ವಿಪ್ರೊ ಕ್ಯಾಂಪಸ್​ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನಿರಾಕರಣೆ; ಸಿಎಂಗೆ ಹಿನ್ನಡೆ

ಇದು ಕಂಪನಿಯ ಖಾಸಗಿ ಆಸ್ತಿಯಾಗಿದ್ದು, ಸಾರ್ವಜನಿಕ ಬಳಕೆಗೆ ಅನುಮತಿ ಇಲ್ಲ. ಇಲ್ಲಿನ ಒಪ್ಪಂದದ ಷರತ್ತುಗಳು ಕಟ್ಟುನಿಟ್ಟಾಗಿದ್ದು, ಬದಲಾವಣೆ ಸಾಧ್ಯವಿಲ್ಲ ಎಂದು ಅಜೀಜ್​ ಪ್ರೇಮ್​ಜಿ ಅವರು ಸ್ಪಷ್ಟಪಡಿಸಿದ್ದಾರೆ.

Update: 2025-09-25 13:30 GMT

ನಗರದ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್‌) ತೀವ್ರಗೊಳ್ಳುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು, ವಿಪ್ರೊ ಸರ್ಜಾಪುರ ಕ್ಯಾಂಪಸ್ ಮೂಲಕ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ತಿರಸ್ಕರಿಸಿದ್ದಾರೆ.

ಹೊರ ವರ್ತುಲ ರಸ್ತೆಯ ಇಬ್ಲೂರು ಜಂಕ್ಷನ್‌ ಬಳಿ ದಟ್ಟಣೆ ಹೆಚ್ಚಾಗಿದ್ದು, ಇದು ಉತ್ಪಾದಕತೆ ಮತ್ತು ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ, ಪರಸ್ಪರ ಒಪ್ಪಿತ ಷರತ್ತುಗಳೊಂದಿಗೆ ವಿಪ್ರೊ ಕ್ಯಾಂಪಸ್‌ನಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಿಎಂ ಪತ್ರ ಬರೆದು ಕೋರಿದ್ದರು. ಅದನ್ನು ಪ್ರೇಮ್​ಜಿ ಅವರು ತಿರಸ್ಕರಿಸಿದ್ದಾರೆ.

ಪ್ರೇಮ್‌ಜಿ ನಿರಾಕರಣೆಗೆ ಕಾರಣವೇನು?

ಮುಖ್ಯಮಂತ್ರಿಗಳ ಪತ್ರಕ್ಕೆ ಪ್ರತಿಕ್ರಿಯಿಸಿರುವ ಅಜೀಂ ಪ್ರೇಮ್‌ಜಿ, ಕಾನೂನು ಮತ್ತು ಶಾಸನಬದ್ಧ ತೊಡಕುಗಳನ್ನು ಉಲ್ಲೇಖಿಸಿದ್ದಾರೆ. "ನಮ್ಮ ಸರ್ಜಾಪುರ ಕ್ಯಾಂಪಸ್ ವಿಶೇಷ ಆರ್ಥಿಕ ವಲಯ (SEZ) ಆಗಿದ್ದು, ಇದು ಜಾಗತಿಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಇದು ಕಂಪನಿಯ ಖಾಸಗಿ ಆಸ್ತಿಯಾಗಿದ್ದು, ಸಾರ್ವಜನಿಕ ಬಳಕೆಗೆ ಅನುಮತಿ ಇಲ್ಲ. ಇಲ್ಲಿನ ಒಪ್ಪಂದದ ಷರತ್ತುಗಳು ಕಟ್ಟುನಿಟ್ಟಾಗಿದ್ದು, ಬದಲಾವಣೆ ಸಾಧ್ಯವಿಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಆಸ್ತಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ನೀಡುವುದು ದೀರ್ಘಕಾಲೀನ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು, ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಜ್ಞರ ನೇತೃತ್ವದಲ್ಲಿ ಅಧ್ಯಯನ ನಡೆಸುವುದಾದರೆ ಸರ್ಕಾರದೊಂದಿಗೆ ಕೈಜೋಡಿಸಲು ಸಿದ್ಧ ಎಂದು ಭರವಸೆ ನೀಡಿದ್ದಾರೆ.

