ಡೀಮ್ಡ್ ಫಾರೆಸ್ಟ್ ಗೊಂದಲ ನಿವಾರಣೆಗೆ ಸಮಿತಿ: ಸಚಿವ ಈಶ್ವರ ಖಂಡ್ರೆ

ರಾಜ್ಯದಲ್ಲಿ 3.30ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯವಿದ್ದು, ಇದರ ನೈಜ ಸ್ಥಿತಿಗತಿಯನ್ನು ಮರುಪರಿಶೀಲಿಸಲು ವಿಶೇಷ ಸಮಿತಿ ರಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

Update: 2025-12-11 10:36 GMT
Click the Play button to listen to article

ರಾಜ್ಯದಲ್ಲಿನ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದ ವ್ಯಾಪ್ತಿಯ ಬಗ್ಗೆ ಎದ್ದಿರುವ ಗೊಂದಲಗಳನ್ನು ಪರಿಹರಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 2022ರಲ್ಲಿ ಸುಪ್ರೀಂ ಕೋರ್ಟ್‌ಗೆ ನೀಡಲಾದ ಮಾಹಿತಿಯಂತೆ ರಾಜ್ಯದಲ್ಲಿ 3.30ಲಕ್ಷ  ಹೆಕ್ಟೇರ್ ಡೀಮ್ಡ್ ಅರಣ್ಯವಿದ್ದು, ಇದರ ನೈಜ ಸ್ಥಿತಿಗತಿಯನ್ನು ಮರುಪರಿಶೀಲಿಸಲು ವಿಶೇಷ ಸಮಿತಿ ರಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಕಟಿಸಿದ್ದಾರೆ.

ವಿಧಾನಸಭೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾಸ್ತವ ಅರಣ್ಯ ಪ್ರದೇಶ ಗುರುತಿಸಲು ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೇ ನಡೆಸಲಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಿರುವ ಸಮಿತಿಯು ಮುಂದಿನ 6 ತಿಂಗಳಿನಲ್ಲಿ ವರದಿ ನೀಡಲಿದೆ. ಅಂತಿಮ ವರದಿಗೂ ಮುನ್ನ ಪ್ರತಿ ಜಿಲ್ಲೆಯ ಕೆ.ಡಿ.ಪಿ ಸಭೆಯಲ್ಲಿ ಶಾಸಕರೊಂದಿಗೆ ಚರ್ಚಿಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ತೆರವು ವಿಚಾರವಾಗಿ ಮಾತನಾಡಿದ ಸಚಿವರು, ಒಮ್ಮೆ ಅರಣ್ಯ ಎಂದು ದಾಖಲಾದರೆ ಅದು ಸದಾ ಅರಣ್ಯವೇ ಆಗಿರುತ್ತದೆ ಎಂಬುದು ಸುಪ್ರೀಂ ಕೋರ್ಟ್ ತೀರ್ಪು. ಆದರೆ, ಖಾಸಗಿ ಪಟ್ಟಾ ಜಮೀನು ಹೊಂದಿರುವ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿದರು. ಕೋಲಾರ ಜಿಲ್ಲೆಯಲ್ಲಿ ಒಟ್ಟು 51,987 ಹೆಕ್ಟೇರ್ ಅರಣ್ಯವಿದ್ದು, ಜಂಟಿ ಸರ್ವೇ ಮೂಲಕ ಒತ್ತುವರಿ ಗುರುತಿಸಿ ನೋಟಿಸ್ ನೀಡಲಾಗಿದೆ ಎಂದರು.

ಇದೇ ವೇಳೆ, ಬಂಗಾರಪೇಟೆಯ ಇಂದಿರಾಗಾಂಧಿ ಪಾರ್ಕ್ ಅಭಿವೃದ್ಧಿಗೆ ಈಗಾಗಲೇ 2.37 ಕೋಟಿ ರೂ. ಅನುದಾನ ನೀಡಲಾಗಿದ್ದು, ಅಗತ್ಯವಿದ್ದರೆ ಹೆಚ್ಚಿನ ನೆರವು ನೀಡುವುದಾಗಿ ಹೇಳಿದರು. ಮಾಲೂರು ಭಾಗದಲ್ಲಿ ಆನೆ ಹಾವಳಿ ತಡೆಗೆ 74.43 ಕಿ.ಮೀ. ಸೋಲಾರ್ ಬೇಲಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಈ ನಡೆಯನ್ನು ಶಾಸಕರಾದ ಸಿ.ಸಿ. ಪಾಟೀಲ್, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ ಸ್ವಾಗತಿಸಿದ್ದು, ಸರ್ವೇ ಕಾರ್ಯ ಮುಗಿಯುವವರೆಗೆ ಜನಸಾಮಾನ್ಯರಿಗೆ ತೊಂದರೆ ಕೊಡಬಾರದು ಎಂದು ಮನವಿ ಮಾಡಿದರು.

ಹಿನ್ನೆಲೆ ಏನು?

2022ರಲ್ಲಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವಾಗ, ರಾಜ್ಯದಲ್ಲಿ 3.30 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯವಿದೆ ಎಂದು ಮಾಹಿತಿ ನೀಡಿತ್ತು. ಆದರೆ, ಈ ಪಟ್ಟಿಯಲ್ಲಿ ಉಲ್ಲೇಖಿಸಲಾದ ಅನೇಕ ಜಮೀನುಗಳಲ್ಲಿ ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿದ್ದಾರೆ ಹಾಗೂ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿದ್ದವು. "ಅರಣ್ಯದ ಲಕ್ಷಣಗಳನ್ನು ಹೊಂದಿರುವ" ಭೂಮಿಯನ್ನು ಡೀಮ್ಡ್ ಅರಣ್ಯ ಎಂದು ಕರೆಯಲಾಗುತ್ತದೆ. ಆದರೆ ಗಡಿ ಗುರುತಿಸುವಿಕೆಯಲ್ಲಿನ ದೋಷಗಳಿಂದಾಗಿ ರೈತರಿಗೆ ತೊಂದರೆಯಾಗುತ್ತಿತ್ತು.

ಈಗ ರಚಿಸಲಾಗಿರುವ ಸಮಿತಿಯು, ಮೈದಾನ ಮಟ್ಟದಲ್ಲಿ ಪರಿಶೀಲನೆ ನಡೆಸಿ, ಯಾವುದು ನಿಜವಾದ ಅರಣ್ಯ ಮತ್ತು ಯಾವುದು ಕಂದಾಯ ಭೂಮಿ ಎಂಬುದನ್ನು ಸ್ಪಷ್ಟಪಡಿಸಲಿದೆ. ಸಮಿತಿಯ ವರದಿ ಬಂದ ನಂತರ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದ್ದು, ಅಲ್ಲಿಯವರೆಗೂ ರೈತರಲ್ಲಿರುವ ಗೊಂದಲ ಮತ್ತು ಆತಂಕವನ್ನು ನಿವಾರಿಸಲು ಈ ಕ್ರಮ ಸಹಕಾರಿಯಾಗಲಿದೆ. ಈ ಮರುಪರಿಶೀಲನಾ ಪ್ರಕ್ರಿಯೆಯು ಮಲೆನಾಡು ಹಾಗೂ ಕರಾವಳಿ ಭಾಗದ ರೈತರಿಗೆ ದೊಡ್ಡ ಮಟ್ಟದ ನೆಮ್ಮದಿ ತರುವ ನಿರೀಕ್ಷೆಯಿದೆ.

Tags:    

Similar News