ಪ್ರಾಂಶುಪಾಲನಿಂದ 1ನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ ಯತ್ನ, ಕೊಲೆ

Update: 2024-09-24 09:03 GMT

ಪ್ರತಿದಿನ ತನ್ನೊಡನೆ ಶಾಲೆಗೆ ಬರುತ್ತಿದ್ದ ಆರು ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಪ್ರಾಂಶುಪಾಲ, ಆನಂತರ ಆಕೆಯನ್ನು ಕೊಂದ ಘಟನೆ ಗುಜರಾತಿನ ದಾಹೋದ್ ಜಿಲ್ಲೆಯಲ್ಲಿ ನಡೆದಿದೆ.

ಪೋಲೀಸರ ಪ್ರಕಾರ, ಪ್ರಾಂಶುಪಾಲ ಗೋವಿಂದ್ ನಟ್(55) ಬಾಲಕಿಯನ್ನು ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ.ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿ, ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ಶವವನ್ನು ಶಾಲೆ ಕಾಂಪೌಂಡ್‌ನಲ್ಲಿ ಹಾಗೂ ಆಕೆಯ ಬ್ಯಾಗ್- ಶೂಗಳನ್ನು ತರಗತಿ ಬಳಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಶವ ಪತ್ತೆ: ಗುರುವಾರ ಸಂಜೆ ಶಾಲೆ ಆವರಣದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ 10 ತಂಡಗಳನ್ನು ರಚಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಮಗಳು ಪ್ರಾಂಶುಪಾಲನೊಂದಿಗೆ ಪ್ರತಿದಿನ ಶಾಲೆಗೆ ಹೋಗುತ್ತಿದ್ದಳು ಎಂದು ಬಾಲಕಿಯ ತಾಯಿ ಪೊಲೀಸರಿಗೆ ತಿಳಿಸಿದ್ದರು. 

ಬಾಲಕಿಯನ್ನು ಶಾಲೆ ಗೇಟ್ ಬಳಿ ಇಳಿಸಿ ಬೇರೆ ಕೆಲಸದ ನಿಮಿತ್ತ ಹೊರಟು ಹೋಗಿದ್ದೆ. ನಂತರ ಆಕೆಯನ್ನು ನೋಡಿಲ್ಲ ಎಂದು ಪ್ರಾಂಶುಪಾಲ ಪೊಲೀಸರಿಗೆ ತಿಳಿಸಿದ್ದ. ಆದರೆ, ಪೊಲೀಸರು ಆತನ ಮೊಬೈಲ್‌ ಆ ಸಮಯದಲ್ಲಿ ಎಲ್ಲಿತ್ತು ಎಂದು ಪರಿಶೀಲಿಸಿದಾಗ, ಆತ ಅಂದು ಶಾಲೆಗೆ ತಡವಾಗಿ ಬಂದಿದ್ದು ಪತ್ತೆಯಾಯಿತು. ವಿಚಾರಣೆಗೆ ಒಳಪಡಿಸಿದಾಗ, ತಪ್ಪು ಒಪ್ಪಿಕೊಂಡಿದ್ದಾನೆ. 

ಬೆಳಗ್ಗೆ 10.20ರ ಸುಮಾರಿಗೆ ಬಾಲಕಿಯನ್ನು ಮನೆಯಿಂದ ಕರೆದುಕೊಂಡು ಬಂದಿದ್ದಆತ, ದಾರಿ ಮಧ್ಯೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಬಾಲಕಿ ಕಿರುಚಾಡಲು ಆರಂಭಿಸಿದಾಗ, ಉಸಿರುಗಟ್ಟಿಸಿ ಕೊಂದಿದ್ದಾನೆ. ಬಾಲಕಿ ದೇಹವನ್ನು ಕಾರಿನಲ್ಲೇ ಬಿಟ್ಟು, ಸಂಜೆ 5 ಗಂಟೆ ಸುಮಾರಿಗೆ ಶವವನ್ನು ಶಾಲೆ ಕಟ್ಟಡದ ಹಿಂಭಾಗ ಹಾಗೂ ಶಾಲಾ ಬ್ಯಾಗ್- ಶೂಗಳನ್ನು ತರಗತಿಯ ಹೊರಗೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲು: ನಟ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೊ ಕಾಯ್ದೆ ಪ್ರಕರಣ ದಾಖಲಿಸಲಾಗಿದೆ.

ರಾಜ್ಯ ಶಿಕ್ಷಣ ಸಚಿವ ಕುಬೇರ್ ದಿಂಡೋರ್, ಇದೊಂದು ನಾಚಿಕೆಗೇಡು ಘಟನೆ ಎಂದು ಹೇಳಿದ್ದಾರೆ. ʻಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಇಂಥ ಅಪರಾಧಗಳು ಪುನರಾವರ್ತನೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ,ʼ ಎಂದಿದ್ದಾರೆ.

Tags:    

Similar News