IPL 2025: ನನ್ನ ಹೃದಯ, ಆತ್ಮ ಬೆಂಗಳೂರಿನೊಂದಿಗೆ ಇದೆ ಎಂದ ವಿರಾಟ್ ಕೊಹ್ಲಿ

ಗೆಲುವಿನ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ತಮ್ಮ ಹೃದಯ ಮತ್ತು ಆತ್ಮವು ಬೆಂಗಳೂರಿನೊಂದಿಗೆ ಇದೆ ಎಂದು ಭಾವುಕವಾಗಿ ನುಡಿದರು. "ನಾನು ಐಪಿಎಲ್‌ನಿಂದ ನಿವೃತ್ತಿಯಾಗುವವರೆಗೂ ಆರ್‌ಸಿಬಿಗಾಗಿಯೇ ಆಡುತ್ತೇನೆ ಎಂದು ಹೇಳಿದರು.;

Update: 2025-06-03 21:13 GMT

18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಂತಿಮವಾಗಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದೆ! ಐಪಿಎಲ್ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ 6 ರನ್‌ಗಳ ರೋಮಾಂಚಕ ವಿಜಯ ಸಾಧಿಸುವ ಮೂಲಕ ಆರ್‌ಸಿಬಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಈ ಐತಿಹಾಸಿಕ ಪಂದ್ಯದ ನಂತರ, ಆರ್‌ಸಿಬಿ ತಂಡದ ಆತ್ಮ ಮತ್ತು ಆಧಾರಸ್ತಂಭವಾದ ವಿರಾಟ್ ಕೊಹ್ಲಿ ಭಾವಪರವಶರಾಗಿ ಕಣ್ಣೀರಿಟ್ಟರು.

ಗೆಲುವಿನ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ತಮ್ಮ ಹೃದಯ ಮತ್ತು ಆತ್ಮವು ಬೆಂಗಳೂರಿನೊಂದಿಗೆ ಇದೆ ಎಂದು ಭಾವುಕವಾಗಿ ನುಡಿದರು. "ನಾನು ಐಪಿಎಲ್‌ನಿಂದ ನಿವೃತ್ತಿಯಾಗುವವರೆಗೂ ಆರ್‌ಸಿಬಿಗಾಗಿಯೇ ಆಡುತ್ತೇನೆ. ಈ ಗೆಲುವು ತಂಡಕ್ಕೆ ಮಾತ್ರವಲ್ಲ, ನಮ್ಮ ಅದ್ಭುತ ಅಭಿಮಾನಿಗಳಿಗೂ ಸೇರಿದ್ದು. ನಾನು ಈ ತಂಡಕ್ಕೆ ನನ್ನ ಯೌವನ, ನನ್ನ ಅತ್ಯುತ್ತಮ ಸಮಯ, ಮತ್ತು ನನ್ನ ಅನುಭವವನ್ನೆಲ್ಲಾ ನೀಡಿದ್ದೇನೆ. ಪ್ರತಿ ಸೀಸನ್‌ನಲ್ಲೂ ಗೆಲುವಿಗಾಗಿ ಎಲ್ಲವನ್ನೂ ಹಾಕಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಗೆದ್ದ ಕ್ಷಣದಲ್ಲಿ ನನ್ನ ಭಾವನೆಗಳು ಉಕ್ಕಿ ಹರಿದವು, ಕಣ್ಣೀರಾದೆ," ಎಂದು ಕೊಹ್ಲಿ, ಮಾಜಿ ಆಸ್ಟ್ರೇಲಿಯನ್ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಮ್ಯಾಥ್ಯೂ ಹೇಡನ್‌ಗೆ ತಿಳಿಸಿದರು.

ತಮ್ಮ ಮಾಜಿ ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್‌ಗೆ ಗೌರವ ಸಲ್ಲಿಸಿದ ಕೊಹ್ಲಿ, ಎಬಿಡಿ ಈ ಫ್ರಾಂಚೈಸಿಗೆ ಮಾಡಿರುವ ಕೊಡುಗೆ ಅಪಾರ. ನಾನು ಅವರಿಗೆ, 'ಈ ಗೆಲುವು ನಮಗೆ ಎಷ್ಟು ಮುಖ್ಯವೋ, ಅಷ್ಟೇ ನಿನಗೂ' ಎಂದೆ. ಅವರು ನಾಲ್ಕು ವರ್ಷಗಳ ಹಿಂದೆ ನಿವೃತ್ತರಾಗಿದ್ದರೂ, ಆರ್‌ಸಿಬಿಯಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗಳಿಸಿದವರು ಅವರೇ. ಈ ಟ್ರೋಫಿಯನ್ನು ಎತ್ತುವ ವೇದಿಕೆಯಲ್ಲಿ ಅವರೂ ಇರಬೇಕಿತ್ತು," ಎಂದು ಭಾವುಕರಾದರು.

