AAP Student Organization | ಆಪ್ ವಿದ್ಯಾರ್ಥಿ ಸಂಘಟನೆಗೆ ಹೊಸ ರೂಪ; ಯುವ ನಾಯಕರ ನಿರಾಸಕ್ತಿ
ವಿದ್ಯಾರ್ಥಿ ಘಟಕಕ್ಕೆ ಹೊಸ ರೂಪ ನೀಡಲು ಆಪ್ ಚಿಂತನೆ ನಡೆಸಿದೆ. ಆದರೆ ಅನೇಕ ಯುವ ಸದಸ್ಯರಿಗೆ ಇದು ಪಥ್ಯವಾಗಿಲ್ಲ. ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.;
ಮೇ 20 ರಂದು ಆಮ್ ಆದ್ಮಿ ಪಾರ್ಟಿ (ಎಎಪಿ) ದೆಹಲಿಯ ಕಾನ್-ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಪರ್ಯಾಯ ರಾಜಕೀಯಕ್ಕಾಗಿ ವಿದ್ಯಾರ್ಥಿ ಸಂಘಟನೆ (ಎಎಸ್ಎಪಿ)ಯನ್ನು ಹುಟ್ಟುಹಾಕುವುದು ಅದರ ಉದ್ದೇಶವಾಗಿತ್ತು.
ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮತ್ತು ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ ಅವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅದೇ ದಿನ ಅರವಿಂದ್ ಕೇಜ್ರಿವಾಲ್ ಅವರು ಒಂದು ಎಕ್ಸ್ ಪೋಸ್ಟ್ ಕೂಡ ಹಾಕಿದ್ದರು: “ಎಎಸ್ಎಪಿ ವಿದ್ಯಾರ್ಥಿ ರಾಜಕೀಯಕ್ಕೆ ಹೊಸ ದಿಕ್ಕನ್ನು ನೀಡುವುದು ಮಾತ್ರವಲ್ಲದೆ ಪರ್ಯಾಯ ರಾಜಕೀಯಕ್ಕೆ ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ. ಇದರ ಮೂಲಕ ನಾವು ರಾಜಕೀಯದ ವ್ಯಾಖ್ಯಾನವನ್ನು ಬದಲಿಸುವ ಹಾಗೂ ದೇಶಕ್ಕಾಗಿ ಕೆಲಸ ಮಾಡುವ ಯುವ ತಲೆಮಾರನ್ನು ಸಿದ್ಧಪಡಿಸುತ್ತೇವೆ. ಯುವಕರ ಶಕ್ತಿಯು ಈಗ ಬದಲಾವಣೆ ರಾಜಕೀಯದಲ್ಲಿ ಕೇಂದ್ರೀಕೃತವಾಗಲಿದೆ” ಎಂಬುದು ಅದರ ಉಲ್ಲೇಖವಾಗಿತ್ತು.
ಎಎಪಿ ವಿದ್ಯಾರ್ಥಿ ಘಟಕ ಆರಂಭ ಮೊದಲಲ್ಲ
ಹಾಗಂತ ವಿದ್ಯಾರ್ಥಿ ಘಟಕವನ್ನು ಆರಂಭಿಸುತ್ತೇನೆ ಎಂಬುದು ಆಪ್ ನ ಮೊದಲ ಘೋಷಣೆಯೇನೂ ಅಲ್ಲ.
2014ರಲ್ಲಿಯೂ ಪಕ್ಷವು ಛಾತ್ರ ಯುವ ಸಂಘರ್ಷ ಸಮಿತಿ (ಸಿವೈಎಸ್ಎಸ್)ಯ ರಚನೆಯನ್ನು ಘೋಷಿಸಿತ್ತು. ಅದು ಮುಂದೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸ್ಪರ್ಧೆಗೆ ಇಳಿದಿತ್ತು. ಈಗಿನ ವಿದ್ಯಾರ್ಥಿ ಘಟಕವು ಹಿಂದಿನ ಘಟಕದ ವಿಸ್ತರಣೆಯೇ ಆಗಿರಲಿದೆ. ಆದರೆ ಈ ಬಾರಿ ನಮ್ಮ ಹೆಸರು ಮಾತ್ರ ಎಎಸ್ಎಪಿ ಆಗಿರುತ್ತದೆ ಎಂದು ಎಎಸ್ಎಪಿ ನಾಯಕರು ʼದ ಫೆಡರಲ್ʼ ಗೆ ತಿಳಿಸಿದ್ದಾರೆ.
