ಆರ್‌ಸಿಬಿ ಕಾಲ್ತುಳಿತ: ಕ್ರಿಕೆಟ್ ಉನ್ಮಾದಕ್ಕೊಳಗಾದವರ ದುರಾದೃಷ್ಟಕರ ʼರಿಯಾಲಿಟಿ ಚೆಕ್ʼ

ವಿರಾಟ್ ಕೊಹ್ಲಿ ಎಂಬ ‘ಅದೃಷ್ಟ’ದ ಚಿಹ್ನೆಯನ್ನು ಮುಂದಿಟ್ಟುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅರ್ಥಾತ್ ಆರ್.ಸಿ.ಬಿ ಕೊನೆಗೂ ಐಪಿಎಲ್ ಗೆದ್ದಿತು. ಅದಕ್ಕಾಗಿ ನಡೆಸಿದ ಹೋರಾಟ 17 ವರ್ಷಗಳು. ದೇಶದಲ್ಲಿ ಆರ್‌ಸಿಬಿ ತಂಡ ಎಲ್ಲಿಯೇ ಹೋಗಿ ಆಡಿದರೂ ಅವರನ್ನು ಹಿಂಬಾಲಿಸುವ ಹುಚ್ಚು ಮತ್ತು ಕ್ರೇಜ್‌ಗೆ ಇದು ಸರಿಸಾಟಿಯಲ್ಲ;

Update: 2025-06-05 11:06 GMT

ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ ಎಂದು ಪರಿಗಣಿಸಲಾಗಿದ್ದರೆ ಆರ್‌ಸಿಬಿಗೆ ಸಹಜವಾಗಿ ದೇವತೆಯ ಸ್ಥಾನ. ಬುಧವಾರ (ಜೂನ್ 4)ರಂದು ಬೆಂಗಳೂರಿನಲ್ಲಿ ಸೇರಿದ ಜನಸಾಗರಕ್ಕೆ ಇದಕ್ಕಿಂತ ದೊಡ್ಡ ವಿಶ್ಲೇಷಣೆ ಬೇಕಿಲ್ಲ. ಕಪ್ ಗೆದ್ದ ತಂಡವನ್ನು ದೂರದಿಂದಲಾದರೂ ಕಣ್ಣು ತುಂಬಿಕೊಳ್ಳೋಣ ಎಂದು ಬಂದವರಲ್ಲಿ ಕನಿಷ್ಠ ಹನ್ನೊಂದು ಮಂದಿ ಅಭಿಮಾನಿಗಳು ತಮ್ಮ ಪ್ರಾಣವನ್ನು ಚೆಲ್ಲಿದ್ದಾರೆ.

ಫೈನಲ್ ಪಂದ್ಯವು ಈಗಾಗಲೇ ರಾಜಕೀಯ ಪ್ರೇರಿತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ, ಫೈನಲಿಸ್ಟ್‌ಗಳಿಗೆ ಸಂಬಂಧವೇ ಇಲ್ಲದ ಅಹಮದಾಬಾದ್‌ನಲ್ಲಿ ಮುಗಿದಿತ್ತು. ಪಂದ್ಯವನ್ನು ವೀಕ್ಷಿಸಲು ಕಾಲ್ತುಳಿತ ಸಂಭವಿಸಿದ್ದರೆ ಅದನ್ನು ಅರ್ಥಮಾಡಿಕೊಳ್ಳಬಹುದಾಗಿತ್ತು. ಆದರೆ ಗೆದ್ದ ಐಪಿಎಲ್ ಕಪ್, ವಿರಾಟ್ ಕೊಹ್ಲಿ ಮತ್ತು ತಂಡದ ಉಳಿದವರನ್ನು ನೋಡಲು ಜನ ಅಷ್ಟೆಲ್ಲಾ ತೊಂದರೆ ತೆಗೆದುಕೊಂಡು ಕ್ರೀಡಾಂಗಣಕ್ಕೆ ಹೋಗುತ್ತಾರೆಂದರೆ ಅದು ನಿಜಕ್ಕೂ ತರ್ಕಕ್ಕೆ ನಿಲುಕದ ಸಂಗತಿ.

