ಕಮಲ್‌ ಹಾಸನ್‌ ವಿವಾದ ಬಳಿಕ ಭಾಷಾಶಾಸ್ತ್ರಜ್ಞರ ಅಭಿಮತ: ಕನ್ನಡ-ತಮಿಳು ʼದಕ್ಷಿಣ ದ್ರಾವಿಡ ತಾಯಿʼಯ ಮಕ್ಕಳು

ಹಾಲಿಗೆ ತಮಿಳಿನಲ್ಲಿ ‘ಪಾಲ್’ ಎಂದು ಹೇಳಿದರೆ ಕನ್ನಡದಲ್ಲಿ ‘ಹಾಲು’ ಎನ್ನುತ್ತಾರೆ. ಭಾಷಾಶಾಸ್ತ್ರಜ್ಞರು ಇಂತಹ ಸಂಬಂಧಿತ ಭಾಷೆಗಳಿಗೆ ಒಂದು ಕಾಲ್ಪನಿಕ ಮೂಲ ಭಾಷೆಯನ್ನು (ಪ್ರೊಟೊ) ಪ್ರತಿಪಾದಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಇಂತಹ ಭಾಷೆಗಳು ಸಹೋದರಿಯರಂತೆ.;

Update: 2025-06-07 00:30 GMT
ಹಲ್ಮಿಡಿ ಶಾಸನ

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಖ್ಯಾತ ನಟ ಕಮಲ್ ಹಾಸನ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲು ನಿರಾಕರಿಸಿದರೂ, ಭಾಷಾಶಾಸ್ತ್ರಜ್ಞರು ಮತ್ತು ವಿದ್ವಾಂಸರಿಗೆ ಈಗಿರುವ ಯಾವುದೇ ದ್ರಾವಿಡ ಭಾಷೆಯನ್ನು “ಮಾತೃ” ಭಾಷೆ ಎಂದು ಪರಿಗಣಿಸಲು ಯಾವುದೇ ಆಧಾರ ಸಿಗುತ್ತಿಲ್ಲ, ಯಾಕೆಂದರೆ ಅವೆಲ್ಲವೂ ಮೂಲ ದ್ರಾವಿಡದಿಂದ ಹುಟ್ಟಿಕೊಂಡಿವೆ, ಹೀಗಾಗಿ ಅವು ಹೆಚ್ಚು ಕಡಿಮೆ ಅಕ್ಕ-ತಂಗಿಯರಿದ್ದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಮ್ಮ 'ಥಗ್ ಲೈಫ್' ಚಲನಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಮಲ್ ಹಾಸನ್, ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ಹೇಳಿದ್ದರಿಂದ ತಮಿಳು-ಕನ್ನಡ ವಿವಾದ ಭುಗಿಲೆದ್ದಿತು. ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಕ್ಷಮೆ ಕೇಳುವಂತೆ ಕಮಲ್ ಅವರನ್ನು ಒತ್ತಾಯಿಸಿದ್ದವು, ಇಲ್ಲದೆ ಹೋದರೆ ರಾಜ್ಯದಲ್ಲಿ ಚಿತ್ರದ ಬಿಡುಗಡೆಯನ್ನು ನಿಷೇಧಿಸುವುದಾಗಿ ಬೆದರಿಕೆ ಹಾಕಿದವು.

ಕಮಲ್ ಕ್ಷಮೆಯಾಚಿಸಲು ನಿರಾಕರಿಸಿದರು ಮತ್ತು KFCC ಗೆ ಬರೆದ ಪತ್ರದಲ್ಲಿ, ತಮ್ಮ ಹೇಳಿಕೆಗಳನ್ನು “ತಪ್ಪಾಗಿ ಅರ್ಥೈಸಲಾಗಿದೆ” ಮತ್ತು “ಸಂದರ್ಭಕ್ಕೆ ಹೊರತಾದುದು” ಎಂದು ಹೇಳಿದರು. ಕರ್ನಾಟಕ ಹೈಕೋರ್ಟ್ ಕೂಡ ಕಮಲ್ ಅವರನ್ನು ತರಾಟೆಗೆ ತೆಗೆದುಕೊಂಡು, “ಒಂದೇ ಒಂದು ಕ್ಷಮೆ ಕೇಳುವುದರಿಂದ ಪರಿಸ್ಥಿತಿಯನ್ನು ತಿಳಿಗೊಳಿಸಬಹುದಿತ್ತು” ಎಂದು ಹೇಳಿದೆ. ಕಮಲ್ ತಮ್ಮ ನಿಲುವನ್ನು ಬದಲಿಸಲಿಲ್ಲ. ಹಾಗಾಗಿ ಸದ್ಯಕ್ಕೆ ಚಲನಚಿತ್ರವು ಕರ್ನಾಟಕದಲ್ಲಿ ಬಿಡುಗಡೆಯಾಗಲಿಲ್ಲ.

