ಪಾಕ್ನಿಂದ ಕದನ ವಿರಾಮ ನಿರಂತರ ಉಲ್ಲಂಘನೆ, ಪಾಕ್ ರೆಂಜರ್ ಬಂಧನ
ರಾಜಾಸ್ತಾನದ ಗಡಿಯಲ್ಲಿ ಬಿಎಸ್ಎಫ್ ಪಾಕಿಸ್ತಾನದ ರೇಂಜರ್ನನ್ನು ಬಂಧಿಸಿದ್ದು ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಇತ್ತೀಚೆಗೆ ಬಿಎಸ್ಎಫ್ ಯೋಧ ಸಾಹುನನ್ನು ಬಂಧಿಸಿದ್ದು ಬಿಡುಗಡೆಗೊಳಿಸುವಂತೆ ಪ್ರತಿಭಟನೆ ನಡೆಸಿದ್ದರೂ ಪಾಕ್ ಬಿಡುಗಡೆಗೊಳಿಸಿಲ್ಲ.;
ಪಾಕಿಸ್ತಾನ ರೇಂಜರ್ನನ್ನು ಬಂಧಿಸಿರುವ ಬಿಎಸ್ಎಫ್ ಯೋಧರು.
ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿಗಳು ಸತತ 10ನೇ ರಾತ್ರಿಯೂ ಮುಂದುವರಿದಿವೆ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನ ಮೃತಪಟ್ಟು ಹಲವಾರು ಮಂದಿ ಗಾಯಗೊಂಡ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ. ಭಾರತವು 'ಇಂಡಸ್ ವಾಟರ್ ಟ್ರೀಟಿ'ಯನ್ನು ಸ್ಥಗಿತಗೊಳಿಸಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವು ಗಡಿಯಾಚೆಗಿನ ದಾಳಿಗಳನ್ನು ಆರಂಭಿಸಿದೆ.
ರಕ್ಷಣಾ ಇಲಾಖೆಯ ವಕ್ತಾರರ ಪ್ರಕಾರ, "ಮೇ 3 ಮತ್ತು 4ರ ರಾತ್ರಿಯಲ್ಲಿ, ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ರಜೌರಿ, ಮೆಂಧರ್, ನೌಶೇರಾ, ಸುಂದರ್ಬನಿ, ಮತ್ತು ಅಖ್ನೂರ್ ವಲಯಗಳಲ್ಲಿ ಗಡಿ ನಿಯಂತ್ರಣ ರೇಖೆ (LoC) ಯಾಚೆಗಿನ ಭಾರತೀಯ ಭಾಗದಲ್ಲಿ ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರ ದಾಳಿಗಳನ್ನು ನಡೆಸಿದೆ. ಭಾರತೀಯ ಸೇನೆಯು ಈ ದಾಳಿಗಳಿಗೆ ಸೂಕ್ತ ಮತ್ತು ಸಮಂಜಸ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಈ ಅಪ್ರಚೋದಿತ ದಾಳಿಗಳನ್ನು ಏಪ್ರಿಲ್ 24ರ ರಾತ್ರಿಯಿಂದ ಆರಂಭಿಸಿತ್ತು., ಮೊದಲಿಗೆ ಉತ್ತರ ಕಾಶ್ಮೀರದ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಸಣ್ಣ ಶಸ್ತ್ರಾಸ್ತ್ರ ದಾಳಿಗಳೊಂದಿಗೆ ಆರಂಭವಾದ ಈ ದಾಳಿಯು ನಂತರ ಪೂಂಚ್ ವಲಯಕ್ಕೆ ಮತ್ತು ನಂತರ ಜಮ್ಮು ವಲಯದ ಅಖ್ನೂರ್ ವಲಯಕ್ಕೆ ವಿಸ್ತರಿಸಿದೆ. ಇದಾದ ಬಳಿಕ, ರಜೌರಿ ಜಿಲ್ಲೆಯ ಸುಂದರ್ಬನಿ ಮತ್ತು ನೌಶೇರಾ ವಲಯಗಳಲ್ಲಿ ಹಾಗೂ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದಲ್ಲಿ ದಾಳಿಗಳು ನಡೆದಿವೆ.
