ನೆಲಮಂಗಲ ಬಳಿ ಕುರಿ ತುಂಬಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ, ಮೂವರು ಸಾವು
ಲಾರಿಯಲ್ಲಿದ್ದ ಸೀನಪ್ಪ(50), ನಝಿರ್ ಅಹ್ಮದ್(36) ಹಾಗೂ ಆನಂದ್(42) ಮೃತಪಟ್ಟಿದ್ದು, ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;
ಅಪಘಾತದ ರಭಸಕ್ಕೆ ಜಖಂಗೊಂಡಿರುವ ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್
ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಬಳಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಕುರಿ ಮತ್ತು ಮೇಕೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಕೆಎಸ್ಆರ್ಟಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮುಧೋಳದಿಂದ ಬೆಂಗಳೂರಿಗೆ ಕುರಿ ಮತ್ತು ಮೇಕೆಗಳನ್ನು ಸಾಗಿಸುತ್ತಿದ್ದ ಲಾರಿಯ ಟೈಯರ್ ಪಂಚರ್ ಆಗಿತ್ತು. ಹೀಗಾಗಿ, ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ, ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಈ ದುರ್ಘಟನೆಯಲ್ಲಿ ಲಾರಿಯಲ್ಲಿದ್ದ ಸೀನಪ್ಪ (50), ನಝೀರ್ ಅಹ್ಮದ್ (36) ಮತ್ತು ಆನಂದ್ (42) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆಲಮಂಗಲ ಸಂಚಾರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ರೀತಿಯ ಘಟನೆಗಳ ಸರಣಿ:
ಕಳೆದ ರಾತ್ರಿಯಷ್ಟೇ (ಶುಕ್ರವಾರ), ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ಇದೇ ರೀತಿಯ ಭೀಕರ ಅಪಘಾತ ಸಂಭವಿಸಿತ್ತು. ಓವರ್ಟೇಕ್ ಮಾಡುವ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಬಾಗಲಕೋಟೆ ಮೂಲದ ಮೂವರು ಮೃತಪಟ್ಟಿದ್ದರು.