ಡಿಎಂಕೆ ಕಮಲ್ ಹಾಸನ್ ಅವರಿಗೆ ರಾಜ್ಯಸಭೆ ಸೀಟು ನೀಡಿರುವುದರಿಂದ ಅವರ ಹೇಳಿಕೆಗೆ ಇನ್ನಷ್ಟು ಮಹತ್ವ ಬಂದಿತ್ತು. ಇದು ದಕ್ಷಿಣ ಭಾರತದಲ್ಲಿರುವ ಗಹನವಾದ ಭಾಷಾ ಸಂವೇದನೆಗಳನ್ನು ಅನಾವರಣಗೊಳಿಸಿದ್ದು ಭಾಷೆ, ಸಂಸ್ಕೃತಿ ಮತ್ತು ಪ್ರಾದೇಶಿಕ ಅಸ್ತಿತ್ವದ ನಡುವಿನ ಸಂಕೀರ್ಣ ಸಂಬಂಧವನ್ನು ಎತ್ತಿ ತೋರಿಸಿದೆ.

ಕಲ್ಪಿತ ತಾಯಿಯ ಹೆಣ್ಣುಮಕ್ಕಳು

ಕಮಲ್ ಅವರ ಹೇಳಿಕೆಯನ್ನು ಭಾಷಾ ತಜ್ಞರು ದೋಷಪೂರಿತವಲ್ಲ ಎಂದು ಹೇಳಿದ್ದರೂ ಕೂಡ ಅವರು ಹಾಗೆ ಹೇಳಿರುವುದು ಸರಿಯಲ್ಲ ಎಂಬುದನ್ನು ಒಪ್ಪುತ್ತಾರೆ.

“ಈಗಿರುವ ಯಾವುದೇ ಭಾಷೆಯು ನೇರವಾಗಿ ಪ್ರಸ್ತುತ ಅಸ್ತಿತ್ವದಲ್ಲಿರುವ ಮತ್ತೊಂದು ಭಾಷೆಯಿಂದ ಹುಟ್ಟಿಕೊಂಡಿಲ್ಲ” ಎಂದು ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಭಾಷಾಶಾಸ್ತ್ರದ ಮಾಜಿ ಪ್ರಾಧ್ಯಾಪಕಿ ರಾಘವಾಚಾರಿ ಅಮೃತವಳ್ಳಿ ಹೇಳುತ್ತಾರೆ.

