ಚಿನ್ನಸ್ವಾಮಿ ಸ್ಟೇಡಿಯಮ್ ದುರಂತ; ಮೃತರ ಕುಟುಂಬಕ್ಕೆ ತಲಾ 10 ಲಕ್ಷ, ಗಾಯಾಳುಗಳಿಗೆ ‘ಆರ್ಸಿಬಿ ಕೇರ್ಸ್’ ನಿಧಿ ಸ್ಥಾಪನೆ ಪ್ರಕಟಿಸಿದ ಆರ್ಸಿಬಿ
ಆರ್ಸಿಬಿ ತಂಡವು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಅಭಿಮಾನಿಗಳು ನಮ್ಮ ಎಲ್ಲ ಕಾರ್ಯತಂತ್ರದ ಕೇಂದ್ರ ಬಿಂದು ಎಂಬುದಾಗಿ ಹೇಳಿದೆ.;
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತವು 11 ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ತಕ್ಷಣವೇ ಸ್ಪಂದಿಸಿದೆ. ದುರಂತದಿಂದ ತೀವ್ರವಾಗಿ ಆಘಾತಗೊಂಡಿರುವ ತಂಡವು ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದೆ. ಇದರ ಜೊತೆಗೆ, ಗಾಯಗೊಂಡ ಅಭಿಮಾನಿಗಳಿಗೆ ನೆರವಾಗಲು ಆರ್ಸಿಬಿ ಕೇರ್ಸ್' ಎಂಬ ವಿಶೇಷ ನಿಧಿ ಸ್ಥಾಪಿಸಿದೆ.
ಆರ್ಸಿಬಿ ತಂಡವು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. "ನಿನ್ನೆ ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಘಟನೆಯು ಆರ್ಸಿಬಿ ಕುಟುಂಬಕ್ಕೆ ಭಾರೀ ದುಃಖ ಮತ್ತು ನೋವು ತಂದಿದೆ. ಗೌರವ ಮತ್ತು ಸಂಪೂರ್ಣ ಸಹಾನುಭೂತಿಯ ಸಂಕೇತವಾಗಿ, ಆರ್ಸಿಬಿ ತಂಡವು ಮೃತಪಟ್ಟ 11 ಜನರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಆರ್ಥಿಕ ಸಹಾಯ ಘೋಷಿಸಿದೆ. ಇದರ ಜೊತೆಗೆ, ಈ ದುರಂತ ಘಟನೆಯಲ್ಲಿ ಗಾಯಗೊಂಡ ಅಭಿಮಾನಿಗಳಿಗೆ ಬೆಂಬಲ ನೀಡಲು ಆರ್ಸಿಬಿ ಕೇರ್ಸ್' ಎಂಬ ನಿಧಿಯನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ಅಭಿಮಾನಿಗಳು ಯಾವಾಗಲೂ ನಮ್ಮ ಕಾರ್ಯಗಳ ಕೇಂದ್ರಬಿಂದುವಾಗಿರುತ್ತಾರೆ. ಈ ದುಃಖದ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ," ಎಂದು ಆರ್ಸಿಬಿ ತಿಳಿಸಿದೆ.
ಆರ್ಸಿಬಿ ಕೇರ್ಸ್ ನಿಧಿಯು ಗಾಯಗೊಂಡ 33ಕ್ಕೂ ಹೆಚ್ಚು ಅಭಿಮಾನಿಗಳ ಚಿಕಿತ್ಸಾ ವೆಚ್ಚ, ವೈದ್ಯಕೀಯ ಆರೈಕೆ ಮತ್ತು ದೀರ್ಘಾವಧಿಯ ಚೇತರಿಕೆಗೆ ಆರ್ಥಿಕ ಬೆಂಬಲ ನೀಡಲಿದೆ. ಈ ನಿಧಿಯ ಕಾರ್ಯವಿಧಾನಗಳ ಕುರಿತು ಆರ್ಸಿಬಿ ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ಪ್ರಕಟಿಸಲಿದೆ.
ಜೂನ್ 4ರಂದು ಆರ್ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಸುಮಾರು 2-3 ಲಕ್ಷ ಅಭಿಮಾನಿಗಳು ಜಮಾಯಿಸಿದ್ದರು. "ಉಚಿತ ಟಿಕೆಟ್" ಎಂಬ ವದಂತಿಯಿಂದ ಉಂಟಾದ ಜನಸಂದಣಿಯ ಒತ್ತಡವನ್ನು ನಿಯಂತ್ರಿಸಲು ಭದ್ರತಾ ವ್ಯವಸ್ಥೆಗಳು ಸಂಪೂರ್ಣವಾಗಿ ವಿಫಲವಾದವು. ಗೇಟ್ 7ರ ಬಳಿ ಪರಿಸ್ಥಿತಿ ಕೈಮೀರಿ, ಕಾಲ್ತುಳಿತ ಸಂಭವಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕರು ಮತ್ತು ವಿದ್ಯಾರ್ಥಿಗಳು ಎಂದು ಮಾಹಿತಿ ನೀಡಿದ್ದಾರೆ.