ಎಚ್ಚೆಸ್ವಿ| ಹೊತ್ತಿ ಉರಿದ ದೀಪ ಉರಿದಾರುವುದು...ಗೊತ್ತು, ಕೊನೆಯೇ ಹಾಗೆ...
ದ ಫೆಡರಲ್ ಕಂಬನಿ: ಎಚ್ಚೆಸ್ವಿ ಎಂದರೆ ಒಂದು ರೀತಿಯ ಬೆಳದಿಂಗಳು. ಸೇಡಿಲ್ಲದ, ಕೇಡಿಲ್ಲದ ಕಾವ್ಯ ಅವರದು. ʼಸಂಜೆಯಾಗುತ್ತಿದೆ ನಡೆನಡೆ ಗೆಳೆಯ ಬೃಂದಾವನದ ಕಡೆಗೆʼ ಎಂದು ಸಂತೃಪ್ತ ಜೀವನ ನಡೆಸಿ, ಕೆಲವರನ್ನು ಕೈ ಹಿಡಿದು ನಡೆಸಿ ಮುಗುಳ್ನಗುತ್ತಲೇ ಹೊರಟು ಬಿಟ್ಟಿದ್ದಾರೆ ಎಚ್ಚೆಸ್ವಿ…..;
“ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ…..” ಹೀಗಿದ್ದ ನಮ್ಮ ಕಾಲದ ಕವಿ, ಡಾ. ಎಚ್ ಎಸ್. ವೆಂಕಟೇಶಮೂರ್ತಿ, ಗೆಳೆಯರಿಗೆ, ಸಾಹಿತ್ಯಾಭಿಮಾನಿಗಳಿಗೆ ಪ್ರೀತಿಯ ಎಚ್ಚೆಸ್ವಿ, ಮಳೆಸುರಿಸಿ ಹಗುರಾದ ಮುಗಿಲಿನಂತೆ ಅನಂತದಲ್ಲಿ ಲೀನವಾಗಿದ್ದಾರೆ.
ಇನ್ನು ಮುಂದೆ ಅವರ ಮನೆಗೆ ಹೋದಾಗ ಸ್ವಾಗತಿಸುತ್ತಿದ್ದ ನಿಷ್ಕಲ್ಮಶ ನಗು, ನಿರುದ್ದಿಶ್ಯ ಸ್ನೇಹದ ಸೊಗಡಿರುವುದಿಲ್ಲ ಎನ್ನುವುದು ನಮ್ಮಂಥ ಹಲವರ ನೋವು. ಏಕೆಂದರೆ ಅವರೆಂದರೆ ಒಂದು ರೀತಿಯ ಬೆಳದಿಂಗಳು. ಸೇಡಿಲ್ಲದ, ಕೇಡಿಲ್ಲದ ಕಾವ್ಯ ಅವರದು. ಸಂಜೆಯಾಗುತ್ತಿದೆ ನಡೆನಡೆ ಗೆಳೆಯ ಬೃಂದಾವನದ ಕಡೆಗೆ ಎಂದು ಸಂತೃಪ್ತ ಜೀವನ ನಡೆಸಿ, ಕೆಲವರನ್ನು ಕೈ ಹಿಡಿದು ನಡೆಸಿ, ತಮ್ಮ ವೇಣುನಾದದಂಥ ಬದುಕಿನಿಂದ ಎಲ್ಲರನ್ನೂ ಪ್ರಭಾವಿಸಿ, ಸಂತನೊಬ್ಬ ಬೃಂದಾವನ ಪ್ರವೇಶ ಮಾಡುವಂತೆ, ಮುಗುಳ್ನಗುತ್ತಲೇ ಹೊರಟು ಬಿಟ್ಟಿದ್ದಾರೆ ಎಚ್ಚೆಸ್ವಿ…..
