ಬಸವ ತತ್ವ ಪಾಲಕರನ್ನು ತಾಲಿಬಾನಿಗಳಿಗೆ ಹೋಲಿಕೆ ; ಕಾಡಸಿದ್ದೇಶ್ವರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ
“ನಮ್ಮ ಹುಡುಗಿಯರನ್ನು ಕರೆದುಕೊಂಡು ಹೋಗುವವರನ್ನು ನಾವು ಆರತಿ ಬೆಳಗಿ ಮನೆಗೆ ಕರೆದುಕೊಂಡು ಬರಬೇಕಾ?, ಅವರನ್ನು ಹಿಡಿದುಕೊಂಡು ಅವರಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕಾ” ಎಂಬ ಕೋಮುದ್ವೇಷದ ಹೇಳಿಕೆ ನೀಡಿದ್ದಾರೆ.
ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಬಸವ ತತ್ವದ ಪ್ರತಿಪಾದಿಸುವ ಕೆಲ ಸ್ವಾಮೀಜಿಗಳ ಬಗ್ಗೆ ಮಾತನಾಡುವ ಭರದಲ್ಲಿ ಟೀಕಾತ್ಮಕ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭಾನುವಾರ(ನ.30) ರಾಯಬಾಗ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಹನುಮ ಮಾಲಾಧಾರಿಗಳು ಯಾರಿಗೂ ಕೆಟ್ಟದ್ದು ಮಾಡುವವರಲ್ಲ, ಯಾರನ್ನೂ ತಪ್ಪುದಾರಿಗೆ ಕರೆದೊಯ್ಯುವುದಿಲ್ಲ. ನಮ್ಮಂತ ಬಟ್ಟೆ ಹಾಕಿಕೊಂಡು ಬಸವ ತಾಲಿಬಾನಿಗಳು ಟೀಕಿಸಬಹುದು. ಈ ಹಿಂದೆಯೂ ಹಲವು ಸಂಪ್ರದಾಯಗಳನ್ನು ಟೀಕಿಸಿದ್ದೇವೆ, ಈಗಲೂ ಟೀಕೆ ಮಾಡಬಹುದು” ಎಂಬ ಹೇಳಿಕೆಗೆ ಬಸವಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಇದೇ ವೇಳೆ ಸ್ವಾಮೀಜಿಯವರು ಮಹಿಳಾ ಭದ್ರತೆ ಕುರಿತು ಮಾತನಾಡಿ, “ನಮ್ಮ ಹುಡುಗಿಯರನ್ನು ಕರೆದುಕೊಂಡು ಹೋಗುವವರನ್ನು ನಾವು ಆರತಿ ಬೆಳಗಿ ಮನೆಗೆ ಕರೆದುಕೊಂಡು ಬರಬೇಕಾ?, ಅವರನ್ನು ಹಿಡಿದುಕೊಂಡು ಅವರಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕಾ” ಎಂಬ ಕೋಮುದ್ವೇಷದ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಕೂಡ ಕಾಡಸಿದ್ದೇಶ್ವರ ಸ್ವಾಮೀಜಿ ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಸವ ತತ್ವ ಪ್ರತಿಪಾದಕರ ಕುರಿತು ಬೆಳಗಾವಿಯಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿ, ಸ್ವಾಮೀಜಿ ವಿರುದ್ಧ ಕಾನೂನು ಹೋರಾಟಕ್ಕೆ ಬಸವ ಸಂಘಟನೆಗಳು ಮುಂದಾಗಿವೆ.
ಈ ಹಿಂದೆಯೂ ಸ್ವಾಮೀಜಿ ಕೋಮುದ್ವೇಷ ಹೇಳಿಕೆ ನೀಡಿದ್ದರು ಎಂದು ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗೆ ಪ್ರವೇಶ ನಿರಾಕರಿಸಿ ನಿರ್ಬಂಧ ವಿಧಿಸಲಾಗಿತ್ತು.