Save Tunga Bhadra |ತುಂಗಭದ್ರಾ ಕಲುಷಿತ: ನಿರ್ಮಲ ತುಂಗ-ಭದ್ರಾ ಅಭಿಯಾನದ ಅಧ್ಯಯನ ವರದಿ ಬಹಿರಂಗ

ಶೃಂಗೇರಿಗೆ ಪ್ರತಿ ವರ್ಷ ಸುಮಾರು 75 ಲಕ್ಷ ಪ್ರವಾಸಿಗರು ಬಳಸುವ ಸ್ನಾನ ಹಾಗೂ ಶೌಚದ ನೀರು ನೇರವಾಗಿ ನದಿ ಸೇರುತ್ತಿದೆ. ಶೃಂಗೇರಿಯಿಂದ ಹರಿಹರದವರೆಗೆ ಶುದ್ದೀಕರಣ ಇಲ್ಲದ ತ್ಯಾಜ್ಯ ನದಿ ಸೇರುತ್ತಿವೆ.;

Update: 2025-06-11 03:38 GMT

ರಾಜ್ಯದಲ್ಲಿ ಅತೀ ಉದ್ದವಾಗಿ ಅಂದರೆ ಸುಮಾರು 500 ಕಿಲೋಮೀಟರ್‌ ಹರಿಯುವ ನದಿ ತುಂಗಭದ್ರಾ. ಪಶ್ಚಿಮಘಟ್ಟದ ಕುದುರೆಮುಖ ಸಮೀಪದ ಗಂಗಡಿಕಲ್‌ ಮತ್ತು ನೆಲ್ಲಿಬೀಡಿನಲ್ಲಿ ಜನ್ಮತಾಳುವ ತುಂಗೆ ಮತ್ತು ಭದ್ರಾ ನದಿಗಳು ಪ್ರತ್ಯೇಕವಾಗಿ ಹರಿಯುತ್ತವೆ. ಶಿವಮೊಗ್ಗ ತಾಲೂಕು ಕೂಡಲಿಯಲ್ಲಿ ತುಂಗಾ ಮತ್ತು ಭದ್ರಾ ನದಿಗಳ ಸಂಗಮವಾಗಿ ತುಂಗಭದ್ರಾ ನದಿಯಾಗಿ ಹರಿದು ಮುಂದೆ ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಕೃಷ್ಣ ನದಿಗೆ ಸೇರುತ್ತದೆ.

ಪಶ್ಚಿಮ ಘಟ್ಟ ಸಂಪದ್ಬರಿತ ಜೀವವೈವಿದ್ಯ ತಾಣದಲ್ಲಿ ಜೀವತಳೆವ ನದಿ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಲಾನಯನ ಪ್ರದೇಶವನ್ನು ಹೊಂದಿವೆ. ಇಲ್ಲಿಂದು ಖನಿಜಯುಕ್ತ ಜೀವಜಲವಾಗಿ ಹರಿವ ಈ ನದಿ ʼಗಂಗಾ ಸ್ನಾನ -ತುಂಗಾ ಪಾನʼ ಎಂಬ ನಾಣ್ಣಡಿಯಂತೆಯೇ ಹರಿಯುತಿತ್ತು.

ನಗರೀಕರಣವಾದಂತೆಲ್ಲ, ತುಂಗಭದ್ರಾ ನದಿ ಕಲುಷಿತಗೊಂಡು ತನ್ನ ಪಾವಿತ್ರತೆ ಕಳೆದುಕೊಂಡಿದೆ. ತುಂಗಭದ್ರಾ ನದಿ ಮಲಿನವಾಗುವುದನ್ನು ತಡೆಯದಿದ್ದಲ್ಲಿ ಇದು ಮತ್ತೊಂದು ವೃಷಭಾವತಿ ನದಿ ಆಗುವ ಆತಂಕವಿದೆ. ಸರ್ಕಾರ ನದಿ ಸುರಕ್ಷತೆ ಮೊದಲ ಆದ್ಯತೆ ನೀಡುವ ಮೂಲಕ ಮಾನವನೂ ಸೇರಿದಂತೆ ಸಕಲ ಜೀವರಾಶಿಯ ಜೀವ ರಕ್ಷಣೆ ಮಾಡುವ ತುರ್ತು ಅಗತ್ಯವಿದೆ ಎಂದು ನಿರ್ಮಲಾ ತುಂಗ-ಭದ್ರಾ ಅಭಿಯಾನ ಸಂಘಟನೆ ಕಳವಳ ವ್ಯಕ್ತಪಡಿಸಿದೆ.

