ಯಾದಗಿರಿ ಪಿಎಸ್​ಐ ಪರಶುರಾಮ ಸಾವು | ಶಾಸಕ, ಪುತ್ರನ ವಿರುದ್ಧ ಪ್ರಕರಣ ದಾಖಲು

ಯಾದಗಿರಿ ಸೈಬರ್ ಕ್ರೈಮ್ ಠಾಣೆಯ ಪಿಎಸ್ಐ ಪರಶುರಾಮ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಪುತ್ರ ಪಂಪಣ್ಣಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

Update: 2024-08-03 10:47 GMT
ಮೃತಪಟ್ಟ ಪಿಎಸ್ಐ ಪರಶುರಾಮ

ಯಾದಗಿರಿ ಸೈಬರ್ ಕ್ರೈಮ್ ಠಾಣೆಯ ಪಿಎಸ್ಐ ಪರಶುರಾಮ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಪರಶುರಾಮ ಅವರ ಸಾವಿಗೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರ ಪಂಪಣ್ಣಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪಿಎಸ್​ಐ ಪರಶುರಾಮ ಕಳೆದ ಮೂರು ವರ್ಷಗಳಿಂದ ಯಾದಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ (ಆ.03) ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್​​ಗಾಗಿ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಪರಶುರಾಮ 30 ಲಕ್ಷ ರೂ. ನೀಡಿ, ಯಾದಗಿರಿ ನಗರಕ್ಕೆ ವರ್ಗಾವಣೆಯಾಗಿದ್ದರು. ಆದರೆ, ಒಂದು ವರ್ಷ ಪೂರೈಸುವ ಮುನ್ನವೇ ಪರಶುರಾಮ್​ ಅವರನ್ನು ಮತ್ತೆ ಯಾದಗಿರಿ ಸೈಬರ್​ ಕ್ರೈಮ್​ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಪಿಎಸ್​ಐ ಪರಶುರಾಮ್ ಒತ್ತಡಕ್ಕೆ ಒಳಗಾಗಿದ್ದರು. ಪಿಎಸ್​ಐ ಪರಶುರಾಮ ಸಾಲದ ಸುಳಿಗೆ ಸಿಲುಕಿದ್ದರು. ಪಿಎಸ್​ಐ ಪರಶುರಾಮ್ ಶುಕ್ರವಾರ ಸಚಿವ ಪ್ರಿಯಾಂಕ್ ಖರ್ಗೆ ಜೊತೆಗೆ ಪೋನ್​ನಲ್ಲಿ ಮಾತನಾಡಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಪಿಎಸ್​ಐ ಪರಶುರಾಮ ಸಾವಿಗೆ ಕಾಂಗ್ರೆಸ್​ ಶಾಸಕ ಚನ್ನಾರೆಡ್ಡಿ ಪಾಟೀಲ್​ ಹಾಗೂ ಅವರ ಪುತ್ರ ಪಂಪಣ್ಣಗೌಡ ಕಾರಣವೆಂದು ಪಿಎಸ್​ಐ ಪರಶುರಾಮ ಪತ್ನಿ ಶ್ವೇತಾ ದೂರು ದಾಖಲಿಸಿದ್ದಾರೆ. ಕಾಂಗ್ರೆಸ್​ ಶಾಸಕ ಚನ್ನಾರೆಡ್ಡಿ ಪಾಟೀಲ್ ಪದೇಪದೆ ಹಣಕ್ಕೆ ಕಿರುಕುಳ ನೀಡುತ್ತಿದ್ದರು. ನಾವು ದಲಿತರು, ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಶಾಸಕರು ಪೋಸ್ಟಿಂಗ್ ಕೊಟ್ಟಿಲ್ಲ. ಶಾಸಕರು ತಪ್ಪು ಮಾಡಿದ್ದಾರೆ ಅವರು ಸ್ಥಳಕ್ಕೆ ಬರಬೇಕು ಎಂದು ಪಿಎಸ್​ಐ ಪರಶುರಾಮ ಪತ್ನಿ ಶ್ವೇತಾ ಒತ್ತಾಯಿಸಿದ್ದಾರೆ. ಈ ಬಗ್ಗೆ ಶ್ವೇತಾ ಅವರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂಗೀತಾ ಅವರಿಗೆ ದೂರು ನೀಡಿದ್ದಾರೆ.

