ಭೂಪೇಶ್‌ ಬಘೇಲ್‌ ವಿರುದ್ಧ ‘ಸುಳ್ಳು’ ಪ್ರಕರಣ: ಕಾಂಗ್ರೆಸ್‌

ಛತ್ತೀಸ್‌ಗಢದ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಪ್ರಕರಣ ರದ್ದು

Update: 2024-04-10 13:30 GMT

ಛತ್ತೀಸ್‌ಗಢದ ಮದ್ಯ ಹಗರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಮತ್ತು ಅವರ ಪುತ್ರನ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಮಾಜಿ ಮುಖ್ಯಮಂತ್ರಿ ಭೂಪೇಶ್ ಅವರನ್ನು ಸಿಲುಕಿಸಲು ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ʻನಾಚಿಕೆಯಿಲ್ಲದೆʼ ಸುಳ್ಳು ಹೇಳಿದೆ. ಇಡೀ ಪ್ರಕರಣ ʻರಾಜಕೀಯ ಪ್ರೇರಿತʼ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ದೂರಿದ್ದಾರೆ. 

ʻರಾಜಕಾರಣಿಗಳನ್ನು ಬೇಟೆಯಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಬಳಸುತ್ತಿದ್ದಾರೆ. ರಾಜಕಾರಣಿಗಳನ್ನು ಶುದ್ಧೀಕರಿಸಲು ಬಿಜೆಪಿ ʻವಾಷಿಂಗ್ ಮಷಿನ್ʼ ಬಳಸುತ್ತಿದ್ದು, ಭ್ರಷ್ಟಾಚಾರ ವಿರೋಧಿ ಚಳವಳಿಗಳು ಮತ್ತು ಉಪಕ್ರಮಗಳನ್ನು ನಾಶಪಡಿಸಿದೆʼ ಎಂದು ರಮೇಶ್ ದೂರಿದರು. 

ಅಪರಾಧದ ಆದಾಯವಿಲ್ಲ: ಮಾಜಿ ಐಎಎಸ್‌ ಅಧಿಕಾರಿ ಅನಿಲ್ ತುತೇಜಾ ಮತ್ತು ಅವರ ಮಗ ಯಶ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ, ʻಅವರ ವಿರುದ್ಧ ಯಾವುದೇ ಪೂರ್ವನಿಯೋಜಿತ ಅಪರಾಧ ಅಸ್ತಿತ್ವದಲ್ಲಿಲ್ಲ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಯಾವುದೇ ಅಪರಾಧ ಮಾಡಿ ಲ್ಲ. ಪಿಎಂ ಎಲ್‌ಎಯ ಷರತ್ತು 2 (ಯು) ಅಡಿ ವ್ಯಾಖ್ಯಾನಿಸಿದಂತೆ, ಅಪರಾಧದ ಆದಾಯವಿಲ್ಲದಿದ್ದರೆ, ಅಪರಾಧ ಆಗುವುದಿಲ್ಲʼ ಎಂದು ಪೀಠ ಹೇಳಿದೆ.

ದೂರು ರದ್ದು: ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ರಾಜಕಾರಣಿಗಳು, ಖಾಸಗಿ ವ್ಯಕ್ತಿಗಳು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳ ಕ್ರಿಮಿನಲ್ ಸಿಂಡಿಕೇಟ್ 2019 ರಿಂದ 2022 ರವರೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಮೂಲಕ 2,161 ಕೋಟಿ ರೂ. ಗಳಿಸಿದೆ.

ಮಾಜಿ ಐಎಎಸ್ ಅಧಿಕಾರಿ ಅನಿಲ್ ತುತೇಜಾ ಮತ್ತು ಅವರ ಮಗ ಯಶ್ ಈ ಸಿಂಡಿಕೇಟ್‌ನ ʻಕಿಂಗ್‌ಪಿನ್‌ಗಳುʼ. ಬೂಪೇಶ್‌ ಬಘೇಲ್‌ ಈ ಸಿಂಡಿಕೇಟ್‌ ಭಾಗವಾಗಿದ್ದರು ಎಂದು ಬಿಜೆಪಿ ಸುಳ್ಳು ಸುದ್ದಿ ಹರಡಿತ್ತುʼ ಎಂದು ರಮೇಶ್‌ ಹೇಳಿದರು.

ʻಭ್ರಷ್ಟಾಚಾರದ ಎಲ್ಲಾ ಆರೋಪಗಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕರಣಗಳು ಹೆಚ್ಚಾಗಿ ರಾಜಕೀಯವಾಗಿ ಮಾರ್ಪಟ್ಟಿವೆʼ ಎಂದು ರಮೇಶ್ ಆರೋಪಿಸಿದರು.

Tags:    

Similar News