ಫರಿದಾಬಾದ್ ಸ್ಫೋಟಕ ಜಪ್ತಿ ಪ್ರಕರಣ: ಪೊಲೀಸ್ ಠಾಣೆಯಲ್ಲೇ ಬಾಂಬ್ ಸ್ಫೋಟ, 6 ಸಾವು, 27 ಮಂದಿಗೆ ಗಾಯ
ಶುಕ್ರವಾರ ತಡರಾತ್ರಿ ಈ ಸ್ಫೋಟ ಸಂಭವಿಸಿದ್ದು, ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಪೊಲೀಸ್ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಾಗಿದ್ದಾರೆ.
ನವದೆಹಲಿಯ ಕೆಂಪು ಕೋಟೆ ಬಳಿ ಇತ್ತೀಚೆಗೆ ಸಂಭವಿಸಿದ ಸ್ಫೋಟದಲ್ಲಿ 12 ಜನರು ಮೃತಪಟ್ಟಿದ್ದರು.
ಹರಿಯಾಣದ ಫರಿದಾಬಾದ್ನಲ್ಲಿ ಇತ್ತೀಚೆಗೆ ವಶಪಡಿಸಿಕೊಂಡಿದ್ದ ಭಾರೀ ಪ್ರಮಾಣದ ಸ್ಫೋಟಕಗಳನ್ನು ನಿರ್ವಹಿಸುವಾಗ ಆಕಸ್ಮಿಕವಾಗಿ ಸಂಭವಿಸಿದ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟು, 27 ಜನರು ಗಾಯಗೊಂಡಿರುವ ಘಟನೆ ಶ್ರೀನಗರದ ಹೊರವಲಯದಲ್ಲಿರುವ ನೌಗಾಮ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. 'ವೈಟ್-ಕಾಲರ್' ಉಗ್ರರ ಜಾಲಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಸ್ಫೋಟಕಗಳ ಮಾದರಿ ಸಂಗ್ರಹಿಸುವಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಯಾಂಪಲ್ ಸಂಗ್ರಹ ವೇಳೆ ದುರಂತ
ಶುಕ್ರವಾರ ತಡರಾತ್ರಿ ಈ ಸ್ಫೋಟ ಸಂಭವಿಸಿದ್ದು, ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಪೊಲೀಸ್ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಾಗಿದ್ದಾರೆ. ಬಂಧಿತ ವೈದ್ಯ ಮುಜಮ್ಮಿಲ್ ಗನೈಯ ಬಾಡಿಗೆ ಮನೆಯಿಂದ ವಶಪಡಿಸಿಕೊಳ್ಳಲಾಗಿದ್ದ 360 ಕೆ.ಜಿ. ಸ್ಫೋಟಕಗಳ ಭಾಗ ಇದಾಗಿತ್ತು. ತನಿಖೆಗಾಗಿ ಇದರ ಮಾದರಿಗಳನ್ನು ಸಂಗ್ರಹಿಸುವಾಗ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳದಿಂದ ಆರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಗಾಯಗೊಂಡ 24 ಪೊಲೀಸ್ ಸಿಬ್ಬಂದಿ ಹಾಗೂ ಮೂವರು ನಾಗರಿಕರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸರಣಿ ಸ್ಫೋಟಗಳಿಂದ ರಕ್ಷಣೆಗೆ ಅಡ್ಡಿ
ಭಾರೀ ಸ್ಫೋಟದ ಸದ್ದು ರಾತ್ರಿಯಿಡೀ ಆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿತ್ತು. ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆಯ ಕಟ್ಟಡಕ್ಕೆ ಹಾನಿಯಾಗಿದೆ. ಮುಖ್ಯ ಸ್ಫೋಟದ ನಂತರವೂ ಸಣ್ಣ ಪ್ರಮಾಣದ ಸರಣಿ ಸ್ಫೋಟಗಳು ಸಂಭವಿಸುತ್ತಲೇ ಇದ್ದುದರಿಂದ, ಬಾಂಬ್ ನಿಷ್ಕ್ರಿಯ ದಳಕ್ಕೆ ತಕ್ಷಣದ ರಕ್ಷಣಾ ಕಾರ್ಯಾಚರಣೆ ನಡೆಸಲು ಅಡ್ಡಿಯಾಯಿತು. ವಶಪಡಿಸಿಕೊಂಡಿದ್ದ ಸ್ಫೋಟಕಗಳಲ್ಲಿ ಕೆಲವನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇರಿಸಲಾಗಿದ್ದರೆ, 360 ಕೆ.ಜಿ.ಯ ಬಹುದೊಡ್ಡ ಭಾಗವನ್ನು ಪ್ರಕರಣ ದಾಖಲಾಗಿದ್ದ ನೌಗಾಮ್ ಪೊಲೀಸ್ ಠಾಣೆಯಲ್ಲೇ ಸಂಗ್ರಹಿಸಿಡಲಾಗಿತ್ತು.
