀರ್ಣದಲ್ಲಿ ಕೃಷಿ ಕೆಲಸಗಳನ್ನು ಅಲೀಪುರದ ಗ್ರಾಮಸ್ಥರು ಮಾಡುತ್ತಿದ್ದಾರೆ.
ಪ್ರಮುಖವಾಗಿ ಜೋಳ, ಈರುಳ್ಳಿ ಹಾಗೂ ಸುಗಂಧರಾಜ ಹೂವಿನ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ಸುತ್ತಲಿನ ಗ್ರಾಮಗಳ ನೂರಾರು ಜನರು ಕೂಲಿ ಕೆಲಸಕ್ಕಾಗಿ ಅಲೀಪುರಕ್ಕೆ ಆಗಮಿಸುತ್ತಾರೆ ಎಂದು ಗ್ರಾಮದ ಮಿರ್ ತಸ್ವೀರ್ ಅಬ್ಬಾಸ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.