ತಂಬಾಕು ವ್ಯಾಪಾರಿಗಳಿಗೂ ಲೈಸೆನ್ಸ್ ಕಡ್ಡಾಯ: ಪೊಲೀಸ್ ಆಯುಕ್ತ ಬಿ ದಯಾನಂದ
ಬಿಬಿಎಂಪಿ ಮಾರ್ಷಲ್ಸ್ ಹಾಗೂ ಎನ್ಜಿಒಗಳ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳುವ ತಂಬಾಕು ಉತ್ಪನ್ನಗಳ ನಿಯಂತ್ರಣ ಹಾಗೂ ಕಾನೂನುಗಳ ಪಾಲನೆಯ ಕುರಿತು ಅರಿವು ಮೂಡಿಸಲಿದ್ದೇವೆ ಎಂದು ಬಿ ದಯಾನಂದ ತಿಳಿಸಿದ್ದಾರೆ.;
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್
ರಾಜ್ಯದಲ್ಲಿ ತಂಬಾಕು ವ್ಯಾಪಾರಿಗಳು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ವಿಶ್ವ ಧೂಮಪಾನ ನಿಷೇಧ ದಿನದ ಅಂಗವಾಗಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೇ 27ರಿಂದ ಜೂನ್ 2ರವರೆಗೆ ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಮಾರ್ಷಲ್ಸ್ ಹಾಗೂ ಎನ್ಜಿಒಗಳ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದರು. ಈ ಕಾರ್ಯಾಚರಣೆಯಲ್ಲಿ ತಂಬಾಕು ಉತ್ಪನ್ನಗಳ ನಿಯಂತ್ರಣ ಮತ್ತು ಕಾನೂನುಗಳ ಪಾಲನೆಯ ಕುರಿತು ಅರಿವು ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಇ-ಸಿಗರೇಟ್ಗಳು ಮತ್ತು ವೇಪಿಂಗ್ ಸಾಧನಗಳನ್ನು ಒಳಗೊಂಡ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ (ENDS) ನಿಷೇಧದ ಅನುಷ್ಠಾನಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ಮಾಲ್ಗಳು, ಕಾಫಿ ಬಾರ್ಗಳು ಮತ್ತು ಅಂಗಡಿಗಳಲ್ಲಿ ಅನಿರೀಕ್ಷಿತ ಭೇಟಿಯ ಮೂಲಕ ತಪಾಸಣೆ ನಡೆಸಲಾಗುವುದು ಎಂದು ಆಯುಕ್ತರು ಈ ವೇಳೆ ತಿಳಿಸಿದ್ದಾರೆ.
ಕಳೆದ ವರ್ಷ ₹80.8 ಲಕ್ಷ ದಂಡ ಸಂಗ್ರಹ
2024ರಿಂದ 2025ರ ಏಪ್ರಿಲ್ ವರೆಗೆ ಬೆಂಗಳೂರು ನಗರದಲ್ಲಿ COTPA (ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ) ಅಡಿ 57,130 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, **₹80.8 ಲಕ್ಷ** ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಗರದ ಆರೋಗ್ಯಕರ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ. ಅಕ್ರಮ ತಂಬಾಕು ಸೇವನೆ, ವೇಪಿಂಗ್ ಮತ್ತು ಹುಕ್ಕಾ ಬಳಕೆಯ ವಿರುದ್ಧದ ಕಠಿಣ ಕ್ರಮಗಳು ಹಾಗೂ ವ್ಯಾಪಾರಿಗಳಲ್ಲಿ ಪರವಾನಗಿ ಕುರಿತ ಜಾಗೃತಿ ಕಾರ್ಯಕ್ರಮಗಳು ತಂಬಾಕು ಮುಕ್ತ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿವೆ ಎಂದು ಆಯುಕ್ತ ದಯಾನಂದ್ ತಿಳಿಸಿದ್ದಾರೆ.