ಭಾರತ - ಪಾಕಿಸ್ತಾನ ಕದನ ವಿರಾಮ ಇದ್ದರೂ ಯಾಕಿನ್ನೂ ಕರಗಿಲ್ಲ ಅನಿಶ್ಚಿತತೆಯ ಕಾರ್ಮೋಡ?

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಕೈಗೊಳ್ಳಲಾದ ‘ಆಪರೇಷನ್ ಸಿಂದೂರ’ ಬಳಿಕ ಕದನ ವಿರಾಮ ಜಾರಿಯಾಗಿದ್ದರೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಅನಿಶ್ಚಿತತೆಯ ಕಾರ್ಮೋಡಗಳು ಇನ್ನೂ ಕರಗಿಲ್ಲ. ‘ಈ ಸಂಘರ್ಷಕ್ಕೆ ಮುಕ್ತಾಯದ ದಿನಾಂಕವಿಲ್ಲ’ ಎಂದು ಹೇಳಿರುವುದು ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ.;

Update: 2025-05-27 03:30 GMT

24 May 2025 ಮೇ 10ರಂದು ಕೈಗೊಳ್ಳಲಾದ ಕದನ ವಿರಾಮದ ಬಳಿಕ ಭಾರತ ಮತ್ತು ಪಾಕಿಸ್ತಾನ ಕೈಗೊಂಡ ನಿರ್ಧಾರಗಳ ಹಿನ್ನೆಲೆಯಲ್ಲಿ ಎರಡೂ ನೆರೆಹೊರೆಯ ರಾಷ್ಟ್ರಗಳ ನಡುವಿನ ಸಂಬಂಧ ಅನಿಶ್ಚಿತತೆಯ ಕಡೆಗೆ ಮುಖಮಾಡಿದೆ. ಸದ್ಯ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಎರಡೂ ರಾಷ್ಟ್ರಗಳ ನಾಯಕತ್ವದ ಸ್ವರೂಪವನ್ನು ಗಮನಿಸಿದರೆ ಪರಿಸ್ಥಿತಿ ಇನ್ನಷ್ಟು ಅಸ್ಥಿರವಾಗುವ ಸಾಧ್ಯತೆಯೇ ಹೆಚ್ಚು.

ಭಾರತ ಮತ್ತು ಪಾಕಿಸ್ತಾನದ ಸಮೀಕರಣವನ್ನು ಸಂಪೂರ್ಣವಾಗಿ ಅಂತಾರಾಷ್ಟ್ರೀಯ ವಿಷಯವಾಗಿ ಮಾಡುವ ಮತ್ತು ಎರಡೂ ರಾಷ್ಟ್ರಗಳನ್ನು ಮರು-ಸಂಪರ್ಕಿಸುವ ನಿಟ್ಟಿನಲ್ಲಿ ಈ ಅನಿಶ್ಚಿತತೆಯೇ ದಾರಿಯನ್ನು ಸೃಷ್ಟಿಸುವ ಸಂಭವವೇ ಹೆಚ್ಚು. ಯಾಕೆಂದರೆ ಕನಿಷ್ಠ ಇದು ಪಾಶ್ಚಿಮಾತ್ಯರಿಗೆ ಅಗತ್ಯವಾಗಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಎಲ್ಲದರಿಂದ ಮುಕ್ತವಾಗಲು ಮಾಡಿದ ಪ್ರಯತ್ನದ ಹಿಂದಿನ ಸ್ಥಿತಿಗೆ ಮರಳಲು ಭಾರತ ಪ್ರಯತ್ನ ನಡೆಸಿದೆ. ಇದು ಪಾಕಿಸ್ತಾನ ಮತ್ತು ಇತರ ಶಕ್ತಿಗಳನ್ನು ಕೆರಳಿಸಿದೆ.