ಆದರೆ ಈ ‘ಮರುಬ್ರಾಂಡ್’ ಕಸರತ್ತು ಪಕ್ಷದ ಕೆಲವು ವಿದ್ಯಾರ್ಥಿ ಮತ್ತು ಯುವ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸಂಘಟನೆಯ ಉದ್ಘಾಟನೆ ಮತ್ತು ಅದರ ಹೆಸರು ಬದಲಾವಣೆ ವಿಚಾರದಲ್ಲಿ ತಮಗೆ ಯಾವುದೇ ಪೂರ್ವಮಾಹಿತಿ ಇರಲಿಲ್ಲ, ಆಪ್ ಹಳೆಯ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂಬುದು ಅವರ ಆರೋಪವಾಗಿದೆ.
2014ರಲ್ಲಿ ಸಿವೈಎಸ್ಎಸ್ ಆರಂಭವಾದ ಕೆಲವೇ ದಿನಗಳ ನಂತರ ದೆಹಲಿಯಲ್ಲಿ ಆಪ್ ಗೆ ಇದ್ದ ಬೆಂಬಲದ ಅಲೆಯ ಲಾಭವನ್ನು ಬಳಸಿಕೊಳ್ಳುವ ಆಶಯದೊಂದಿಗೆ 2015ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಆಪ್ ಘೋಷಿಸಿತ್ತು.
ಆದರೆ ಫಲಿತಾಂಶ ಏನಾಯಿತು? ಸಿವೈಎಸ್ಎಸ್ ದಯನೀಯವಾಗಿ ಸೋತಿತು. ಕೆಲವು ಸ್ಥಾನಗಳಲ್ಲಿ ಅದು ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅಲ್ಲಿದ್ದ ಎಲ್ಲಾ ನಾಲ್ಕು ಸ್ಥಾನಗಳು ಎಬಿವಿಪಿ ಪಾಲಾಗಿದ್ದವು. ಎರಡು ವರ್ಷ ದೆಹಲಿ ವಿ.ವಿ. ಸ್ಪರ್ಧೆಯ ತಂಟೆಗೆ ಹೋಗದ ಸಿವೈಎಸ್ಎಸ್ ಮತ್ತೆ 2018ರಲ್ಲಿ ಸ್ಪರ್ಧೆಗೆ ಇಳಿಯಿತು. ಆಗ ಅದಕ್ಕೆ ಎಡಪಂಥೀಯ ಗುಂಪಿನ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್ಎ) ಬೆಂಬಲ ನೀಡಿತು. ಆದರೂ ಅದಕ್ಕೆ ಅಷ್ಟಾಗಿ ಯಶಸ್ಸು ದಕ್ಕಲಿಲ್ಲ.
ಈಗ ಮತ್ತೆ ಈ ವರ್ಷದ ಡಿ.ಯು.ಎಸ್.ಯು. ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಎಸ್ಎಪಿ ಘೋಷಿಸಿದೆ. “ಯಾವುದೇ ಪ್ರಜಾಸತ್ತಾತ್ಮಕ ನಿರ್ಧಾರ” ಕೈಗೊಳ್ಳದೇ ನಮ್ಮ ಮೇಲೆ ಈ ನಿರ್ಧಾರವನ್ನು ಹೇರಿಕೆ ಮಾಡಲಾಗಿದೆ ಎಂದು ಹಿಂದೆ ಸಿವೈಎಸ್ಎಸ್ ನಲ್ಲಿ ಭಾಗಿಯಾಗಿದ್ದ ನಾಯಕರು ಆರೋಪಿಸುತ್ತಾರೆ.