“ಭಾಷೆಗಳ ನಡುವಿನ ಆನುವಂಶಿಕ ಸಂಬಂಧಗಳನ್ನು ಐತಿಹಾಸಿಕ ಭಾಷಾಶಾಸ್ತ್ರವು ಈಗ ಚಾಲ್ತಿಯಲ್ಲಿರುವ ಭಾಷೆಗಳಲ್ಲಿ ಕಂಡುಬರುವ ಸಾಮಾನ್ಯ ಜ್ಞಾತಿ ಪದಗಳ (ಅರ್ಥ ಮತ್ತು ಧ್ವನಿಯಲ್ಲಿ ಹೋಲುವ ಪದಗಳು) ಆಧಾರದ ಮೇಲೆ ಊಹೆ ಮಾಡುತ್ತದೆ. ಉದಾಹರಣೆಗೆ, ಹಾಲಿಗೆ ತಮಿಳಿನಲ್ಲಿ ‘ಪಾಲ್’ ಎಂದು ಹೇಳಿದರೆ ಕನ್ನಡದಲ್ಲಿ ‘ಹಾಲು’ ಎನ್ನುತ್ತಾರೆ. ಭಾಷಾಶಾಸ್ತ್ರಜ್ಞರು ಇಂತಹ ಸಂಬಂಧಿತ ಭಾಷೆಗಳಿಗೆ ಒಂದು ಕಾಲ್ಪನಿಕ ಮೂಲ ಭಾಷೆಯನ್ನು (ಪ್ರೊಟೊ) ಪ್ರತಿಪಾದಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಇಂತಹ ಭಾಷೆಗಳು ಸಹೋದರಿಯರಂತೆ. ಅಂದರೆ ಈಗ ಅಸ್ತಿತ್ವದಲ್ಲಿ ಇಲ್ಲದ ಒಂದು ಕಲ್ಪಿತ ಮಾತೃಭಾಷೆಯ ಪುತ್ರಿಯರು. ಪ್ರಸ್ತುತ ಯಾವುದೇ ಭಾಷೆಯು ಈಗಿರುವ ಇನ್ನೊಂದು ಭಾಷೆಯಿಂದ ನೇರವಾಗಿ ಹುಟ್ಟಿಕೊಂಡಿಲ್ಲ” ಎಂದು ಅವರು ದ ಫೆಡರಲ್ ಗೆ ವಿವರಿಸಿದರು.

ದಕ್ಷಿಣ ದ್ರಾವಿಡ-1ರ ಮೂಲ

ತಮಿಳು ಮತ್ತು ಕನ್ನಡದ ವಿಚಾರದಲ್ಲಿ ಹೇಳುವುದಾದರೆ ಅವು ‘ದಕ್ಷಿಣ ದ್ರಾವಿಡ-1’ ಎಂಬ ಮೂಲ ಭಾಷೆಗೆ ಸೇರಿದ್ದಾಗಿವೆ ಎಂದು ತಿಳಿಸಿದರು.

"ದ್ರಾವಿಡ ಭಾಷೆಗಳ ವಿಷಯದಲ್ಲಿ ಹೇಳುವುದಾದರೆ ತಮಿಳು, ಕನ್ನಡ ಮತ್ತು ಮಲಯಾಳಂ (ಮತ್ತು ಕೆಲವು ಇತರ ಭಾಷೆಗಳು) ಪ್ರೋಟೋ-ದಕ್ಷಿಣ ದ್ರಾವಿಡ-1 ಎಂಬ ಮೂಲ ಭಾಷೆಯ ಉಪಭಾಷೆಗಳಾಗಿವೆ ಎಂದು ಭಾವಿಸಲಾಗಿದೆ. ಭಾಷಾಶಾಸ್ತ್ರಜ್ಞರು ಪ್ರೋಟೋ-ದ್ರಾವಿಡವು ಮೂರು ಶಾಖೆಗಳನ್ನು ಹೊಂದಿದೆ ಎಂದು ಊಹಿಸಿದ್ದಾರೆ: ಪ್ರೋಟೋ-ದಕ್ಷಿಣ ದ್ರಾವಿಡ, ಪ್ರೋಟೋ-ಮಧ್ಯ ದ್ರಾವಿಡ ಮತ್ತು ಪ್ರೋಟೋ-ಉತ್ತರ ದ್ರಾವಿಡ, ಮತ್ತು ಪ್ರೋಟೋ-ದಕ್ಷಿಣ ದ್ರಾವಿಡವು ‘ಪ್ರೋಟೋ 1’ (ದಕ್ಷಿಣ) ಮತ್ತು ‘ಪ್ರೋಟೋ 2’ (ದಕ್ಷಿಣ-ಮಧ್ಯ) ದ್ರಾವಿಡ ಎಂದು ವಿಭಜನೆಯಾಗಿದೆ” ಎಂದು ಅವರು ವಿಶ್ಲೇಷಣೆ ಮಾಡುತ್ತಾರೆ.

ದಕ್ಷಿಣ ದ್ರಾವಿಡ 1ಎಂದರೇನು?