ಮುಂದುವರಿಸಿದ ಅವರು, "ಈ ಗೆಲುವು ನನ್ನ ಜೀವನದ ಅತ್ಯುನ್ನತ ಕ್ಷಣಗಳಲ್ಲಿ ಒಂದು. ನಾನು ಈ ತಂಡಕ್ಕೆ ನಿಷ್ಠನಾಗಿದ್ದೇನೆ. ಬೇರೆ ಅವಕಾಶಗಳಿದ್ದರೂ, ನಾನು ಆರ್‌ಸಿಬಿಯನ್ನೇ ಆಯ್ಕೆ ಮಾಡಿದೆ. ಅವರೂ ನನ್ನೊಂದಿಗೆ ನಿಂತರು. ನನ್ನ ಹೃದಯ, ನನ್ನ ಆತ್ಮ ಬೆಂಗಳೂರಿನೊಂದಿಗೆ ಇದೆ. ಐಪಿಎಲ್ ಒಂದು ತೀವ್ರ ಸ್ಪರ್ಧೆಯ ಟೂರ್ನಮೆಂಟ್. ದೊಡ್ಡ ಟೂರ್ನಮೆಂಟ್‌ಗಳನ್ನು ಗೆಲ್ಲಲು, ದೊಡ್ಡ ಕ್ಷಣಗಳನ್ನು ಸೃಷ್ಟಿಸಲು ನಾನು ಬಯಸುತ್ತೇನೆ. ಇವತ್ತು ರಾತ್ರಿ ನಾನು ಮಗುವಿನಂತೆ ನಿದ್ದೆ ಮಾಡುತ್ತೇನೆ. ನಾನು ಯಾವಾಗಲೂ ಸುಧಾರಣೆಗೆ ದಾರಿ ಹುಡುಕುತ್ತೇನೆ, ಕ್ಷೇತ್ರರಕ್ಷಣೆಯಲ್ಲಿ ಪರಿಣಾಮ ಬೀರಲು ಬಯಸುತ್ತೇನೆ. ದೇವರು ನನಗೆ ದೃಷ್ಟಿಕೋನ ಮತ್ತು ಪ್ರತಿಭೆಯನ್ನು ಆಶೀರ್ವದಿಸಿದ್ದಾನೆ. ನಾನು ಕಷ್ಟಪಟ್ಟು, ಹೃದಯದಿಂದ ಕೆಲಸ ಮಾಡಿದ್ದೇನೆ," ಎಂದು ಕೊಹ್ಲಿ ಹೇಳಿದರು.

ತಂಡದ ಒಗ್ಗಟ್ಟಿನ ವಿಜಯ

ಆರ್‌ಸಿಬಿಯ ಆಯ್ಕೆ ತಂತ್ರವನ್ನು ಪ್ರಶ್ನಿಸಿದ ವಿಮರ್ಶಕರಿಗೆ ಕೊಹ್ಲಿ ತಮ್ಮ ಗೆಲುವಿನ ಮೂಲಕ ಉತ್ತರ ನೀಡಿದರು. "ಹರಾಜಿನಲ್ಲಿ ಕೆಲವರು ನಮ್ಮ ತಂತ್ರವನ್ನು ಪ್ರಶ್ನಿಸಿದರು. ಆದರೆ, ನಾವು ನಮ್ಮ ಆಯ್ಕೆಯಿಂದ ಸಂತೃಪ್ತರಾಗಿದ್ದೆವು. ಆಡಳಿತ ಮಂಡಳಿಯು ನಮ್ಮನ್ನು ಸಕಾರಾತ್ಮಕವಾಗಿರಿಸಿತು, ಆಟಗಾರರು ಅದ್ಭುತವಾಗಿ ಕಾರ್ಯನಿರ್ವಹಿಸಿದರು," ಎಂದು ಅವರು ತಿಳಿಸಿದರು. ಈ ಗೆಲುವಿನಲ್ಲಿ ಭುವನೇಶ್ವರ್ ಕುಮಾರ್ ಜೋಶ್ ಹೇಜಲ್‌ವುಡ್ ಮತ್ತು ಕೃಣಾಲ್ ಪಾಂಡ್ಯ ರ ಬೌಲಿಂಗ್ ಪ್ರದರ್ಶನ ನಿರ್ಣಾಯಕವಾಗಿತ್ತು, ಇದು ಆರ್‌ಸಿಬಿಯ ಬ್ಯಾಟಿಂಗ್ ಕೊರತೆಯನ್ನು ಮರೆಮಾಚಿತು.

2008ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಆರ್‌ಸಿಬಿ, 2009, 2011, ಮತ್ತು 2016ರಲ್ಲಿ ಫೈನಲ್‌ಗೆ ತಲುಪಿದರೂ ಟ್ರೋಫಿಯಿಂದ ವಂಚಿತವಾಗಿತ್ತು. ಕೊಹ್ಲಿಯ ನೇತೃತ್ವದಲ್ಲಿ ತಂಡವು ಹಲವು ಬಾರಿ ಗಮನಾರ್ಹ ಪ್ರದರ್ಶನ ನೀಡಿದರೂ, ಗೆಲುವಿನ ಕೊನೆಯ ಹೆಜ್ಜೆಯಲ್ಲಿ ಎಡವಿತ್ತು. 2025ರ ಈ ಐತಿಹಾಸಿಕ ಗೆಲುವು ಆರ್‌ಸಿಬಿಯ ಲಕ್ಷಾಂತರ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿ ಸಂಭ್ರಮಾಚರಣೆ, ಸಾಮಾಜಿಕ ಜಾಲತಾಣಗಳಲ್ಲಿ "#EeSalaCupNamde" ಘೋಷಣೆಯೊಂದಿಗೆ ಈ ಗೆಲುವು ಜಗತ್ತಿನಾದ್ಯಂತ ಆಚರಿಸಲಾಯಿತು. 

Tags:    

Similar News