ʼಪ್ರಾಗ್-ದ್ರಾವಿಡ ಮೂಲದಿಂದ ಬಂದ ಎಲ್ಲ ದ್ರಾವಿಡ ಭಾಷೆಗಳದು ಸೋದರ ಸಂಬಂಧ; ತಾಯಿ ಮಕ್ಕಳ ಸಂಬಂಧವಲ್ಲʼ
ಇದುವರೆಗೆ ಭಾಷಾ ಶಾಸ್ತ್ರಜ್ಞರು ಮಾತ್ರ ಚಿಂತಿಸುತ್ತಿದ್ದ ಈ ವಿಷಯದ ಬಗ್ಗೆ ಕನ್ನಡಿಗರೆಲ್ಲರೂ ಚಿಂತಿಸುವಂತೆ ಮಾಡಿದ್ದು ಕಮಲ್ ಹಾಸನ್ ಎಂಬ ನಟ ಎಂದು ವ್ಯಂಗ್ಯವಾಗಿಯಾದರೂ ಹೇಳದೆ ಬೇರೆ ದಾರಿ ಇಲ್ಲ.;
ಪ್ರಸಿದ್ಧ ಇತಿಹಾಸ ತಜ್ಞರೂ, ಪ್ರಾಕ್ತನ ಶಾಸ್ತ್ರಜ್ಞರೂ ಆಗಿದ್ದು, ಇಂದು ನಮ್ಮೊಂದಿಗಿಲ್ಲದ ಷ. ಶೆಟ್ಟರ್ ಭಾಷೆಯ ಪುರಾತನತೆಯ ಪ್ರಶ್ನೆಗೆ ಉತ್ತರಿಸುತ್ತಾ, ಭಾಷೆಯೊಂದರ ಪುರಾತನತೆಯ ಪ್ರಶ್ನೆಗಿಂತ, ಭಾಷೆಯೊಂದು ಇಡೀ ಸಮುದಾಯದ ಮೇಲೆ ಮಾಡುವ ಪರಿಣಾಮಗಳ ಬಗ್ಗೆ ಚಿಂತಿಸಬೇಕಾದ ಕಾಲವಿದು ಎಂದು ಹೇಳಿದ್ದು ಈಗ ನೆನಪಾಗುತ್ತಿದೆ.
ಕಾರಣವಿಷ್ಟೆ. ದೇಶದ ಖ್ಯಾತ ಪಂಚಭಾಷಾ ನಟ ಮತ್ತು ರಾಜಕಾರಣಿಯೂ ಆಗಿರುವ ಕಮಲ್ ಹಾಸನ್ ಅವರು ತಮ್ಮ ಇತ್ತೀಚಿನ ತಮಿಳು ಚಿತ್ರ ಪ್ರಚಾರಕ್ಕೆ ಬೆಂಗಳೂರಿಗೆ ಬಂದಾಗ ಅತ್ಯುತ್ಸಾಹದಿಂದʼ ʼನಿಮ್ಮ ಕನ್ನಡ ಭಾಷೆ ಹುಟ್ಟಿದ್ದು ನಮ್ಮ ತಮಿಳಿನಿಂದ” ಎಂದದ್ದು, ಅದು ಕೂಡ ಶಿವರಾಜ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಎಂದು ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಹಾಗಾಗಿ ಈಗ ಕನ್ನಡದ ಪುರಾತನೆಯ ಬಗ್ಗೆ ಮತ್ತು ಹಿರಿಮೆಯ ಬಗ್ಗೆ ಮಾತನಾಡುವುದು ಇಂದಿನ ತುರ್ತು ಅಗತ್ಯವಾಗಿದೆ.