ಈ ಬೆಳವಣಿಗೆಯಿಂದಾಗಿ, ಒಆರ್‌ಆರ್‌ ಟ್ರಾಫಿಕ್ ಸಮಸ್ಯೆಗೆ ಸದ್ಯಕ್ಕೆ ಪರ್ಯಾಯ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳುವ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ.

ಸಿಎಂ ಬರೆದ ಪತ್ರದಲ್ಲಿ ಏನಿತ್ತು?

ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಪ್ಟೆಂಬರ್ 19ರಂದು ಬರೆದ ಈ ಪತ್ರದಲ್ಲಿ, ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್) ಉಂಟಾಗುತ್ತಿರುವ ತೀವ್ರ ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು ವಿಪ್ರೊ ಸಂಸ್ಥೆಯ ಸಹಕಾರವನ್ನು ಕೋರಿದ್ದರು.

ಬೆಂಗಳೂರು ನಗರವು, ವಿಶೇಷವಾಗಿ ಹೊರ ವರ್ತುಲ ರಸ್ತೆಯ ಇಬ್ಲೂರು ಜಂಕ್ಷನ್ ಬಳಿ, ಗರಿಷ್ಠ ಸಂಚಾರದ ಅವಧಿಯಲ್ಲಿ (peak hours) ತೀವ್ರವಾದ ಟ್ರಾಫಿಕ್ ದಟ್ಟಣೆಯನ್ನು ಎದುರಿಸುತ್ತಿದೆ. ಇದು ನಗರದ ಚಲನಶೀಲತೆ, ಉತ್ಪಾದಕತೆ ಮತ್ತು ನಾಗರಿಕರ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.

ಈ ಸಮಸ್ಯೆಗೆ ಪರಿಹಾರವಾಗಿ, ವಿಪ್ರೊದ ಸರ್ಜಾಪುರ ಕ್ಯಾಂಪಸ್ ಮೂಲಕ ಸೀಮಿತ ಪ್ರಮಾಣದಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಕೋರಿದ್ದಾರೆ. ಈ ವ್ಯವಸ್ಥೆಯನ್ನು ಪರಸ್ಪರ ಒಪ್ಪಿತ ನಿಯಮಗಳು ಮತ್ತು ಅಗತ್ಯ ಭದ್ರತಾ ಕ್ರಮಗಳೊಂದಿಗೆ ಜಾರಿಗೆ ತರಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಸಂಚಾರ ಮತ್ತು ನಗರ ಸಾರಿಗೆ ತಜ್ಞರು ನಡೆಸಿದ ಪ್ರಾಥಮಿಕ ಅಧ್ಯಯನದ ಪ್ರಕಾರ, ವಿಪ್ರೊ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ, ಹೊರ ವರ್ತುಲ ರಸ್ತೆಯಲ್ಲಿನ ಗರಿಷ್ಠ ಸಮಯದ ದಟ್ಟಣೆಯನ್ನು ಸುಮಾರು 30% ರಷ್ಟು ಕಡಿಮೆ ಮಾಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಪ್ರಸ್ತಾಪವನ್ನು ಕಾರ್ಯಗತಗೊಳಿಸಲು, ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಸ್ಪರ ಸ್ವೀಕಾರಾರ್ಹವಾದ ಯೋಜನೆಯನ್ನು ಶೀಘ್ರವಾಗಿ ರೂಪಿಸುವಂತೆ ಹೇಳಿದ್ದರು.

ಪತ್ರದ ಆರಂಭದಲ್ಲಿ, ಕರ್ನಾಟಕದ ಐಟಿ ಪರಿಸರ ವ್ಯವಸ್ಥೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವಿಪ್ರೊ ನೀಡಿದ ಕೊಡುಗೆಯನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದ್ದರು. ಈ ಮೂಲಕ, ಟ್ರಾಫಿಕ್ ಸಮಸ್ಯೆಯ ಪರಿಹಾರಕ್ಕಾಗಿ ಸರ್ಕಾರದೊಂದಿಗೆ ಕೈಜೋಡಿಸುವಂತೆ ಸೌಹಾರ್ದಯುತವಾಗಿ ಮನವಿ ಮಾಡಿದ್ದರು  

Tags:    

Similar News