ತಜ್ಞರು ಏನು ಹೇಳುತ್ತಾರೆ?

ಪರಿಸರ ವಿಜ್ಞಾನಿ ಡಾ. ಎಲ್.ಕೆ. ಶ್ರೀಪತಿ ಅವರು, "ಹಗರಿಬೊಮ್ಮನಹಳ್ಳಿ, ಮರಿಯಮ್ಮನ ಹಳ್ಳಿ, ಹೊಸಪೇಟೆ , ಗಂಗಾವತಿ ಸೇರಿದಂತೆ ಎಲ್ಲಾ ಪಟ್ಟಣಗಳಲ್ಲಿಯೂ ತ್ಯಾಜ್ಯ ವಿಲೇವಾರಿಯಲ್ಲಿ ಅವೈಜ್ಞಾನಿಕ ಕ್ರಮಗಳೇ ಇವೆ. ಈ ಭಾಗದ ಜನರಲ್ಲಿಯೂ ಜಾಗೃತಿ ಕಡಿಮೆಯಿದೆ. ನದಿ ಮಲಿನಗೊಳ್ಳುವುದರಿಂದ ಆಗುವ ಧೀರ್ಘಕಾಲೀನ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಜನರ ಆರೋಗ್ಯದ ಮೇಲೆ ಅಗಾಧವಾದ ಅಡ್ಡ ಪರಿಣಾಮಗಳು ಬೀರುತ್ತಿವೆ. ಜೀವನದಿಯನ್ನು ಮಲಿನ ಮಾಡಿದರೆ ಮುಂದಿನ ಪೀಳಿಗೆಯ ಮೇಲೆ ಮಾರಕ ಪರಿಣಾಮಗಳಾಗಲಿವೆ," ಎಂದು ಹೇಳಿದ್ದಾರೆ.

ಪರಿಸರ ತಜ್ಞ ಡಾ.ಬಿ.ಎಂ.ಕುಮಾರಸ್ವಾಮಿ ಅವರು, "ಹಂಪಿ, ಹುಲಿಗೆಮ್ಮ ದೇವಿ, ಶಿವಪುರದ ಮಾರ್ಕೇಂಡೇಯ ದೇವಸ್ಥಾನ, ಋಷಿಮುಖ ಪರ್ವತ,ಆನೆಗೊಂದಿ, ಪಂಪಾ ಸರೋವರ, ನವಬೃಂದಾವನಗಳಿಗೆ ಪ್ರತಿದಿನ ಬರುವ ಭಕ್ತರ ಪುಣ್ಯ ಸ್ಥಾನಕ್ಕೆ ಬಳಸುವ ಸೋಪು, ಶ್ಯಾಂಪುಗಳು ನದಿಯನ್ನು ಕಲುಷಿತ ಮಾಡುತ್ತಿವೆ. ಅಂಜನಾದ್ರಿಯ ಹನುಮ ಮಾಲಾಧಾರಿಗಳು ಬಟ್ಟೆಗಳನ್ನು ನದಿಯಲ್ಲಿ ಬಿಸಾಡುವುದರಿಂದ ತುಂಗಭದ್ರಾ ನದಿಯು ಮಲಿನವಾಗುತ್ತಿವೆ. ಈ ಎಲ್ಲ ಪುಣ್ಯ ಕ್ಷೇತ್ರಗಳಲ್ಲಿ ನದಿಯ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು," ಎಂದು ಅಭಿಪ್ರಾಯಪಟ್ಟಿದ್ದಾರೆ.

ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ...