ಯಾದಗಿರಿ ಕಾಂಗ್ರೆಸ್​​ ಶಾಸಕ ಚೆನ್ನಾರೆಡ್ಡಿಗೆ ದುಡ್ಡಿನ ಆಸೆ ಹೆಚ್ಚಾಗಿದೆ. ಯಾದಗಿರಿ ಠಾಣೆಯಿಂದ ಅವಧಿ ಪೂರ್ವ ವರ್ಗಾವಣೆ ಮಾಡಿದ್ದಾರೆ. ಅವಧಿ ಪೂರ್ವ ವರ್ಗಾವಣೆಯಿಂದ ಪಿಎಸ್​ಐ ಪರಶುರಾಮ ನೊಂದಿದ್ದರು. ಏಳು ತಿಂಗಳ ಅವಧಿಯಲ್ಲಿ ಶಾಸಕರು ಬೇರೆಯವರಿಗೆ ಪೋಸ್ಟಿಂಗ್ ನೀಡಿದ್ದಾರೆ. ವರ್ಗಾವಣೆ ಮಾಡುತ್ತಿರುವುದು ಸಿಎಂ, ಗೃಹಸಚಿವರ ಗಮನಕ್ಕೆ ಬರಲಿಲ್ವಾ? ಎಂದು ಮೃತ ಪಿಎಸ್​ಐ ಪರಶುರಾಮ ಮಾವ ವೆಂಕಟಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಪೋಸ್ಟಿಂಗ್​​​ಗಾಗಿ ನನ್ನ ಅಳಿಯನಿಗೆ ಕಾಂಗ್ರೆಸ್ ಶಾಸಕರು ಹಣ ಕೇಳಿದರು. ಹೆಚ್ಚು ಹಣ ಕೊಟ್ಟವರಿಗೆ ಪೋಸ್ಟಿಂಗ್ ಕೊಡಿಸುವ ಕೆಲಸ ಮಾಡಿದ್ದಾರೆ. ಅವರಿಗಿಂತ ಪರಶುರಾಮ ಹಣ ಜಾಸ್ತಿ ಕೊಟ್ಟಿದ್ದರೆ ಪೋಸ್ಟಿಂಗ್ ಆಗುತ್ತಿತ್ತು. ಯಾದಗಿರಿ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳನ್ನು ಹರಾಜಿಗೆ ಇಟ್ಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ತಪ್ಪಿತಸ್ಥ ಎಂಎಲ್​ಎ ಚನ್ನಾರೆಡ್ಡಿ ಪಾಟೀಲ್​ರನ್ನು ಬಂಧಿಸುವಂತೆ ವಿವಿಧ ದಲಿತ ಪರ ಸಂಘಟನೆಗಳು ಮತ್ತು ಮೃತ ಪಿಎಸ್​ಐ ಪರಶುರಾಮ ಕುಟುಂಬಸ್ಥರು ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಪ್ರತಿಭಟನೆ ನಡೆಸಿದರು. ಯಾದಗಿರಿ ಶಾಸಕ ಹಾಗೂ ಶಾಸಕರ ಪುತ್ರ ದುಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು. 30 ರಿಂದ 40 ಲಕ್ಷ ದುಡ್ಡು ಕೇಳಿದ್ದಾರೆ. ಪೊಲೀಸರು ಸಹ ಶಾಸಕರ ಪರ ಇದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜಾತಿನಿಂದನೆ ಪ್ರಕರಣ ದಾಖಲು 

ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ನಡೆದ 17 ಗಂಟೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್​​ಐ ಪರಶುರಾಮ ಪತ್ನಿ ಶ್ವೇತಾ ದೂರು ಆಧರಿಸಿ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಪಂಪನಗೌಡ ವಿರುದ್ಧ ​​ಜಾತಿ ನಿಂದನೆ ಆರೋಪದಡಿ ಯಾದಗಿರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಎ1 ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಎ2 ಶಾಸಕ ಚೆನ್ನಾರೆಡ್ಡಿ ಪಾಟೀಲ್ ಪುತ್ರ ಪಂಪನಗೌಡ ಆಗಿದ್ದಾರೆ. 

