ಗರ್ಭಾಶಯ ಕ್ಯಾನ್ಸರ್ ಜಾಗೃತಿಗಾಗಿ 'ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್-2026': 10 ಲಕ್ಷ ರೂ. ಬಹುಮಾನ
ಟೂರ್ನಿಯು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ 'ಗರ್ಭಾಶಯ ಕ್ಯಾನ್ಸರ್' (Cervical Cancer) ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಮಾಧ್ಯಮಗೋಷ್ಠಿಯಲ್ಲಿ ಡಾ. ಶಿವಕುಮಾರ್ ಉಪ್ಪಳ ಮಾತನಾಡಿದರು.
ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ, ಸಾಮಾಜಿಕ ಕಳಕಳಿಯೊಂದಿಗೆ ಕ್ರೀಡಾಕೂಟವೊಂದನ್ನು ಆಯೋಜಿಸಲು ವೇದಿಕೆ ಸಜ್ಜಾಗಿದೆ. ಹೈಪರ್ ಸ್ಪೋರ್ಟ್ಸ್ & ವೆಲ್ಫೇರ್ ಟ್ರಸ್ಟ್ ವತಿಯಿಂದ 'ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ -2026' ಕ್ರಿಕೆಟ್ ಟೂರ್ನಿಯನ್ನು ಘೋಷಿಸಲಾಗಿದ್ದು, ಈ ಬಾರಿಯ ಟೂರ್ನಿಯು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ 'ಗರ್ಭಾಶಯ ಕ್ಯಾನ್ಸರ್' (Cervical Cancer) ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಗರ್ಭಾಶಯ ಕ್ಯಾನ್ಸರ್ ತಡೆಗಟ್ಟಲು ಜಾಗೃತಿಯೇ ಮದ್ದು
ಮಾಧ್ಯಮಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಡಾ. ಶಿವಕುಮಾರ್ ಉಪ್ಪಳ ಅವರು, ಪ್ರಸ್ತುತ ಭಾರತದಲ್ಲಿ ಮಹಿಳೆಯರನ್ನು ಗರ್ಭಾಶಯ ಕ್ಯಾನ್ಸರ್ ಗಂಭೀರವಾಗಿ ಬಾಧಿಸುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಹಂಚಿಕೊಂಡರು. "ಅರಿವಿನ ಕೊರತೆಯಿಂದಾಗಿ ಅನೇಕರು ಪ್ರಾಣಾಪಾಯಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ತಪಾಸಣೆ ಮಾಡಿಸುವುದು ಅತ್ಯಗತ್ಯ. ಪ್ರಮುಖವಾಗಿ ಎಚ್ಪಿವಿ ಲಸಿಕೆ ಹಾಕಿಸುವ ಮೂಲಕ ಈ ಮಾರಕ ಕಾಯಿಲೆಯನ್ನು ತಡೆಯಲು ಸಾಧ್ಯವಿದೆ," ಎಂದು ವೈದ್ಯಕೀಯ ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಅರಿವು ಮೂಡಿಸುವುದು ಈ ಟೂರ್ನಿಯ ಪ್ರಮುಖ ಆಶಯವಾಗಿದೆ.
2026ರ ಆರಂಭದಲ್ಲಿ ಅದ್ದೂರಿ ಟೂರ್ನಿ
ಹೈಪರ್ ಸ್ಪೋರ್ಟ್ಸ್ ಅಂಡ್ ವೆಲ್ಫೇರ್ ಟ್ರಸ್ಟ್ನ ಮುಖ್ಯಸ್ಥರಾದ ಕಿರಣ್ ಶೆಟ್ಟಿ ಮಾತನಾಡಿ, ಇದೊಂದು ಅಂತರ್ ಮಾಧ್ಯಮ ಟೂರ್ನಿಯಾಗಿದ್ದು, 2026ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು. ಸಮಾಜಕ್ಕೆ ಬೆಳಕು ನೀಡುವ ಮಾಧ್ಯಮ ಮಿತ್ರರ ಮೂಲಕ, ಕ್ಯಾನ್ಸರ್ ಜಾಗೃತಿಯಂತಹ ಸಮಾಜಮುಖಿ ಸಂದೇಶವನ್ನು ಜನರಿಗೆ ತಲುಪಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಈ ಟೂರ್ನಿಯು ಬೃಹತ್ ಮೊತ್ತದ ನಗದು ಬಹುಮಾನವನ್ನು ಒಳಗೊಂಡಿದೆ. ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ ಬರೋಬ್ಬರಿ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ರನ್ನರ್ ಅಪ್ ತಂಡಕ್ಕೆ 5 ಲಕ್ಷ ರೂಪಾಯಿ ಹಾಗೂ ಸೆಮಿಫೈನಲ್ ಪ್ರವೇಶಿಸಿದ ತಂಡಗಳಿಗೆ ತಲಾ 2.5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ. ವಿಶೇಷವೆಂದರೆ, ಈ ಟೂರ್ನಿಯಲ್ಲಿ ಭಾಗವಹಿಸುವ ಮಾಧ್ಯಮ ತಂಡಗಳಿಗೆ ಪ್ರವೇಶ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ.
ತಂಡಗಳ ನೋಂದಣಿ ಪ್ರಕ್ರಿಯೆ, ಪಂದ್ಯಗಳ ವೇಳಾಪಟ್ಟಿ ಮತ್ತು ಮೈದಾನಗಳ ಕುರಿತಾದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.