ಶೃಂಗೇರಿಯಿಂದ ಕಿಷ್ಕಿಂದೆ (ಗಂಗಾವತಿ)ಯವರೆಗೆ 430 ಕಿಲೋಮೀಟರ್‌ ಪಾದಯಾತ್ರೆ ಮೂಲಕ ನದಿ ನೈರ್ಮಲ್ಯ ಕಾಪಾಡುವ ಜಾಗೃತಿ ಅಭಿಯಾನ ನಡೆಸಿರುವ ಸಂಸ್ಥೆ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಬಿಡುಗಡೆ ಮಾಡಿರುವ ಈ ವರದಿಯಲ್ಲಿ ತುಂಗಭದ್ರಾ ನದಿಯ ಮೇಲೆ ನಡೆಯುತ್ತಿರುವ ಮಾನವ ಶೋಷಣೆಯನ್ನು ಬಯಲುಮಾಡಿದೆ. ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಹಯೋಗದಲ್ಲಿ ಶಿವಮೊಗ್ಗ ಪರ್ಯಾವರಣ ಟ್ರಸ್ಟ್‌ ನದಿಪಾತ್ರದುದ್ದಕ್ಕೂ ಪಾದಯಾತ್ರೆ ಮಾಡಿದೆ. ಈ ವೇಳೆ ತುಂಗಭದ್ರಾ ನದಿ ವ್ಯಾಪಕವಾಗಿ ಮಲಿನವಾಗುತ್ತಿರುವುದು ದಾಖಲು ಮಾಡಿದೆ.

ನಗರಗಳಿಂದ ಘನ ತ್ಯಾಜ್ಯಗಳು ಹಾಗೂ ರಾಸಾಯನಿಕ ತ್ಯಾಜ್ಯಗಳು ಯಥೇಚ್ಚವಾಗಿ ನದಿಯ ನೀರನ್ನು ಸೇರುತ್ತಿದೆ. ಪಾದಯಾತ್ರೆ ಉದ್ದಕ್ಕೂ ಎಲ್ಲಾ ಕಡೆಯಿಂದ ನೀರಿನ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಲಾಗಿದೆ. ತಾಂತ್ರಿಕ ವರದಿ ಪ್ರಕಾರ ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ಬಂದಿದೆ. ನಮ್ಮ ಜೀವನದಿ ಅಪವಿತ್ರವಾಗುವುದನ್ನು ತಡೆದು ಜೀವರಾಶಿಯನ್ನು ಕಾಪಾಡಬೇಕಾದ ಗುರುತರವಾದ ಹೊಣೆಗಾರಿಕೆ ಸರ್ಕಾರ ಹಾಗೂ ಸಾರ್ವಜನಿಕರ ಮೇಲಿದೆ ಎಂದು ಹೇಳಿರುವ ನಿರ್ಮಲ ತುಂಗ-ಭದ್ರಾ ಅಭಿಯಾನ ಸಮಿತಿ ಪಾದಯಾತ್ರೆಯಲ್ಲಿ ನಡೆಸಿದ ಅಧ್ಯಯನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ.

ಪಾದಯಾತ್ರೆಯು 22 ದಿನಗಳಲ್ಲಿ ಒಟ್ಟು 430 ಕಿಲೋಮೀಟರ್‌ ಕ್ರಮಿಸಿದೆ. 7 ಜಿಲ್ಲೆಗಳ ಒಟ್ಟು 13 ತಾಲೂಕುಗಳ ಸುಮಾರು 120 ಗ್ರಾಮಗಳಲ್ಲಿ ಪಾದಯಾತ್ರೆ ಸಾಗಿದೆ. ಈ ಅವಧಿಯಲ್ಲಿ ಒಟ್ಟು 50 ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. 150 ಶಾಲಾ ಕಾಲೇಜಿನ 40 ಸಾವಿರ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.