ಸುರೇಶ್ ಕೋಳಿಚಾಲಾ ಅವರ ‘ದಿ ದ್ರಾವಿಡಿಯನ್ ಲ್ಯಾಂಗ್ವೇಜಸ್. ಆನ್ ಓವರ್ವ್ಯೂ’ (The Dravidian Languages: An Overview’) ಎಂಬ ಅಧ್ಯಾಯದಲ್ಲಿ (ಇದು 'ದಿ ಆಕ್ಸ್ಫರ್ಡ್ ಹ್ಯಾಂಡ್ಬುಕ್ ಆಫ್ ದ್ರಾವಿಡಿಯನ್ ಲ್ಯಾಂಗ್ವೇಜಸ್' ನ ಒಂದು ಭಾಗವಾಗಿದೆ, ಪ್ರಸ್ತುತ ಸುಧಾರಣೆಯಲ್ಲಿದೆ), ದಕ್ಷಿಣ ದ್ರಾವಿಡ -1 ಭಾಷಾ ಶಾಖೆಯು ಎಲ್ಲ ಶಾಖೆಗಳಿಗಿಂತ ಹೆಚ್ಚು ಭಾಷೆಗಳನ್ನು ಹೊಂದಿದೆ ಎಂದು ಬಿಂಬಿಸಲಾಗಿದೆ. ಅಂದರೆ ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ 11 ಭಾಷೆಗಳು ಇದರ ಬಿಳಲುಗಳಾಗಿವೆ. ನಾಲ್ಕು ಮುಖ್ಯ ದಕ್ಷಿಣ ಭಾರತೀಯ ಭಾಷೆಗಳಲ್ಲಿ, ತೆಲುಗು ದಕ್ಷಿಣ-ಮಧ್ಯ ದ್ರಾವಿಡ ಶಾಖೆಗೆ ಸೇರಿದೆ ಎಂದು ಅವರು ತಿಳಿಸಿದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU)ದ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಅಜಿತ್ ಕಣ್ಣಾ ಅವರು, ಭಾಷಾಶಾಸ್ತ್ರಜ್ಞರು “ಪ್ರತಿಯೊಂದು ಭಾಷೆಯ ಮೂಲವನ್ನು ಕಂಡುಹಿಡಿಯಲು ಹೆಣಗಾಡುತ್ತಿದ್ದಾರೆ” ಎಂದು ಹೇಳಿದರು, ಆದ್ದರಿಂದ ಕಮಲ್ ಅವರ ಹೇಳಿಕೆಯನ್ನು ಸರಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

“ಪ್ರೋಟೋ-ದ್ರಾವಿಡ ಎಂಬ ಭಾಷೆಯೊಂದು ಇದೆ. ಪ್ರೋಟೋ ಎಂದರೆ ಮೂಲ. ಇಲ್ಲಿಂದ ಬಂದ ಮೂಲ ಪದವು ಹಲವು ಭಾಷೆಗಳಿಗೆ ಹೋಗಿರಬಹುದು, ಇದು ಅನಿವಾರ್ಯ ಕೂಡ” ಎಂದು ಅವರು ದ ಫೆಡರಲ್ ಗೆ ತಿಳಿಸಿದರು.

ಅಂತರ ಹೆಚ್ಚಾದಷ್ಟೂ ವ್ಯತ್ಯಾಸ ಹೆಚ್ಚು

ಭಾಷೆಗಳು ದೂರವಾದಂತೆ ವ್ಯತ್ಯಾಸಗಳು ಹೆಚ್ಚಾಗುತ್ತವೆ, ಆದರೆ ಕೆಲವು ಶಬ್ದಕೋಶಗಳು ಉಳಿದುಕೊಳ್ಳುತ್ತವೆ, ಉದಾಹರಣೆಗೆ ತಮಿಳಿನಲ್ಲಿ ‘ಪೋ’ (ಹೋಗು) ಕನ್ನಡದಲ್ಲಿ ‘ಹೋ’ ಆಗುವುದನ್ನು ಗಮನಿಸಬಹುದು ಎಂದು ಕಣ್ಣಾ ಹೇಳಿದರು.

“ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರು ತೆಲುಗು ಮಾತನಾಡುತ್ತಾರೆ. ಭಾಷೆ ಹೇಗೆ ವ್ಯತ್ಯಾಸವಾಗುತ್ತದೆ? ಕಾಲಕ್ರಮೇಣ ಅದು ಪ್ರತ್ಯೇಕವಾಗುತ್ತ ಹೋಗುತ್ತದೆ. ಅದನ್ನು ನೀವು ಕೊರಿಯಾದಲ್ಲಿ ನೋಡಬಹುದು. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಪ್ರತ್ಯೇಕವಾಗಿ 75 ವರ್ಷಗಳು ಸಂದಿವೆ. ಈಗ ಉತ್ತರ ಕೊರಿಯಾದ ಕೊರಿಯನ್ ಭಾಷೆ ದಕ್ಷಿಣಕ್ಕಿಂತ ಸಾಕಷ್ಟು ಭಿನ್ನವಾಗಿರುವುದನ್ನು ಕಾಣಬಹುದು” ಎಂದು ಅವರು ಹೇಳಿದರು.

ಪ್ರೊಟೊ-ದ್ರಾವಿಡ ಮತ್ತು ಪ್ರಚಲಿತದಲ್ಲಿರುವ ದ್ರಾವಿಡ ಭಾಷೆಯಲ್ಲಿರುವ ಸಂಬಂಧವನ್ನು ಕೊಳಿಚಲ ಅವರ ಅಧ್ಯಾಯದಿಂದ ತೆಗೆದುಕೊಳ್ಳಲಾಗಿದೆ, ಅದರಲ್ಲಿ ಆಟ್ಟ-ಎಂ ಎಂಬುದು ಕನ್ನಡದಲ್ಲಿ ‘ಆಟ’ ಆಗಿದೆ. ಹಾಗೇ ಮರು-ಉಂಟು (ಔಷದಿ) ಕನ್ನಡದಲ್ಲಿ ಮರ್ದು ಆಗಿದೆ ಎಂದು ವಿವರಿಸುವ ಅವರು, “ದ್ರಾವಿಡ ಭಾಷೆಗಳು ಮತ್ತು ಜನರ ಮೂಲವು ನಿಗೂಢವಾಗಿದೆ.” ಎನ್ನುತ್ತಾರೆ.

“ದ್ರಾವಿಡ ಭಾಷೆಗಳನ್ನು ಮಾತನಾಡುವವರು ಸುಮಾರು 5,000 ವರ್ಷಗಳ ಹಿಂದೆ (ಅಂದರೆ ಇಂಡೋ-ಆರ್ಯನ್ ಭಾಷೆಗಳನ್ನು ಮಾತನಾಡುವವರು ಭಾರತಕ್ಕೆ ಬರುವುದಕ್ಕೆ ಕೆಲವು ಸಹಸ್ರಮಾನಗಳಿಗೂ ಮೊದಲು) ವಾಯವ್ಯ ಭಾಗದಿಂದ ಮುಖ್ಯಭೂಮಿ ಭಾರತವನ್ನು ಪ್ರವೇಶಿಸಿದರು ಎಂಬ ಹೇಳಿಕೆಗಳಿದ್ದರೂ, ಇತರ ವಿದ್ವಾಂಸರು ದ್ರಾವಿಡರು ಪ್ರಾಚೀನ ಕಾಲದಿಂದಲೂ, ದಾಖಲಿತ ಇತಿಹಾಸಕ್ಕಿಂತಲೂ ಮೊದಲು (ಬಹುಶಃ ಪರ್ಯಾಯದ್ವೀಪದ ಭಾರತದಲ್ಲಿ) ಭಾರತಕ್ಕೆ ಸ್ಥಳೀಯರಾಗಿದ್ದರು ಎಂದು ಪ್ರತಿಪಾದಿಸಿದ್ದಾರೆ" ಎಂದು ಅವರು ವಿವರಿಸುತ್ತಾರೆ.

ವಿ.ಎಂ. ನರಸಿಂಹನ್ ಅವರನ್ನು ಉಲ್ಲೇಖಿಸುವ ಅಜಿತ್ ಕಣ್ಣಾ ಅವರು, “ಐವಿಎಸ್ (ಸಿಂಧೂ ಕಣಿವೆ ನಾಗರಿಕತೆ) ಪೂರ್ವಜರು ಮತ್ತು ಇಂದು ಮಾತನಾಡುವವರ ನಡುವೆ ಬಲವಾದ ಸಂಬಂಧವಿದೆ, ಮತ್ತು ಅವರು ಐವಿಎಸ್ ಜನರು ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಚಲಿಸುವ ಸಂದರ್ಭದಲ್ಲಿ ಪ್ರೊಟೊ-ದ್ರಾವಿಡ ಭಾಷೆಯನ್ನು ಹರಡಿದ ಸಾಧ್ಯತೆಯಿದೆ,” ಎಂದು ಹೇಳುತ್ತಾರೆ.