ವಿರಾಟ್ ಕೊಹ್ಲಿಯವರೇ ಅದೃಷ್ಟದ ಚಿಹ್ನೆಯಾಗಿರುವ ತಂಡವು 17 ವರ್ಷಗಳ ನಂತರ ಐಪಿಎಲ್ ಗೆದ್ದಿತ್ತು. ದೇಶದಲ್ಲಿ ಆರ್‌ಸಿಬಿ ಎಲ್ಲಿಯೇ ಆಡಿದರೂ ಅವರನ್ನು ಹಿಂಬಾಲಿಸುವ ಹುಚ್ಚು ಮತ್ತು ಕ್ರೇಜ್ಗೆ ಇದು ಸಂಪೂರ್ಣ ವಿವರಣೆ ನೀಡುವುದಿಲ್ಲ, ಬೆಂಗಳೂರಿನಲ್ಲಿರುವ ಬೆಂಬಲವಂತೂ ಅಪರಿಮಿತವಾದುದು. ಇದು ‘ಪತಂಗಗಳು ಬೆಳಕಿಗೆ ಮುತ್ತಿಕೊಂಡ ಕೀಟಗಳ’ ದೃಶ್ಯವನ್ನು ಕಣ್ಣ ಮುಂದೆ ತರುತ್ತದೆ. ಹೀಗೆ ನಿರಸಾಯವಾಗಿ ಮುತ್ತಿಕೊಂಡ ಕೀಟಗಳಲ್ಲಿ ಅನೇಕವು ಬೆಂಕಿಗೆ ಆಹುತಿಯಾಗುತ್ತವೆ. ಯಾಕೆ ಹೀಗೆ ಸೆಳೆತಕ್ಕೆ ಒಳಗಾಗುತ್ತಾರೆ ಎಂದಬ ಸಿದ್ಧಾಂತಗಳು ಅಸ್ತಿತ್ವದಲ್ಲಿದ್ದರೂ, ವಿಜ್ಞಾನಿಗಳು ಇನ್ನೂ ಈ ವಿದ್ಯಮಾನದ ಮರ್ಮವನ್ನು ಶೋಧಿಸುವ ಪ್ರಯತ್ನದಲ್ಲಿದ್ದಾರೆ. ಆ ಮಾತು ಬಿಡಿ.

ಈ ಆತುರವೇಕೆ?

ಸ್ಥಳದಲ್ಲಿದ್ದ ವರದಿಗಾರ-ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದಂತೆ, ಸ್ಥಳದಲ್ಲಿ ಸುಮಾರು 35,000 ಪ್ರೇಕ್ಷಕರು ತುಂಬಿದ್ದರೆ, ಕನಿಷ್ಠ ಅದಕ್ಕೂ ಹತ್ತು ಪಟ್ಟು ಹೆಚ್ಚು ಜನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಜಮಾಯಿಸಿದ್ದರು. ಅವರೆಲ್ಲರೂ ಕ್ರೀಡಾಂಗಣದ ಒಳಗೆ ಹೋಗಲು ಹತಾಶರಾಗಿ ಕಾಯುತ್ತಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ಒಂದು ಪೋಸ್ಟ್, ಆರ್‌ಸಿಬಿಗೆ ಇರುವ ನಂಬಲಸಾಧ್ಯವಾದ ಬೆಂಬಲದ ಹಿಂದಿನ ತರ್ಕ ಏನು ಎಂಬುದನ್ನು ಪ್ರಶ್ನಿಸುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮದ್ಯ ತಯಾರಕರ ಒಡೆತನದ ಖಾಸಗಿ ತಂಡ ಎಂದು ಆ ಪೋಸ್ಟ್ ಬೊಟ್ಟು ಮಾಡುತ್ತದೆ. ಅದರಲ್ಲಿರುವ ಕರ್ನಾಟಕದ ಆಟಗಾರರು ಬೆರಳೆಣಿಕೆಯಷ್ಟು ಉಳಿದವರೆಲ್ಲರೂ ಭಾರತದ ಇತರ ಭಾಗಗಳಿಂದ ಮತ್ತು ಪ್ರಪಂಚದ ಬೇರೆ ಬೇರೆ ಭಾಗದಿಂದ ಬಂದವರು ಎಂಬುದು ಗಮನಾರ್ಹ.

