ಸಾಲ ಮಾಡೋದಕ್ಕೆ ತಾಕತ್ತು ಬೇಡ. ಸಾಲ ತೀರಿಸೋಕೆ ತಾಕತ್ತು ಬೇಕು: ರವಿಚಂದ್ರನ್
ಅಜೇಯ್ ರಾವ್ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್, ಹಲವು ವಿಷಯಗಳನ್ನು ಹೇಳಿದರು.;
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ರವಿಚಂದ್ರನ್ ಅವರು ಶಂಖ ಊದಿದರು.
‘ಅಜೇಯ್ ಸಾಲದ ಬಗ್ಗೆ ಪದೇಪದೇ ಹೇಳಿದ್ದನ್ನು ಕೇಳಿ, ನನಗೆ ನನ್ನ ಸಾಲದ ನೆನಪಾಯಿತು. ಸಾಲ ಮಾಡೋದಕ್ಕೆ ತಾಕತ್ತು ಬೇಡ. ಸಾಲ ತೀರಿಸೋಕೆ ತಾಕತ್ತು ಬೇಕು. ಇಷ್ಟಕ್ಕೂ ಸಾಲ ಮಾಡಿದ್ದೀನಿ ಎಂದು ಯಾಕೆ ಹೇಳಬೇಕು. ನಾನು ಕೋಟಿಗಟ್ಟಲೆ ಹಾಕಿ ಸಿನಿಮಾ ಮಾಡಿದವನು. ನನಗೆ ದುಡ್ಡು ದುಡ್ಡಿನ ಬೆಲೆ ಈಗಲೂ ಗೊತ್ತಿಲ್ಲ. ದುಡ್ಡಿಲ್ಲದಿದ್ದರೂ ಇಲ್ಲಿ ಕನಸು ಮುಖ್ಯ. ಎಷ್ಟು ದುಡ್ಡಿದೆಯೋ, ಅಷ್ಟರಲ್ಲಿ ಸಿನಿಮಾ ಮಾಡುವುದನ್ನು ಕಲಿಯಬೇಕು. ಇಲ್ಲಿ ಕಂಟೆಂಟ್ ಮುಖ್ಯ, ಏನು ಹೇಳುತ್ತಿದ್ದೀವಿ ಅನ್ನೋದು ಮುಖ್ಯ …’
ಹೀಗೆ ಹೇಳಿದ್ದು ರವಿಚಂದ್ರನ್. ಸಂದರ್ಭ, Ravichandran Launches Trailer of Ajay Rao's *Yuddha Kaanda*
‘ಯುದ್ಧಕಾಂಡ’ ಚಿತ್ರದ ಟ್ರೇಲರ್ ನೋಡಿ ತಮ್ಮ ನಿಂತು ಹೋದ ‘ಮಂಜಿನ ಹನಿ’ ಚಿತ್ರವನ್ನು ನೆನಪಿಸಿಕೊಂಡ ರವಿಚಂದ್ರನ್, ‘ಅದರಲ್ಲೂ ಹೆಣ್ಣಿನ ಕೂಗಿತ್ತು. ಮಗುವಿನ ಆಕ್ರಂದನವಿತ್ತು ಚಿತ್ರದ ಟ್ರೇಲರ್ ನೋಡಿ, ಅದನ್ನು ಕಾಪಿ ಹೊಡೆದಿದ್ದಾರೆ ಎಂದನಿಸಿತು. ಆ ಚಿತ್ರವನ್ನು ನನಗೆ ಕಾರಣಾಂತರಗಳಿಂದ ಮುಗಿಸೋಕೆ ಸಾಧ್ಯವಾಗಲಿಲ್ಲ. ‘ಯುದ್ಧಕಾಂಡ ಚಿತ್ರತಂಡ ನೋಡಿದರೆ, ಇವರಲ್ಲಿ ಒಂದು ಶ್ರದ್ಧೆ ಕಾಣುತ್ತಿದೆ. ಈ ತಂಡದಲ್ಲಿ ಒಂದು ತೃಪ್ತಿ ಮತ್ತು ಆತ್ಮವಿಶ್ವಾಸವಿದೆ. ಇಷ್ಟೆಲ್ಲಾ ಮಾಡಿ ಸಿನಿಮಾ ಮಾಡಿರುವಾಗ, ನಾನು ಪ್ರೇಕ್ಷಕನಾಗಿ ಸಿನಿಮಾ ನೋಡುತ್ತೇನೆ. ಸಿನಿಮಾ ನೋಡಿ ಫೋನ್ ಮಾಡುತ್ತೇನೆ’ ಎಂದು ತಕ್ಷಣವೇ ಜೇಬಿನಿಂದ ದುಡ್ಡು ತೆಗೆದು ಗೋಲ್ಡ್ ಕ್ಲಾಸ್ನ ಐದು ಟಿಕೆಟ್ಗಳಿಗೆ ಅಜೇಯ್ಗೆ ದುಡ್ಡು ಕೊಟ್ಟರು.
