ಶಬರಿಮಲೆ ಚಿನ್ನ ಕಳವು ಪ್ರಕರಣ: ಬೆಂಗಳೂರು, ಬಳ್ಳಾರಿಯಲ್ಲಿ ಎಸ್ಐಟಿ ದಾಳಿ; 400 ಗ್ರಾಂ ಚಿನ್ನ ಜಪ್ತಿ
ಪೊಟ್ಟಿಯನ್ನು ವಿಚಾರಣೆಗೊಳಪಡಿಸಿದಾಗ ದೊರೆತ ಮಾಹಿತಿಯನ್ವಯ, ಬಳ್ಳಾರಿಯ 'ರೊದ್ದಂ ಜ್ಯುವೆಲ್ಲರಿ' ಮಾಲೀಕ ಗೋವರ್ಧನ್ ಎಂಬುವವರಿಗೆ ಕಳವಾದ ಚಿನ್ನವನ್ನು ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ.
ಶಬರಿಮಲೆ ದೇವಾಲಯ
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆಯು ಇದೀಗ ಕರ್ನಾಟಕಕ್ಕೂ ವ್ಯಾಪಿಸಿದ್ದು, ವಿಶೇಷ ತನಿಖಾ ತಂಡ (SIT) ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದೆ. ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಸಂಪರ್ಕ ಹೊಂದಿದ್ದ ಬಳ್ಳಾರಿಯ ಆಭರಣ ವ್ಯಾಪಾರಿಯೊಬ್ಬರ ಅಂಗಡಿಯ ಮೇಲೆ ದಾಳಿ ನಡೆಸಿದ ಎಸ್ಐಟಿ, 400 ಗ್ರಾಂ ಚಿನ್ನದ ಗಟ್ಟಿಗಳು ಮತ್ತು 2 ಲಕ್ಷ ರೂಪಾಯಿ ವಶಪಡಿಸಿಕೊಂಡಿದೆ.
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ, ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಶುಕ್ರವಾರ ಬೆಂಗಳೂರಿಗೆ ಕರೆತಂದಿತ್ತು. ಪೊಟ್ಟಿಯನ್ನು ವಿಚಾರಣೆಗೊಳಪಡಿಸಿದಾಗ ದೊರೆತ ಮಾಹಿತಿಯನ್ವಯ, ಬಳ್ಳಾರಿಯ 'ರೊದ್ದಂ ಜ್ಯುವೆಲ್ಲರಿ' ಮಾಲೀಕ ಗೋವರ್ಧನ್ ಎಂಬುವವರಿಗೆ ಕಳವಾದ ಚಿನ್ನವನ್ನು ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ. ತಕ್ಷಣವೇ ಬಳ್ಳಾರಿಗೆ ತೆರಳಿದ ತಂಡ, ಗೋವರ್ಧನ್ ಅವರ ಅಂಗಡಿ ಮೇಲೆ ದಾಳಿ ನಡೆಸಿ ಚಿನ್ನ ಮತ್ತು ನಗದನ್ನು ಜಪ್ತಿ ಮಾಡಿದೆ. ಕಳವಾದ ಚಿನ್ನವನ್ನು ಖರೀದಿಸಿರುವುದಾಗಿ ಗೋವರ್ಧನ್ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಎಸ್ಐಟಿ ತಂಡವು ಬೆಂಗಳೂರಿನ ಶ್ರೀರಾಮಪುರದಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿ ಅವರ ಅಪಾರ್ಟ್ಮೆಂಟ್ ಅನ್ನೂ ಶೋಧನೆ ನಡೆಸಿದೆ. ಪೊಟ್ಟಿ ಈ ಹಿಂದೆ ಇದೇ ಪ್ರದೇಶದ ಅಯ್ಯಪ್ಪ ದೇವಸ್ಥಾನವೊಂದರಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ
2019ರಲ್ಲಿ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ (ಶ್ರೀಕೋವಿಲ್) ಬಾಗಿಲು ಮತ್ತು ದ್ವಾರಪಾಲಕರ ವಿಗ್ರಹಗಳಿಗೆ ಚಿನ್ನದ ವಿದ್ಯುಲ್ಲೇಪನ (electroplating) ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಗುತ್ತಿಗೆಯನ್ನು ಉನ್ನಿಕೃಷ್ಣನ್ ಪೊಟ್ಟಿ ಪಡೆದಿದ್ದರು. ಆದರೆ, ಮೂಲ ಚಿನ್ನದ ಹೊದಿಕೆಗಳನ್ನು ತೆಗೆದು, ಕಡಿಮೆ ಗುಣಮಟ್ಟದ ಚಿನ್ನದ ಲೇಪನವಿರುವ ತಗಡುಗಳನ್ನು ಅಳವಡಿಸಿ, ಸುಮಾರು 2 ಕೆ.ಜಿ.ಗೂ ಹೆಚ್ಚು ಚಿನ್ನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ.
ದೇವಸ್ವಂ ಮಂಡಳಿಯ ಅನುಮತಿಯಿಲ್ಲದೆ, ಚಿನ್ನದ ಹೊದಿಕೆಯ ತಗಡುಗಳನ್ನು ಕೇರಳದಿಂದ ಹೊರಗೆ ವಿವಿಧ ದೇವಸ್ಥಾನಗಳಿಗೆ ಮತ್ತು ಮನೆಗಳಿಗೆ ಪೊಟ್ಟಿ ಸಾಗಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಶಬರಿಮಲೆಯ ಮಾಜಿ ಆಡಳಿತಾಧಿಕಾರಿ ಬಿ. ಮುರಾರಿ ಬಾಬು ಅವರನ್ನೂ ಈಗಾಗಲೇ ಬಂಧಿಸಲಾಗಿದೆ.
ಸದ್ಯ ಅಕ್ಟೋಬರ್ 30ರವರೆಗೆ ಎಸ್ಐಟಿ ವಶದಲ್ಲಿರುವ ಪೊಟ್ಟಿಯನ್ನು, ಮುಂದೆ ವಿದ್ಯುಲ್ಲೇಪನದ ಕಾರ್ಯ ನಡೆದಿದ್ದ ಚೆನ್ನೈನ 'ಸ್ಮಾರ್ಟ್ ಕ್ರಿಯೇಷನ್' ಕಚೇರಿಗೂ ಕರೆದೊಯ್ದು ಸಾಕ್ಷ್ಯ ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.