“ಅವರು ಸಿವೈಎಸ್ಎಸ್ ಕಾರ್ಯಕರ್ತರ ಸಭೆಯನ್ನು ಕರೆದು ಅವರೊಂದಿಗೆ ಇದನ್ನು ಚರ್ಚಿಸಿರುತ್ತಿದ್ದರೆ ಅದೊಂದು ಪ್ರಜಾಸತ್ತಾತ್ಮಕ ಕ್ರಮವಾಗುತ್ತಿತ್ತು. ಆದರೆ ಈ ನಿರ್ಧಾರವನ್ನು ಪಕ್ಷದ ನಾಯಕರು ಮಾತ್ರ ಕೈಗೊಂಡಿದ್ದಾರೆ. ನಮಗೆ ಈ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ. ಮಾಧ್ಯಮಗಳ ಮೂಲಕ ಇದನ್ನು ನಾವು ತಿಳಿದುಕೊಂಡಿದ್ದೇವೆ” ಎಂದು 2017ರಿಂದ ಸಿವೈಎಸ್ಎಸ್ ಜೊತೆಗಿದ್ದ ಮತ್ತು 2023-24ರ ಅವಧಿಯಲ್ಲಿ ದೆಹಲಿ ಉಪಾಧ್ಯಕ್ಷರಾಗಿದ್ದ ಸಾದಿಕ್ ರಾಜಾ ಹೇಳುತ್ತಾರೆ.
ಹೆಸರು ಬದಲಾವಣೆಗೆ ಅರ್ಥವಿಲ್ಲ
“ದೆಹಲಿ ಯೂನಿವರ್ಸಿಟಿಯಲ್ಲಿ ಸಿವೈಎಸ್ಎಸ್ ಪೆಹಚಾನ್ (ತನ್ನದೇ ಅಸ್ತಿತ್ವ) ಗಳಿಸಲು ಹತ್ತು ವರ್ಷಗಳು ಬೇಕಾದವು. ಅನೇಕ ವಿದ್ಯಾರ್ಥಿಗಳು ತಮ್ಮದೇ ಆದರ್ಶದಿಂದ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಕೇವಲ ಹೆಸರನ್ನು ಬದಲಿಸುವುದರಿಂದ ಏನಾಗುತ್ತದೆ? ಅದರಿಂದ ಸಂಸ್ಥೆ ಬೆಳೆಯುತ್ತದೆಯೇ? ಆಪ್ ದೆಹಲಿಯೂ ಸೇರಿದಂತೆ ಕೆಲವು ಕಡೆಗಳಲ್ಲಿ ಚುನಾವಣೆಗಳಲ್ಲಿ ಸೋಲುಂಡಿದೆ. ಈಗ ನಾವು ಇಲ್ಲಿ ಸ್ಪರ್ಧಿಸಿದರೆ ಪಕ್ಷದ ಹೆಸರನ್ನು ಬದಲಾಯಿಸುತ್ತೇವೆಯೇ? ಇವಕ್ಕೆಲ್ಲ ಅರ್ಥವಿಲ್ಲ. ಹೆಸರು ಬದಲಾಯಿಸುವುದು ಬಿಜೆಪಿಯ ಆಟ, ನಮ್ಮದಲ್ಲ” ಎಂದು ಸಾದಿಕ್ ರಾಜಾ ʼದ ಫೆಡರಲ್ʼ ಗೆ ತಿಳಿಸಿದ್ದಾರೆ.
ದೆಹಲಿಯಲ್ಲಿ ಸಿವೈಎಸ್ಎಸ್ ಮಾಧ್ಯಮದ ಹೊಣೆಯನ್ನು ಹೊತ್ತಿದ್ದ ಶಿವಾನಿ ಸಿಂಗ್ ಅವರು ಕೂಡ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಪ್ರತಿ ವರ್ಷ ಆಪ್ ಸಮನ್ವಯ ತಂಡಗಳನ್ನು ರಚಿಸುತ್ತಿತ್ತು. 2024ರಲ್ಲಿ ಅಂತಹ ಯಾವುದೇ ತಂಡದ ರಚನೆಯಾಗಿಲ್ಲ ಎಂದು ಅವರು ಹೇಳಿದರು.
