Badlapur sexual abuse| ಆ.24ರಂದು ಬಂದ್‌ ಕರೆ ನೀಡಿದ ಎಂವಿಎ

ಸ್ಥಳೀಯ ನ್ಯಾಯಾಲಯವು ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 26 ರವರೆಗೆ ವಿಸ್ತರಿಸಿದೆ.ಆರೋಪಿ ಅಕ್ಷಯ್ ಶಿಂಧೆ ಪರ ವಾದಿಸುವುದಿಲ್ಲ ಎಂದು ಕಲ್ಯಾಣ್ ಬಾರ್ ಅಸೋಸಿಯೇಷನ್‌ನ ವಕೀಲರು ಹೇಳಿದ್ದಾರೆ.

Update: 2024-08-21 10:51 GMT
ಬದ್ಲಾಪುರದ ಲೈಂಗಿಕ ದೌರ್ಜನ್ಯ ಪ್ರಕರಣದ ವಿರುದ್ಧ ಶಿವಸೇನೆ (ಯುಬಿಟಿ) ಕಾರ್ಯಕರ್ತರು ಮುಂಬೈನಲ್ಲಿ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ ಪಟ್ಟಣದ ಶಾಲೆಯ ಲೈಂಗಿಕ ದೌರ್ಜನ್ಯದ ಆರೋಪಿ ಅಕ್ಷಯ್ ಶಿಂಧೆ ಪರ ವಾದಿಸುವುದಿಲ್ಲ ಎಂದು ಕಲ್ಯಾಣ್ ಬಾರ್ ಅಸೋಸಿಯೇಷನ್‌ನ ವಕೀಲರು ಹೇಳಿದ್ದಾರೆ.

ಸ್ಥಳೀಯ ನ್ಯಾಯಾಲಯವು ಬುಧವಾರ (ಆಗಸ್ಟ್ 21) ಆರೋಪಿಯ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 26 ರವರೆಗೆ ವಿಸ್ತರಿಸಿದೆ. ಆರೋಪಿಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬುಧವಾರ ಬೆಳಗ್ಗೆ ಕಲ್ಯಾಣ್‌ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆಗಸ್ಟ್ 26 ರವರೆಗೆ ಆರೋಪಿಯ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿದೆ. 

ಆಗಸ್ಟ್ 24 ರಂದು ಮಹಾರಾಷ್ಟ್ರ ಬಂದ್‌: ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ ಒಳಗೊಂಡ ಮಹಾ ವಿಕಾಸ್ ಅಘಾಡಿ, ಆಗಸ್ಟ್ 24 ರಂದು ಬಂದ್‌ಗೆ ಕರೆ ನೀಡಿದೆ. ಮಿತ್ರಪಕ್ಷಗಳ ಸಭೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಡೆಟ್ಟಿವಾರ್ ಹೇಳಿದ್ದಾರೆ. 

ʻರಾಜ್ಯದಲ್ಲಿ ಮಹಿಳಾ ಭದ್ರತೆ ಮತ್ತು ಎಲ್ಲಾ ರಂಗಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ವೈಫಲ್ಯದ ಬಗ್ಗೆ ಚರ್ಚಿಸಿದ್ದೇವೆ,ʼ ಎಂದು ಹೇಳಿದರು. 

ಕಾಂಗ್ರೆಸ್ ಪ್ರತಿಭಟನೆ: ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ವರ್ಷಾ ಗಾಯಕ್ವಾಡ್ ಅವರು ರಾಜ್ಯ ಸಚಿವಾಲಯದ ಮಂತ್ರಾಲಯದ ಹೊರಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ವಡೆಟ್ಟಿವಾರ್ ಮತ್ತು ಕೆಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಎಫ್‌ಐಆರ್ ದಾಖಲಿಸುವಲ್ಲಿನ ವಿಳಂಬಕ್ಕೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಪರಾಧ ಮುಚ್ಚಲು ಶಾಲೆ ಪ್ರಯತ್ನ: ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಸುಸಿಬೆನ್ ಶಾ ಬುಧವಾರ ಮಾತನಾಡಿ, ಬದ್ಲಾಪುರದ ಶಾಲೆ ಬಾಲಕಿಯರ ಪೋಷಕರಿಗೆ ಪೊಲೀಸ್ ದೂರು ನೀಡಲು ಸಹಾಯ ಮಾಡುವ ಬದಲು, ಅದನ್ನು ಮುಚ್ಚಿಡಲು ಪ್ರಯತ್ನಿಸಿತು. ಇದು ಪೋಕ್ಸೊ ಕಾಯಿದೆಯಡಿಯಲ್ಲಿ ಸ್ಪಷ್ಟವಾದ ಪ್ರಕರಣವಾಗಿದೆ ಎಂದು ಶಾ ಹೇಳಿದರು. 

ಶಾಲೆಯ ಆಡಳಿತ ಮಂಡಳಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಬದ್ಲಾಪುರದ ಅವ್ಯವಸ್ಥೆಯನ್ನು ತಪ್ಪಿಸಬಹುದಿತ್ತು. ಪೋಷಕರನ್ನು 11 ಗಂಟೆ ಕಾಲ ಕಾಯುವಂತೆ ಮಾಡಿದ್ದರಿಂದ ಸಮಸ್ಯೆ ಉದ್ಭವಿಸಿತು ಎಂದು ಶಾ ಹೇಳಿದರು. 

Tags:    

Similar News