ಇಲ್ಲಿ ಷ. ಶೆಟ್ಟರ್ ಅವರನ್ನು ನೆನಪಿಸಿಕೊಳ್ಳಲು ಮಹತ್ವದ ಕಾರಣವಿದೆ. ಕನ್ನಡ ಸಾಹಿತ್ಯ, ಶಾಸನ, ಚರಿತ್ರೆ, ಭಾಷೆಯ ಕುರಿತು ಆಳವಾದ ಸಂಶೋಧನೆ ನಡೆಸಿ ಹೊಸ ತಿಳಿವು ನೀಡುವ, ಕನ್ನಡದ ಮನಸ್ಸುಗಳನ್ನು ಬೆಳಗುವ ಸಂಶೋಧಕರ ಸಾಲಿನಲ್ಲಿ ಷ. ಶೆಟ್ಟರ್(1935-2020) ಮುಂಚೂಣಿಯಲ್ಲಿನಿಲ್ಲುತ್ತಾರೆ. ಚರಿತ್ರೆ ರಚನಾ ಶಾಸ್ತ್ರದ ಸಾಂಪ್ರದಾಯಿಕ ಪರಿಕರಗಳನ್ನು ಬಳಸಿಕೊಂಡೇ ಅವರು ಈ ನಾಡಿಗೆ ಹೊಸ ತಿಳಿವು ನೀಡಿದ್ದಾರೆ. ಪೂರ್ವಸಿದ್ಧ ಅಜೆಂಡಾ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಆಧಾರಗಳನ್ನು ಜೋಡಿಸಿಕೊಳ್ಳುವ, ತೀರ್ಮಾನಗಳನ್ನು ಹೇಳುವ,ಆ ತೀರ್ಮಾನಗಳಿಗೆ ವಿರುದ್ಧವಾದ ಸಾಕ್ಷ್ಯಗಳಿದ್ದರೂ ಅದನ್ನು ಉಪೇಕ್ಷೆ ಮಾಡುವ ಇತಿಹಾಸಕಾರರಿಗಿಂತ ಶೆಟ್ಟರ್ ತುಂಬ ಬೇರೆಯಾಗಿ ಹಾಗೂ ಎತ್ತರವಾಗಿ ನಿಲ್ಲುತ್ತಾರೆ. ಈ ನಿಟ್ಟಿನಲ್ಲಿಅವರೊಬ್ಬ ದೊಡ್ಡ ಸತ್ಯಾರ್ಥಿ. ವಸ್ತುನಿಷ್ಠತೆ, ತರ್ಕಬದ್ಧತೆ, ಸ್ವಾನುಮಾನ,ಅಪೂರ್ಣತೆಯ ಅರಿವು ಅವರ ಸಂಶೋಧನಾ ಬರಹಗಳ ಪ್ರಾಣವಾಗಿತ್ತು. ಈ ಕಾರಣಕ್ಕೆ ಕಳೆದ ಕಾಲು ಶತಮಾನದ ಅವಧಿಯಲ್ಲಿ ಕರ್ನಾಟಕ ಚರಿತ್ರೆ ಕುರಿತ ಅವರ ಸಂಶೋಧನಾ ಕಾಣ್ಕೆಗಳು ತುಂಬ ಗಣ್ಯವಾಗಿವೆ.
ಸೋದರ ಭಾಷೆಗಳು
ಈ ಕಮಲ್ ಹಾಸನ್ ಎಂಬ ವ್ಯಕ್ತಿ ಯಾವ ವಿದ್ವಾಂಸರ ಮಾತುಗಳನ್ನು ಕೇಳಿ, ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದರೋ ಗೊತ್ತಿಲ್ಲ ತಮಗೆ ವಿದ್ವಾಂಸರು ಹೇಳಿದ್ದು ಎಂದು ಮಾತ್ರ ಸಮಝಾಯಿಷಿ ನೀಡಿ, “ಕನ್ನಡ ಭಾಷೆಯ ಕುರಿತ ನನ್ನ ಹೇಳಿಕೆಗೆ ಅದರ ಮೇಲೆ ನನಗಿರುವ ಪ್ರೀತಿಯೇ ಕಾರಣ. ಪ್ರೀತಿ ಎಂದಿಗೂ ಕ್ಷಮೆಯಾಚಿಸುವುದಿಲ್ಲ” ಎಂದು ತಿಪ್ಪೇಸಾರಿಸಿ, ಕನ್ನಡಿಗರ, ಕನ್ನಡದ ಅಸ್ಮಿತೆಯನ್ನು ಕೆಣಕಿದ್ದಾರೆ. ಕಮಲ್ ಹಾಸನ್ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಪೊಲೀಸ್ ಗೆ ದೂರು ನೀಡಿದ್ದಾರೆ. ಅವರ ʼಥಗ್ ಲೈಫ್ʼ ಚಿತ್ರವನ್ನು ಬಹಿಷ್ಕರಿಸಬೇಕೆಂದು ಮತ್ತೆ ಕೆಲವು ಕನ್ನಡ ಸಂಘಟನೆಗಳು ಒತ್ತಾಯಿಸಿವೆ. “ಕಮಲ್ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆ ಕೋರಬೇಕು, ಇಲ್ಲದಿದ್ದರೆ ಅವರ ಚಿತ್ರಗಳಿಗೆ ರಾಜ್ಯದಲ್ಲಿ ನಿರ್ಬಂಧ ಹೇರುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗುವುದು” ಎಂದು ಕನ್ನಡ-ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಕಮಲ್ ಹಾಸನ್ ಗೆ ಕನ್ನಡದ ಇತಿಹಾಸ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಹೇಳಿದರೂ, ಅದು ತುಟಿಯಂಚಿನ ಮಾತಿನಂತೆ ಕೇಳಿಸುತ್ತಿದೆ.
