ರಾಹುಲ್ ಗಾಂಧಿ ಹೇಳಿಕೆ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ: ಗೃಹ ಸಚಿವ ಪರಮೇಶ್ವರ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ಎಲ್ಲಿಯವರೆಗೂ ಬಿಜೆಪಿಯವರಿಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲವೋ, ಅಲ್ಲಿಯವರೆಗೆ ಅವರು ಗೊಂದಲದಲ್ಲಿರುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಅವರು, ಬಿಜೆಪಿ ನಾಯಕರಿಗೆ ಟಾಂಗ್‌ ಕೊಟ್ಟಿದ್ದಾರೆ.

Update: 2024-07-02 10:30 GMT
ಜಿ. ಪರಮೇಶ್ವರ್‌

ʻಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಬಿಜೆಪಿಯವರಿಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲವೋ, ಅಲ್ಲಿಯವರೆಗೆ ಅವರು ಗೊಂದಲದಲ್ಲಿರುತ್ತಾರೆʼ  ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ʻಹಿಂದೂ ಧರ್ಮ ಎಲ್ಲರನ್ನು ಒಗ್ಗೂಡಿಸಿ ಶಾಂತಿ, ನೆಮ್ಮದಿಯಿಂದ ಸಮಾಜದ ಎಲ್ಲ ವರ್ಗವನ್ನು ಮುನ್ನಡೆಸಿಕೊಂಡು ಹೋಗಬೇಕು ಎನ್ನುವ ಸಾರಾಂಶವನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದುಗಳಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದು ಯಾರು ಆ ರೀತಿ ಇರುತ್ತಾರೋ ಅವರಿಗೆ ಅನ್ವಯಿಸುತ್ತದೆ. ಇದರಿಂದಲೇ ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡಿಕೊಂಡಿಲ್ಲ ಎನ್ನುವುದು ತಿಳಿಯುತ್ತದೆʼ ಎಂದು ಹೇಳಿದರು.

ʻಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತಿದಿನ ಭೇಟಿ ಮಾಡುತ್ತೇನೆ. ಇಲಾಖೆಯ ಅನೇಕ ವಿಚಾರಗಳನ್ನು ಅವರ ಗಮನಕ್ಕೆ ತಂದು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರದಲ್ಲಿ ಅನೇಕ ತೀರ್ಮಾನಗಳನ್ನು ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಬೇಕಾಗುತ್ತದೆʼ ಎಂದರು.

ʻಸಿಎಂ, ಡಿಸಿಎಂ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆ ನೀಡುವವರಿಗೆ ಡಿ.ಕೆ.ಶಿವಕುಮಾರ್ ನೋಟಿಸ್ ಜಾರಿ ಮಾಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನೋಟಿಸ್ ನೀಡುವುದು ಅಧ್ಯಕ್ಷರ ಕೆಲಸ. ಕಾರ್ಯಕರ್ತರು, ಶಾಸಕರು, ಸಚಿವರು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂಬುದಾಗಿ ಹೇಳಿದ್ದಾರೆ. ಪಕ್ಷದ ಮತ್ತು ಅಧ್ಯಕ್ಷರ ದೃಷ್ಟಿಯಲ್ಲಿ ಯಾವುದಾದರೂ ನಿರ್ದಿಷ್ಟ ವಿಷಯ ಸರಿ ಇಲ್ಲ ಎನ್ನುವುದು ಕಂಡುಬಂದರೆ ಅವರು, ಡಿ.ಕೆ ಶಿವಕುಮಾರ್ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆʼ ಎಂದರು.

ʻಹೈಕಮಾಂಡ್ ಮತ್ತು ಪಕ್ಷದ ಅಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರವನ್ನು ಪಾಲಿಸಬೇಕಾಗುತ್ತದೆ. ಯಾವ ವಿಷಯದಲ್ಲಿ ಶಿಸ್ತು ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಆ ವ್ಯಕ್ತಿಯನ್ನು ಕರೆದು ಶಿಸ್ತು ಸಮಿತಿ ಹೇಳಬೆಕಾಗುತ್ತದೆ. ಆ ನಂತರದ ಬೆಳವಣಿಗೆ ಪಕ್ಷದ ಅಧ್ಯಕ್ಷರಿಗೆ ಬಿಟ್ಟಿದ್ದುʼ ಎಂದರು.

ʻರಾಜ್ಯಮಟ್ಟದಲ್ಲಿ ಸತ್ಯಶೋಧನೆ ಸಮಿತಿಯನ್ನು ಮಾಡಿಕೊಳ್ಳಬಹುದು. ಕೆಪಿಸಿಸಿ ಅಧ್ಯಕ್ಷರಾದವರು ಮಾಡುವ ಜವಾಬ್ಧಾರಿ ಇದು. ಎಐಸಿಸಿಯವರು ದೇಶ ಮಟ್ಟದಲ್ಲಿ ಸತ್ಯಶೋಧನ ಸಮಿತಿ ಮಾಡಿದ್ದಾರೆ. ನಾನು ಸಹ ಈ ಹಿಂದೆ ಸತ್ಯಶೋಧನಾ ಸಮಿತಿಯನ್ನು ನೇಮಕ ಮಾಡಿದ್ದೆ. ಎಐಸಿಸಿ ಸತ್ಯಶೋಧನಾ ಸಮಿತಿ ಜುಲೈ 10 ಅಥವಾ 12ರಂದು ರಾಜ್ಯಕ್ಕೆ ಭೇಟಿ ನೀಡಲಿದೆʼ ಎಂದು ಹೇಳಿದರು.  

Tags:    

Similar News