ರವಿಚಂದ್ರನ್ ತಮ್ಮ ತಂದೆ, ಅಣ್ಣನ ಸ್ಥಾನದಲ್ಲಿದ್ದಾರೆ ಎಂದ ಅಜೇಯ್ ರಾವ್, ‘ನಾನು ‘ಯುದ್ಧಕಾಂಡ’ ಮಾಡುವಾಗ ಮೊದಲು ಹೋಗಿ ಅವರ ಬಳಿ ಶೀರ್ಷಿಕೆ ಕೇಳಿದೆ. ಅವರು ಆಶೀರ್ವಾದ ಮಾಡಿ ಕಳಿಸಿದರು. ಈ ಚಿತ್ರದ ಪ್ರತಿಯೊಂದು ದೃಶ್ಯ ಮಾಡುವಾಗಲೂ, ನಾನು ಭಯದಲ್ಲೇ ಸಿನಿಮಾ ಮಾಡಿದ್ದೇನೆ. ರವಿಚಂದ್ರನ್ ಅವರ ಎದುರು ಸೋಲಬಾರದು ಅಂತ ಪ್ರಜ್ಞೆ ಇಟ್ಟುಕೊಂಡೇ ಕೆಲಸ ಮಾಡಿದ್ದೇನೆ. ನಾನು ಅವರನ್ನು ಕಾಪಿ ಮಾಡಲು ಇಷ್ಟಪಡುತ್ತೇನೆ. ಜೀವನಪೂರ್ತಿ ಅವರ ತರಹ ಕನಸುಗಾರನಾಗಿ, ಹಠವಾದಿಯಾಗಿ ಅವರನ್ನು ಕಾಪಿ ಮಾಡಲು ಇಷ್ಟಪಡುತ್ತೇನೆ. ಅವರು ಚಿತ್ರದ ಮೊದಲ ಐದು ಟಿಕೆಟ್ಗಳನ್ನು ಖರೀದಿಸಿ, ಹಾರೈಸಿದ್ದಾರೆ. ಈ ಚಿತ್ರ ನಿಜಕ್ಕೂ ದಾಖಲೆ ಮಾಡುತ್ತದೆ ಎಂಬ ನಂಬಿಕ ಇದೆ. ಈ ಚಿತ್ರದ ನಂತರ ಇನ್ನಷ್ಟು ಚಿತ್ರಗಳನ್ನು ಮಾಡುತ್ತೇನೆ ಮತ್ತು ಕನ್ನಡ ಚಿತ್ರಗಳನ್ನೇ ಮಾಡುತ್ತೇನೆ’ ಎಂದರು.
‘ಯುದ್ಧಕಾಂಡ’ ಚಿತ್ರದಲ್ಲಿ ಅಜೇಯ್ ರಾವ್, ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ, ಟಿ.ಎಸ್. ನಾಗಾಭರಣ ಮುಂತಾದವರು ನಟಿಸಿದ್ದಾರೆ. ಪವನ್ ಭಟ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.