ಅತ್ತಿಗೆ ಗರ್ಭಿಣಿ ಇದ್ದಾಗಲೇ ಅಣ್ಣ ಸತ್ತಿದ್ದು, ಆ ನೋವು ಗೊತ್ತು: ರೇಣುಕಾಸ್ವಾಮಿ ಕುಟುಂಬಕ್ಕೆ ಧ್ರುವ ಸಾಂತ್ವನ

"ಅತ್ತಿಗೆ ಗರ್ಭಿಣಿ ಆಗಿದ್ದಾಗಲೇ ಅಣ್ಣ ಸತ್ತಿದ್ದು. ಆ ನೋವು ನನಗೆ ಗೊತ್ತು, ನಿಮ್ಮ ಜೊತೆಗೆ ನಾವಿದ್ದೇವೆ. ಏನೇ ಸಹಾಯ ಬೇಕಾದರೂ ನಮ್ಮನ್ನು ಕೇಳಿ" ಎಂದು ಧ್ರುವ ಸರ್ಜಾ ಅವರು ದರ್ಶನ್‌ ಅಂಡ್‌ ಗ್ಯಾಂಗಿನ ಕ್ರೌರ್ಯಕ್ಕೆ ಬಲಿಯಾದ ರೇಣುಕಾಸ್ವಾಮಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

Update: 2024-06-27 07:25 GMT
ನಟ ಧ್ರುವ ಸರ್ಜಾ
Click the Play button to listen to article

ನಟ ದರ್ಶನ್‌ ಮತ್ತು ಗ್ಯಾಂಗಿನ ಅಟ್ಟಹಾಸಕ್ಕೆ ಬಲಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕುಟುಂಬದವರೊಂದಿಗೆ ಮೊಬೈಲ್‌ ಮೂಲಕ ಮಾತುಕತೆ ನಡೆಸಿರುವ ನಟ ಧ್ರುವ ಸರ್ಜಾ, ನೊಂದ ಕುಟಂಬಕ್ಕೆ ಸಾಂತ್ವನ ಹೇಳಿ, ನೆರವು ನೀಡುವುದಾಗಿ ಅಭಯ ನೀಡಿದ್ದಾರೆ.

ನಟ ಧ್ರುವ ಸರ್ಜಾ ಅಭಿಮಾನಿಗಳು ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಧನಸಹಾಯ ಸಹ ಮಾಡಿದ್ದಾರೆ. ಧ್ರುವ ಸರ್ಜಾ ಅಭಿಮಾನಿ ಸಂಘದ ಅಧ್ಯಕ್ಷ ಮಹಾನ್ ಹಾಗೂ ತಂಡದವರು ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಹೋಗಿದ್ದು, ಧ್ರುವ ಸರ್ಜಾ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿಸಿದ್ದಾರೆ.

ಈ ವೇಳೆ ಧ್ರುವ ಸರ್ಜಾ, ಮೃತ ರೇಣುಕಾಸ್ವಾಮಿ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದಾರೆ. "ಅತ್ತಿಗೆ ಗರ್ಭಿಣಿ ಆಗಿದ್ದಾಗ್ಲೆ ಅಣ್ಣ ಸತ್ತಿದ್ದು, ಆ ನೋವು ನನಗೆ ಗೊತ್ತು, ನಿಮ್ಮ ಜೊತೆಗೆ ನಾವಿದ್ದೇವೆ. ಏನೇ ಸಹಾಯ ಬೇಕಾದರೂ ನಮ್ಮನ್ನು ಕೇಳಿ" ಎಂದು ಹೇಳಿದ್ದಾರೆ ಎನ್ನಲಾಗಿದೆ. ನಂತರ ಧ್ರುವ ಅಭಿಮಾನಿ ಸಂಘದವರು ಹಣಕಾಸು ನೆರವು ನೀಡಿ, ರೇಣುಕಾಸ್ವಾಮಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಬಂದಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್, ಆತನ ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಒಟ್ಟು ಹತ್ತೊಂಬತ್ತು ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೇಯ ಹತ್ಯೆ ನಡೆಸಿದ್ದಲ್ಲದೇ ಆ ಅಮಾನುವ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದ ಎಲ್ಲಾ ಆರೋಪಿಯಾಗಿ ಜೈಲು ಸೇರಿದ್ದಾರೆ.

ಇತ್ತ ಮನೆಗೆ ಆಧಾರವಾಗಿದ್ದ ಮಗನನ್ನಯ ಕಳೆದುಕೊಂಡು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಪತ್ನಿ ಈಗ ಗರ್ಭಿಣಿ. ಮನೆ ನಡೆಸುವುದು ಹೇಗೆ ಎನ್ನುವ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ಸಹಾಯಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಂದಿದ್ದಾರೆ.

Tags:    

Similar News