ನಿರ್ಮಾಪಕಿಯಾದ ಸುಧಾರಾಣಿ; ‘ಘೋಸ್ಟ್’ ಕಿರುಚಿತ್ರ ನಿರ್ಮಾಣ

ಕನ್ನಡ ನಟಿಯರು ಚಿತ್ರ ನಿರ್ಮಿಸಿದ ಪರಂಪರೆಯೇ ಇದೆ. ರಾಜಮ್ಮ, ಲೀಲಾವತಿ, ಜಯಂತಿ, ಪ್ರಮೀಳಾ ಜೋಷಾಯ್‍, ಪೂಜಾ ಗಾಂಧಿ, ರಮ್ಯಾ, ರಾಧಿಕಾ ಕುಮಾರಸ್ವಾಮಿ, ಶರ್ಮಿಳಾ ಮಾಂಡ್ರೆ ಕೂಡಾ ಚಿತ್ರ ನಿರ್ಮಾಣ ಮಾಡಿದ್ದಾರೆ.;

Update: 2025-06-03 00:30 GMT

ಕನ್ನಡದಲ್ಲಿ ನಟಿಯರು ಚಿತ್ರ ನಿರ್ಮಿಸಿದ ದೊಡ್ಡ ಪರಂಪರೆಯೇ ಇದೆ. ಎಂ.ವಿ. ರಾಜಮ್ಮ ಅವರಿಂದ ಪ್ರಾರಂಭಿಸಿ, ಲೀಲಾವತಿ, ಜಯಂತಿ, ಪ್ರಮೀಳಾ ಜೋಷಾಯ್‍, ಪೂಜಾ ಗಾಂಧಿ, ರಮ್ಯಾ, ರಾಧಿಕಾ ಕುಮಾರಸ್ವಾಮಿ, ಶರ್ಮಿಳಾ ಮಾಂಡ್ರೆ ಮುಂತಾದ ಹಲವು ನಟಿಯರತು ನಟನೆ ಜೊತೆಗೆ ಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

ಈಗ ಯಾಕೆ ಈ ವಿಷಯವೆಂದರೆ, ನಟಿ ಸುಧಾರಾಣಿ ಇದೀಗ ನಿರ್ಮಾಪಕಿಯಾಗಿದ್ದಾರೆ. ಸದ್ದಿಲ್ಲದೆ ಒಂದು ಚಿತ್ರವನ್ನು ಅವರು ನಿರ್ಮಿಸಿದ್ದಾರೆ. ಹಾಗಂತ ಇದು ಫೀಚರ್‍ ಚಿತ್ರವಲ್ಲ, ಬದಲಿಗೆ ಕಿರುಚಿತ್ರ. ಸುಧಾರಾಣಿ, ‘ಘೋಸ್ಟ್’ ಎಂಬ ಕಿರುಚಿತ್ರವನ್ನು ನಿರ್ಮಿಸುವುದರ ಜೊತೆಗೆ, ಆ ಕಿರುಚಿತ್ರವನ್ನು ಯೂಟ್ಯೂಬ್‍ನ ತಮ್ಮದೇ ಚಾನಲ್‍ನಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ಕಿರುಚಿತ್ರದ ಬಿಡುಗಡೆ ಮತ್ತು ಪ್ರದರ್ಶನ ಭಾನುವಾರ ಬೆಳಿಗ್ಗೆ ನಡೆಯಿತು. ವಿಶೇಷವೆಂದರೆ, ಈ ಕಿರುಚಿತ್ರವನ್ನು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ತಂಡವೇ ರೂಪಿಸಿದೆ. ಆ ಧಾರಾವಾಹಿಯಲ್ಲಿ ಸುಧಾರಾಣಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಆ ಧಾರಾವಾಹಿಯ ನಿರ್ದೇಶಕ ಸುದೇಶ್‍ ರಾವ್‍, ಈ ಕಿರುಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ಒಂದು ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಕಿರು ಚಿತ್ರ ಪ್ರದರ್ಶನದ ನಂತರ ಮಾತನಾಡಿದ ಸುಧಾರಾಣಿ, ‘ಈ ಚಿತ್ರ ಆಗೋದಕ್ಕೆ ಕಾರಣ ನಮ್ಮ ‘ಶ್ರೀರಸ್ತು ಶುಭಮಸ್ತು ತಂಡ. ಇದೇ ತರಹ ಸಿನಿಮಾ ನಿರ್ಮಾಣ ಮಾಡುವ ಆಸೆಯೂ ಇದೆ. ಇಡೀ ಸಿನಿಮಾ ನಿರ್ಮಿಸುವ ತಾಕತ್ತು ಇಲ್ಲ. ಚಿತ್ರರಂಗ ಜೀವನ ಕಟ್ಟಿಕೊಟ್ಟಿದೆ. ಚಿಕ್ಕ ಮಟ್ಟದಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಸೆ ಇದೆ. ಈ ಕಿರುಚಿತ್ರವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರೋತ್ಸವಗಳಿಗೂ ಕಳಿಸುವ ಯೋಚನೆ ಇದೆ. ಇದೊಂದು ಸೈಕಲಾಜಿಕಲ್‍ ಚಿತ್ರ. ಸುದೇಶ್‍ ಅವರು ಕಥೆ ಹೇಳಿದಾಗ, ಇಷ್ಟ ಆಯ್ತು. ಅದರ ಹಿಂದೆ ಒಂದು ಅರ್ಥ ಇದೆ. ಹಲವು ಭಾವನೆಗಳಿವೆ’ ಎಂದರು.