ಆಪರೇಷನ್ ಸಿಂದೂರ್ ಇನ್ನೂ ಕೊನೆಗೊಂಡಿಲ್ಲ ಎಂಬುದನ್ನು ಸರ್ಕಾರಿ ಪ್ರತಿನಿಧಿಗಳು ನಮಗೆ ಮತ್ತೆ ಮತ್ತೆ ನೆನಪಿಸುತ್ತಿರುವ ಕಾರಣ, ಅನಿಶ್ಚಿತತೆಗೆ ಇನ್ನಷ್ಟು ಬಲಬಂದಿದೆ. ಸಂಘರ್ಷಕ್ಕೆ ಹಾಕಿರುವ ವಿರಾಮಕ್ಕೆ ‘ಮುಕ್ತಾಯದ ದಿನಾಂಕವಿಲ್ಲ’ ಎಂದು ರಕ್ಷಣಾ ವಕ್ತಾರರು ಆಕಸ್ಮಿಕವಾಗಿ ಹೇಳಿದ್ದಾರೆ. ಅದೆಲ್ಲ ಏನೇ ಇದ್ದರೂ ನಿರುದ್ದೇಶದ ಒಂದೇ ಒಂದು ತಪ್ಪು ಹೆಜ್ಜೆ ಇಟ್ಟರೂ ಸಾಕಾಗಿಬಿಡುತ್ತದೆ.

ಪಹಲ್ಗಾಮ್ ದುರಂತ ಸಂಭವಿಸಿ ಸರಿಯಾಗಿ ಒಂದು ತಿಂಗಳ ಬಳಿಕ ಮೇ 22ರಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಡಚ್ ಸಾರ್ವಜನಿಕ ಬ್ರಾಡ್-ಕಾಸ್ಟರ್ ಎನ್ಓಎಸ್ ಗೆ ನೀಡಿದ ಸಂದರ್ಶನದಲ್ಲಿ ನೀಡಿದ ಹೇಳಿಕೆ, ಮೇ 7ರಂದು ಭಾರತ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಲು ಕಾರಣವಾದ ವಿಚಾರಗಳು ಮತ್ತು ಆ ಬಳಿಕದ ಪಾಕಿಸ್ತಾನದ ನಿರೀಕ್ಷಿತ ಪ್ರತಿಕಾರದ ಕ್ರಮವನ್ನು ಪುನರುಚ್ಛರಿಸುತ್ತದೆ.

“ಭಯೋತ್ಪಾದಕರೇನಾದರೂ ಪಾಕಿಸ್ತಾನದಲ್ಲಿದ್ದರೆ ಅವರನ್ನು ಅಲ್ಲಿಯೇ ಹೊಡೆದುರುಳಿಸುತ್ತೇವೆ” ಎಂದು ಸಚಿವ ಜೈಶಂಕರ್ ನೇರವಾಗಿ ಹೇಳಿದ್ದರು.

ಆ ಬಳಿಕದ ಹೇಳಿಕೆಯಲ್ಲಿ ತಕ್ಕಮಟ್ಟಿನ ಸಮಾಧಾನ ಇದ್ದರೂ ಕೂಡ, ಮೇ 10ರ ಬಳಿಕ ಭಾರತದ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿವೆ ಮತ್ತು ಆಪರೇಷನ್ ಸಿಂದೂರ್ ರದ್ದಾಗಿಲ್ಲ ಎಂಬ ಭಾವನೆ ಮಾತ್ರ ಹಾಗೇ ಸ್ಥಿರವಾಗಿದೆ. ಅಂದರೆ ಇದರ ಅನಿರ್ದಿಷ್ಟ ಸ್ವರೂಪವು ಪಾಕಿಸ್ತಾನದೊಂದಿಗಿನ ಎಲ್ಓಸಿ ಮತ್ತು ಚೀನಾದೊಂದಿಗಿನ ಎಲ್ಎಸಿಯಲ್ಲಿನ ಪರಿಸ್ಥಿತಿ ಒಂದೇ ತೆರನಾಗಿ ಇಲ್ಲದೇ ಹೋದರೂ ಎರಡೂ ಒಂದಕ್ಕೊಂದು ಹೋಲುವಂತೆ ಮಾಡಿದೆ.

