ಅಂಗಾಂಗ ದಾನ ಇಂದಿನ ತುರ್ತು ಅಗತ್ಯ; ದೇಶದಲ್ಲಿ ಪ್ರತೀ ವರ್ಷ 17 ಸಾವಿರ ಅಂಗಾಂಗ ಕಸಿ

ವಿದ್ಯಾರ್ಥಿಗಳಲ್ಲಿ ವ್ಯಸನ ಒಂದು ಸಹಜ ರೂಢಿಯಾಗಿ ರೂಪುಗೊಳ್ಳುತ್ತಿರುವುದು ಕಳವಳದ ವಿಚಾರ. ಇದನ್ನು ಬುಡಸಮೇತ ಕೀಳುವುದು ನಮ್ಮ ಗುರಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ತಿಳಿಸಿದರು.

Update: 2025-12-07 07:39 GMT

ಅಂಗಾಂಗ ದಾನ ಹಾಗೂ ಮಾದಕ ವ್ಯಸನದ ಬಗ್ಗೆ ಕುಲಪತಿ ಡಾ. ಭಗವಾನ್‌ ಬಿ.ಸಿ. ಪ್ರತಿಜ್ಞಾ ವಿಧಿ ಬೋಧಿಸಿದರು. 

Click the Play button to listen to article

ದೇಶದಲ್ಲಿ ಪ್ರತಿ ವರ್ಷ ಸುಮಾರು 17 ಸಾವಿರ ಅಂಗಾಂಗ ಕಸಿ ನಡೆಯುತ್ತಿದೆ. ಆದರೆ, ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆ 3 ಲಕ್ಷಕ್ಕೂ ಅಧಿಕ ಇದೆ. ಅಂಗಾಂಗ ದಾನ ಇಂದಿನ ತುರ್ತು ಅಗತ್ಯವಾಗಿದ್ದು, ನಾವೆಲ್ಲಾ ಅಂಗಾಂಗ ದಾನ ಪ್ರತಿಜ್ಞೆಕೈಗೊಳ್ಳುವ ಮೂಲಕ ಸಾರ್ವಜನಿಕರಲ್ಲೂ ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ತಿಳಿಸಿದರು.

ಚಿತ್ರದುರ್ಗದ ಡಿ.ಸಿ. ವೃತ್ತದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಚಿತ್ರದುರ್ಗ ಜಿಲ್ಲೆಯ ಸಂಯೋಜಿತ ಕಾಲೇಜುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಶಾಮುಕ್ತ ಭಾರತ ಹಾಗೂ ಅಂಗಾಂಗ ದಾನ ಜಾಗೃತಿ ಅಭಿಯಾನ ಮತ್ತು ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಅಂಗಾಂಗ ದಾನದ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನೀವು ಕೈಗೊಳ್ಳುವ ಒಂದು ಸಣ್ಣ ನಿರ್ಧಾರದಿಂದ ಎಂಟು ಜನರ ಜೀವ ಉಳಿಯಬಲ್ಲದು ಎಂದರು.

ವಿದ್ಯಾರ್ಥಿಗಳಲ್ಲಿ ವ್ಯಸನ ಹೆಚ್ಚಳ

ವಿದ್ಯಾರ್ಥಿಗಳಲ್ಲಿ ವ್ಯಸನ ಒಂದು ಸಹಜ ರೂಢಿಯಾಗಿ ರೂಪುಗೊಳ್ಳುತ್ತಿರುವುದು ಕಳವಳದ ವಿಚಾರ. ಇದನ್ನು ಬುಡಸಮೇತ ಕೀಳುವುದು ನಮ್ಮ ಗುರಿ.  ವೈದ್ಯಕೀಯ ಕ್ಷೇತ್ರದ ಇಡೀ ಜಿಲ್ಲೆಯ ಎಲ್ಲಾ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ಒಂದೆಡೆ ಸೇರುವುದು, ಒಂದು ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಒಟ್ಟಾಗಿ ನಡೆಯುವುದು ಹಾಗೂ ಒಂದೇ ಗುರಿಯನ್ನು ಹಂಚಿಕೊಂಡು ಕೆಲಸ ಮಾಡುವುದು ಬಹಳ ದೊಡ್ಡ ಸಂಗತಿ. ವಿದ್ಯಾರ್ಥಿಗಳ, ಅದರಲ್ಲೂ ವೈದ್ಯಕೀಯ ವಿದ್ಯಾರ್ಥಿಗಳ ಶಕ್ತಿ ಹಾಗೂ ಚೈತನ್ಯವನ್ನು ಕಸಿಯುತ್ತಿರುವ ದುಶ್ಚಟಗಳಿಂದ ಅವರನ್ನು ದೂರ ಇಡುವುದು ಹಾಗೂ ನಶಾಮುಕ್ತ ಕ್ಯಾಂಪಸ್, ಆರೋಗ್ಯಪೂರ್ಣ ಯುವ ಕರ್ನಾಟಕವನ್ನು ಕಟ್ಟುವುದು ನಮ್ಮ ಗುರಿ. ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಜಾಗೃತಿ ಜಾಥಾಗಳಾನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಅಂಗಾಂಗ ದಾನದ ತಿಳುವಳಿಕೆ ಅಗತ್ಯ