ನಟ-ನಿರ್ದೇಶಕ ಸುದೇಶ್‍ ಮಾತನಾಡಿ, ‘ಸುಧಾರಾಣಿ ಅವರಿಗೆ ಕಥೆ ಹೇಳಿದೆ. ಇಷ್ಟವಾಗಿ ಚಿತ್ರ ಮಾಡೋಣ ಎಂದರು. ಇದು ದೆವ್ವದ ಕಥೆ ಇಲ್ಲ. ನನ್ನ ದೃಷ್ಟಿಯಲ್ಲಿ ನೆಗೆಟಿವಿಟಿ ಅನ್ನೋದು ಇಲ್ಲ. ಅದು ಮನುಷ್ಯನ ಕಲ್ಪನೆ. ಪ್ರಕೃತಿಯಲ್ಲಿ ಯಾವುದೂ ನೆಗೆಟಿವ್‍ ಇಲ್ಲ. ಅದು ನಮ್ಮ ಮನಸ್ಸಿನಲ್ಲಿದೆ. ದೆವ್ವ ಅನ್ನೋದು ಮನಸ್ಸಿನ ಭಾವನೆ ಎಂಬುದು ನನ್ನ ನಿಲುವು. ಅದನ್ನು ಎಲ್ಲರೂ ಒಪ್ಪಬೇಕು ಎನ್ನುವುದಿಲ್ಲ. ಮೂಢನಂಬಿಕೆ ಎಂದು ಹೇಳುತ್ತಲೇ ತಾಯ್ತ ಕಟ್ಟಿಕೊಳ್ಳುತ್ತೇವೆ. ದೆವ್ವ-ಭೂತ ಇಲ್ಲ ಎಂದು ಖಡಾಖಂಡಿತವಾಗಿ ಹೇಳುವುದು ಕಷ್ಟ. ಆದರೆ, ನನಗೆ ಅಂಥದ್ದೊಂದು ಅನುಭವ ಆಗಿಲ್ಲ. ಸಿಗುವವರೆಗೂ ನನ್ನ ಮಟ್ಟಿಗೆ ದೆವ್ವ ಇಲ್ಲ’ ಎಂದರು.

‘ಘೋಸ್ಟ್ – ದಿ ದೆವ್ವ’ ಚಿತ್ರಕ್ಕೆ ವಾಸು ಕಿನ್ನಿಗೋಳಿ ಛಾಯಾಗ್ರಹಣ, ಹೇಮಂತ್‍ ಕುಮಾರ್ ಸಂಗೀತವಿದೆ.

Full View


Tags:    

Similar News