ಒಂದು ವಾಣಿಜ್ಯ ಸಂಸ್ಥೆಯಾದ ಆರ್‌ಸಿಬಿ ಬೆಂಗಳೂರು ನಗರಕ್ಕಾಗಲಿ ಅಥವಾ ಕರ್ನಾಟಕಕ್ಕಾಗಲಿ ಜವಾಬ್ದಾರಿಯಲ್ಲ, ಮತ್ತು ಅಲ್ಲಿನ ಜನರಿಗೆ ಸಾಮಾಜಿಕವಾಗಿ ಅಥವಾ ಬೇರೆ ಯಾವುದೇ ರೀತಿಯಲ್ಲಿ ಏನನ್ನಾದರೂ ಮಾಡಿದ್ದಾರೆಂದರೆ ಅದಕ್ಕೂ ದಾಖಲೆ ಇಲ್ಲ. ಆದರೂ, ಜನರ ಬೆಂಬಲದ ಮಟ್ಟ ಮಾತ್ರ ಸಖೇದಾಶ್ಚರ್ಯವಾದುದು. ಕೊಹ್ಲಿ ಮತ್ತು ನಾಯಕ ರಜತ್ ಪಾಟಿದಾರ್ ಅವರಂತಹ ಅಗ್ರ ಆಟಗಾರರು ತಂಡಕ್ಕೆ ಇರುವ ಈ ಪಾಠೀ ಬೆಂಬಲದ ಬಗ್ಗೆ ಪದೇ ಪದೇ ಅಚ್ಚರಿಯಿಂದ ನುಡಿಯುತ್ತಾರೆ.

ಕ್ರಿಕೆಟ್ ನಲ್ಲಿ ಎಷ್ಟೆಲ್ಲ ಸ್ವರೂಪಗಳಿವೆಯೂ ಅಷ್ಟೆಲ್ಲ ಸ್ವರೂಪಗಳಿಗೂ ಅಗ್ರ ಕ್ರಿಕೆಟ್ ಆಟಗಾರರನ್ನು ಕಳುಹಿಸಿದ ಸುದೀರ್ಘ ಇತಿಹಾಸ ಕರ್ನಾಟಕದ್ದು. ಹಾಗಂತ ನಾವು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಇನ್ನೂ ಅನೇಕ ರಾಜ್ಯಗಳು ಕೂಡ ಇದನ್ನೇ ಮಾಡಿವೆ.

ಫೈನಲ್ಸ್ ನಡೆಯುವುದಕ್ಕೂ ಹಿಂದಿನ ದಿನ ಮಾತನಾಡಿದ್ದ ರಾಜ್ಯ ಬಿಜೆಪಿ ಶಾಸಕ ಸಿ.ಟಿ. ರವಿ, ಕನ್ನಡಿಗರನ್ನು ಅಥವಾ ಸ್ಥಳೀಯ ಸಂಸ್ಕೃತಿಯನ್ನು ಪ್ರತಿನಿಧಿಸದ ತಂಡಕ್ಕೆ ಇಷ್ಟೊಂದು ಮೆಚ್ಚುಗೆ ಮತ್ತು ಬೆಂಬಲ ಏಕೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.

ರವಿ ಅವರನ್ನು ಉಲ್ಲೇಖಿಸಿದ ದಿ ಹಿಂದೂ ಪತ್ರಿಕೆ, ಆಟಗಾರರನ್ನು ಹರಾಜಿನಲ್ಲಿ ಬಹಿರಂಗವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದೆ. "ಯಾರು ಹೆಚ್ಚು ಹಣ ನೀಡುತ್ತಾರೋ ಅವರಿಗೆ ಆಟಗಾರರು ಹೋಗುತ್ತಾರೆ. ಹಾಗಿರುವಾಗ ನಿಮಗೆ ರಾಷ್ಟ್ರವಾದಿ ಅಥವಾ ಪ್ರಾದೇಶಿಕ ಭಾವನೆಗಳು ಹೇಗೆ ಇರಲು ಸಾಧ್ಯ?" ಎಂದು ಅವರು ಹೇಳಿದ್ದರು.