ವಾಸ್ತವವಾಗಿ ಚೀನಾದೊಂದಿಗೆ ಅನೇಕ ಸುತ್ತಿನ ಮಾತುಕತೆಯ ನಂತರವೂ ಪೂರ್ವ ಲಡಾಕ್ ನ ಕೆಲವು ವಲಯಗಳಲ್ಲಿ ಉದ್ವಿಗ್ನತೆ ತಗ್ಗಿದ್ದರೂ ಕೂಡ ಪೂರ್ವ ಹಿಮಾಲಯದ ಭಾಗಗಳಲ್ಲಿನ ಸ್ಥಿತಿ ಮಾತ್ರ ಹೋರಾಟಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿಯೇ ಇದೆ. ಪಾಕಿಸ್ತಾನ ವಿಷಯಕ್ಕೆ ಸಂಬಂಧಿಸಿದಂತೆ ಆಪರೇಷನ್ ಸಿಂದೂರ ಸಕ್ರಿಯವಾಗಿರುವ ತನಕವೂ ನಾವು ಅದೇ ರೀತಿಯ ಸನ್ನದ್ಧ ಸ್ಥಿತಿಯಲ್ಲಿ ಇರುತ್ತೇವೆ.

ಇದನ್ನೇ ಸಂಕ್ಷಿಪ್ತವಾಗಿ ಹೇಳುವುದಾದರೆ ಭಾರತವು ಈಗಾಗಲೇ ಕತ್ತಿಯ ಎರಡೂ ಅಲಗಿನ ಯುದ್ಧದ ಮೂಲ ಮಾದರಿಯನ್ನು ಎದುರಿಸುತ್ತಿರಬಹುದು. ಅದು ಇಲ್ಲಿಯ ತನಕ ಸೈದ್ಧಾಂತಿಕ ಸ್ವರೂಪದ್ದಾಗಿತ್ತು. ಭಾರತದೊಂದಿಗಿನ ಪರಿಸ್ಥಿತಿ ಸಂಘರ್ಷದ ಸ್ಥಿತಿಯಲ್ಲಿದ್ದಾಗ ಪಾಕಿಸ್ತಾನವು ಚೀನಾವನ್ನು ನಂಬಿಕೊಂಡಿರುವುದು ಕೇವಲ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಮಾರಾಟಗಾರನ ಸಂಬಂಧವಾಗಿ ಮಾತ್ರ ಅಲ್ಲ. ಬದಲಾಗಿ ಅದು ಮಿತ್ರ ರಾಷ್ಟ್ರದ ಸಂಬಂಧವಾಗಿದೆ. ಅದರಲ್ಲಿ ಎಲ್ಲಾ ಕಾರ್ಯತಂತ್ರದ ಆಯಾಮಗಳು ಅಡಕವಾಗಿವೆ. ಇದು ಇತ್ತೀಚಿನ ಸಂಘರ್ಷದ ಕಾಲಘಟ್ಟದಲ್ಲಿ ಸ್ಪಷ್ಟವಾಗಿತ್ತು. ಚೀನಾದ ಹೊಸ ತಲೆಮಾರಿನ ವಾಯು ಯುದ್ಧ ಸಾಧನಗಳನ್ನು ಅದು ಬಳಸಿಕೊಂಡಿದ್ದು ಇದಕ್ಕೆ ಸಾಕ್ಷಿ ನೀಡುವಂತಿತ್ತು. ಸೇನಾ ವಿನಿಯಮದ ಸಂದರ್ಭದಲ್ಲಿಯೂ ಚೀನಾದ ಕಾಣದ ಕೈಗಳು ಕೆಲಸಮಾಡಿದ್ದನ್ನು ಕೆಲವು ತಜ್ಞರು ಗಮನಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ.