ತನಿಖೆಯ ಹಿನ್ನೆಲೆ
ಅಕ್ಟೋಬರ್ ಮಧ್ಯದಲ್ಲಿ ನೌಗಾಮ್ನ ಬುನ್ಪೋರಾ ಪ್ರದೇಶದ ಗೋಡೆಗಳ ಮೇಲೆ ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಬೆದರಿಕೆ ಹಾಕುವ ಪೋಸ್ಟರ್ಗಳು ಕಾಣಿಸಿಕೊಂಡ ನಂತರ ಈ ಸಂಪೂರ್ಣ ಷಡ್ಯಂತ್ರ ಬೆಳಕಿಗೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಶ್ರೀನಗರ ಪೊಲೀಸರು ಅಕ್ಟೋಬರ್ 19ರಂದು ಪ್ರಕರಣ ದಾಖಲಿಸಿ, ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಪೋಸ್ಟರ್ ಅಂಟಿಸುತ್ತಿದ್ದ ಮೂವರು ಶಂಕಿತರಾದ ಆರಿಫ್ ನಿಸಾರ್ ದಾರ್, ಯಾಸಿರ್-ಉಲ್-ಅಶ್ರಫ್ ಮತ್ತು ಮಕ್ಸೂದ್ ಅಹ್ಮದ್ ದಾರ್ ಅವರನ್ನು ಬಂಧಿಸಲಾಗಿತ್ತು.
ಅವರ ವಿಚಾರಣೆ ವೇಳೆ, ಈ ಪೋಸ್ಟರ್ಗಳನ್ನು ಪೂರೈಸಿದ್ದ ಶೋಪಿಯಾನ್ನ ಮೌಲ್ವಿ ಇರ್ಫಾನ್ ಅಹ್ಮದ್ನನ್ನು ಬಂಧಿಸಲಾಯಿತು. ಈತ ವೈದ್ಯಕೀಯ ಸಮುದಾಯದೊಂದಿಗೆ ಸುಲಭವಾಗಿ ಬೆರೆತು ವೈದ್ಯರನ್ನು ಮೂಲಭೂತವಾದದತ್ತ ಸೆಳೆಯುತ್ತಿದ್ದ ಎಂದು ನಂಬಲಾಗಿದೆ. ಈ ಜಾಡು ಹಿಡಿದು ಫರಿದಾಬಾದ್ನ ಅಲ್ ಫಲಾಹ್ ವಿಶ್ವವಿದ್ಯಾಲಯದವರೆಗೂ ತಲುಪಿದ ತನಿಖಾ ತಂಡ, ಡಾ. ಮುಜಮ್ಮಿಲ್ ಅಹ್ಮದ್ ಗನೈ ಮತ್ತು ಡಾ. ಶಹೀನ್ ಸಯೀದ್ ಅವರನ್ನು ಬಂಧಿಸಿತ್ತು. ಇದೇ ವೇಳೆ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಸಲ್ಫರ್ ಸೇರಿದಂತೆ ಅಪಾರ ಪ್ರಮಾಣದ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.