250 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಸುಮಾರು 30 ಮಠ ಮಂದಿರಗಳು ಅಭಿಯಾನದಲ್ಲಿ ಪಾಲೊಂಡಿದ್ದವು. ತುಂಗ ಭದ್ರಾ ನದಿಯ ಮೇಲೆ ನಾಗರೀಕ ಸಮಾಜ ನಡೆಸುತ್ತಿರುವ ದೌರ್ಜನ್ಯದ ಪ್ರತ್ಯಕ್ಷ ಸಾಕ್ಷಿ ಗೋಚರವಾಗಿದೆ. ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಜನ ಪ್ರತಿನಿಧಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ಸಾರ್ವಜನಿಕರು ಸೇರಿ ನದಿಗೆ ಹರಿಯುವ ತ್ಯಾಜ್ಯಗಳನ್ನು ತಡೆಯಬೇಕಾಗಿದೆ. ಹೀಗಾಗದಿದ್ದಲ್ಲಿ ನದಿ ಪಾತ್ರದ ಎಲ್ಲರೂ ನಿತ್ಯ ವಿಷವುಣ್ಣಬೇಕಾದ ಪರಿಸ್ಥಿತಿ ಬರಲಿದೆ ಎಂದು ಅಭಿಯಾನದ ಪ್ರಮುಖರಾದ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಯಾನದ ಭಾಗವಾಗಿದ್ದ ವಿಜ್ಞಾನಿ ಪ್ರೊ.ಎಲ್.ಕೆ. ಶ್ರೀಪತಿ ಅವರು ಮಾತನಾಡಿ, ತುಂಗಭದ್ರಾ ನದಿಗೆ ನಗರಗಳ ಘನ ತ್ಯಾಜ್ಯ ಮತ್ತು ಚರಂಡಿ ನೀರು ನೇರವಾಗಿ ಸೇರುತ್ತಿವೆ. ಪ್ರತಿನಿತ್ಯ ಬಳಕೆಯಾಗುವ ರಾಸಾಯನಿಕಗಳು ನದಿ ನೀರನ್ನು ಕಲುಷಿತಗೊಳಿಸುತ್ತಿದೆ. ರೈತರು ಕೃಷಿಗೆ ಬಳಸುವ ಕೀಟ ನಾಶಕ, ಕಳೆನಾಶಕ, ರಾಸಾಯನಿಕ ಗೊಬ್ಬರದ ನೀರು ನದಿಯನ್ನು ವಿಷಯುಕ್ತ ಮಾಡುತ್ತಿವೆ. ನಮ್ಮ ಅಭಿಯಾನದಲ್ಲಿ ಸಂಗ್ರಹಿಸಿದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ನದಿ ಮಲಿನಗೊಂಡಿರುವುದು ದೃಢವಾಗಿದೆ. ಸರ್ಕಾರ ನದಿಯ ರಕ್ಷಣೆಗೆ ಮುಂದಾಗಬೇಕಿದೆ. ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ನಮ್ಮ ಆಂದೋಲನ ಇಲ್ಲಿಗೇ ನಿಲ್ಲುವುದಿಲ್ಲ. ತಾಲೂಕು ಮತ್ತು ಗ್ರಾಮಗಳಲ್ಲಿಯೂ ಸಮಿತಿಗಳನ್ನು ರಚನೆ ಮಾಡಿ ನದಿ ರಕ್ಷಣೆಗೆ ಅಳವಡಿಸಿಕೊಳ್ಳಬೇಕಾದ ಮತ್ತು ಸ್ಥಳೀಯ ಆಡಳಿತದ ಮೇಲೆ ಹೇರಬೇಕಾದ ಒತ್ತಡಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ನದಿ ಕಲುಷಿತಕ್ಕೆ ಕಾರಣಗಳು

