ಕನ್ನಡ, ಕನ್ನಡಿಗರನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ: ಬಾನು ಮುಷ್ತಾಕ್
ಕನ್ನಡ ಭಾಷೆಯು ಎಂಟು ಜ್ಞಾನಪೀಠ ಪ್ರಶಸ್ತಿಗಳು ಮತ್ತು ಇದೀಗ ಒಂದು ಬೂಕರ್ ಪ್ರಶಸ್ತಿಯನ್ನು ಪಡೆದಿರುವ ವಿಶಿಷ್ಟ ಗೌರವವನ್ನು ಹೊಂದಿದೆ ಎಂಬುದನ್ನೂ ಅವರು ಹೇಳಿದರು.;
ಕನ್ನಡ ಮತ್ತು ಕನ್ನಡಿಗರ ಬಗ್ಗೆ ಸಮಾಜದಲ್ಲಿ ತಪ್ಪಾದ ತಿಳಿವಳಿಕೆ ಇದೆ ಎಂದು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಸೋಮವಾರ ಹೇಳಿದ್ದಾರೆ. ಕರ್ನಾಟಕ ಸರ್ಕಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಾಧ್ಯಮಗಳು ಕನ್ನಡ ನಾಡಿನಲ್ಲಿ ಇತರ ಭಾಷೆಗಳ ಬಗ್ಗೆ ಅಸಹಿಷ್ಣುತೆ ಏಕೆ ಇದೆ ಎಂದು ಆಗಾಗ ತಮ್ಮನ್ನು ಪ್ರಶ್ನಿಸುತ್ತವೆ. ಅಂಥ ಪರಿಸ್ಥಿತಿಯೇ ಇಲ್ಲ. ಅದೊಂದು ತರ್ಕರಹಿತ ಕಲ್ಪನೆ ಎಂದು ಅವರು ಹೇಳಿದ್ದಾರೆ.
''ಉತ್ತರ ಭಾರತದ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಬಳಿಕ ಅವರು ನನಗೆ ಈ ಒಂದು ಪ್ರಶ್ನೆಯನ್ನು ಕೇಳುತ್ತಿದ್ದರು. ನೀವು "ಹಿಂದಿಯಲ್ಲಿ ಮಾತನಾಡಿದ್ದೀರಾ, ಹಾಗಾದರೆ ಕರ್ನಾಟಕಕಕ್ಕೆ ತಿರುಗಿ ಹೋಗಬಹುದಾ,'' ಎಂದು ಕೇಳುತ್ತಿದ್ದರು. “ನಾನು ಅವರಿಗೆ ಹೇಳುತ್ತಿದ್ದೆ. ಕನ್ನಡದ ಬಗ್ಗೆ ನಿಮ್ಮ ತಿಳಿವಳಿಕೆ ತಪ್ಪಾಗಿದೆ. ಕನ್ನಡದಷ್ಟು ಸಹಿಷ್ಣು ಭಾಷೆ ಬೇರೊಂದಿಲ್ಲ. ಇದು ಅನೇಕ ಭಾಷೆಗಳಿಗೆ ವೇದಿಕೆ ಒದಗಿಸಿದ ಭಾಷೆಯಾಗಿದೆ,” ಎಂದು ಬಾನು ಮುಷ್ತಾಕ್ ವಿವರಿಸಿದರು.
ಕನ್ನಡ ಭಾಷೆಯು ಎಂಟು ಜ್ಞಾನಪೀಠ ಪ್ರಶಸ್ತಿಗಳು ಮತ್ತು ಇದೀಗ ಒಂದು ಬೂಕರ್ ಪ್ರಶಸ್ತಿಯನ್ನು ಪಡೆದಿರುವ ವಿಶಿಷ್ಟ ಗೌರವವನ್ನು ಹೊಂದಿದೆ ಎಂಬುದನ್ನೂ ಅವರು ಹೇಳಿದರು. “ಇದು ಸಣ್ಣ ಸಾಧನೆಯಲ್ಲ,” ಎಂದು ಅವರು ಅಭಿಮಾನಪಟ್ಟರು.
ಕರ್ನಾಟಕವು ಸುವರ್ಣ ಸಂಭ್ರಮ ವರ್ಷ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಮುಷ್ತಾಕ್, ಬೂಕರ್ ಪ್ರಶಸ್ತಿಯ ಈ ಆಚರಣೆಗೆ ಉತ್ಸಾಹ ತುಂಬಲಿದೆ ಎಂದರು. "ಇದು ಕೇವಲ ಆರಂಭವಷ್ಟೇ. ನನ್ನ ಭೂಮಿಗೆ ನನ್ನ ಅನಂತ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ. ಇನ್ನೂ ಹಲವಾರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳನ್ನು ಇಡೀ ವಿಶ್ವಕ್ಕೆ ಕೊಂಡೊಯ್ಯೋಣ,” ಎಂದು ಬಾನು ಮುಷ್ತಾಕ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಹಿಸಿದ್ದರು. ಮುಖ್ಯಮಂತ್ರಿಗಳು ಬಾನು ಮುಷ್ತಾಕ್ ಮತ್ತು ಅವರ 'ಹಾರ್ಟ್ ಲ್ಯಾಂಪ್' ಪುಸ್ತಕದ ಇಂಗ್ಲಿಷ್ ಭಾಷಾಂತರಕಾರರಾದ ದೀಪಾ ಭಾಸ್ತಿ ಅವರಿಗೆ ತಲಾ 10 ಲಕ್ಷ ರೂಪಾಯಿಗಳ ನಗದು ಪುರಸ್ಕಾರ ಘೋಷಿಸಲಾಯಿತು. ಮುಖ್ಯಮಂತ್ರಿಗಳು ಮುಷ್ತಾಕ್ ಅವರ ಪುಸ್ತಕಗಳನ್ನು ಕರ್ನಾಟಕದ ಎಲ್ಲ ಸರ್ಕಾರಿ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.