ಉಪಖಂಡದ ರಾಜಕೀಯ ಇನ್ನಷ್ಟು ಸಂಕೀರ್ಣಗೊಳ್ಳುವ ಎರಡು ಸಾಧ್ಯತೆಗಳಿವೆ; ಒಂದು ಪಾಕಿಸ್ತಾನವು ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಮಟ್ಟಕ್ಕೆ ಏರಿಸಿರುವುದು ಮತ್ತು ಭಾರತವು ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯಿಂದ ಸಂತ್ರಸ್ತವಾಗಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡಲು ಹಾಗೂ ಭಯೋತ್ಪಾದನೆ ವಿರುದ್ಧ ಅಭಿಪ್ರಾಯವನ್ನು ಸಂಗ್ರಹಿಸಲು ಭಾರತದ ಬಹು-ಪಕ್ಷೀಯ ರಾಜಕೀಯ ನಿಯೋಗಗಳನ್ನು ವಿದೇಶಿ ರಾಜಧಾನಿಗಳಿಗೆ ಕಳುಹಿಸುತ್ತಿರುವುದು.

ಕಾರ್ಯತಂತ್ರದ ಎರಡನೇ ಅಂಶವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ‘ಹೊಸ ಸಹಜ ಸ್ಥಿತಿ’ ಎಂಬ ವಿನೂತನ ಸಿದ್ಧಾಂತ. ಇನ್ನು ಮುಂದೆ ಎಂದಾದರೂ ಭಾರತದಲ್ಲಿ ಭಯೋತ್ಪಾದಕ ದಾಳಿ ಸಂಭವಿಸಿದ್ದೇ ಆದರೆ ಅದನ್ನು ಛೂಬಿಟ್ಟಿದ್ದು ಪಾಕಿಸ್ತಾನವೇ ಎಂಬ ದೃಢನಿರ್ಧಾರಕ್ಕೆ ಬಂದು ಅಲ್ಲಿನ ಭಯೋತ್ಪಾದಕರನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನದಲ್ಲಿ ಭಾರತೀಯ ಸೇನೆ ದಾಳಿ ನಡೆಸಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಪಾಕಿಸ್ತಾನವು ಭಯೋತ್ಪಾದನೆಯ ತಂತ್ರವನ್ನು ಬಳಸುವ ಹಳೆಯ ಚಾಳಿಗೆ ಕಡಿವಾಣ ಹಾಕಬೇಕು. ಯಾಕೆಂದರೆ ಅದರಿಂದ ಪರಿಸ್ಥಿತಿ ಕೈಮೀರಿ ಹೋಗಬಹುದು ಎಂಬುದನ್ನು ಭಾರತವು ಪರೋಕ್ಷವಾಗಿ ಹೇಳಿದೆ. ಹಾಗಾಗಿ ಮೇ 7ರ ಭಾರತದ ಕಾರ್ಯಾಚರಣೆಯ ನಂತರದ ಅಭಿಪ್ರಾಯವನ್ನು ಕ್ರೋಡೀಕರಿಸಲು ಹೆಚ್ಚಿನ ಒತ್ತು ನೀಡುವ ಸಾಧ್ಯತೆ ದಟ್ಟವಾಗಿದೆ.

ಅಷ್ಟಕ್ಕೂ ವಿಶ್ವದ ಪ್ರಮುಖ ದೇಶಗಳಿಂದ ಅಪೇಕ್ಷಿತವಾಗಿ ಅಭಿಪ್ರಾಯ ವ್ಯಕ್ತವಾಗುವ ಸಂಭವವಿದೆಯೇ? ಯಾವುದೇ ಸಂದರ್ಭದಲ್ಲಿ ಪಾಕಿಸ್ತಾನದ ಪಾಲಿನ ‘ಕಬ್ಬಿಣದ ಕವಚ ಧರಿಸಿದ ಸಹೋದರ’ನಂತಿರುವ ಚೀನಾಕ್ಕೆ ಭಾರತದ ರೀತಿಯ ಕಾರ್ಯತಂತ್ರದ ಯೋಚನೆ ಉಪಯೋಗಕ್ಕೆ ಬರುವ ಸಾಧ್ಯತೆ ಇಲ್ಲ.

ದಿಗಿಲುಹುಟ್ಟಿಸುವ ಭಾರತದ ಎಲೆಕ್ಟ್ರಾನಿಕ್ ಮಾಧ್ಯಮಗಳು ಮೇ 7-10ರ ಅವಧಿಯಲ್ಲಿನ ಭಾರತದ ಪ್ರಯತ್ನವನ್ನು ಅತಿಯಾಗಿ ಬಿಂಬಿಸಿ. ಭಾರತವು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಬೇಕು ಎಂದು ಹುಯಿಲೆಬ್ಬಿಸಿದ್ದು ವಿದೇಶದ ಕಣ್ಣಿನಲ್ಲಿ ಭಾರತದ ಪ್ರಯತ್ನವನ್ನು ನಗೆಪಾಟಲಿಗೀಡುಮಾಡಿರುವುದು ದಿಟ.

ಈಗ ಪಾಕಿಸ್ತಾನ ಕಡೆಯಿಂದ ಬಂದಿರುವ ಸುದ್ದಿಗಳನ್ನು ಅವಲೋಕಿಸೋಣ.

ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಮುನೀರ್ ಅವರನ್ನು ಪೀಲ್ಡ್ ಮಾರ್ಷಲ್ ಆಗಿ ನೇಮಕ ಮಾಡಲಾಗಿದೆ. 1959ರಲ್ಲಿ ಅಂದಿನ ಸೇನಾ ಮುಖ್ಯಸ್ಥ ಅಯೂಬ್ ಖಾನ್ ತಮ್ಮನ್ನೇ ಈ ಗೌರವಕ್ಕೆ ಒಳಪಡಿಸಿಕೊಂಡ ಬಳಿಕ ಆ ಸ್ಥಾನಕ್ಕೆ ಏರಿದ ಮೊದಲ ಸೇನಾ ಅಧಿಕಾರಿ ಮುನೀರ್. ಜನರಲ್ ಅಯೂಬ್ ಅಂದಿನ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ತರಬೇತಿಯನ್ನು ಪಡೆದ ವೃತ್ತಿಪರರಾಗಿದ್ದರು. ಅಯೂಬ್ ಅವರ ಮನೆ 1947ರಲ್ಲಿ ಹೊಸದಾಗಿ ಸೃಷ್ಟಿಸಲಾದ ದೇಶದಲ್ಲಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಜನರಲ್ ಮುನೀರ್ ಒಬ್ಬ ಮದ್ರಸಾ ತರಬೇತಿ ಪಡೆದ ‘ಹಫೀಜ್’. ಅರ್ಥಾತ್ ಕುರಾನ್ ನ್ನು ಕಂಠಪಾಠಮಾಡಿದಾತ.

ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆಯುವುದಕ್ಕೂ ಕೆಲ ದಿನಗಳಿಗೆ ಮುನ್ನ ಜನರಲ್ ಮುನೀರ್ ಪಾಕಿಸ್ತಾನದ ಜನರನ್ನು ಉದ್ದೇಶಿಸಿ ನೀಡಿದ ಹೇಳಿಕೆಯನ್ನು ಗಮನಿಸಬಹುದು. ಎರಡು ರಾಷ್ಟ್ರಗಳನ್ನು ಒಡೆದು ಹೋಳು ಮಾಡಿದ ವಿಭಜನೆಯ ಮೂಲ ತತ್ವ ಹಾಗೂ ಉಭಯ ರಾಷ್ಟ್ರಗಳ ಸಿದ್ಧಾಂತವನ್ನು ಎಂದಿಗೂ ಮರೆಯಬಾರದು, ಮುಸ್ಲಿಮರು ಹಾಗೂ ಹಿಂದುಗಳು ಯಾವತ್ತಿದ್ದರೂ ಭಿನ್ನ, ಅವರು ಯಾವತ್ತಿದ್ದರೂ ಒಂದಾಗಿ ಬಾಳಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ ಎಂದು ಹೇಳಿದ್ದರು. ಕಾಶ್ಮೀರದ ಜನರೊಂದಿಗೆ ನೀವು ಒಗ್ಗಟ್ಟಿನಿಂದ ಇರಬೇಕಾದರೆ ಇದೇ ಮನೋಭಾವವನ್ನು ಹೊಂದಿರಬೇಕು ಎಂದು ಅವರು ತಾಕೀತು ಮಾಡಿದ್ದರು.

