ಬಡತನಕ್ಕೆ ಬೇಸತ್ತು ಮಗ- ತಮ್ಮನಿಗೆ ವಿಷದೂಟ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ

ಮನೆಯ ಯಜಮಾನಿ ಭುವನೇಶ್ವರಿ (40) ಮತ್ತು ಈಕೆಯ ತಮ್ಮ ಮಾರುತಿ (38) ಹಾಗೂ ಮಗ ದರ್ಶನ (22) ಮೂವರು ಮೂವರು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Update: 2024-08-13 12:46 GMT
ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.
Click the Play button to listen to article

ಬಡತನದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಮಗ ಮತ್ತು ತಮ್ಮನಿಗೆ ಊಟದಲ್ಲಿ ವಿಷಬೆರೆಸಿ ಕೊಟ್ಟು ಬಳಿಕ ಅದೇ ವಿಷದೂಟ ಸೇವಿಸಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ಓಟಿ ರಸ್ತೆಯಲ್ಲಿರುವ ಆಜಾದ್ ನಗರದ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಮನೆಯ ಯಜಮಾನಿ ಭುವನೇಶ್ವರಿ (40) ಮತ್ತು ಈಕೆಯ ತಮ್ಮ ಮಾರುತಿ (38) ಹಾಗೂ ಮಗ ದರ್ಶನ (22) ಮೂವರು ಮೂವರು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆ ಎರಡು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಮನೆ ಒಳಗೆಯಿಂದ ಲಾಕ್ ಆಗಿತ್ತು. ಅಕ್ಕ-ಪಕ್ಕದವರಿಗೆ ಶವದ ದುರ್ವಾಸನೆ ಬರುವುದಕ್ಕೆ ಶುರುವಾಗಿದೆ. ಬಳಿಕ ಕಿಟಕಿ ಗಾಜು ಒಡೆದು ನೋಡಿದಾಗ ಮೂವರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿಯು ತಿಳಿಯುತ್ತಿದ್ದಂತೆ ಬಡಾವಣೆ ಮತ್ತು ಅಕ್ಕ-ಪಕ್ಕದ ಜನರು ಜಮಾಯಿಸಿದ್ದರು.

ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚುವರಿ ಎಸ್ಪಿ ಸೇರಿದಂತೆ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳಕ್ಕೆ ಭೇಟಿ ನೀಡಿ ಮೂವರ ಸಾವಿನ ಕುರಿತು ಮಾಹಿತಿ ಕಲೆಹಾಕಿದರು.

ಭುವನೇಶ್ವರಿ ಅವರ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಭುವನೇಶ್ವರಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು, ಇಡೀ ಕುಟುಂಬದ ಜವಾಬ್ದಾರಿಯು ಮಹಿಳೆಯ ಮೇಲೆ ಇತ್ತು. ಮನೆಯಲ್ಲಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಮತ್ತು ವಯಸ್ಸಿಗೆ ಬಂದ ಮಗನು ನೆಟ್ಟಿಗೆ ದುಡಿಯುತ್ತಿರಲಿಲ್ಲ. ಈ ಇಬ್ಬರು ದುಡಿಯದೇ ಇರುವುದು ದೊಡ್ಡ ಸಮಸ್ಯೆಯಾಗಿತ್ತು.ಬಡತನದಿಂದ ಬೆಂದು ಹೋಗಿದ್ದ ಮಹಿಳೆಗೆ ಕುಟುಂಬ ನಿರ್ವಹಣೆಯು ದೊಡ್ಡ ಸವಾಲು ಅಗಿತ್ತು. ದಿನೇ ದಿನೇ ಖರ್ಚು ವೆಚ್ಚ ಜಾಸ್ತಿ ಆಗುತ್ತಿತ್ತು. ಒಬ್ಬಳೇ ದುಡಿದು ಇಡೀ ಕುಟುಂಬದ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಮಗ ಮತ್ತು ತಮ್ಮನ ನಡತೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇದರಿಂದ ಬೇಸತ್ತು ಮಹಿಳೆಯು ಕೊನೆಗೆ ಇಬ್ಬರನ್ನು ಕೊಂದು ತಾನು ಸಾಯುವ ನಿರ್ಧಾರಕ್ಕೆ ಬಂದಿದ್ದಳು.

ಊಟದಲ್ಲಿ ವಿಷಬೆರೆಸಿ ಮೊದಲು ಇಬ್ಬರಿಗೆ ಕೊಟ್ಟಿದ್ದಾಳೆ. ಇಬ್ಬರು ಮೃತಪಟ್ಟ ಬಳಿಕ ಇವಳು ಅದೇ ವಿಷದೂಟ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಮೂವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

Tags:    

Similar News