ಕೆಲವು ದಿನಗಳ ಹಿಂದೆ ಅವರಾಡಿದ ಮಾತೊಂದು ನೆನಪಾಗುತ್ತಿದೆ. ಬೇರೆ ಭಾಷೆ ಸಂಸ್ಕೃತಿಯನ್ನು ಕನ್ನಡಕ್ಕೆ ತರುವಾಗ ನೋಡುವ ಬಗೆ ಯಾವುದು ಎಂಬ ಬಗ್ಗೆ ಅವರು ಹೇಳಿದ್ದು ಹೀಗೆ; ಬೇರೆ ಮನೆಯಿಂದ ಹೆಣ್ಣುಮಗಳು ಬಂದಾಗ ನಮ್ಮ ಮನೆಯ ಸೊಸೆಯಾಗುವಂತೆ ಬೇರೆ ಬೇರೆ ಸಾಹಿತ್ಯ ಪ್ರಕಾರಗಳು ಬಂದಾಗ ಕನ್ನಡ ಮೂಲರೂಪಕ್ಕೆ ಧಕ್ಕೆಯಾಗದಂತೆ ಇರಬೇಕು. “ಎಚ್ಚೆಸ್ವಿ ಅವರಿಗೆ ಅನುವಾದ ರೂಪಾಂತರ ಮರುಸೃಷ್ಟಿ ಮಾತ್ರವಲ್ಲ. ವಿದೇಶಿ ಅನುಭವವೂ ದೇಶೀಯವಾಗಿಸಬೇಕು ಎನ್ನುವುದು ಅವರ ಅನಿಸಿಕೆ. ಹಾಗಾಗಿ ಅನುವಾದ ರೂಪಾಂತರಗಳೆಲ್ಲವೂ ಒಂದು ರೀತಿಯ ವಶೀಕರಣದ ಮಂತ್ರಗಳು. ಅವರಿಗೆ ಮಹಾನ್ ಕೃತಿಗಳು ಸ್ವಂತಕ್ಕೆ ದಕ್ಕಿದರೆ ಸಾಲದು ಅವರೊಬ್ಬ ಸಾಂಸ್ಕೃತಿಕ ಕವಿಯೂ ಹೌದು. ಹೀಗಾಗಿ ಅವರಿಗೆ ದಕ್ಕಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ದಕ್ಕಿತು” ಎನ್ನುತ್ತಾರೆ ವಿಮರ್ಶಕ ಎಸ್. ಆರ್ ವಿಜಯಶಂಕರ. ಎಚ್ಚೆಸ್ವಿ ಭೂಮಿಯ ಯಾವುದೇ ಭಾಗದಲ್ಲಿದ್ದರೂ, ಅಲ್ಲೆಲ್ಲ ಅವರ ಕನ್ನಡ ಮನಸ್ಸು ಎಚ್ಚರವಾಗಿಯೇ ಇರುತ್ತಿತ್ತು.
ಎಚ್ಚೆಸ್ವಿ…ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್ 23ರಲ್ಲಿ . ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ. ಇಬ್ಬರೂ ಶಿಕ್ಷಕರು. ಬಾಲ್ಯದಲ್ಲಿಯೇ ಯಕ್ಷಗಾನ, ಬಯಲಾಟ, ಪ್ರಾದೇಶಿಕ ಜಾನಪದ ಇವರ ಮೇಲೆ ಗಾಢ ಪರಿಣಾಮ ಬೀರಿದ್ದವು ಎನ್ನುವುದಕ್ಕೆ ಇವರ ಕೃತಿಗಳೇ ಸಾಕ್ಷಿ. ತಂದೆ-ತಾಯಿಯಿಂದಲೇ, ಕುಮಾರವ್ಯಾಸ ಭಾರತ, ಜೈಮಿನಿ ಭಾರತಗಳನ್ನು ಕೇಳಿ, ಓದಿ, ಕುಮಾರವ್ಯಾಸ, ಪುರಂದರ, ಲಕ್ಷ್ಮೀಶನಂಥ ಕವಿಗಳಿಂದ ಪ್ರಭಾವಿತರಾದವರು. ಇವರ ಗುರುಗಳಾದ ನರಸಿಂಹ ಶಾಸ್ತ್ರಿ ಎಚ್ಚೆಸ್ವಿ ಅವರ ಸೃಜನಶೀಲ ಶಕ್ತಿಗೆ ಮೂರ್ತರೂಪ ನೀಡಿದವರು ಎನ್ನಬಹುದು. ತಮ್ಮ ಬಳಿ ಇದ್ದ, ಕುವೆಂಪು, ಬೇಂದ್ರೆ, ಗೋರೂರು, ಮಾಸ್ತಿ, ಕಾರಂತ ಪುಸ್ತಕಗಳನ್ನು ಎಚ್ಚೆಸ್ವಿ ಅವರಿಗೆ ಓದಿಸಿದವರು. ಹಾಗಾಗಿ ಎಚ್ಚೆಸ್ವಿ ತಮ್ಮ ಮೊದಲ ಕವನ ಸಂಕಲನ ʻಪರಿವೃತ್ತʼವನ್ನು ನರಸಿಂಹ ಶಾಸ್ತ್ರಿಗಳಿಗೆ ಅರ್ಪಿಸಿದ್ದಾರೆ. ಎಚ್ಚೆಸ್ವಿ…ಅವರ ಅನಾತ್ಮ ಕಥನ ಅವರ ಬಾಲ್ಯದ ಕಥೆಯನ್ನು ಮನೋಜ್ಞವಾಗಿ ಕಟ್ಟಿಕೊಡುತ್ತದೆ. ಇದು ನಿರ್ಮಲವಾದ ಆಪ್ತಭಾವದ ಸ್ಫುರಣ ಎಂದೇ ವಿಮರ್ಶಕರು ಗುರುತಿಸುತ್ತಾರೆ. ಅದು ಓದುಗರನ್ನು ಅಯಸ್ಕಾಂತದಂತೆ ಓದುಗರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಮೃದು ಹಾಸ್ಯದ ಜವನಿಕೆಯೊಳಗೆ ಜೀವಮಾಮ ಪರ್ಯಂತ ಅನುಭವಗಳ ಆಗಿ ಹೋಗಿರುವ ಸಂಗತಿಗಳ ಒಂದು ಅನನ್ಯ ನೋಟ. ನಿರ್ಲಿಪ್ತವಾಗಿ ಮತ್ತೆ ಎಲ್ಲವನ್ನೂ ಅತಿಯಾದ ಆಪ್ತತೆಯಿಂದ ಧನಾತ್ಮಕವಾಗಿಯೇ ಭಾವಿಸಿಕೊಂಡು ನೆನಪುಗಳ ಬುತ್ತಿಯನ್ನು ಬಿಚ್ಚಿಡು ಎಚ್ಚೆಸ್ವಿ ಈ ಮೂಲಕ ಆಪ್ತವಾಗುತ್ತ, ಓದುಗರ ಮನಹೊಕ್ಕು ನೆಲೆಸಿಬಿಡುತ್ತಾರೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. "ಕನ್ನಡದಲ್ಲಿ ಕಥನ ಕವನಗಳು" ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಇವರ ಬರವಣಿಗೆಯಲ್ಲಿ ಕಾಣುವ ಆಧುನಿಕ ಪರಂಪರೆಯೊಂದಿಗೆ ನಡೆಸಿದ ಅನುಸಂಧಾನ, ನಿರಂತರ ಹೊಕ್ಕಾಟ, ಮತ್ತು ಸಂಘರ್ಷದ ಫಲವಾಗಿ ಹುಟ್ಟಿಕೊಂಡವು ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ಇದುವರೆಗೆ ಎಚ್ಚೆಸ್ವಿ ಅವರ ನೂರಕ್ಕೂ ಹೆಚ್ಚು ಸಾಹಿತ್ಯಿಕ ಕೃತಿಗಳು ಪ್ರಕಟವಾಗಿವೆ. ಈ ಮೂಲಕ ಎಚ್ಚೆಸ್ವಿ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ತಮಗೊಂದು ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ.