ಒಬ್ಬ ಸೇನಾ ಅಧಿಕಾರಿಗೆ ಎಷ್ಟು ವಿಚಾರ ದಾರಿದ್ರ್ಯವಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದು ಒತ್ತಟ್ಟಿಗಿರಲಿ, ಪಾಕಿಸ್ತಾನದ ಸೇನೆಯು ನ್ಯಾಯಸಮ್ಮತವಾದ ಮಾರ್ಗವನ್ನು ಅತ್ಯಂತ ಹತಾಶೆಯಿಂದ ಹುಡುಕುತ್ತಿದ್ದ ಸಂದರ್ಭದಲ್ಲಿ ಈತ ತನ್ನ ಪಡೆಗಳನ್ನು ಮತ್ತು ತನ್ನ ರಾಷ್ಟ್ರವನ್ನು ಒಗ್ಗೂಡಿಸಲು ಕೋಮು ಭಾವನೆಯ ಮಾರ್ಗವನ್ನು ಆರಿಸಿಕೊಂಡಿದ್ದಾರೆ.

ಚುನಾಯಿತ ಪ್ರಧಾನಿಯನ್ನು ಅಲ್ಲಿ ಜೈಲಿಗೆ ತಳ್ಳಲಾಗಿತ್ತು. ಆಗಾಗ ಮಾಡಲಾದ ಅಂತಾರಾಷ್ಟ್ರೀಯ ನೆರವುಗಳಿಂದ ಅದರ ಅರ್ಥ ವ್ಯವಸ್ಥೆ ಬಚಾವ್ ಆಗಿದ್ದರೂ ಪಾತಾಳಕ್ಕೆ ಕುಸಿದಿತ್ತು. ರಾಷ್ಟ್ರದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುನ್ಖಾದಂತಹ ವಲಯಗಳು ಪ್ರಕ್ಷುಬ್ಧವಾಗಿವೆ. ಇವೆಲ್ಲವೂ ಕೇಂದ್ರ ಸರ್ಕಾರಕ್ಕೆ ಅದರಲ್ಲೂ ವಿಶೇಷವಾಗಿ ಸೇನೆಗೆ ಸವಾಲಾಗಿ ಪರಿಣಮಿಸಿವೆ.

ಈ ಸೇನಾ ಜನರಲ್ ತನ್ನ ನಿರೀಕ್ಷೆಗಳಿಗಿಂತ ಹೆಚ್ಚು ಯಶಸ್ವಿಯಾಗಿರಬಹುದು ಎಂಬ ಗಂಭೀರ ಚಿಂತನೆಯಿದೆ. ಭಾರತದ ವಿರುದ್ಧ ಧರ್ಮದ ಭೂತವನ್ನು ಛೂಬಿಟ್ಟಿದ್ದಕ್ಕಾಗಿ ಅವರಿಗೆ ಗೌರವವನ್ನು ನೀಡಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಏರಿಸಲಾಗಿದೆ. ಇವೆಲ್ಲವೂ ಪಾಕಿಸ್ತಾನದ ರಾಜಕೀಯ, ಸೇನೆ ಮತ್ತು ಪ್ರಾದೇಶಿಕ ರಾಜತಾಂತ್ರಿಕತೆಯ ಕಡೆಗೆ ಇರುವ ನಿರ್ದಿಷ್ಟ ನಿಲುವಾಗಿದೆ.