ಕನ್ನಡ ಮೂಲದ ಚರ್ಚೆ ಈಗ ಮುನ್ನೆಲೆಗೆ
“ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದ್ದಲ್ಲ ಎಂದು ತಮಿಳು ಭಾಷಾ ತಜ್ಞ ಐ.ವಿ. ಸುಬ್ರಹ್ಮಣಿಯನ್ ಮತ್ತಿತರರು ಹೇಳಿರುವುದನ್ನು ಕಮಲ್ ಹಾಸನ್ ಕೇಳಿಸಿಕೊಂಡಿರುವಂತಿಲ್ಲ. ದ್ರಾವಿಡ ಭಾಷಾ ಕುಟುಂಬದಲ್ಲಿ 130ಕ್ಕೂ ಹೆಚ್ಚು ಭಾಷೆಗಳಿವೆ. ಈ ಎಲ್ಲ ಭಾಷೆಗಳಿಗೂ ಮೂಲಭಾಷೆಯಾಗಿರಬಹುದಾದ ಪ್ರಾಗ್-ದ್ರಾವಿಡ ಭಾಷೆಯೊಂದನ್ನು ಭಾಷಾ ವಿಜ್ಞಾನಿಗಳು ಪುನರ್ ರಚಿಸಿದ್ದಾರೆ. ಹಾಗಾಗಿ ಈ ಮೂಲದಿಂದ ಬಂದ ಎಲ್ಲ ದ್ರಾವಿಡ ಭಾಷೆಗಳದು ಸೋದರ ಸಂಬಂಧವೇ ಹೊರತು ತಾಯಿ ಮಕ್ಕಳ ಸಂಬಂಧವಲ್ಲ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾದ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. “ಕನ್ನಡ ಭಾಷೆಯು ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿಯೇ ಬಳಕೆಯಲ್ಲಿತ್ತು. ಎರಡನೇ ಶತಮಾನದ ಗ್ರೀಕ್ ಪ್ರಹಸನದಲ್ಲಿ ಕನ್ನಡ ಪದ ಇರುವುದನ್ನು ಗುರುತಿಸಲಾಗಿದೆ” ಎನ್ನುತ್ತಾರೆ ಕನ್ನಡ ಲೇಖಕ ಬರಗೂರು ರಾಮಚಂದ್ರಪ್ಪ.
