ಕಮಲ್ ಕನ್ನಡ ವಿವಾದ | ಕನ್ನಡಿಗರ ಆಕ್ರೋಶ; ಅಡಕತ್ತರಿಯಲ್ಲಿ ಶಿವರಾಜಕುಮಾರ್
ಕಾರ್ಯಕ್ರಮದಲ್ಲಿ ಕನ್ನಡದ ಶಿವರಾಜಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ಮತ್ತು ಶಿವರಾಜಕುಮಾರ್ ಅವರೊಂದಿಗಿನ ಒಡನಾಟದ ಬಗ್ಗೆ ಕಮಲ್ ಹಾಸನ್ ಬಹಳ ಒಳ್ಳೆಯ ಮಾತುಗಳನ್ನಾಡಿದರು.;
ನಟ ಡಾ.ಶಿವರಾಜ್ ಕುಮಾರ್
ನಟ ಶಿವರಾಜಕುಮಾರ್ ತಮ್ಮದಲ್ಲದ ತಪ್ಪಿಗೆ ಒಂದು ವಿವಾದದ ಭಾಗವಾಗಿದ್ದಾರೆ. ಸಾಮಾನ್ಯವಾಗಿ ವಿವಾದಗಳಿಂದ ದೂರವೇ ಇರುವ ಅವರು, ಕಮಲ್ ಹಾಸನ್ ನೀಡಿರುವ ಒಂದು ಹೇಳಿಕೆಯಿಂದಾಗಿ ಎಲ್ಲರೂ ಅವರನ್ನು ಪ್ರಶ್ನೆ ಮಾಡುವಂತಾಗಿದೆ.
ಇತ್ತೀಚೆಗೆ, ಚೆನ್ನೈನಲ್ಲಿ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡದ ಶಿವರಾಜಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ಮತ್ತು ಶಿವರಾಜಕುಮಾರ್ ಅವರೊಂದಿಗಿನ ಒಡನಾಟದ ಬಗ್ಗೆ ಕಮಲ್ ಹಾಸನ್ ಬಹಳ ಒಳ್ಳೆಯ ಮಾತುಗಳನ್ನಾಡಿದರು. ಮಾತನಾಡುವ ಭರದಲ್ಲಿ ‘ಕನ್ನಡವು ತಮಿಳಿನಿಂದ ಹುಟ್ಟಿತು …’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು.
ಕಮಲ್ ಹಾಸನ್ ಅವರ ಹೇಳಿಕೆ ಇದೀಗ ಕರ್ನಾಟಕದಲ್ಲಿ ಸಾಕಷ್ಟು ವಿವಾದಕ್ಕೀಡಾಗಿದೆ. ಕಮಲ್ ಹಾಸನ್, ತಮಿಳು ಭಾಷೆಯು ಕನ್ನಡಕ್ಕಿಂತ ಶ್ರೇಷ್ಠ ಎಂಬ ಭಾವನೆಯನ್ನು ಹೇರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ನಾಡು-ನುಡಿಯ ವಿವಾದಗಳೆದ್ದಾಗ, ಶಿವರಾಜಕುಮಾರ್ ಖಂಡಿಸುತ್ತಿದ್ದರು. ಆದರೆ, ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಗೆ ಶಿವರಾಜಕುಮಾರ್ ನೇರ ಸಾಕ್ಷಿಯಾಗಿದ್ದರು. ಶಿವರಾಜಕುಮಾರ್ ಕಣ್ಣೆದುರೇ, ಕಮಲ್ ಹಾಸನ್ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅದರ ಜೊತೆಗೆ ಕರ್ನಾಟಕ ಮತ್ತು ಡಾ.ರಾಜಕುಮಾರ್ ಕುಟುಂಬದೊಡನೆ ತಮ್ಮ ಒಡನಾಟದ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಹಾಗಾಗಿ, ಕಮಲ್ ಅವರ ಮಾತನ್ನು ಖಂಡಿಸದ ಪರಿಸ್ಥಿತಿಯಲ್ಲಿ ಶಿವರಾಜಕುಮಾರ್ ಇದ್ದಾರೆ.
