ಅಜೇಯ್ ರಾವ್ ಆಯ್ತು, ಮಲ್ಟಿಪ್ಲೆಕ್ಸ್ಗಳ ವಿರುದ್ಧ ವಿನೋದ್ ಪ್ರಭಾಕರ್ ಬೇಸರ
23 ವರ್ಷಗಳಿಂದ ಬಹಳ ಕಷ್ಟಪಟ್ಟಿರುವುದಾಗಿ ಹೇಳುವ ವಿನೋದ್, ‘23 ವರ್ಷ ಬಹಳ ಕಷ್ಟಪಟ್ಟಿದ್ದೇನೆ. ಇವತ್ತು ನನಗೆ ಒಂದು ಯಶಸ್ಸು ಸಿಕ್ಕಿದೆ. ಜನ ಸಹ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.;
ಮಲ್ಟಿಪ್ಲೆಕ್ಸ್ನವರು ಕೊಡುವ ಪ್ರದರ್ಶನಗಳನ್ನು ಪ್ರಸಾದದ ರೂಪದಲ್ಲಿ ನಾವು ಸ್ವೀಕರಿಸಬೇಕಾ? ಎಂದು ಎರಡು ತಿಂಗಳುಗಳ ಹಿಂದೆ ನಟ ಅಜೇಯ್ ರಾವ್ ಪ್ರಶ್ನಿಸಿದ್ದರು. ತಮ್ಮ ‘ಯುದ್ಧಕಾಂಡ’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರದರ್ಶನ ಸಿಗಿದ್ದಾಗ, ಮಲ್ಟಿಪ್ಲೆಕ್ಸ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ವಿನೋದ್ ಪ್ರಭಾಕರ್ ಅವರ ಸರದಿ.
ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಚಿತ್ರ ಕಳೆದ ವಾರ ಬಿಡುಗಡೆಯಾಗಿ, ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಕಲೆಕ್ಷನ್ ಇಲ್ಲ ಎಂಬ ಕಾರಣಕ್ಕೆ ಹಲವು ಮಲ್ಟಿಪ್ಲೆಕ್ಸ್ಗಳಿಂದ ಚಿತ್ರವನ್ನು ಎತ್ತಂಗಡಿ ಮಾಡಲಾಗಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದರೂ, ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ, ಯಾವ್ಯಾವುದೋ ಸಮಯಕ್ಕೆ ಪ್ರದರ್ಶನ ನೀಡಲಾಗಿದೆಯಂತೆ ಚಿತ್ರವಿದ್ದರೂ, ಸರಿಯಾದ ಪ್ರದರ್ಶನ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿನೋದ್ ಪ್ರಭಾಕರ್ ಮತ್ತು ಚಿತ್ರತಂಡದವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ದೂರು ಸಲ್ಲಿಸಿದ್ದಾರೆ.
ದೂರು ಸಲ್ಲಿಸಿದ ನಂತರ ಮಾತನಾಡಿರುವ ವಿನೋದ್ ಪ್ರಭಾಕರ್, ‘ಯಾವುದೋ ಹಿಂದಿ ಸಿನಿಮಾಗೆ ಎರಡನೇ ವಾರದಲ್ಲಿ ಏಳು ಪ್ರದರ್ಶನ ಕೊಟ್ಟಿದ್ದಾರೆ. ಅಲ್ಲಿ ಜನರೂ ಇಲ್ಲ, ಕಲೆಕ್ಷನ್ ಸಹ ಇಲ್ಲ. ನಮ್ಮ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿದ್ದಾರೆ. ಈಗಿರುವ ಪ್ರದರ್ಶನಗಳ ಜೊತೆಗೆ, ಇನ್ನೊಂದು ಪ್ರದರ್ಶನ ಕೊಡಿ ಎಂದು ಕೇಳಿದ್ದೇವೆ. ಅದರಲ್ಲೂ ಪ್ರೈಮ್ಟೈಮ್ನಲ್ಲಿ ಕೊಟ್ಟರೆ ಬಹಳ ಅನುಕೂಲವಾಗುತ್ತದೆ. ಆದರೆ, ಎಲ್ಲಾ ಪಿವಿಆರ್ ಮಲ್ಟಿಪ್ಲೆಕ್ಸ್ಗಳಲ್ಲೂ ಕೇವಲ ಒಂದು ಪ್ರದರ್ಶನ ಕೊಟ್ಟಿದ್ದಾರೆ. ಅದರಲ್ಲೂ ಪ್ರೈಮ್ ಟೈಮ್ ಕೊಟ್ಟಿಲ್ಲ. ಯಾವುದೇ ಮಾಲ್ನಲ್ಲೂ 20 ಪರ್ಸೆಂಟ್ಗಿಂತ ಕಡಿಮೆ ಜನ ಇಲ್ಲ. ಆದರೆ, ಹಿಂದಿಗೆ ಕೊಡುವ ಪ್ರಾಮುಖ್ಯತೆ ನಮಗೆ ಕೊಡುತ್ತಿಲ್ಲ’ ಎಂದು ಬೇಸರ ಹೇಳಿಕೊಂಡಿದ್ದಾರೆ.