“ಈ ಹಿಂದೆ ನಾವು ಕೂಡ ತಂಡವನ್ನು ರಚಿಸಿದ್ದೆವು. ಆ ತಂಡದ ಹೊಣೆಗಾರಿಕೆ ಅಥವಾ ವಿದ್ಯಾರ್ಥಿ ಘಟಕದ ಬಗ್ಗೆ ಯಾರೊಬ್ಬರೂ ಮಾತನಾಡಲಿಲ್ಲ. ಪಕ್ಷದ ಕಡೆಯಿಂದಲೂ ನಮಗೆ ಯಾವುದೇ ಮಾರ್ಗದರ್ಶನ ಸಿಗಲಿಲ್ಲ. ನಾವು ಹಲವು ಬಾರಿ ಪ್ರಯತ್ನ ನಡೆಸಿದರೂ ಅವರು ಬೆಂಬಲ ನೀಡಲಿಲ್ಲ. ಯಾವತ್ತೂ ಅವರು ವಿದ್ಯಾರ್ಥಿ ಘಟಕ ಅಥವಾ ಯುವಕರ ವಿಚಾರದಲ್ಲಿ ಗಮನವನ್ನೇ ಹರಿಸಲಿಲ್ಲ. ಈಗವರು ದೆಹಲಿ ಚುನಾವಣೆಯಲ್ಲಿ ಸೋತಿದ್ದಾರೆ. ಹಾಗಾಗಿ ಮರುಬ್ರಾಂಡಿಂಗ್ ಅಸ್ತ್ರ ಹಿಡಿದು ಬಂದಿದ್ದಾರೆ” ಎಂದು ಶಿವಾನಿ ವಿವರಿಸಿದರು.
“ಇಂತಹ ಕಸರತ್ತಿನಿಂದ ಅವರಿಗೆ ಏನೇನೂ ಲಾಭವಿಲ್ಲ. ಕನಿಷ್ಠ ಕೆಲವು ವಿದ್ಯಾರ್ಥಿಗಳಿಗಾದರೂ ಸಿವೈಎಸ್ಎಸ್ ಬಗ್ಗೆ ತಿಳಿದಿದೆ. ಹೀಗೆ ಮಾಡಿದರೆ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ, ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ” ಎಂದು ಅವರು ಹೇಳಿದರು.
ಪಂಜಾಬ್ ಬಿಟ್ಟರೆ ಬೇರೆಲ್ಲೂ ಯಶಸ್ಸಿಲ್ಲ
ಸಿವೈಎಸ್ಎಸ್ ದೆಹಲಿಯಲ್ಲಿ ಮಾತ್ರ ಸ್ಪರ್ಧಿಸಲಿಲ್ಲ, ಬದಲಾಗಿ ದೇಶದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸ್ಪರ್ಧಿಸಿತ್ತು. ಪಂಜಾಬ್ ವಿವಿ ಬಿಟ್ಟರೆ ಬೇರೆ ಎಲ್ಲೂ ಅದಕ್ಕೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಅಲ್ಲಿ ಅದು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿತ್ತು. ದೆಹಲಿಯ ಹೊರಗಿನವರೂ ಕೂಡ ಸಂಘಟನೆಗೆ ಹೊಸ ಹೆಸರಿಡುವ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.