ಕಲಿಸಿದ ಗುರುಗಳ ನೆನಪಿನಲ್ಲಿ
ಎಚ್ಚೆಸ್ವಿ ನವೋದಯ ಕಾಲದ ಬರಹಗಾರರು ಮತ್ತು ಭಾವಗೀತೆ ಕವಿಯಾಗಿದ್ದವರು. 2020 ರ ಹೊತ್ತಿಗೆ, ಕನ್ನಡದಲ್ಲಿ ನೂರಕ್ಕೂ ಹೆಚ್ಚು ಗ್ರಂಥಗಳನ್ನು ಬರೆದವರು.. ಅವರ "ಹೂವಿ" ನಾಟಕವನ್ನು ಭಾರತದಲ್ಲಿ ICSE ಶೈಕ್ಷಣಿಕ ಮಂಡಳಿಯು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿದೆ.ಅವರ ಪುಸ್ತಕಗಳನ್ನು ಸ್ಕಾಟ್ಲೆಂಡ್ನ ಮ್ಯಾಕ್ಮಾಸ್ಟರ್ಸ್ ಸ್ಟುಡಿಯೋದಲ್ಲಿ, ಅಂಟಾರ್ಕ್ಟಿಕಾದಲ್ಲಿ ರೀವ್ಸ್ ವೇದಿಕೆಯಲ್ಲಿ ಮತ್ತು ಇಮು ಮತ್ತು ಗೊರೊಸಿ ಜೊತೆಗೆ ಹೋಲಿ ನೈಟ್ಸ್ ಮತ್ತು ವರ್ಲ್ಡ್ ಸರ್ಕಾರದ ಮೇಲ್ವಿಚಾರಣೆಯಲ್ಲಿ ಮೇರಿ ಜಿಯೋಯಿಸ್ನಲ್ಲಿ ಪ್ರದರ್ಶಿಸಲಾಗಿದೆ.ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮಕ್ಕಳಿಗೆ ಕಲಿಸಿದ ಗುರು ಎಚ್ಚೆಸ್ವಿ . ಕನ್ನಡದಲ್ಲಿ ಕಥನ ಕವನಗಳು ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅಲ್ಲದೇ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇನ್ನು ಎಚ್ಚೆಸ್ವಿ, ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ,ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಎಚ್ಚೆಸ್ವಿ, ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾದೆಮಿ ಅನುವಾದ ಪುರಸ್ಕಾರವನ್ನು ಪಡೆದಿದೆ. “ಕ್ರಿಯಾಪರ್ವ‘, ‘ಎಷ್ಟೊಂದು ಮುಗಿಲು‘, ‘ನದೀತೀರದಲ್ಲಿ‘, ‘ಉತ್ತರಾಯಣ‘ ಮೊದಲಾದವು ಇವರ ಮುಖ್ಯ ಕಾವ್ಯಕೃತಿಗಳು. ‘ಅಗ್ನಿವರ್ಣ’, ‘ಚಿತ್ರಪಟ’, ‘ಉರಿಯ ಉಯ್ಯಾಲೆ‘, ‘ಮಂಥರೆ‘ ಮೊದಲಾದುವು ಇವರ ಮುಖ್ಯ ನಾಟಕಗಳು. ಎಚ್ಚೆಸ್ವಿ,ಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭ್ಯವಾಗಿದೆ.
ಭಾವ ನವನವೀನವಾದ ಹಾಡುಗಳು