ಶಾಂತಿ ಒಪ್ಪಂದದ ಉಲ್ಲಂಘನೆ
2021ರ ಫೆಬ್ರವರಿ 25ರಂದು ಭಾರತ ಮತ್ತು ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿ ಒಪ್ಪಂದ ಜಾರಿಗೊಳಿಸಿದ್ದವು. ಈ ಒಪ್ಪಂದದ ಬಳಿಕ ಗಡಿಯಲ್ಲಿ ಶಾಂತಿ ಉಲ್ಲಂಘನೆ ವಿರಳವಾಗಿದ್ದವು. ಆದರೆ, ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನವು ಮತ್ತೊಮ್ಮೆ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿಸಲು ಆರಂಭಿಸಿದೆ.
ರೇಂಜರ್ ಬಂಧನ
ಈ ನಡುವೆ ಭಾರತೀಯ ಗಡಿ ಪ್ರದೇಶವನ್ನು ಮೀರಿ ಒಳಗೆ ಬಂದಿರುವ ಪಾಕಿಸ್ತಾನದ ರೇಂಜರ್ ಒಬ್ಬನನ್ನು ಭಾರತದ ಸೇನಾಪಡೆ ವಶಕ್ಕೆ ಪಡೆದಿದೆ. ಆತನನ್ನು ವಿಚಾರಣೆ ನಡೆಸಿದ್ದು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಸೇನಾಪಡೆ ಹೇಳಿದೆ.
ಏತನ್ಮಧ್ಯೆ, ಏಪ್ರಿಲ್ 23 ಪಾಕಿಸ್ತಾನ ಸೇನಾಪಡೆಯ ವಶಕ್ಕೆ ಸಿಕ್ಕಿರುವ ಬಿಎಸ್ಎಫ್ ಯೋಧ ಪೂರ್ಣಮ್ ಕುಮಾರ್ ಸಾಹು ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪಂಜಾಬ್ನ ಫಿರೋಜ್ಪುರ ವಲಯದಲ್ಲಿ ರೈತರನ್ನು ಕರೆದೊಯ್ಯುತ್ತಿದ್ದಾಗ ಸಾಹು ಆಕಸ್ಮಿಕವಾಗಿ ಅಂತರಾಷ್ಟ್ರೀಯ ಗಡಿ ದಾಟ್ಟಿದ್ದರು. ಯೋಧ ಸಾಹುನನ್ನು ಬಿಡುಗಡೆಗೊಳಿಸುವಂತೆ ಭಾರತೀಯ ಸೇನಾಪಡೆ ಕೋರಿದ್ದರೂ ಬಿಡುಗಡೆ ಮಾಡಿಲ್ಲ.
ಪಂಜಾಬ್ನ ಗಡಿಯಲ್ಲಿ ಎರಡೂ ದೇಶದ ಸೈನಿಕರು ಕಾವಲು ಕಾಯುತ್ತಿರುವಾಗ ಆಗ್ಗಾಗ್ಗೆ ಗಡಿ ದಾಟುವುದು ಸಾಮಾನ್ಯ ಸಂಗತಿ. ಇಂತಹ ಸಂದರ್ಭಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದವು. ಆದರೆ ಬಿಎಸ್ಎಫ್ ಯೋಧನನ್ನು ಬಂಧಿಸಿದ ನಂತರ ಸಭೆಗೆ ಆಹ್ವಾನಿಸಿದರೂ ಪಾಕ್ ಸಭೆಗೆ ಹಾಜರಾಗಿಲ್ಲ.
ಗಡಿಯಲ್ಲಿ ಕಟ್ಟುನಿಟ್ಟಿನ ಸೂಚನೆ
ಭಾರತ - ಪಾಕಿಸ್ತಾನದ ಗಡಿಯಲ್ಲಿ ಗಸ್ತು ತಿರುಗುವ ಜಾಗೃತರಾಗಿರುವಂತೆ ಬಿಎಸ್ಎಫ್ ಯೋಧರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಗಸ್ತು ತಿರುಗುವಾಗ ಪಾಕಿಸ್ತಾನದ ರೇಂಜರ್ಗಳು ಭಾರತದ ಯೋಧನನ್ನು ಬಂಧಿಸಿದ್ದರು. ಕರ್ತವ್ಯದಲ್ಲಿರುವಾಗ ಎಚ್ಚರಿಕೆ ವಹಿಸಲು ಎಲ್ಲಾ ಗಸ್ತು ತಂಡಗಳಿಗೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.