ಕಮಲ್ ತಪ್ಪಿದ ತಾಳ
ಕನ್ನಡ ಭಾಷೆಯ ಹುಟ್ಟು ಹೇಗಾಯಿತು? ಎನ್ನುವುದರ ಬಗ್ಗೆ ಇದುವರೆಗೆ ಭಾಷಾ ಸಂಶೋಧಕರು, ಇತಿಹಾಸ ತಜ್ಞರು ತಲೆಕೆಡಿಸಿಕೊಂಡಿದ್ದರು. ಶಾಸ್ತ್ರೀಯ ಭಾಷೆಯಾಗಿ ಕನ್ನಡವನ್ನು ಅಧ್ಯಯನ ಮಾಡಬೇಕಾದವರೂ ಈ ಕುರಿತು ಚಿಂತಿಸಿರಲಿಲ್ಲವೆಂದು ತೋರುತ್ತದೆ. ಆದರೆ ಈ ಕಮಲ್ ಹಾಸನ್ ಅವರಿಂದ ಕನ್ನಡಕ್ಕೆ ಆಗಿರುವ ಲಾಭವೆಂದರೆ ಈಗ ಎಲ್ಲರೂ, ಕನ್ನಡ ಭಾಷೆಯ ಮೂಲದ ಬಗ್ಗೆ ಮಾತನಾಡುವಂತಾಗಿದೆ ಎನ್ನುವ ಸತ್ಯವನ್ನು ನಾವೆಲ್ಲ ಒಪ್ಪಿಕೊಳ್ಳಲೇ ಬೇಕು. ಆದರೆ ಈ ಕಮಲ್ ಹಾಸನ್ ಹೀಗೆ ಮಾತನಾಡುವಾಗ ತಮ್ಮ ಅಜ್ಞಾನ ಪ್ರದರ್ಶನ ಮಾಡುವ ಬದಲು, “ಕನ್ನಡ ಮೊದಲೋ ತಮಿಳು ಮೊದಲೋ? ಎಂಬ ಪ್ರಶ್ನೆ ಎತ್ತುವಲ್ಲಿ ತಾಳ ತಪ್ಪಿದ್ದಾರೆ. (ತಪ್ಪಿದ ತಾಳ ಎನ್ನುವ ಕೆ. ಬಾಲಚಂದರ್ ನಿರ್ದೇಶನದ ಕನ್ನಡ-ತಮಿಳು ಚಿತ್ರದಲ್ಲಿ ಕಮಲ್ ಹಾಸನ್ ನಟಿಸಿದ್ದರು. ಇದು 1978ರಲ್ಲಿ ಬಿಡುಗಡೆಯಾಗಿತ್ತು). ಕಲಾವಿದರು ಬರಹಗಾರರು, ಚಿಂತಕರು, ಚಿತ್ರಕಾರರು ಎಲ್ಲರೂ, ಭಾಷೆ, ಭೂಗೋಳ ಗಡಿಯನ್ನು ದಾಟಿದವರು ಎಂಬುದು ಈ ಕಮಲ್ ಹಾಸನ್ ಅವರಿಗೆ ಅರ್ಥವಾಗಿದ್ದರೆ, ಇಷ್ಟೊಂದು ಅನರ್ಥವಾಗುತ್ತಿರಲಿಲ್ಲ.
“ಪ್ರಾಕೃತವನ್ನು ಹೊರತು ಪಡಿಸಿದರೆ ಕದಂಬ ಲಿಪಿಯ ಮೂಲಕ ಸಂಪೂರ್ಣ ಸ್ವಂತ ಲಿಪಿಯನ್ನು ರೂಪಿಸಿಕೊಂಡ ಭಾರತೀಯ ಭಾಷೆಗಳಲ್ಲಿ ಕನ್ನಡವೇ ಮೊದಲು. ಶಿಲಾಶಾಸನಗಳಲ್ಲಿ ಕನ್ನಡಕ್ಕಿಂತ ತಮಿಳು ಮೊದಲು ಕಾಣಿಸಿಕೊಂಡಿದೆಯಾದರೂ, ಅದು ಬಹುಕಾಲ ಸುಸ್ಥಿರ ಲಿಪಿಯನ್ನು ಪಡೆದುಕೊಳ್ಳಲಿಲ್ಲ. ನಿರಂತರ ಸಾವಿರ ವರ್ಷಗಳ ತಡೆಯಿಲ್ಲದ ಸೃಜನಶೀಲತೆಯನ್ನು ಉಳ್ಳ ಏಕೈಕ ಭಾಷೆಯೆಂಬ ಹೆಗ್ಗಳಿಕೆ ಕನ್ನಡದ್ದು” ಎನ್ನುತ್ತಾರೆ, ಕನ್ನಡ ಹೋರಾಟಗಾರ, ಲೇಖಕ ಚಿಂತಕ ರಾ. ನಂ. ಚಂದ್ರಶೇಖರ್.