ಅತಿಮಾನುಷ ಅನುಭವ

ಆದರೆ, ತರ್ಕಕ್ಕಾಗಿ ನಾವು ಇವೆಲ್ಲ ವಾದಗಳನ್ನು ಮುಂದಿಡಬಹುದು. ಹೀಗೆ ಮಾಡಿರುವ ಎಲ್ಲ ಅವಲೋಕನಗಳು ಸಂಪೂರ್ಣ ಮಾನ್ಯವೂ ಆಗಿವೆ. ಅಂತಹ ತರ್ಕವು ಕೆಲಸ ಮಾಡುತ್ತಿದ್ದರೆ, ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯನ್ನು ಒತ್ತಟ್ಟಿಗಿಡಿ, ಬೇರೆಲ್ಲಿಯೂ ಇಂತಹ ಘಟನೆಗಳು ಸಂಭವಿಸುತ್ತಿರಲಿಲ್ಲ. ಕ್ರಿಕೆಟ್ ಒಂದು ಧರ್ಮವಾದ ಕಾರಣ, ಇದು ತಮ್ಮ ಪ್ರಾಣವನ್ನು ಪಣಕ್ಕಿಡಲು ಸಿದ್ಧರಿರುವ ಜನಸಮೂಹವನ್ನು ಸದಾ ಆಕರ್ಷಿಸುತ್ತಲೇ ಇರುತ್ತದೆ, ಬಹುಶಃ ಇದೊಂದು ಅತಿಮಾನುಷ ಅನುಭವ ಅನ್ನಿಸುತ್ತದೆ. ಇದನ್ನು ತರ್ಕದ ಮೂಲಕ ವಿವರಿಸಲು ಸಾಧ್ಯವಿಲ್ಲದ ಮಾತು.

ಭಾರತದಲ್ಲಿ ಕಾಲ್ತುಳಿತಗಳು ಅಸಾಮಾನ್ಯವೇನಲ್ಲ, ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಿ ಇದಕ್ಕೆ ತಳಕು ಹಾಕಿಕೊಂಡಿರುತ್ತದೆ. ಈ ವರ್ಷ ಜನವರಿಯಲ್ಲಿ ತಿರುಪತಿಯ ತಿರುಮಲ ದೇವಾಲಯದಲ್ಲಿ ಆರು ಜನರು ಮೃತಪಟ್ಟಿದ್ದು, 2024ರಲ್ಲಿ ಸತ್ಸಂಗ್ ಸಂದರ್ಭದಲ್ಲಿ ಹಾಥ್ರಸ್ನಲ್ಲಿ 124 ಜನರು ಸಾವನ್ನಪ್ಪಿದ್ದು, ಅಥವಾ ಇತ್ತೀಚೆಗೆ ಕುಂಭಮೇಳದಲ್ಲಿ ಅನೇಕ ಮಂದಿ ಯಾತ್ರಿಕರು ಮೃತಪಟ್ಟಿದ್ದನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು.

ಹಿಂದೆ, ಮೆಕ್ಕಾದಲ್ಲಿಯೂ ಕಾಲ್ತುಳಿತದ ಘಟನೆಗಳು ಸಂಭವಿಸಿವೆ, ಅಲ್ಲಿ ಹಜ್ ಯಾತ್ರೆಯ ಸಮಯದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಜನಸಮೂಹ ಸೇರುತ್ತದೆ. 2015ರಲ್ಲಿ ಸಂಭವಿಸಿದ ಘಟನೆಯಲ್ಲಿ ಸುಮಾರು 1,500 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು.

ಕ್ರಿಕೆಟ್ ಎಂಬ ಧರ್ಮ

ಮೇಲ್ನೋಟಕ್ಕೆ ಹೇಳುವುದಾದರೆ ಧರ್ಮವನ್ನು ಕ್ರೀಡೆಯೊಂದಿಗೆ ಹೋಲಿಸುವುದು ಅಸಮಂಜಸ ಎಂದು ಅನಿಸಬಹುದು. ಆದರೆ ಭಾರತದಲ್ಲಿ ಕ್ರಿಕೆಟ್ ಗೆ ಒಂದು ಪವಿತ್ರ ಸ್ಥಾನಮಾನವಿದೆ. ಇಲ್ಲಿ ಅನುಸರಿಸುವ ಭಕ್ತರ ಸಂಖ್ಯೆ ಮತ್ತು ವರ್ಗವನ್ನು ಯಾವುದೇ ಧಾರ್ಮಿಕ ಸ್ಥಳಕ್ಕೆ ಹೋಲಿಸುವಂತಿಲ್ಲ. ಅದಕ್ಕಿಂತಲೂ ಮಿಗಿಲಾದುದು.