“ಅನೇಕರಿಗೆ ಸಿವೈಎಸ್ಎಸ್ ಬಗ್ಗೆ ತಿಳಿದಿರಲಿಲ್ಲ. ಈಗಲೂ ಅನೇಕರಿಗೆ ತಿಳಿದಿಲ್ಲ. 2022ರಲ್ಲಿ ನಾನು ಚುನಾವಣೆಗೆ ನಿಂತಾಗ ಕೆಲವು ಸವಾಲುಗಳ ಹೊರತಾಗಿಯೂ ನಮಗೆ ಸೀಮಿತ ಅವಕಾಶಗಳು ಕಾಣಲು ಸಾಧ್ಯವಾಗಿದ್ದವು. ಪಕ್ಷ ಇದರ ಹೆಸರನ್ನು ಬದಲಿಸಲು ಹೊರಟಿದೆ ಎಂಬುದು ಈಗಷ್ಟೇ ಗೊತ್ತಾಗಿದೆ. ನಾವೆಲ್ಲ ಇಷ್ಟೂ ವರ್ಷ ಸಿವೈಎಸ್ಎಸ್ ಜೊತೆಗೆ ಕನೆಕ್ಟ್ ಆಗಿದ್ದೇವೆ. ನಮಗೆ ಯಶಸ್ಸು ಸಿಗಲಿಲ್ಲ ಎನ್ನುವ ಕಾರಣಕ್ಕೆ ಹೆಸರು ಬದಲಿಸುತ್ತಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಇದು ಯಾರೋ ಜೋತಿಷ್ಯ ನುಡಿದಂತೆ ಭಾಸವಾಗುತ್ತದೆ” ಎಂದು 2022ರಲ್ಲಿ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಸಿವೈಎಸ್ಎಸ್ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿದ್ದ ಮುನ್ಮುನ್ ಕುಮಾರಿ ಹೇಳುತ್ತಾರೆ. ಪಾಟ್ನಾದಲ್ಲಿಯೂ ಸಿವೈಎಸ್ಎಸ್ ಸೋತಿತ್ತು.
“ಹೆಸರು ಬದಲಾವಣೆ ಬಗ್ಗೆ ನಮ್ಮನ್ನೇನೂ ಕೇಳಲಾಗಿಲ್ಲ. ಮಾಹಿತಿ ನೀಡಲಾಗಿದೆಯಷ್ಟೇ” ಎಂದು ಪಂಜಾಬ್ ವಿಶ್ವವಿದ್ಯಾಯಲದ ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಸಿವೈಎಸ್ಎಸ್ ನಾಯಕರೊಬ್ಬರು ಹೇಳಿದ್ದಾರೆ.
“ಸಿವೈಎಸ್ಎಸ್ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಮಾತ್ರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತು. ನಾವಿಲ್ಲಿ ನಿಜಕ್ಕೂ ಕಠಿಣವಾದ ಸಂಘಟನೆಯನ್ನು ಹೊಂದಿದ್ದೇವೆ. ನಾವು ವಿದ್ಯಾರ್ಥಿಗಳ ಜೊತೆ ಸೇರಿಕೊಂಡು ಕೆಲಸಮಾಡಿದ್ದೇವೆ. ನಮಗೆ 2500ದಿಂದ 3000 ಮತಗಳು ಬರುತ್ತಿದ್ದವು. ಚುನಾವಣೆಯಲ್ಲಿ ಮೊದಲ ಅಥವಾ ಎರಡನೇ ಸ್ಥಾನ ಖಾತ್ರಿಯಾಗಿತ್ತು. ನಾವಿಲ್ಲಿ ಸಿವೈಎಸ್ಎಸ್ ಗೆ ಅದರದೇ ಆದ ಅಸ್ತಿತ್ವವನ್ನು ತಂದುಕೊಟ್ಟಿದ್ದೇವೆ. ಈಗ ಸುಮ್ಮನೇ ರಾಜಕೀಯ ಕಾರಣವನ್ನು ಮುಂದಿಟ್ಟುಕೊಂಡು ಹೆಸರು ಬದಲಿಸುವುದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ” ಎಂದು ಅವರು ಹೇಳುತ್ತಾರೆ.