  • ಶೃಂಗೇರಿಯಿಂದ ಹರಿಹರದವರೆಗೆ ಎಲ್ಲಾ ಗ್ರಾಮ ಮತ್ತು ಪಟ್ಟಣಗಳಲ್ಲಿ ಯಾವುದೇ ಶುದ್ದೀಕರಣ ಇಲ್ಲದೆ ತ್ಯಾಜ್ಯಗಳು ನದಿ ಸೇರುತ್ತಿವೆ.
  • ಶೃಂಗೇರಿಗೆ ಪ್ರತಿ ವರ್ಷ ಬರುವ ಸುಮಾರು 75 ಲಕ್ಷ ಪ್ರವಾಸಿಗರು ಬಳಸುವ ಸ್ನಾನ ಹಾಗೂ ಶೌಚದ ನೀರು ನೇರವಾಗಿ ನದಿ ಸೇರುತ್ತಿದೆ.
  • ಹರಿಹರ ನಗರದಲ್ಲಿ ಶುದ್ಧಿಕರಣ ಮಾಡದ ತ್ಯಾಜ್ಯದ ಜತೆ ಪಾಲಿಪೈಬರ್‌ ಕಾರ್ಖಾನೆಯ ತ್ಯಾಜ್ಯವೂ ನೇರವಾಗಿ ನದಿ ಸೇರುತ್ತಿದೆ.
  • ಶಿವಮೊಗ್ಗ ನಗರದಲ್ಲಿ ಹರಿಯುವ ತುಂಗಾ ನದಿಯ ನೀರಿನಲ್ಲಿ ಅಲ್ಯೂಮಿನಿಯಂ ಪ್ರಮಾಣ ದ್ವಿಗುಣವಾಗಿದೆ.
  • ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ನದಿ ಪಾತ್ರದಲ್ಲಿ ಅಭಿವೃದ್ಧಿ ಹೆಸರಲ್ಲಿ ಸ್ವಾಭಾವಿಕ ಅರಣ್ಯ ನಾಶವಾಗುತ್ತಿದ್ದು,ಜಲಾನಯನ ಪ್ರದೇಶ ಅವನತಿ ಹೊಂದುತ್ತಿದೆ.
  • ಬೇಸಿಗೆ ಕಾಲದಲ್ಲಿ ನದಿಗೆ ನೇರವಾಗಿ ಪಂಪ್‌ ಸೆಟ್‌ ಹಾಕಿ ರೈತರು ಕಿಲೋಮೀಟರ್‌ ಗಟ್ಟಲೆ ನೀರುವ ಸಾಗಿಸುವ ಕಾರಣ ನದಿಯಲ್ಲಿ ಹರಿವು ನಿಂತು ಹೆಚ್ಚು ಮಲಿನವಾಗುತ್ತಿದೆ.
  • ನದಿಯುದ್ದಕ್ಕೂ ಜನವಸತಿ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ನದಿಗೆ ಸೇರುತ್ತಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಸಾಯಿಖಾನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ನದಿಗೆ ಬಿಡಲಾಗುತ್ತಿದೆ. ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ಕೃಷಿ ರಾಸಾಯನಿಕಗಳು ನೇರವಾಗಿ ನದಿಗೆ ಸೇರುತ್ತಿವೆ. ನದಿಯುದ್ದಕ್ಕೂ ಇರುವ ಕೈಗಾರಿಕೆಗಳ ತ್ಯಾಜ್ಯಗಳು ನದಿಗೆ ಸೇರುತ್ತಿವೆ.

ಸರಕಾರಕ್ಕೆ ನೀಡಿದ ಸಲಹೆಗಳೇನು ?

  • ತೀರ್ಥ ಕ್ಷೇತ್ರ ಶೃಂಗೇರಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗಬೇಕು.
  • ತೀರ್ಥಹಳ್ಳಿ, ಶಿವಮೊಗ್ಗ, ಹೊನ್ನಾಳಿ, ಹರಿಹರದಲ್ಲಿ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗಬೇಕು.
  • ಪಂಚಾಯಿತಿ ಮಟ್ಟದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಆಗಬೇಕು.
  • ಪ್ಲಾಸ್ಟಿಕ್‌ ವಸ್ತುಗಳು ನದಿಗೆ ಸೇರುವುದನ್ನು ತಡೆಯಬೇಕು.
  • ನದಿ ಶುದ್ಧೀಕರಣಕ್ಕೆ ಎಲ್ಲಾ ಸ್ಥಳೀಯ ಸಂಸ್ಥೆ ಮತ್ತು ಪಟ್ಟಣಗಳಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು.
  • ಕೈಗಾರಿಕೆ, ಆಸ್ಪತ್ರೆ, ಹೋಟೆಲ್‌ ,ಕಸಾಯಿಖಾನೆಗಳಿಗೆ ಬರೀ ನೋಟಿಸ್‌ ಕೊಟ್ಟು ಸುಮ್ಮನಾಗದೆ, ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮ ಕೈಗೊಳ್ಳಬೇಕು.
Tags:    

Similar News