ಎರಡು ಪ್ರಮುಖ ಅಲೆಗಳು

ಕೊಲಿಚಾಲ ಅವರು ದ್ರಾವಿಡ ಭಾಷೆಗಳನ್ನು ಮಾತನಾಡುವವರು ಭಾರತಕ್ಕೆ ವಲಸೆ ಬಂದ ಎರಡು ಪ್ರಮುಖ ಅಲೆಗಳನ್ನು ಪ್ರಸ್ತಾಪಮಾಡುತ್ತಾರೆ. ಅವರ ಪ್ರಕಾರ, ಮೊದಲ ಅಲೆ, “ಕ್ರಿಸ್ತ ಪೂರ್ವ ನಾಲ್ಕನೇ ಸಹಸ್ರಮಾನದ ಕೊನೆಯ ಭಾಗದಿಂದ ಮೂರನೇ ಸಹಸ್ರಮಾನದ ಆರಂಭಿಕ ಅವಧಿಯಲ್ಲಿತ್ತು. ಇದು ದಖನ್ ಪ್ರಸ್ಥಭೂಮಿಯ ಅರಣ್ಯ ಪ್ರದೇಶಗಳ ಎಲೆಯುದುರುವ ಪ್ರಕ್ರಿಯೆಗೆ ಹೊಂದಿಕೆಯಾಗುತ್ತದೆ, ಇದು ಸೌರಾಷ್ಟ್ರದಿಂದ ದಖನ್ನಲ್ಲಿರುವ ದಕ್ಷಿಣದ ಬೂದಿ ದಿಬ್ಬಗಳವರೆಗೆ (Southern Ashmounds) ಪಶುಪಾಲನಾ-ಕೃಷಿ (pastro-agriculturalism) ಪದ್ಧತಿ ಹರಡಲು ನಾಂದಿಯಾಯಿತು” ಎಂದು ಅವರು ಹೇಳುತ್ತಾರೆ.

ಕೊಲಿಚಾಲ ಅವರ ಪ್ರಕಾರ, ಎರಡನೇ ಪ್ರಮುಖ ಅಲೆಯು “ಕ್ರಿ.ಪೂ. ಎರಡನೇ ಸಹಸ್ರಮಾನದಲ್ಲಿ ಸಿಂಧೂ ಕಣಿವೆ ನಾಗರಿಕತೆಯ (IVC) ಪತನದ ನಂತರ” ಉಂಟಾಯಿತು. ಈ ಅಲೆಯನ್ನು “ಪಶ್ಚಿಮ ಕರಾವಳಿಯುದ್ದಕ್ಕೂ ದಕ್ಷಿಣ ದ್ರಾವಿಡ-1 (South Dravidian 1) ಭಾಷೆಗಳನ್ನು ಮಾತನಾಡುವವರ ವಿಶೇಷ ವಿಸ್ತರಣೆ” ಎಂದು ವಿಶ್ಲೇಷಿಸಬಹುದಾಗಿದೆ. ತಮಿಳು ಮತ್ತು ಕನ್ನಡ ಭಾಷೆಗಳು ಈ ಭಾಷಾ ಶಾಖೆಗೆ ಸೇರಿವೆ ಎಂದು ಅವರು ಹೇಳುತ್ತಾರೆ.