ಶಿವರಾಜಕುಮಾರ್ ಯಾವತ್ತೂ ಕಮಲ್ ಹಾಸನ್ ತಮ್ಮ ಮೆಚ್ಚಿನ ನಟ ಎಂದು ಹೇಳಿಕೊಂಡೇ ಬಂದಿದ್ದಾರೆ. ಕೆಲ ವರ್ಷಗಳ ಹಿಂದೆ ಕಮಲ್ ಹಾಸನ್ ಒಮ್ಮೆ ತಮ್ಮನ್ನು ತಬ್ಬಿಕೊಂಡ ಸಂದರ್ಭದಲ್ಲಿ ಮೂರು ದಿನಗಳ ಕಾಲ ಸ್ನಾನ ಮಾಡಿರಲಿಲ್ಲ ಎಂದು ಮೊನ್ನೆಯ ಸಮಾರಂಭದಲ್ಲೂ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಹೀಗಿರುವಾಗ, ಕಮಲ್ ಹಾಸನ್ ಅವರ ಹೇಳಿಕೆಯಿಂದ ಶಿವರಾಜಕುಮಾರ್ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ. ಒಂದು ಕಡೆ ಅವರನ್ನು ಸಮರ್ಥಿಸಿಕೊಳ್ಳುವಂತೆಯೂ ಇಲ್ಲ, ಇನ್ನೊಂದು ಕಡೆ ಅವರನ್ನು ಖಂಡಿಸುವಂತೆಯೂ ಇಲ್ಲ ಎಂಬ ಪರಿಸ್ಥಿತಿಯಲ್ಲಿ ಅವರಿದ್ದಾರೆ. ತಾವು ಮಾಡದ ತಪ್ಪಿಗೆ, ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಇನ್ನು, ಕಮಲ್ ಹಾಸನ್ ಹೇಳಿಕೆಗೆ ಚಿತ್ರರಂಗದಿಂದ ಯಾವುದೇ ಪ್ರತಿರೋಧ ವ್ಯಕ್ತವಾಗದಿದ್ದರೂ, ರಾಜಕೀಯ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕವಾಗಿದೆ.
‘ತಮ್ಮ ತಮಿಳು ಭಾಷೆಯನ್ನು ವೈಭವೀಕರಿಸುವ ಮತ್ತಿನಲ್ಲಿ ಕನ್ನಡವನ್ನು ಅವಮಾನಿಸಿರುವುದು ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ’ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ, ‘ಕನ್ನಡಕ್ಕೆ ಸುದೀರ್ಘ ಇತಿಹಾಸವಿದೆ. ಕಮಲ್ ಹಾಸನ್ ಅವರಿಗೆ ವಿಷಯ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಇನ್ನು, ಸಚಿವ ತಂಗಡಗಿ ಮಾತನಾಡಿ, ‘ಕನ್ನಡಕ್ಕೆ ಅವಮಾನ ಮಾಡುವವರಿಗೆ ನಮ್ಮ ರಾಜ್ಯದಲ್ಲಿ ಯಾವುದೇ ಸ್ಥಾನವಿಲ್ಲ. ಕಮಲ್ ಹಾಸನ್ ಕ್ಷಮೆ ಕೇಳಲು ವಿಫಲರಾದರೆ, ಅವರ ‘ಥಗ್ ಲೈಫ್’ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
ಇಷ್ಟೆಲ್ಲಾ ಟೀಕೆಗಳು ವ್ಯಕ್ತವಾದರೂ, ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ತಿರುವನಂತಪುರದಲ್ಲಿ ಈ ಕುರಿತು ಮಾತನಾಡಿರುವ ಅವರು, ‘ಇತಿಹಾಸಕಾರರು ಹೇಳಿದ್ದನ್ನೇ ನಾನು ಹೇಳಿದ್ದೇನೆ, ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಕ್ಷಮೆ ಕೇಳುವಂತದ್ದು ನಾನೇನು ಹೇಳಿಲ್ಲ. ಕನ್ನಡಿಗರು ನನಗೆ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ತಮಿಳುನಾಡಿನಲ್ಲಿ ಸಮಸ್ಯೆಯಾದಾಗ ಕನ್ನಡದಲ್ಲಿ ಸಾಕಷ್ಟು ಅವಕಾಶ ನೀಡಿದ್ದಾರೆ. ಪ್ರೀತಿಯಲ್ಲಿ ಕ್ಷಮೆಯ ಮಾತು ಬರುವುದಿಲ್ಲ’ ಎಂದು ಹೇಳಿದ್ದಾರೆ.