ಗೀತೆ ರಚನೆಕಾರ, ಖ್ಯಾತ ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಇನ್ನಿಲ್ಲ ; ಗಣ್ಯರಿಂದ ಸಂತಾಪ
‘ಪರಿವೃತ್ತ’, ‘ಬಾಗಿಲು ಬಡಿವ ಜನಗಳು’ ಸೇರಿದಂತೆ 15ಕ್ಕೂ ಹೆಚ್ಚು ಕವನ ಸಂಕಲಗಳನ್ನು ರಚಿಸಿದ್ದಾರೆ. ‘ಬಾನಸವಾಡಿಯ ಬೆಂಕಿ’, ‘ಪುಟ್ಟಾರಿಯ ಮತಾಂತರ’ ಕಥಾ ಸಂಕಲನ, ‘ತಾಪಿ’, ‘ಅಮಾನುಷರು’, ‘ಕದಿರಿನ ಕೋಟೆ’, ‘ಅಗ್ನಿಮುಖಿ’ ಕಾದಂಬರಿಗಳು ಪ್ರಖ್ಯಾತಿ ಗಳಿಸಿವೆ.;
ಕನ್ನಡದ ಖ್ಯಾತ ಸಾಹಿತಿ, ಗೀತೆ ರಚನೆಕಾರ ಎಚ್.ಎಸ್. ವೆಂಕಟೇಶ್ಮೂರ್ತಿ (80) ಶುಕ್ರವಾರ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶುಕ್ರವಾರ ಬೆಳಿಗ್ಗೆ 7 ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
1944 ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ವೆಂಕಟೇಶಮೂರ್ತಿ ಅವರು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು.
1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡ ಅವರು, 2000ರಲ್ಲಿ ನಿವೃತ್ತಿ ಹೊಂದಿದರು. ಆ ಬಳಿಕವೂ ಬೆಂಗಳೂರಿನಲ್ಲೇ ನೆಲೆಸಿದ್ದ ಅವರು, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಮಕ್ಕಳ ಸಾಹಿತಿಯಾಗಿ, ನಾಟಕಕಾರರಾಗಿ, ಸಿನಿಮಾ ಸಂಭಾಷಣೆಕಾರರಾಗಿಯೂ ಗುರುತಿಸಿಕೊಂಡಿದ್ದರು.
‘ಪರಿವೃತ್ತ’, ‘ಬಾಗಿಲು ಬಡಿವ ಜನಗಳು’ ಸೇರಿದಂತೆ 15ಕ್ಕೂ ಹೆಚ್ಚು ಕವನ ಸಂಕಲಗಳನ್ನು ರಚಿಸಿದ್ದಾರೆ. ‘ಬಾನಸವಾಡಿಯ ಬೆಂಕಿ’, ‘ಪುಟ್ಟಾರಿಯ ಮತಾಂತರ’ ಕಥಾ ಸಂಕಲನ, ‘ತಾಪಿ’, ‘ಅಮಾನುಷರು’, ‘ಕದಿರಿನ ಕೋಟೆ’, ‘ಅಗ್ನಿಮುಖಿ’ ಕಾದಂಬರಿಗಳು ಪ್ರಖ್ಯಾತಿ ಗಳಿಸಿವೆ.
ಚಿತ್ರರಂಗಕ್ಕೆ ಅಪಾರ ಕೊಡುಗೆ
ವೆಂಕಟೇಶ ಮೂರ್ತಿ ಅವರು ಚಿನ್ನಾರಿ ಮುತ್ತ ಚಿತ್ರಕ್ಕೆ ಕಥೆ, ಸಂಭಾಷಣೆ ಹಾಡುಗಳನ್ನು ಬರೆದಿದ್ದರು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಂದಿತ್ತು.
ಅಮೆರಿಕ ಅಮೆರಿಕ, ಪುನೀತ್ ರಾಜಕುಮಾರ್ ನಟನೆಯ ಮೈತ್ರಿ, ಕಿರಿಕ್ ಪಾರ್ಟಿ ಚಿತ್ರಕ್ಕೂ ಹಾದು ಬರೆದಿದ್ದರು.
ವೆಂಕಟೇಶ ಮೂರ್ತಿ ಅವರು 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಕೂಡ ಆಗಿದ್ದರು.
ಕಂಬನಿ ಮಿಡಿದ ಗಣ್ಯರು
ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ರಾಜಕೀಯ ಕ್ಷೇತ್ರ ಹಾಗೂ ಸಿನಿಮಾ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ತಮ್ಮನ್ನು ತಪಸ್ವಿಯಂತೆ ಸಮರ್ಪಿಸಿಕೊಂಡಿದ್ದ ಎಂದು ಸ್ಮರಿಸಿದ್ದಾರೆ.