ಎರಡನೇ ಶತಮಾನದಲ್ಲಿ ಕನ್ನಡದ ಅಸ್ತಿತ್ವ
ಈಗ ಕನ್ನಡದ ಮೂಲ ಮತ್ತು ಪುರಾತನತೆಯನ್ನು ಕುರಿತು ಚಿಂತಿಸುವುದಾದರೆ; ಲಭ್ಯವಾಗಿರುವ ಅತ್ಯಂತ ಪುರಾತನ ಕನ್ನಡ ಶಾಸನಗಳು ಮತ್ತು ಸಾಹಿತ್ಯಕ್ಕೆ ಮೊದಲಿನಿಂದಲೇ ಸುಮಾರೂ ಕ್ರಿಸ್ತಪೂರ್ವ 2ನೇ ಶತಮಾನದಿಂದ ಕ್ರಿಸ್ತಶಕ ೪ನೇ ಶತಮಾನದ ಅವಧಿಯಲ್ಲಿ ತಮಿಳು-ಬ್ರಾಹ್ಮಿ ಲಿಪಿಗಳ ಮೇಲೆ ಹಳಗನ್ನಡದ ಪ್ರಭಾವ ಆಗಿರುವುದು ಅಧ್ಯಯನದಿಂದ ತಿಳಿದುಬರುತ್ತದೆ ಎನ್ನುವ ಡಾ. ಐರಾವತಮ್ ಮಹದೇವನ್ ಅವರು ತಮ್ಮ Early Tamil Epigraphy ಪುಸ್ತಕದ ಮಾತುಗಳು ಕನ್ನಡ ಲಿಪಿಯು ಕ್ರಿಸ್ತಪೂರ್ವ 2ನೇ ಶತಮಾನದ ವೇಳೆಗೆ ಅಸ್ತಿತ್ವದಲ್ಲಿತ್ತು ಎನ್ನುವುದನ್ನು ಸಾಬೀತು ಪಡಿಸುತ್ತದೆ. ಇದರ ಜೊತಗೆ ಹಳಗನ್ನಡ ತಮಿಳು ಭಾಷೆಯ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದನ್ನು ಯಾರೂ ಸಂದೇಹವನ್ನು ವ್ಯಕ್ತಪಡಿಸದ ರೀತಿಯಲ್ಲಿ ಆಧಾರಪೂರ್ವಕವಾಗಿ ಅವರು ತಮ್ಮ ತಿಳುವಳಿಕೆಯನ್ನು ಮಂಡಿಸಿದ್ದಾರೆ. ಕ್ರಿಸ್ತಪೂರ್ವ ಕಾಲಘಟ್ಟಕ್ಕೆ ಸೇರಿದ ಶಾಸನಗಳನ್ನು ಅಧ್ಯಯನ ಮಾಡಿರುವ ಅವರು ಅಲ್ಲಿನ ಕೆಲವು ಶಾಸನಗಳಲ್ಲಿ ಸಿಗುವ ಪದಗಳು, ತಮಿಳು ಭಾಷೆಗೆ ಸೇರಿದವುಗಳಲ್ಲ. ಅವು ಕನ್ನಡದ ಪದಗಳೆಂದು ವಾದಿಸುತ್ತಾರೆ. ಸಿತ್ತಿನಿವಾಸಿಲ್ ಎಂಬಲ್ಲಿ ದೊರತ ಶಿಲಾಶಾಸನದಲ್ಲಿ ಇಂಥ ಪದಗಳನ್ನು ಅವರು ಗುರುತಿಸಿ ತೋರಿಸಿದ್ದಾರೆ. ಡಾ, ಐರಾವತಮ್ ಮಹದೇವನ್ ಅವರು ಉಲ್ಲೇಖಿಸಿದ ಶಾಸನಗಳನ್ನೇ ಆಧರಿಸಿ, ಕೆ.ವಿ. ನಾರಾಯಣ ಅವರು ಬರೆದ ಲೇಖನದಲ್ಲಿ-“ಈ ಶಾಸನಗಳು ರಚನೆಯಾಗುವ ಕಾಲಕ್ಕೆ ಕನ್ನಡ ಭಾಷೆ ಜನರ ಆಡು ಮಾತಾಗಿದ್ದಿತು ಎಂಬುದನ್ನು ಶಾಸನವೇ ಸೂಚಿಸುತ್ತದೆ” ಇದೆ. ( ಕೆ.ವಿ. ನಾರಾಯಣ ಅವರ ʻನುಡಿಗಳ ಅಳಿವು-ಬೇರೆ ದಿಕ್ಕಿನ ನೋಟʼ ಕೃತಿಗೆ 2024ರ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಲಭ್ಯವಾಗಿದೆ)