ಎಚ್ಚೆಸ್ವಿ ನೆನಪಾಗುವುದು, ನೆನಪಿನಲ್ಲಿ ಉಳಿಸುವ "ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು ನನಗು ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು" ಎನ್ನುವಂಥ ಭಾವಗೀತೆಯಂಥ ಗೀತರಚನೆಗಳಿಂದ. ಸಿ. ಅಶ್ವಥ್ ಮತ್ತು ರಾಜು ಅನಂತಸ್ವಾಮಿ ಈ ಹಾಡನ್ನು ಹಾಡಿದ್ದಾರೆ. ಅವರ ಇತರ ಭಾವಗೀತೆಗಳು ಮತ್ತು ಚಲನಚಿತ್ರ ಗೀತೆಗಳು ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. “ಹುಚ್ಚುಕೋಡಿ ಮನಸು ಅದು, ಹದಿನಾರನೇ ವಯಸ್ಸು”,"ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆ ಮೆತ್ತಿದರಮ್ಮ" ಈ ಹಾಡು ಇಂದಿಗೂ ಎಲ್ಲರ ಬಾಯಲ್ಲಿ ಗುನುವಂತಹ ಹಾಡಾಗಿದೆ."ಐದು ಬೆರಳು ಕೂಡಿ ಒಂದು ಮುಷ್ಟಿಯು ಹಲವು ಮಂದಿ ಸೇರಿ ಈ ಸಮಷ್ಟಿಯುಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು", ಎಂದು ಬರೆದ ಈ ಹಾಡು ರಾಷ್ಟ್ರೀಯ ಭಾವನೆಗಳನ್ನು ತೋರಿಸುತ್ತದೆ. ಸಿ. ಅಶ್ವಥ್ ಅವರ ಸಂಗೀತದಲ್ಲಿ ಈ ಹಾಡು ತುಂಬಾ ಪ್ರಖ್ಯಾತವಾಗಿದೆ. " ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ " ಹಾಡನ್ನು ಮೈಸೂರು ಅನಂತಸ್ವಾಮಿ ಮತ್ತು ರಾಜು ಅನಂತಸ್ವಾಮಿ ಹಾಡಿದ್ದಾರೆ. ಈ ಹಾಡುಗಳು ಕನ್ನಡಿಗರು ಇಂದು ಕೇಳಿದರು ರೋಮಾಂಚನವಾಗುವಂತೆ ಜೊತೆ ಜೊತೆಯಾಗಿ ಗುನುಗುವಂತಹ ಸಾಲುಗಳಾಗಿವೆ. ಚಿನ್ನಾರಿ ಮುತ್ತ ಸಿನಿಮಾದ ಕತೆಗಾರ, ಅಮೆರಿಕಾ.. ಅಮೆರಿಕಾ ಸಿನಿಮಾದ “ಬಾನಲ್ಲಿ ಮೋಡ” ಹಾಡಿನ ರಚನೆಗಾರ.. “ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಮಳೆಸುರಿಸಿ ಹಗುರಾದ ಮುಗಿಲಿನಂತೆ ಸಾಲುಗಳನ್ನು ರಚಿಸಿದ ಎಚ್ಚೆಸ್ವಿ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ ಒಬ್ಬ ಪ್ರಮುಖ ಕವಿ. ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ "ಯಾವ ಜನ್ಮದ ಮೈತ್ರಿ", "ಸವಿಗಾನ", "ಮುಕ್ತ" ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಸಿನಿಮಾರಂಗಕ್ಕೂ ತಮ್ಮದೇ ಕೊಡುಗೆ ನೀಡಿರುವ ಎಚ್ಚೆಸ್ವಿ ʻಹಸಿರು ರಿಬ್ಬನ್ (2018) ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.
ಮಕ್ಕಳಿಗಾಗಿ ಬರೆಯುವುದೆಂದರೆ