ಸಾಮಾನ್ಯವಾಗಿ, ಲಕ್ಷಾಂತರ ಜನರು ಸೇರುವ ಸ್ಥಳಗಳಿಗೆ ಹೋಗುವುದೆಂದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಆದರೆ ಅನೇಕರು ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧರಾಗಿರುತ್ತಾರೆ ಹಾಗಾಗಿ ಅವರು ಶತಾಯಗತಾಯ ಹೋಗಿಯೇ ತೀರುತ್ತಾರೆ. ಬೆಂಗಳೂರಿನಲ್ಲಿ, ಚಿನ್ನಸ್ವಾಮಿ ಅಥವಾ ವಿಧಾನಸೌಧಕ್ಕೆ ಹೋಗಲು ತಮ್ಮ ಮನೆಗಳನ್ನು ತೊರೆದ 

 ಅಭಿಮಾನಿಗಳು, ಬಹುಶಃ ತಾವು ಅಪಾಯಕಾರಿ ಪ್ರಯಾಣವನ್ನು ಕೈಗೊಳ್ಳುತ್ತಿದ್ದೇವೆ ಎಂಬ ಯೋಚನೆಯನ್ನೇ ಮಾಡಿಲ್ಲ ಅನ್ನಿಸುತ್ತದೆ., ಹಾಗಾಗಿ ಡಜನ್ಗಟ್ಟಲೆ ಜನರು ತಮ್ಮ ಈ ನಿರ್ಧಾರದಿಂದ ತಮ್ಮ ಜೀವ ತೆತ್ತಿದ್ದಾರೆ ಎಂಬುದು ನಿಜಕ್ಕೂ ದುಃಖದ ಸಂಗತಿ.

ಬುಧವಾರ ಬೆಂಗಳೂರಿನಲ್ಲಿ ಸಾವಿರಾರು ಜನರು ಸೇರಿದಂತಹ ಸಂದರ್ಭದಲ್ಲಿ ಅವರನ್ನು ನಿಯಂತ್ರಿಸುವುದು ಪೊಲೀಸ್ ಪಡೆಯ ಆಡಳಿತಾತ್ಮಕ ಸಾಮರ್ಥ್ಯವನ್ನು ಮೀರಿದ್ದಾಗಿತ್ತು. ಸರ್ಕಾರ ಕೂಡ ಇಂತಹ ಸವಾಲಿನ ಸಂದರ್ಭಗಳನ್ನು ನಿಭಾಯಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿರುವುದಿಲ್ಲ.

ಅಸಮರ್ಥ ಆಡಳಿತ

1994ರಲ್ಲಿ ಸಂಭವಿಸಿದ ಘಟನೆಯನ್ನು ಆರ್.ಸಿ.ಬಿ ಕಾಲ್ತುಳಿತದ ಘಟನೆಯ ಜೊತೆ ಸಮೀಕರಿಸಬಹುದು. ಆ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದಿದ್ದ ಜನತಾ ದಳದ ಶಾಸಕಾಂಗ ಪಕ್ಷದ ಸಭೆ ವಿಧಾನಸೌಧದಲ್ಲಿ ನಡೆದಿತ್ತು. ಜನರು ಸಾಗರೋಪಾದಿಯಲ್ಲಿ ನುಗ್ಗಿ ಬಂದರು. ಪೋಲೀಸರಿಗೆ ಆ ಅಬ್ಬರವನ್ನು ತಡೆಯಲು ಸಾಧ್ಯವಾಗಲಿಲ್ಲ, ಅಂದು ಇದೇ ವಿಧಾನಸೌಧದ ಸುತ್ತಲೂ ಹಾಕಿದ್ದ ಅಡೆತಡೆಗಳನ್ನು ಭೇದಿಸಿ, ಆವರಣದೊಳಕ್ಕೆ ನುಗ್ಗಿದ ಜನ ಶಾಸಕಾಂಗ ಪಕ್ಷದ ಕಾರ್ಯಕಲಾಪಗಳಿಗೆ ಅಡ್ಡಿ ಉಂಟುಮಾಡಲು ಪ್ರಯತ್ನಿಸಿತು. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾರೂ ಸತ್ತಿರಲಿಲ್ಲ.

ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿ ಉಳಿದ ಆಡಳಿತ ವ್ಯವಸ್ಥೆಯು ನಗರವನ್ನು ನಿರ್ವಹಿಸಲು ಅಸಮರ್ಥವಾಗಿದೆ ಎಂದಾಗ, ಪೊಲೀಸರು ಅಪಾರ ದಕ್ಷತೆಯಿಂದ ಕೆಲಸ ಮಾಡುತ್ತಾರೆ ಎಂದು ಜನ ನಿರೀಕ್ಷೆ ಮಾಡುತ್ತಾರೆ. ಮಳೆಗಾಲದಲ್ಲಿ ಆಗಾಗ ಸಂಭವಿಸುವ ಪ್ರವಾಹ, ಗುಂಡಿಬಿದ್ದ ರಸ್ತೆಗಳು ಮತ್ತು ಸಾರ್ವಜನಿಕ ಸಾರಿಗೆಯಂತಹ ಮೂಲಭೂತ ಸೇವೆ ಪಡೆಯುವಲ್ಲಿನ ತೊಂದರೆ ಅಸಮರ್ಥ ಆಡಳಿತದ ಸಂಕೇತಗಳಾಗಿವೆ. ದುರದೃಷ್ಟವಶಾತ್, ಇವು, ಯಾವುದೇ ರಾಜಕೀಯ ಪಕ್ಷದ ಸಾಮರ್ಥ್ಯಗಳನ್ನು ಮೀರಿದ್ದಾಗಿದೆ.

ಎಲ್ಲಾ ಕಡೆ ಸರ್ಕಾರಗಳಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮತ್ತು ವಶೀಲಿಬಾಜಿಗಳೇ ಮೇಳೈಸುತ್ತಿರುವಾಗ ಅರೆಬೆಂದ ವ್ಯವಸ್ಥೆಗಳೇ ನಮ್ಮ ಮುಂದೆ ಅನಾವರಣಗೊಳ್ಳುತ್ತವೆ. ಬುಧವಾರ ಕಂಡಿದ್ದೂ ಇಂತಹುದೇ ಒಂದು ವ್ಯವಸ್ಥೆ. ಸಮಗ್ರವಾದ ಭದ್ರತಾ ವ್ಯವಸ್ಥೆಯನ್ನು ಯೋಜಿಸಲು ಮತ್ತು ಸ್ವಲ್ಪ ಮಟ್ಟಿನ ಸುವ್ಯವಸ್ಥೆಯನ್ನಾದರೂ ಜಾರಿಗೆ ತರಲು ಪೊಲೀಸರಿಗೆ ಇಡೀ ದಿನ ಸಮಯವಿತ್ತು.

ಆದರೆ ನುಗ್ಗಿ ಬಂದ ಕ್ರಿಕೆಟ್ ಅಭಿಮಾನಿಗಳ ಮಹಾಸಾಗರದ ಮುಂದೆ ನಿಲ್ಲಿಸಲಾಗಿದ್ದ ಸರ್ವೇಸಾಮಾನ್ಯ ಬ್ಯಾರಿಕೇಡ್ಗಳು ಯಾವ ಲೆಕ್ಕ? ಅಂತಹ ಅಭಿಮಾನಿಗಳ ಸಾಗರದ ಸಮ್ಮುಖದಲ್ಲಿ ನಿಂತಿದ್ದ ಬೆರಳೆಣಿಕೆಯ ಪೊಲೀಸರು ಕೊಚ್ಚಿ ಹೋದರು. ಇದರ ಪರಿಣಾಮ ಏನು ಎಂಬುದು ನಮ್ಮ ಮುಂದೆ ಇದೆ; ಕ್ರೀಡಾಂಗಣದ ಹೊರಗೆ ಅರಾಜಕತೆ ಮೇರೆ ಮೀರಿತು; ದೊಡ್ಡ ದುರಂತಕ್ಕೆ ದಾರಿಯಾಯಿತು.



Tags:    

Similar News