ವಿವಾದದ ಸುಳಿಯಲ್ಲಿ ಶಾರುಖ್​ ಖಾನ್ ಬಂಗಲೆ 'ಮನ್ನತ್'; ತಪಾಸಣೆ ನಡೆಸಿದ ಅಧಿಕಾರಿಗಳು!

ಪರಿಶೀಲನೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ , ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ, "ಯಾವುದೇ ದೂರುಗಳಿಲ್ಲ. ಎಲ್ಲಾ ಕೆಲಸಗಳು ಮಾರ್ಗಸೂಚಿಗಳ ಪ್ರಕಾರವೇ ನಡೆಯುತ್ತಿವೆ" ಎಂದು ದೃಢವಾಗಿ ಹೇಳಿದ್ದಾರೆ.;

Update: 2025-06-21 11:17 GMT

ಬಾಲಿವುಡ್‌ ಬಾದ್‌ಷಾ ಶಾರುಖ್ ಖಾನ್ ಅವರ ಮುಂಬೈನ ಐಷಾರಾಮಿ ಬಂಗಲೆ ''ಮನ್ನತ್'' ಅಕ್ರಮ ನಿರ್ಮಾಣ ಆರೋಪದ ಸುಳಿಯಲ್ಲಿ ಸಿಲುಕಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬಂಗಲೆಯನ್ನು ಪರಿಶೀಲಿಸಿದ್ದಾರೆ. ಆದಾಗ್ಯೂ, ಶಾರುಖ್ ಖಾನ್ ಅವರ ಮ್ಯಾನೇಜರ್ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ನವೀಕರಣ ಕಾರ್ಯವು ಎಲ್ಲಾ ಮಾರ್ಗಸೂಚಿಗಳ ಪ್ರಕಾರವೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

'ಟೈಮ್ಸ್ ಆಫ್ ಇಂಡಿಯಾ' ವರದಿಯ ಪ್ರಕಾರ, ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ 'ಮನ್ನತ್' ಬಂಗಲೆಯ ನವೀಕರಣ ಕಾರ್ಯದ ಸಂದರ್ಭದಲ್ಲಿ 'ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಉಲ್ಲಂಘಿಸಲಾಗಿದೆ' ಎಂಬ ದೂರಿನ ಆಧಾರದ ಮೇಲೆ ಈ ಪರಿಶೀಲನೆ ನಡೆಸಲಾಗಿದೆ. ಈ ಪ್ರದೇಶವು ಕರಾವಳಿ ತೀರಕ್ಕೆ ಹತ್ತಿರವಿರುವುದರಿಂದ ನಿರ್ಮಾಣ ಕಾರ್ಯಗಳಿಗೆ ಕಟ್ಟುನಿಟ್ಟಾದ ನಿಯಮಗಳಿವೆ.

ಸಾವಿರಾರು ಕೋಟಿ ಮೌಲ್ಯದ ಈ ಆಸ್ತಿಯ ಸುತ್ತ ಕಟ್ಟೆಚ್ಚರ ವಹಿಸಲಾಗಿತ್ತು. ಪರಿಶೀಲನೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ , ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ, "ಯಾವುದೇ ದೂರುಗಳಿಲ್ಲ. ಎಲ್ಲಾ ಕೆಲಸಗಳು ಮಾರ್ಗಸೂಚಿಗಳ ಪ್ರಕಾರವೇ ನಡೆಯುತ್ತಿವೆ" ಎಂದು ದೃಢವಾಗಿ ಹೇಳಿದ್ದಾರೆ.

'ವರದಿ ಸಲ್ಲಿಕೆಗೆ ಅರಣ್ಯ ಇಲಾಖೆ ಸಿದ್ಧತೆ'

ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, "ನವೀಕರಣ ಅನುಮತಿಗಳ ಕುರಿತು ನಮಗೆ ದೂರು ಬಂದಿತ್ತು. ಅದರ ಆಧಾರದ ಮೇಲೆ ನಮ್ಮ ತಂಡವು ಸ್ಥಳ ಪರಿಶೀಲನೆ ನಡೆಸಿದೆ. ಕಂಡುಬಂದ ಅಂಶಗಳ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಿ ಶೀಘ್ರದಲ್ಲೇ ಸಲ್ಲಿಸಲಾಗುವುದು" ಎಂದು ತಿಳಿಸಿದರು. ಅಧಿಕಾರಿಗಳ ಪರಿಶೀಲನೆಯ ವರದಿ ಹೊರಬಿದ್ದ ನಂತರವೇ 'ಮನ್ನತ್' ಬಂಗಲೆಯಲ್ಲಿ ನಿಜಕ್ಕೂ ಯಾವುದೇ ನಿಯಮ ಉಲ್ಲಂಘನೆ ಆಗಿದೆಯೇ ಎಂಬುದು ಸ್ಪಷ್ಟವಾಗಲಿದೆ.

''ಮನ್ನತ್' ನಲ್ಲಿ ಈಗ ಶಾರುಖ್ ಕುಟುಂಬ ಇಲ್ಲ

'ಮನ್ನತ್' ಬಂಗಲೆಯಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ಶಾರುಖ್ ಖಾನ್ ಮತ್ತು ಅವರ ಕುಟುಂಬ ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ. 2001ರಲ್ಲಿ ಶಾರುಖ್ ಖಾನ್ ಖರೀದಿಸಿದ್ದ 'ಮನ್ನತ್', ಮುಂಬೈನ ಪ್ರಮುಖ 'ಪಾರಂಪರಿಕ ಕಟ್ಟಡಗಳಲ್ಲಿ' ಒಂದಾಗಿದೆ.

ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ 'ಸಂತೋಷ್ ದೌಂಡ್ಕರ್' ಅವರು, ಆರು ಅಂತಸ್ತಿನ 'ಮನ್ನತ್' ಬಂಗಲೆಗೆ ಇನ್ನೂ ಎರಡು ಮಹಡಿಗಳನ್ನು ಸೇರಿಸಲು ಶಾರುಖ್ ಅವರಿಗೆ ನೀಡಿದ CRZ ಅನುಮತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂತಹ ದೂರುಗಳು ಮತ್ತು ಈಗಿನ ಅಧಿಕಾರಿಗಳ ಪರಿಶೀಲನೆ, 'ಮನ್ನತ್' ಬಂಗಲೆಯ ಕಾನೂನುಬದ್ಧತೆಯ ಕುರಿತು ಮತ್ತಷ್ಟು ಚರ್ಚೆಗೆ ನಾಂದಿ ಹಾಡಿದೆ.

Tags:    

Similar News