23 ವರ್ಷಗಳಿಂದ ಬಹಳ ಕಷ್ಟಪಟ್ಟಿರುವುದಾಗಿ ಹೇಳುವ ವಿನೋದ್, ‘23 ವರ್ಷ ಬಹಳ ಕಷ್ಟಪಟ್ಟಿದ್ದೇನೆ. ಇವತ್ತು ನನಗೆ ಒಂದು ಯಶಸ್ಸು ಸಿಕ್ಕಿದೆ. ಜನ ಸಹ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ, ನಮಗೆ ಸಮಸ್ಯೆ ಆಗುತ್ತಿದೆ. ಇದು ಬರೀ ನನ್ನೊಬ್ಬನ ಸಮಸ್ಯೆ ಅಲ್ಲ. ಎಷ್ಟೋ ವರ್ಷಗಳಿಂದ ಈ ಸಮಸ್ಯೆ ಇದೆ ಮತ್ತು ಬಹಳಷ್ಟು ಹೀರೋಗಳು ಈ ಬಗ್ಗೆ ದೂರು ಕೊಟ್ಟಿದ್ದಾರೆ. ಈ ವಿಷಯವಾಗಿ ಯಾರನ್ನು ಕೇಳಬೇಕೋ ಗೊತ್ತಿಲ್ಲ. ನಾನು ಹೊಸಬ ಅಲ್ಲ. ಆದರೂ ಈ ಸಮಸ್ಯೆ ಎದುರಾಗುತ್ತಿದೆ. ಯಾರನ್ನೋ ಭಿಕ್ಷೆ ಬೇಡುವಂತಹ ಪರಿಸ್ಥಿತಿಗೆ ಬಂದಿದ್ದೇವೆ. ಬರೀ ನಮ್ಮ ಸಿನಿಮಾಗಷ್ಟೇ ಅಲ್ಲ, ಎಲ್ಲಾ ಕನ್ನಡ ಸಿನಿಮಾಗಳಿಗೆ ಪ್ರಾಮುಖ್ಯತೆ ಸಿಗಬೇಕು. ನಂತರ ಬೇರೆ ಭಾಷೆಗಳಿಗೆ ಏನಾದರೂ ಮಾಡಿಕೊಳ್ಳಲಿ’ ಎಂದರು.
ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್ ಕೇಶವ (ದೇವಸಂದ್ರ) ನಿರ್ಮಿಸಿರುವ, ನವೀನ್ ರೆಡ್ಡಿ ಬಿ ನಿರ್ದೇಶನದ ‘ಮಾದೇವ’ ಚಿತ್ರದಲ್ಲಿ ವಿನೋದ್ ಪ್ರಭಾಕರ್, ಸೋನಾಲ್ ಮೊಂತೆರೊ, ಶ್ರೀನಗರ ಕಿಟ್ಟಿ, ಮಾಲಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಜ್ ಸುಧೀ ಮುಂತಾದರು ನಟಿಸಿದ್ದಾರೆ.