ದೇಶದ ಬಹುದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವಾಗಿರುವ ರಾಜೀವ್ ಗಾಂಧಿ ವಿಶ್ವವಿದ್ಯಾಲಯವು ಪಾಠ, ಪರೀಕ್ಷೆ, ಫಲಿತಾಂಶದಂತಹ ತನ್ನ ಸಾಂಪ್ರದಾಯಿಕ ಜವಾಬ್ದಾರಿಗಳ ಜೊತೆಗೆ ವಿದ್ಯಾರ್ಥಿಗಳ ಭದ್ರ ಭವಿಷ್ಯ ಹಾಗೂ ಆ ಮೂಲಕ ಸ್ವಸ್ಥ ಸಮಾಜದ ಜವಾಬ್ದಾರಿಯನ್ನೂ ನಿರ್ವಹಿಸುತ್ತದೆ. ವಿದ್ಯಾರ್ಥಿಗಳ ಬಗ್ಗೆ, ಅವರ ಕುಟುಂಬ ಹಾಗೂ ಸಮಾಜದ ಬಗ್ಗೆ ನಾವು ಹೊಂದಿರುವ ಅದಮ್ಯ ಕಾಳಜಿ ಹಾಗೂ ಕಳಕಳಿಯ ಭಾಗವಾಗಿ ಕಳೆದ ಮೂರು ತಿಂಗಳಿಂದ ಜಿಲ್ಲೆಗಳಿಗೆ ಸಂಚರಿಸಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಮ್ಮ ಎಲ್ಲಾ 1,500 ಕಾಲೇಜು ಆವರಣಗಳನ್ನು ನಶಾಮುಕ್ತಗೊಳಿಸುವುದು ಹಾಗೂ ನಮ್ಮ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಅಂಗಾಂಗ ದಾನದ ಬಗ್ಗೆ ತಿಳಿವಳಿಕೆ ಮೂಡಿಸುವುದು ಈ ಕಾರ್ಯಕ್ರಮಗಳ ಉದ್ದೇಶ ಎಂದು ಮಾಹಿತಿ ನೀಡಿದರು.

ತಂಬಾಕು ಸೇವನೆಯಿಂದ ದೂರ ಇರಿ

ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳುವ ಜೊತೆಗೆ ನಿಮ್ಮ ಕುಟುಂಬ, ನಿಮ್ಮ ಸಮಾಜ ಹಾಗೂ ದೇಶದ ಆರೋಗ್ಯವನ್ನು ಕಾಪಾಡಬೇಕು. ಅದಕ್ಕಾಗಿ ಇಂದೇ ನೀವೆಲ್ಲಾ ಪ್ರತಿಜ್ಞೆ ಮಾಡಬೇಕು. ನನ್ನ ತರಗತಿಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಯಾವುದೇ ವಿಧದ ಮಾದಕ ದ್ರವ್ಯಗಳನ್ನು ಸೇವಿಸುವುದಿಲ್ಲ ಅಥವಾ ಆ ರೀತಿಯ ವಸ್ತುಗಳ ಮಾರಾಟ ಕಂಡುಬಂದರೆ ಸುಮ್ಮನಿರುವುದಿಲ್ಲ ಎಂದು ಪ್ರತಿಯೊಬ್ಬರು ಪ್ರತಿಜ್ಞೆಮಾಡಿ. ನೀವು ಆರೋಗ್ಯವಾಗಿದ್ದರೆ ಸಮಾಜ ಆರೋಗ್ಯವಾಗಿರುತ್ತದೆ. ದೇಶ ಸುಸ್ಥಿತಿಯಲ್ಲಿರುತ್ತದೆ. ಡ್ರಗ್, ಮದ್ಯಪಾನ, ತಂಬಾಕು ಸೇವನೆಯಿಂದ ದೂರ ಇರಿ. ನಿಮ್ಮ ಸ್ನೇಹಿತರೂ ಅತ್ತ ಸುಳಿಯದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, ವೈದ್ಯಕೀಯ ಹಾಗೂ ನರ್ಸಿಂಗ್ ಸೇವೆ ಅತ್ಯುತ್ತಮ ಸೇವೆ. ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಹಾಗೂ ಅವಕಾಶ ಇರುವುದು ಇದೇ ವೃತ್ತಿಯಲ್ಲಿ. ಇನ್ನೊಂದು ಜೀವ ಉಳಿಸುವ ಅವಕಾಶ ನಿಮ್ಮ ಕೈಯಲ್ಲಿ ಇರುತ್ತದೆ. ಈ ವೃತ್ತಿಯಲ್ಲಿರುವ ನೀವು ಬದ್ಧತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

Tags:    

Similar News