ʻಇಸಿಲʼ ಎಂಬ ಪದ ಪುರಾವೆ
ಕ್ರಿಸ್ತಪೂರ್ವ 3ನೇ ಶತಮಾನದ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಬರುವ ʻಇಸಿಲಸಿʼ ಎಂಬ ಪದವು ಸ್ಥಳವಾಚಿಯಾಗಿದ್ದು ಇದು ಅಚ್ಚಗನ್ನಡವೆಂದೂ, ಅತ್ಯಂತ ಪ್ರಾಚೀನ ಪದವೆಂದು ಆಚಾರ್ಯ ಡಿ.ಎಲ್. ನರಸಿಂಹಾಚಾರ್ಯ ಅವರು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಂತರ ಖ್ಯಾತ ಸಾಹಿತಿ ತೀ.ನಂ.ಶ್ರೀಕಂಠಯ್ಯ ಅವರು ಕನ್ನಡದ ಪರಂಪರೆ ಪುಸ್ತಕದಲ್ಲಿ ʻಇಸಿಲʼ ಎಂಬ ಸ್ಥಳನಾಮವು ಕನ್ನಡ ಸ್ಥಳನಾಮವು ಕನ್ನಡ ಭಾಷೆ ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಪುರಾವೆಯಾಗಿದೆ ಎಂದಿದ್ದಾರೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಗ್ರಾಮದಲ್ಲಿ ಕೇಂದ್ರ ಪುರಾತತ್ವ ಇಲಾಖೆ ನಡೆಸಿದ ಪ್ರಾಯೋಗಿಕ ಉತ್ಖನನ ಕಾರ್ಯದಲ್ಲಿ ದೊರಕಿರುವ ʻಸಿಂಹಕಟಾಂಜನʼ ಶಾಸನವು ಹಲ್ಮಿಡಿ ಶಾಸನಕ್ಕಿಂತ ಪೂರ್ವದ್ದು ಎಂಬ ಚರ್ಚೆ ಆರಂಭವಾಗಿದೆ. ಕನ್ನಡ ಭಾಷೆಯ ಹೆಮ್ಮೆಯ ಶೋಧ ಎನ್ನಬಹುದಾದ ಈ ಶಾಸನದಲ್ಲಿ ಒಟ್ಟು ಏಳು ಸಾಲುಗಳನ್ನು ಗುರುತಿಸಲಾಗಿದ್ದು, ಐದು ಮತ್ತು ಆರನೇ ಸಾಲುಗಳು ಪೂರ್ಣ ಪ್ರಮಾಣದಲ್ಲಿವೆ. ಶಾಸನದ ಅವಧಿಯನ್ನು ಕೇಂದ್ರ ಪುರಾತತ್ವ ಇಲಾಖೆ ಅಧಿಕೃತವಾಗಿ ಕ್ರಿಸ್ತಶಕ 380ರಿಂದ ಕ್ರಿಸ್ತಶಕ 400 ಎಂದಿದ್ದಾರೆ. ಶಾಸನವು ಸ್ವಲ್ಪ ಸವೆದಿರುವುದರಿಂದ ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅದನ್ನು ಈಗಲೂ ಮೊದಲಿದ್ದ ಜಾಗದಲ್ಲಿಯೇ ವೈಜ್ಞಾನಿಕವಾಗಿ ಸಂರಕ್ಷಿಸಲಾಗಿದೆ.