ಮಕ್ಕಳಿಗಾಗಿ ಬರೆಯುವುದೆಂದರೆ ಎಚ್ಚೆಸ್ವಿಗೆ ಮಹಾ ಪ್ರೀತಿ. ಒಮ್ಮೆ ಅವರೊಂದಿಗೆ ಮಾತನಾಡಿದಾಗ ಅವರು ಹೇಳಿದ ಮಾತುಗಳು ನೆನಪಾಗುತ್ತಿದೆ. “ನನಗೆ ಮಕ್ಕಳ ಸಾಹಿತ್ಯ ತುಂಬಾ ಇಷ್ಟವಾದ ಸಾಹಿತ್ಯ ಪ್ರಕಾರ. ಯಾಕೆಂದರೆ ನನಗೆ ಮಕ್ಕಳೆಂದರೆ ಇಷ್ಟ. ಹಾಗಾಗಿ ಅವರಿಗೆ ಅಗತ್ಯವಾದ ಸಾಹಿತ್ಯವೂ ನನಗೆ ಇಷ್ಟ. ಹೀಗೆ ಅವರು ಮಕ್ಕಳಿಗೆ ಬರೆಯಲು ಕಾರಣವಿದೆ. ಅವರ ಗೆಳೆಯರೊಬ್ಬರು ಒಮ್ಮೆ ಅವರೊಂದಿಗೆ ಮಾತನಾಡುತ್ತಾ ʻಎಚ್ಚೆಸ್ವಿ ನವೋದಯದ ಕಾಲದಲ್ಲಿ ಎಷ್ಟೊಂದು ಜನ ಮುಖ್ಯ ಕವಿಗಳು, ಸಾಹಿತಿಗಳು ಹಿರಿಯರಿಗೆ ಬರೆಯುವುದರೊಂದಿಗೆ ಮಕ್ಕಳಿಗಾಗಿಯೂ ಬರೆಯುತ್ತಿದ್ದರು. ಕುವೆಂಪು, ರಾಜರತ್ನಂ, ಪಂಜೆ ಮಂಗೇಶರಾಯರು, ಸಿದ್ದಯ್ಯ ಪುರಾಣಿಕ ಎಲ್ಲರೂ ಮಕ್ಕಳಿಗಾಗಿ ಬರೆಯುತ್ತಿದ್ದರು. ಈಗೀಗ ಮಕ್ಕಳಿಗೆ ಬರೆಯುವವರೇ ಇಲ್ಲವಾಗಿದೆ. ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಪರಂಪರೆ ಮುಗಿದೇ ಹೋಯಿತೇ?ʼ ಎಂದು ಕೇಳಿದರು. ಇದು ನನ್ನ ಮರ್ಮವನ್ನು ಇರಿಯುವ ಪ್ರಶ್ನೆಯಾಗಿತ್ತು. ಬೇರೆಯವರ ವಿಷಯ ಇರಲಿ, ನಾನಾದರೂ, ಮಕ್ಕಳಿಗಾಗಿ ಏನನ್ನು ಬರೆದಿದ್ದೇನೆ. ಕುವೆಂಪು, ರಾಜರತ್ನಂ, ಪಂಜೆ ಮಂಗೇಶರಾಯರು, ಸಿದ್ದಯ್ಯ ಪುರಾಣಿಕ, ಎಲ್ ಗುಂಡಪ್ಪ, ಹೋಯಿಸಳ, ಮುಂತಾದ ಹಿರಿಯರೆಲ್ಲ, ನಾವು ಮಕ್ಕಳಾಗಿದ್ದಾಗ ಎಂತೆಂಥ ಪದ್ಯಗಳನ್ನು ನಮಗಾಗಿ ಬರೆದರು. ಪಂಜೆ ಅವರ ʼತೆಂಕಣಗಾಳಿಯಾಟʼ, ಕುವೆಂಪು ಅವರ ʻಕಿಂದರಜೋಗಿʼ ಜಿ.ಪಿ. ರಾಜರತ್ನಂ ಅವರ ಪದ್ಯಗಳು ನನ್ನನ್ನು ಮರಳು ಮಾಡಿದ್ದವು. ನಾವು ಆ ಪರಂಪರೆಯನ್ನು ಮುಂದುವರಿಸಲಿಲ್ಲವಲ್ಲ. ನಾನು ಇವತ್ತಿನ ಮಕ್ಕಳಿಗೆ ಓದಬಹುದಾದ, ರುಚಿಯಾದ ಪದ್ಯ-ಗದ್ಯ ಬರೆಯುವುದು ಬೇಡವೇ? ಈ ಪ್ರಶ್ನೆ ಕೇಳಿಕೊಂಡು ನಾನು ಮಕ್ಕಳಿಗಾಗಿ ಪದ್ಯ-ಗದ್ಯ ಬರೆಯತೊಡಗಿದೆ” ಎಂದಿದ್ದರು ಎಚ್ಚೆಸ್ವಿ.
ಜನ ಮಾನಸದ ಕವಿ
ಗೆಳೆಯ, ಗುರು, ಕವಿ, ಎಲ್ಲವೂ ಒಂದಾಗಿದ್ದ ಎಚ್ಚೆಸ್ವಿ ಅವರು ತಮ್ಮನ್ನು ತೊರೆದು ಹೊರಟುಹೋಗಿರುವ ಈ ಸಂದರ್ಭದಲ್ಲಿ, ಅವರ ತೀರಾ ಹತ್ತಿರದವರಿಗೆ, ಅವರನ್ನು ಪ್ರೀತಿಸಿದವರಿಗೆ, “ತೊರೆದು ಜೀವಿಸಬಹುದೇ?” ಎನ್ನುವಂತಾಗಿದೆ. ಆ ಪೈಕಿ ವಿಮರ್ಶಕ ಎಸ್ ಆರ್. ವಿಜಯಶಂಕರ ಕೂಡ ಒಬ್ಬರು.