“ಎಳ್ಳು (DEDR 726) ಎಂಬ ಪದವು ದಕ್ಷಿಣ ದ್ರಾವಿಡ 1 (SD-I) ರಲ್ಲಿ ಮಾತ್ರ ಕಂಡುಬರುತ್ತದೆ, ಆದರೂ ಇದು ಎಳ್ಳಿನ ಎಣ್ಣೆಗಾಗಿ ಬಳಸಲಾಗುವ ಅಕ್ಕಾಡಿಯನ್ ‘ಎಲ್ಲು’ (ಮತ್ತು ಸುಮೇರಿಯನ್ ‘ಇಲ್ಲು’) ಪದಕ್ಕೆ ಸಮೀಕರಿಸಬಹುದಾಗಿದೆ. ಇದು ಸಿಂಧೂ-ಮೆಸೊಪೊಟೇಮಿಯಾದ ಎಳ್ಳು ಮತ್ತು ಇತರ ಸರಕುಗಳ ವ್ಯಾಪಾರದಲ್ಲಿ ದಕ್ಷಿಣ ದ್ರಾವಿಡ-1 ಭಾಷೆಗಳನ್ನು ಮಾತನಾಡುವವರ ಪಾತ್ರವನ್ನು ಸೂಚಿಸುತ್ತದೆ (ಬೆಡಿಜಿಯನ್ ಮತ್ತು ಹರ್ಲಾನ್ 1986)” ಎಂದು ಅವರು ವಿಸ್ತೃತವಾಗಿ ವಿವರಿಸುತ್ತಾರೆ.

ಇದು ಇಂಡೋ-ಆರ್ಯನ್ ಭಾಷೆಗಳಲ್ಲಿ ಇರುವ ದ್ರಾವಿಡದ ಅನೇಕ ಎರವಲು ಪದಗಳು ಪೂರಕವಾಗಿವೆ. ಉದಾಹರಣೆಗೆ, ಫಲ (ಹಣ್ಣು) ಮತ್ತು ಮಯೂರ (ನವಿಲು) ಪದಗಳು ಪ್ರೊಟೊ ದ್ರಾವಿಡ ರೂಪಗಳಿಗಿಂತ ದಕ್ಷಿಣ ದ್ರಾವಿಡ-1 ರೂಪಕ್ಕೆ ಹತ್ತಿರವಾಗಿದೆ ಎಂಬುದಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ.

ಮೂಲದ ಬಗ್ಗೆ ಜಿಜ್ಞಾಸೆ

ಇಷ್ಟೆಲ್ಲ ಇದ್ದಾಗ್ಯೂ ದ್ರಾವಿಡ ಭಾಷೆಗಳ ಮೂಲ ಎಲ್ಲಿ ಎಂದು ಹುಡುಕಲು ಹೊರಟರೆ ಸ್ಪಷ್ಟತೆ ಸಿಗುವುದಿಲ್ಲ ಎಂದು ಕೊಲಿಚಾಲ ಅವರು ಪ್ರತಿಪಾದಿಸುತ್ತಾರೆ.

“ದ್ರಾವಿಡ ಭಾಷೆಗಳ ಮೂಲ ಎಲ್ಲಿ ಎಂದು ಕೇಳುವ ಪ್ರಶ್ನೆಗಳಿಗೆ ಪ್ರಸ್ತುತ ಲಭ್ಯವಿರುವ ಪುರಾತತ್ವ ಅಥವಾ ಭಾಷಾಶಾಸ್ತ್ರದ ಪುರಾವೆಗಳ ಆಧಾರದಲ್ಲಿ ತೃಪ್ತಿದಾಯಕವಾಗಿ ಉತ್ತರ ನೀಡಲು ಸಾಧ್ಯವಿಲ್ಲ. ಹೆಚ್ಚಿನ ಸಿದ್ಧಾಂತಗಳು ದುರ್ಬಲವಾಗಿವೆ ಎಂದಷ್ಟೇ ಹೇಳಬಹುದು” ಎಂದು ಅವರು ಹೇಳುತ್ತಾರೆ.

“ಭಾಷಾಶಾಸ್ತ್ರ, ಜನಸಂಖ್ಯಾ ಆನುವಂಶೀಯತೆ ಹಾಗೂ ಪುರಾತತ್ವಶಾಸ್ತ್ರ ಸೇರಿದಂತೆ ನಾನಾ ವಿಭಾಗಗಳಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳುವುದರಿಂದ ದಕ್ಷಿಣ ಏಷ್ಯಾದ ಪೂರ್ವ-ಇತಿಹಾಸ ಮತ್ತು ದ್ರಾವಿಡ ಭಾಷೆಗಳ ಸಂಭವನೀಯ ಮೂಲಗಳನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದಂತಾಗುತ್ತದೆ” ಎಂದು ಅವರು ಹೇಳುತ್ತಾರೆ.

Tags:    

Similar News