ಶೆಟ್ಟರ್ ಅವರ ಹಲ್ಮಿಡಿ ಅಧ್ಯಯನ
ಆದರೆ ಈ ಶಾಸನಕ್ಕಿಂತ ಈಗ ಗುರುತಿಸಲಾಗಿರುವ ಹಲ್ಮಿಡಿಯೇ ಅತ್ಯಂತ ಹಳೆಯದೆಂದು ವಾದಿಸಲಾಗುತ್ತಿದೆ. ನಿಜ. ಶಾಸನ ಲೋಕದಲ್ಲಿ ಹಲ್ಮಿಡಿ ಶಾಸನಕ್ಕೆ ವಿಶಿಷ್ಟವಾದ ಸ್ಥಾನವಿದೆ. ಮೈಸೂರು ಸಂಸ್ಥಾನದ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಎಂ. ಎಚ್. ಕೃಷ್ಣ ಅವರು 1936ರ ಇಲಾಖೆಯ ವಾರ್ಷಿಕ ವರದಿಯಲ್ಲಿ ಹಲ್ಮಿಡಿ ಕುರಿತು ಬರಹ ಪ್ರಕಟಿಸಿದಾಗಿನಿಂದ ಇದುವರೆಗೆ ಈ ಶಾಸನವನ್ನು ಕುರಿತಾದ ಚರ್ಚೆ, ಚಿಂತನ-ಮಂಥನಗಳು ನಡೆದೇ ಇವೆ. ಕನ್ನಡದ ಪ್ರಾಚೀನ ಉಪಲಬ್ಧ ಶಾಸನವೆಂಬುದೊಂದೇ ಇದಕ್ಕೆ ಕಾರಣವಲ್ಲ. ಕನ್ನಡ ಭಾಷೆಯ ಆರಂಭಿಕ ಸ್ಥಿತಿ, ಕನ್ನಡದ ಮೊತ್ತಮೊದಲ ರಾಜವಂಶವೆನ್ನಿಸಿದ ಕದಂಬರ ಇತಿಹಾಸದ ಪ್ರಾಥಮಿಕ ಸಂಗತಿಗಳು, ತತ್ಕಾಲಿನ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳು ಮುಂತಾದ ಬಹುಮುಖಿ ಅಧ್ಯಯನಕ್ಕೆ ಇನ್ನೂ ಸಾಕಷ್ಟು ಅವಕಾಶಗಳಿರುವುದರಿಂದಲೇ ವಿದ್ವಾಂಸರಿಗೆ ಈಗಲೂ ಹಲ್ಮಿಡಿ ಶಾಸನ ಮುಖ್ಯವಾಗಿದೆ. ಭಾಷಾ ಶಾಸ್ತ್ರ ಲಿಪಿ ಶಾಸ್ತ್ರದ ದೃಷ್ಟಿಯಿಂದಲೂ ಈ ಶಾಸನ ಸಾಕಷ್ಟು ಚರ್ಚಿತವಾಗಿದೆ. ಈ ಶಾಸನದ ಕುರಿತಾದ ಚರ್ಚೆ ಇನ್ನೂ ಮುಕ್ತಾಯವಾಗಿಲ್ಲ. ಈ ಹಲ್ಮಿಡಿ ಶಾಸನದ ಬಗ್ಗೆ ಷ. ಶೆಟ್ಟರ್ ಅವರು ಇಡೀ ಕೃತಿಯೊಂದನ್ನು ಸಂಪಾದಿಸಿದ್ದಾರೆ. ಶೆಟ್ಟರ್ ಅವರ ಅಧ್ಯಯನದ ಪ್ರಕಾರ ಕನ್ನಡವು ಶಾತವಾಹನರ ಕಾಲಾವಧಿಗಿಂತ ಪೂರ್ವದಲ್ಲಿಯೇ ಸ್ವತಂತ್ರಗೊಂಡ ಸಾಧ್ಯತೆಗಳಿವೆ. ಇದಕ್ಕೆ ನಂಬಲರ್ಹ ಆಧಾರಗಳು ದೊರೆಯುತ್ತಿವೆ