ಅವರನ್ನು ʻದ ಫೆಡರಲ್ ಕರ್ನಾಟಕʼ ಸಂಪರ್ಕಿಸಿದಾಗ, ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಭಾವುಕರಾಗಿ ಅವರು ಗದ್ಗದಿತರಾಗಿದ್ದರು. ಅವರು ಹೇಳಿದ್ದು ಇಷ್ಟು: “ಯಾವುದೇ ಕಾಲಮಾನದಲ್ಲಿ ಕವನ ಬರೆಯುವವರು, ಕಾವ್ಯ ರಚಿಸುವವರು ನೂರಾರು ಮಂದಿ ಇರುತ್ತಾರೆ. ಅವರೆಲ್ಲರೂ, ಜನ ಮಾನಸದ ಕವಿ ಎಂದು ಕರೆಸಿಕೊಳ್ಳುವುದಿಲ್ಲ. ಹಾಗೆಯೇ, ಕವಿಗಳಿಂದ, ಗಾಯಕರಿಂದ, ವಿಮರ್ಶಕರಿಂದ ಜನ ಮಾನಸದ ಕವಿ ಎಂದು ಕರೆಸಿಕೊಂಡವರು ಎಚ್ಚೆಸ್ವಿ. ಅವರು ಏನೇ ಬರೆದರೂ ಅಲ್ಲೊಂದು ಕವಿ ಮನಸ್ಸು ಕೆಲಸ ಮಾಡುತ್ತಿತ್ತು. ಇದಕ್ಕೊಂದು ನಿದರ್ಶನ ಅವರ “ಪಶ್ಚಿಮದ ಗೋಡೆ ಮತ್ತು ಸೂರ್” ಎಂಬ ಚಿತ್ರ ಕಥನ. ಎಚ್ವೆಸ್ವಿ ಅವರೇ ಹೇಳುವ ಹಾಗೆ ಅದೊಂದು ಭಾವಚಿತ್ರ. ಇದು ಪು. ತಿ. ನ. ಬಗ್ಗೆ ಅವರು ಬರೆದ ಅಕ್ಷರ ಚಿತ್ರ. ಕವಿಯಾದವನು ಕಾಣುವುದರ ಆಚೆ ಇರುವ ಕಾಣ್ಕೆಯನ್ನು ಪಡೆಯಬೇಕು. ಕಂಡದ್ದು ನೋಟ, ಕಂಡದ್ದರ ಆಚೆ ಕಾಣುವುದು ಕಾಣ್ಕೆ ಎಂದು ಪುತಿನ ಹೇಳುವುದನ್ನು ಎಚ್ಚೆಸ್ವಿ ಆಗಾಗ ನೆನಪು ಮಾಡಿಕೊಳ್ಳುತ್ತಿದ್ದರು. ಅಂಥ ಕವಿ ಮನಸ್ಸು ಅವರದು. ಎಚ್ಚೆಸ್ವಿ ಪುತಿನ ಅವರನ್ನು ಎಷ್ಟು ಓದಿದರೂ, ದಣಿಯದವರು. ಎಚ್ಚೆಸ್ವಿ ಶ್ರೇಷ್ಠ ಅಧ್ಯಾಪಕರಾಗಿದ್ದರು. ಅವರು ಹೋದಲ್ಲೆಲ್ಲ ಅವರ ವಿದ್ಯಾರ್ಥಿಗಳು ಅವರನ್ನು ಸುತ್ತುವರಿಯುತ್ತಿದ್ದರು. ಎಚ್ಚೆಸ್ವಿ ಅವರ ಜೊತೆಯಲ್ಲಿ ನಾನು ಹಲವಾರು ಸಭೆಗಳಲ್ಲಿ ಭಾಗಿಯಾಗಿದ್ದೇನೆ. ಮೋಡಿ ಮಾಡುವಂಥ ಕಾವ್ಯ ಗಾರುಡಿಗ ಅವರು.