1970ರ ದಶಕದಲ್ಲಿ ಪಾಕಿಸ್ತಾನವನ್ನು ಇಸ್ಲಾಮೀಕರಣ ಮಾಡಲು ಪ್ರಯತ್ನಿಸಿದ ಜನರಲ್ ಜಿಯಾ ಉಲ್ ಹಕ್ ಕೂಡ ಧರ್ಮದ ಅಸ್ತ್ರ ಬಳಸಿಕೊಂಡು ನೆರೆಯ ರಾಷ್ಟ್ರಗಳನ್ನು ಗುರಿಯಾಗಿ ಮಾಡಿಕೊಳ್ಳುವಷ್ಟು ದೂರ ಹೋಗಿರಲಿಲ್ಲ. ಆ ಹಿನ್ನೆಲೆಯಲ್ಲಿ ನೋಡುವುದಾದರೆ ಫೀಲ್ಡ್ ಮಾರ್ಷಲ್ ಮುನೀರ್ ಜನರಲ್ ಜಿಯಾಗಿಂತ ಚಿಕ್ಕವರಾಗಿ ಕಾಣುತ್ತಾರೆ.

ಇವೆಲ್ಲವೂ ನಿಜವೇ ಆಗಿದ್ದರೆ, ಅಂದರೆ ಎರಡೂ ರಾಷ್ಟ್ರಗಳು ಧರ್ಮ-ಆಧಾರಿತ ಪ್ರಚೋಚನೆಯನ್ನು ಆರಿಸಿಕೊಂಡ ನಾಯಕರನ್ನೇ ನೆಚ್ಚಿಕೊಂಡರೆ ಇಡೀ ವಲಯವು ಅನಿಶ್ಚಿತತೆ ಮತ್ತು ಅಸ್ಥಿರತೆಯನ್ನು ಎದುರಿಸುವ ಸ್ಥಿತಿ ಬರಬಹುದು. ಇವೆಲ್ಲದರ ಜೊತೆಗೆ ಪಕ್ಕದ ಬಾಂಗ್ಲಾದೇಶದ ಕಥೆಯೂ ಸಂತೋಷದಾಯಕವಾಗಿಲ್ಲ.

ಈ ದೇಶದ ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿರುವ ಮಿಲಿಟರಿ ಸರ್ವಾಧಿಕಾರಿಗಳು ಹಾಗೂ ಚುನಾಯಿತರಲ್ಲದ, ಆದರೆ ಅಧಿಕಾರದ ಮದದಲ್ಲಿರುವ ನಾಯಕರು ತಮ್ಮ ಜನರನ್ನು ಮತ್ತೆ ಮತ್ತೆ ಬಿಕ್ಕಟ್ಟುಗಳತ್ತ ಕರೆದೊಯ್ಯುತ್ತಿದ್ದಾರೆ ಎಂಬುದು ಮಾತ್ರ ಸ್ಪಷ್ಟ. ಪರಿಸ್ಥಿತಿ ಹೀಗಿರುವಾಗ ಭಾರತದಲ್ಲಿ ಒಬ್ಬ ಕೋಮುವಾದಿ ರಾಷ್ಟ್ರೀಯವಾದಿ ಪ್ರಜಾ ನಾಯಕ ಯುದ್ಧ ವಿಮಾನದ ಪೈಲಟ್ ನ ಸಮವಸ್ತ್ರದಲ್ಲಿ ಹಾಗೂ ಎಡಗೈಯಲ್ಲಿ ಹೆಲ್ಮೆಟ್ ಹಿಡಿದು ಮುನ್ನಡೆಯುತ್ತಿರುವ ಚಿತ್ರಣವು ಇಡೀ ದಕ್ಷಿಣ ಏಷ್ಯಾದಲ್ಲಿ ಸರ್ವಾಧಿಕಾರದ ಲಕ್ಷಣಗಳಾಗಿವೆ.

Tags:    

Similar News