Actor Darshan Case | ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ಡಿ ಕೆ ಶಿವಕುಮಾರ್‌ ಹೇಳಿದ್ದೇನು?

ಹಿಂದೆ ಅವರ ಮಗನಿಗೆ ನನ್ನ ಸ್ಕೂಲ್‌ನಲ್ಲೇ ಸೀಟ್ ಕೊಟ್ಟಿದ್ದೆ. ಆ ನಂತರ ಬೇರೆ ಶಾಲೆಗೆ ಸೇರಿಸಿದ್ದರು. ಈಗ ಮತ್ತೆ ನಮ್ಮ ಶಾಲೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಾನು ಫ್ರಿನ್ಸಿಪಾಲ್ ಗೆ ಹೇಳುತ್ತೇನೆ ಎಂದು ಭರವಸೆ ಕೊಟ್ಟಿದ್ದೀನಿ, ಕೇಸ್ ವಿಚಾರವಾಗಿ ಮಾತನಾಡಲು ಅವರು ಬಂದಿರಲಿಲ್ಲ’ ಎಂದಿದ್ದಾರೆ.

Update: 2024-07-24 10:15 GMT
ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಡಿಸಿಎಂ ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ.
Click the Play button to listen to article

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಬಿಡುಗಡೆಗಾಗಿ ಕುಟುಂಬಸ್ಥರು ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮೊರೆ ಹೋಗಿದ್ದಾರೆ. 

ಬುಧವಾರ  ದರ್ಶನ್​ ಸಹೋದರ ದಿನಕರ್ ತೂಗುದೀಪ್ ಹಾಗೂ ವಿಜಯಲಕ್ಷ್ಮಿ ಅವರು ಬೆಂಗಳೂರಿನ ಸದಾಶಿವನಗರದ ಡಿ ಕೆ ಶಿವಕುಮಾರ್ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ.

ಆದರೆ‌, ಡಿ.ಕೆ ಶಿವಕುಮಾರ್‌ ಅವರು ಆ ಭೇಟಿಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ನಡೆದಿಲ್ಲ. ಅವರ ಮಗನ ಶಿಕ್ಷಣದ ವಿಷಯವಾಗಿ ಮಾತನಾಡಲು ಬಂದಿದ್ದರು ಎಂದಿದ್ದಾರೆ. 

ʻʻನಿನ್ನೆ ನನ್ನ ಭೇಟಿಗೆ ವಿಜಯಲಕ್ಷ್ಮಿ ಬಂದಿದ್ರು, ಅಲ್ಲಿ ಭೇಟಿಗೆ ನಾನು ಒಪ್ಪಲಿಲ್ಲ. ಬೆಳಿಗ್ಗೆ ಮನೆಯಲ್ಲಿ ಭೇಟಿಯಾಗುವಂತೆ ಹೇಳಿದ್ದೆ. ಹಿಂದೆ ಅವರ ಮಗನಿಗೆ ನನ್ನ ಸ್ಕೂಲ್‌ನಲ್ಲೇ ಸೀಟ್ ಕೊಟ್ಟಿದ್ದೆ. ಅವರ ಮಗ ವಿನೀಶ್‌ ನಮ್ಮ ಶಾಲೆಯಲ್ಲೇ ಓದುತ್ತಿದ್ದ. ನಂತರ ಬೇರೆ ಶಾಲೆಗೆ ಸೇರಿಸಿದ್ದರು. ಈಗ ಮತ್ತೆ ನಮ್ಮ ಶಾಲೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಾನು ಫ್ರಿನ್ಸಿಪಾಲ್ ಗೆ ಹೇಳುತ್ತೇನೆ ಎಂದು ಭರವಸೆ ಕೊಟ್ಟಿದ್ದೀನಿ. ಆ ವಿಷಯ ಹೊರತುಪಡಿಸಿ ಕೇಸ್ ವಿಚಾರವಾಗಿ ಮಾತನಾಡಲು ಅವರು ಬಂದಿರಲಿಲ್ಲ’ ಎಂದಿದ್ದಾರೆ.

ʻʻಈ ಕೇಸ್‌ಗೆ ನಾವು ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ. ಸಮಸ್ಯೆ, ತೊಂದರೆ ಆಗಿದ್ದರೆ ಕಾನೂನು ಇದೆ. ನಿನ್ನೆ ನಮ್ಮ ಕ್ಷೇತ್ರದ ಹುಡುಗರು ಗಲಾಟೆ ಮಾಡಿ ಕೂಗಿದ್ದರು. ಯಾವ ಬಾಸ್ ಗೊತ್ತಿಲ್ಲ, ಬಾಸ್ ಬಾಸ್ ಅಂತ ಕೂಗುತ್ತಿದ್ದರು. ಮಗುಗೆ ಸಹಾಯ ಮಾಡುತ್ತೇನೆ. ಮಾಧ್ಯಮದಲ್ಲಿ ‌ಏನು ಬರ್ತಿದೆ ಎಂದು ನೋಡಲು ನನಗೆ ಸಮಯವಿಲ್ಲ. ಒಂದೊಂದು ಟಿವಿಯಲ್ಲಿ ಒಂದೊಂದು ಬರ್ತದೆ. ನಾನು ಗೃಹ ಸಚಿವ‌ ಅಲ್ಲ. ಪೊಲೀಸ್‌ ತನಿಖೆಯಲ್ಲಿ ನಾವು ಮೂಗು ತೂರಿಸಲು ಸಾಧ್ಯವಿಲ್ಲ. ಮಗು ಶಿಕ್ಷಣದ ಬಗ್ಗೆ ಅವರಿಗೆ ಕಾಳಜಿ ಇದೆ. ಮಕ್ಕಳ ವಿಚಾರ ದೊಡ್ಡದು. ಹೆಣ್ಣು ಮಗಳಿಗೆ ಏನಾದರೂ ಅನ್ಯಾಯ ಆಗಿದ್ರೆ ಅವರಿಗೆ ಸಹಾಯ ಮಾಡಿರುತ್ತಿದ್ದೆ. ಆದರೆ ಈಗ ಕಾನೂನು ಕ್ರಮ ನಡೆಯುತ್ತಿದೆ. ಇಂಥ ಸಮಯದಲ್ಲಿ ಮಧ್ಯೆ ಪ್ರವೇಶ ಮಾಡಲು ಆಗುವುದಿಲ್ಲ. ಕಾನೂನು ಚೌಕಟ್ಟು ಅಡಿ ಏನಾದರೂ ಮಾಡೋಣ ಅಂತ ನಿನ್ನೆ ಹೇಳಿದ್ದೆ, ಹುಡುಗರು ನಿನ್ನೆ ಒತ್ತಾಯ ಮಾಡಿದ್ದರು. ನಾನು ಈ ವಿಚಾರದಲ್ಲಿ ಮಧ್ಯ ಬರೋದಿಲ್ಲ, ಸ್ಕೂಲ್ ವಿಚಾರದಲ್ಲಿ ಅಷ್ಟೇ ನಾನು ಮಾತನಾಡುತ್ತೇನೆ, ಸಹಾಯ ಮಾಡುತ್ತೇನೆʼʼಎಂದರು.

Tags:    

Similar News