ನಾವು ಗೆದ್ದಾಗ ಮತಗಳವು, ನೀವು ಗೆದ್ದಾಗ ಮತಗಳ್ಳತವಲ್ಲವೇ?; ಶೋಭಾ ಕರಂದ್ಲಾಜೆ ವಾಗ್ದಾಳಿ

ರಾಜಕಾರಣವನ್ನು ರಾಜಕಾರಣವಾಗಿ ಎದುರಿಸಿ. ಓಡಿ ಹೋಗಬೇಡಿ. ರಾಹುಲ್ ಗಾಂಧಿ ಮತ್ತು ನಿಮ್ಮ ಪಕ್ಷದ್ದು ಹಿಟ್ ಆಂಡ್ ರನ್ ಕೇಸ್ ಎಂದು ಟೀಕಿಸಿದರು.

Update: 2025-11-15 07:31 GMT

 ಶೋಭಾ ಕರಂದ್ಲಾಜೆ

Click the Play button to listen to article

ಕಾಂಗ್ರೆಸ್ ಗೆದ್ದಾಗ ಮತಗಳ್ಳತನ ಪ್ರಶ್ನೆ ಬರುವುದಿಲ್ಲ, ನಾವು ಗೆದ್ದಾಗ ಮಾತ್ರ ಮತಗಳ್ಳತನ ಆಗಲಿದೆಯೇ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಬೆಂಗಳೂರಿನ ಸ್ಯಾಂಕಿ ಕೆರೆಯ ಬಳಿ ಶನಿವಾರ ಬಿಜೆಪಿ ಆಯೋಜಿಸಿದ್ದ ಟನಲ್‌ ರಸ್ತೆ ವಿರೋಧಿಸಿ ಸಹಿ ಸಂಗ್ರಹ ಅಭಿಯಾನದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ರಾಜಕಾರಣವನ್ನು ರಾಜಕಾರಣವಾಗಿ ಎದುರಿಸಿ. ಓಡಿ ಹೋಗಬೇಡಿ. ರಾಹುಲ್ ಗಾಂಧಿ ಮತ್ತು ನಿಮ್ಮ ಪಕ್ಷದ್ದು ಹಿಟ್ ಆಂಡ್ ರನ್ ಕೇಸ್, ನೀವು ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗೆದ್ದಾಗ ಅದು ಮತಗಳ್ಳತನವಲ್ಲವೇ, ಬಿಜೆಪಿಯವರು ಗೆದ್ದಾಗ ಮಾತ್ರ ಮತಗಳ್ಳತನ ಆರೋಪ ಮಾಡುವುದು ಎಷ್ಟು ಸರಿ, ಹಾಗಾದರೆ ಕರ್ನಾಟಕದಲ್ಲಿ ನೀವು 135 ಸೀಟು ಹೇಗೆ ಗೆದ್ದಿರಿ ಎಂದು ತಿರುಗೇಟು ನೀಡಿದರು.  

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಬಿಹಾರದ ಜನತೆ ಕಾಂಗ್ರೆಸ್ಸನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಪಾಕಿಸ್ತಾನದಿಂದ, ಬಾಂಗ್ಲಾದಿಂದ ಬಂದವರು, ಸತ್ತು ಹೋದವರು, ಎರಡು ಹೆಸರು ಇದ್ದ ಮತಗಳನ್ನು ರದ್ದು ಮಾಡಿದ್ದಾರೆ ಎಂದು ನುಡಿದರು.

ಇದರಲ್ಲಿ ತಪ್ಪೇನು? ಸಮಸ್ಯೆ ಇದ್ದಲ್ಲಿ ಅವತ್ತೇ ನಿಮ್ಮ ಏಜೆಂಟ್ ಅದನ್ನು ಪ್ರಶ್ನಿಸಬೇಕಿತ್ತಲ್ಲವೇ. ಈಗ ಎಸ್‍ಐಆರ್ ಸರಿ ಇಲ್ಲ, ಮತಗಳ್ಳತನ ನಡೆದಿದೆ, ಇವಿಎಂ ಸರಿ ಇಲ್ಲ ಎಂದು ಹೇಳಿದರೆ ಹೇಗೆ? ಸೋತ ಮೇಲೆ ಈ ಹೇಳಿಕೆ ಕೊಟ್ಟರೆ ನಿಮ್ಮನ್ನು ಯಾರೂ ನಂಬುವುದಿಲ್ಲ ಎಂದು ತಿಳಿಸಿದರು.

Tags:    

Similar News