ಹೀಗೆ ಎಲ್ಲ ಭಾಷೆಗಳ ಮೂಲದ ಬಗ್ಗೆ ಇನ್ನೂ ಚರ್ಚೆ ನಡೆದಿರುವಾಗಲೇ, ʻಬಟಾಣಿಕಾಳಷ್ಟು ಬುದ್ದಿ ಇರುವʼ ನಟನೊಬ್ಬನ ಮಾತಿನಿಂದ ಯಾರೂ ಅಪ್ರತಿಭರಾಗಬೇಕಿಲ್ಲ. ʻಎಲ್ಲಬಲ್ಲʼವರಂತೆ ಮಾತನಾಡಿದ ಕಮಲ್ ಹಾಸನ್, ತನಗಿದ್ದ ಅಲ್ಪ ಮಾಹಿತಿಯಿಂದ ಆ ರೀತಿ ಹೇಳಿದೆ. ಆ ವಿಷಯದಲ್ಲಿ ನಾನು ತಜ್ಞನಲ್ಲ ಆಜ್ಞ ಎಂದು ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದರೆ, ಕನ್ನಡದವರು ಕ್ಷಮೆ ಕೇಳಬಹುದು. ಆದರೆ, ತಾನು ಹೇಳಿದ್ದೇ ಅಂತಿಮ ಸತ್ಯ, ತಮಿಳು ವಿದ್ವಾಂಸರ ಮಾತುಗಳು ಅದಕ್ಕೇ ಆಧಾರ ಎಂದೆಲ್ಲ ಕಮಲ್ ಹಾಸನ್ ವಾದಿಸುತ್ತ ನಡೆದರೆ, ಇದೊಂದು ಭಾಷಾ ಕದನವಾಗಿ, ಭಾಷಾ ಸಾಮರಸ್ಯ ಕೆಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಮೊಟ್ಟೆ ಮೊದಲೋ ಕೋಳಿ ಮೊದಲೋ?
ಎಲ್ಲಕ್ಕಿಂತ ಮುಖ್ಯವಾಗಿ ಅನೇಕ ನುಡಿಗಳು ಅಳಿವಿನ ಅಂಚಿಗೆ ತಲುಪಿರುವ ಇಂದಿನ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ಹಿಂದಿ ಹೇರಿಕೆಯನ್ನು ಎಲ್ಲ ದಾವಿಡ ಭಾಷೆಗಳ ಮೇಲೆ ಮಾಡುತ್ತಿರುವ ಸಂದರ್ಭದಲ್ಲಿ ನುಡಿಗಳ ಉಳಿವು ಅಷ್ಟೇ ಮುಖ್ಯ ಎಂಬುದನ್ನು ಕನ್ನಡಿಗರು, ತಮಿಳಿಗರೂ ಅರ್ಥಮಾಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಈ ಮೂಲಕ ಭಾಷೆ ಮತ್ತು ಸಾಂಸ್ಕೃತಿಕ ವೈವಿದ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಅದನ್ನು ಬಿಟ್ಟು, “ಮೊಟ್ಟೆ ಮೊದಲೋ, ಕೋಳಿ ಮೊದಲೋ” ಎಂಬಂತೆ “ಕನ್ನಡ ಮೊದಲೋ, ತಮಿಳು ಮೊದಲೋʼ ಎಂದು ಪರಸ್ಪರ ಕಚ್ಚಾಡುವುದರಲ್ಲಿ ಏನಾದರೂ ಅರ್ಥವಿದೆಯೇ? ಎಲ್ಲ ಬಲ್ಲವರಂತೆ ಮಾತನಾಡುವ ಬುದ್ದಿಜೀವಿ ನಟ ಕಮಲ್ ಹಾಸನ್ಗ ಮೂಲಭೂತವಾಗಿ ಇದರ ಅರಿವಿರಬೇಕಿತ್ತು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದಿರುವ ಈ ಸಂದರ್ಭದಲ್ಲಿ “ಈಗ ಇದು ಬೇಕಿತ್ತಾ?ʼ ಎಂಬ ಪ್ರಶ್ನೆಯನ್ನು ಕಮಲ್ ಹಾಸನ್ ಅವರಿಗೇ ಕೇಳುವುದು ಉಚಿತ.