ಕಾವ್ಯ ಸಾತತ್ಯ
ಆರಂಭದಲ್ಲಿ ಬೇಂದ್ರೆ, ಅಡಿಗ, ಕುವೆಂಪು, ಪುತಿನ, ಕೆ.ಎಸ್. ನರಸಿಂಹಸ್ವಾಮಿ ಅವರ ಪ್ರಭಾವದಲ್ಲಿದ್ದ ಎಚ್ಚೆಸ್ವಿ, ನಂತರ ಅವರೆಲ್ಲರ ಪ್ರಭಾವದಿಂದ ಬಿಡಿಸಿಕೊಂಡು, ತಮ್ಮದೇ ಆದ ಕಾವ್ಯದ ದಾರಿ ಕಂಡುಕೊಂಡರು. ಇದಕ್ಕೆ ಅವರಿಗೆ ಒದಗಿ ಬಂದದ್ದು, ಕನ್ನಡ ಕಥನ ಪರಂಪರೆ. ಅವರ ಪಿಎಚ್ಡಿ ಪ್ರಬಂಧ ಕೂಡ ಕನ್ನಡದ ಕಥನ ಕವನಗಳ ಬಗೆಗೇ ಇದೆ. ಎಚ್ಚೆಸ್ವಿ ನಿಧಾನವಾಗಿ ಅಡಿಗರ ಪ್ರತಿಮಾ ವಿಧಾನದಿಂದ ಬಿಡುಗಡೆ ಹೊಂದಿ ಕಥನ ಕಾವ್ಯಗಳ ಮೂಲಕ ತಮ್ಮದೇ ಕಾವ್ಯ ಮಾರ್ಗವನ್ನು ಕಂಡುಕೊಂಡರು. ರಾಮ ಮತ್ತು ಕೃಷ್ಣರ ಕಥೆಗಳಲ್ಲಿ ಅವರಿಗೆ ಈ ದಾರಿ ಒದಗಿಬಂದವೆಂದು ಹೇಳಬಹುದು. ಸಾಮಾಜಿಕ ಪ್ರತಿಕ್ರಿಯೆಗಳಿಗೂ ಅರು ʻಶ್ರೀಸಂಸಾರಿʼ ಯಂತಹ ರಾಮನ ಬಗೆಗಿನ ಕಥನ ಮಾರ್ಗವನ್ನು ಆಯ್ದುಕೊಂಡರು. ಕನ್ನಡದ ಮುಖ್ಯ ಕವಿಗಳನ್ನು ಅರಗಿಸಿಕೊಂಡು, ತಮ್ಮ ಕಾವ್ಯ ಚೈತನ್ಯದಿಂದ ಕಾವ್ಯ ಸಾತತ್ಯವನ್ನು ಸಾಧಿಸಿದರು. ಸಾತತ್ಯವೆಂಬುದು ಕೇವಲ ಉತ್ತಮ ಕಾವ್ಯ ರಚಿಸುವುದಲ್ಲ. ಅದು ಕನ್ನಡದ ಹಿಂದಿನ ಕಾವ್ಯ ಶಕ್ತಿಯನ್ನು ತನ್ನ ಕಾಲದ ಕಾವ್ಯದ ಮೂಲಕ ಮುಂದಿನ ಕಾಲದ ಕಾವ್ಯಕ್ಕೆ ಕವಿಯೊಬ್ಬರನ್ನು ಹರಿಸಿಕೊಡುವುದು.” ಎಂದು ಎಚ್ಚೆಸ್ವಿ ಕಾವ್ಯ ಪರಂಪರೆಯ ತಮ್ಮ ಒಳನೋಟವನ್ನು ಎಸ್ ಆರ್ ವಿಜಯಶಂಕರ ತೆರೆದಿಟ್ಟರು.
ಅವರ ಅಂತ್ಯವನ್ನು ನಾವು ಅವರ ʻಬುದ್ಧಸ್ಮಿತʼ ಮೊದಲ ಅಧ್ಯಾಯದ;
ನಿತ್ಯ ಬದಲಾವಣೆಯ ಬಾಳಲ್ಲುಳಿವ
ಸತ್ಯ ಯಾವುದು ಮತ್ತೆ?
ಹೊತ್ತಿ ಉರಿದ ದೀಪ ಉರಿದಾರುವುದು
ಗೊತ್ತು. ಕೊನೆಯೇ ಹಾಗೆ…..
ಸಾಲುಗಳ ಮೂಲಕ ನೆನಪಿಸಿಕೊಂಡರೆ ಸಾಕು ಅಲ್ಲವೇ?