ಗಂಭೀರವಾಗಿ ಪರಿಗಣಿಸಬೇಕು
“ವಿದ್ಯಾರ್ಥಿ ಘಟಕದ ರೂಪ ಮತ್ತು ರಚನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಿವೈಎಸ್ಎಸ್ ಯನ್ನು ಎನ್.ಎಸ್.ಯು.ಐ ಅಥವಾ ಎಬಿವಿಪಿ ರೀತಿಯಲ್ಲಿ ಪಕ್ಷದೊಂದಿಗೆ ಸೂಕ್ತ ರೀತಿಯಲ್ಲಿ ಸಂಯೋಜನೆ ಮಾಡಲಾಗಿಲ್ಲ. ಇದು ವಿದ್ಯಾರ್ಥಿ ಘಟಕವಾದರೂ ಇದನ್ನು ಸ್ವತಂತ್ರವಾಗಿ ಬಿಟ್ಟಿದ್ದಾರೆ. ಇದನ್ನು ಪಕ್ಷದೊಂದಿಗೆ ಸಂಯೋಜಿಸಬೇಕು. ಕೇವಲ ಉದ್ಘಾಟನಾ ಕಾರ್ಯಕ್ರಮ ನಡೆಸುವುದರಿಂದ ಯಾವುದೇ ಸಹಾಯವಾಗದು. ಕಾಂಗ್ರೆಸ್ ನಲ್ಲಿ ಕನ್ನಯ್ಯಾ ಕುಮಾರ್ ಎಐಸಿಸಿಯ ಎನ್.ಎಸ್.ಯು.ಐ ಉಸ್ತುವಾರಿ ಹೊತ್ತಿದ್ದಾರೆ. ಆದರೆ ಇಲ್ಲಿ ನಮಗೆ ಯಾವುದೇ ಉಸ್ತುವಾರಿ ಇಲ್ಲ. ಏನಾದರೂ ಕೆಲಸ ಮಾಡಬೇಕಾದರೆ ನಾವು ಯಾರ ಬಳಿ ಹೋಗಬೇಕು?” ಎಂದು ಅವರು ಪ್ರಶ್ನಿಸುತ್ತಾರೆ.
ಪರ್ಯಾಯ ರಾಜಕೀಯಕ್ಕಾಗಿ ವಿದ್ಯಾರ್ಥಿ ಸಂಘಟನೆ (ಎಎಸ್ಎಪಿ) ಕೇವಲ ಹೆಸರು ಬದಲಾವಣೆಯಲ್ಲ, ಬದಲಾಗಿ ಇನ್ನಷ್ಟು ಸಾಧನೆ ಮಾಡುವ ಉದ್ದೇಶವನ್ನು ಹೊಂದಿದೆ.
“ನಮ್ಮ ಗುರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಮ್ಮ ಘಟಕಗಳನ್ನು ವಿಸ್ತರಣೆ ಮಾಡುವುದು. ಎಬಿವಿಪಿ ಮತ್ತು ಎನ್.ಎಸ್.ಯು.ಐ ರೀತಿಯಲ್ಲಿ ಚುನಾವಣೆಗಳಿಗೆ ಸ್ಪರ್ಧಿಸುವುದಷ್ಟೇ ಇದರ ಉದ್ದೇಶವಲ್ಲ. ಅದನ್ನು ಮೀರಿದ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳ ಕುರಿತು ಚರ್ಚೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಇದರ ಉದ್ದೇಶವಾಗಿದೆ. ಆಪ್ ನಂಬುವ ವಿಷಯಗಳ ಸುತ್ತ ಸಾರ್ವಜನಿಕ ಸಂವಾದವನ್ನು ಸೃಷ್ಟಿಸುತ್ತೇವೆ ಮತ್ತು ವಿದ್ಯಾರ್ಥಿಗಳನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತೇವೆ” ಎಂದು ಎಎಸ್ಎಪಿ ನಾಯಕರೊಬ್ಬರು ದ ಫೆಡರಲ್ ಗೆ ಸಮಜಾಯಿಷಿ ನೀಡಿದ್ದಾರೆ.
“ಈಗ ನಮ್ಮ ಗಮನ ಇರುವುದು ಬ್ರಾಂಡಿಂಗ್ ಮೇಲೆ. ಕ್ರಮೇಣ ಉಳಿದ ರಚನೆಯ ಬಗ್ಗೆ ಗಮನ ಹರಿಸುತ್ತೇವೆ” ಎಂದು ಅವರು ವಿವರಿಸಿದರು.