ಬಾರಾಬಂಕಿ ದೇವಸ್ಥಾನದಲ್ಲಿ ನೂಕುನುಗ್ಗಲಿಗೆ ಇಬ್ಬರು ಬಲಿ

ದುರ್ಘಟನೆಯಲ್ಲಿ 22 ವರ್ಷದ ಪ್ರಶಾಂತ್ ಮತ್ತು 30 ವರ್ಷದ ಇನ್ನೊಬ್ಬ ಭಕ್ತ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.;

Update: 2025-07-28 05:29 GMT

ಉತ್ತರ ಪ್ರದೇಶದ ಬಾರಾಬಂಕಿಯ ಅವಸಾನೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದ ಪೂಜೆಯ ವೇಳೆ ಸಂಭವಿಸಿದ ಭೀಕರ ದುರಂತದಲ್ಲಿ ಇಬ್ಬರು ಭಕ್ತರು ಮೃತಪಟ್ಟು, 32ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೋತಿಗಳು ತುಂಡರಿಸಿದ ವಿದ್ಯುತ್ ತಂತಿಯು ತಗಡಿನ ಶೆಡ್ ಮೇಲೆ ಬಿದ್ದಾಗ ವಿದ್ಯುತ್ ಪ್ರವಹಿಸಿ, ಭಕ್ತರಲ್ಲಿ ಉಂಟಾದ ಆತಂಕವು ನೂಕುನುಗ್ಗಲಿಗೆ ಕಾರಣವಾಯಿತು.

ಶ್ರಾವಣ ಮಾಸದ ಅಂಗವಾಗಿ, 'ಜಲಾಭಿಷೇಕ'ಕ್ಕಾಗಿ ಸಾವಿರಾರು ಭಕ್ತರು ದೇವಸ್ಥಾನದಲ್ಲಿ ಸೇರಿದ್ದಾಗ ಈ ಘಟನೆ ನಡೆದಿದೆ. ದೇವಸ್ಥಾನದ ಆವರಣದಲ್ಲಿದ್ದ ಕೋತಿಗಳ ಚೇಷ್ಟೆಯಿಂದ ವಿದ್ಯುತ್ ತಂತಿ ತುಂಡಾಗಿ, ಭಕ್ತರು ನಿಂತಿದ್ದ ಶೆಡ್ ಮೇಲೆ ಬಿದ್ದಿದೆ. ಶೆಡ್‌ಗೆ ವಿದ್ಯುತ್ ಪ್ರವಹಿಸುತ್ತಿದ್ದಂತೆ ಭೀತಿಗೊಂಡ ಜನರು ಪ್ರಾಣ ಉಳಿಸಿಕೊಳ್ಳಲು ಓಡಲು ಯತ್ನಿಸಿದ್ದು, ಈ ವೇಳೆ ನೂಕುನುಗ್ಗಲು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರ್ಘಟನೆಯಲ್ಲಿ 22 ವರ್ಷದ ಪ್ರಶಾಂತ್ ಮತ್ತು 30 ವರ್ಷದ ಇನ್ನೊಬ್ಬ ಭಕ್ತ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. 

Tags:    

Similar News