ಚೆನ್ನಾರೆಡ್ಡಿ ರಾಜಿನಾಮೆ ನೀಡಲಿ: ಯತ್ನಾಳ್​

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್​ ಯತ್ನಾಳ್​ ಪ್ರತಿಕ್ರಿಯಿಸಿದ್ದು, ತಮ್ಮ ಎಕ್ಸ್‌ ಖಾತೆಯಲ್ಲಿ ಚನ್ನಾರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಒಬ್ಬ ದಲಿತ ಅಧಿಕಾರಿಯ ವರ್ಗಾವಣೆಗೆ ಪ್ರಭಾವ ಬೀರಿದ ಚನ್ನಾರೆಡ್ಡಿ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಜನಪ್ರತಿನಿಧಿಯಾಗಿ ಮಾದರಿಯಾಗಿರಬೇಕಾಗಿದ್ದ ಶಾಸಕರು ಒಬ್ಬ ಅಧಿಕಾರಿಯ ಸಾವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಚನ್ನಾರೆಡ್ಡಿ ಅವರು ಕೂಡಲೇ ಈ ಸಾವಿಗೆ ನೈತಿಕ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಹಜ ಸಾವು ಅಂತ ಸುದ್ದಿ ಬರುತ್ತಿದೆ: ಪರಮೇಶ್ವರ್​

ಪಿಎಸ್​ಐ ಪರಶುರಾಮ ಅವರ ಸಾವಿನ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಪರಶುರಾಮ ಅವರ ಸಾವು  ಸಹಜ ಸಾವು ಅಂತ ಸುದ್ದಿ ಬರುತ್ತಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಡೆತ್ ನೋಟ್ ಬರೆದಿಟ್ಟಿಲ್ಲ. ಅವರನ್ನು ವರ್ಗಾವಣೆ ಮಾಡಿದ್ದಾರೆ ಅನ್ನೋ ಕಾರಣ ಕೊಟ್ಟಿದ್ದಾರೆ. ಇದನ್ನೆಲ್ಲ ತನಿಖೆ ಮಾಡಿ ಅಂತ ನಾನು ಸೂಚನೆ ಕೊಟ್ಟಿದ್ದೇನೆ ಎಂದಿದ್ದಾರೆ.

ತನಿಖಾ ವರದಿ ಬಂದ ಮೇಲೆ ನೋಡೋಣ ಎಂದು ಹೇಳಿರುವ ಗೃಹ ಸಚಿವರು, ಪಿಎಸ್​ಐ ಪರಶುರಾಮ ಪತ್ನಿ ಆರೋಪವನ್ನು ಪರಿಗಣಿಸುತ್ತೇನೆ. ಪ್ರಾಥಮಿಕವಾಗಿ ಕೆಲವೊಂದಿಷ್ಟು ಮಾಹಿತಿ ಕಲೆ ಹಾಕಬೇಕು. ಪರಿಶೀಲನೆ ಮಾಡಿ ಶೀಘ್ರದಲ್ಲೇ ಎಫ್​​ಐಆರ್​ ದಾಖಲಿಸುತ್ತಾರೆ. ಯಾರೇ ಇದ್ದರು ಅವರ ವಿರುದ್ಧ ಎಫ್​ಐಆರ್​ ಹಾಕುತ್ತಾರೆ ಎಂದು ತಿಳಿಸಿದ್ದಾರೆ.

Tags:    

Similar News