The Federal Exclusive Interview | ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ: ಅಪ್ಪನೇ ಮುಂದುವರಿಕೆ ಎಂದ ನಿಖಿಲ್ ಕುಮಾರಸ್ವಾಮಿ
ಸೋಮವಾರದಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 58 ದಿನಗಳ ರಾಜ್ಯವ್ಯಾಪಿ ಸಂಘಟನಾ ಪ್ರವಾಸ 'ಜನರೊಂದಿಗೆ ಜನತಾದಳ' ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ಮನದಾಳದ ಮಾತುಗಳನ್ನು ಆಡಿದ್ದಾರೆ.;
ಕರ್ನಾಟಕ ರಾಜಕಾರಣದಲ್ಲಿ ಜೆಡಿಎಸ್ (ಜನತಾದಳ ಸೆಕ್ಯುಲರ್ ಪಕ್ಷ) ಮತ್ತೆ ತನ್ನ ಬೇರುಗಳನ್ನು ಭದ್ರಪಡಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಕಳೆದ ಲೋಕಸಭಾ ಚುನಾವಣಾ ಪೂರ್ವದಲ್ಲಿ ಎನ್ಡಿಎ ಒಕ್ಕೂಟ ಸೇರಿಕೊಂಡಿದ್ದ ಈ ಪ್ರಾದೇಶಿಕ ಪಕ್ಷ, ಇದೀಗ ತನ್ನ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲು ಮುಂದಾಗಿದೆ. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೂನ್ 16ರಿಂದ ‘ಜನರೊಂದಿಗೆ ಜನತಾದಳ’ ಎಂಬ ಬೃಹತ್ ಸಂಘಟನಾ ಪ್ರವಾಸ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ 'ದ ಫೆಡರಲ್ ಕರ್ನಾಟಕ'ಕ್ಕೆ ವಿಶೇಷ ವಿಡಿಯೊ ಸಂದರ್ಶನ ನೀಡಿದ ನಿಖಿಲ್, ತಮ್ಮ ಮನದಾಳದ ಮಾತುಗಳನ್ನು ಆಡುವ ಜತೆಗೆ ಪಕ್ಷ ಸಂಘಟನೆಯ ಯೋಜನೆಯನ್ನು ವಿವರಿಸಿದ್ದಾರೆ.
''ಜನರೊಂದಿಗೆ ಜನತಾದಳ" ಯಾತ್ರೆಯ ಮೂಲಕ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸಿ, ಅವರಲ್ಲಿ ಉತ್ಸಾಹ ತುಂಬಲಿದ್ದೇನೆ. ಸ್ಥಳೀಯ ನಾಯಕರೊಂದಿಗೆ ಸಮಾಲೋಚಿಸಿ, ರಾಜ್ಯದಾದ್ಯಂತ ಜೆಡಿಎಸ್ನ ಜನಬೆಂಬಲವನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದೇನೆ,'' ಎಂಬುದಾಗಿ ನಿಖಿಲ್ ಅವರು ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ರಾಜ್ಯಾಧ್ಯಕ್ಷ ಆಗುವ ಆಸೆ ಇಲ್ಲ
"ನನಗೆ ರಾಜ್ಯಾಧ್ಯಕ್ಷ ಆಗುವ ಆಸೆ ಇಲ್ಲ. ಪಕ್ಷ ಸಂಘಟನೆ ಮಾತ್ರ ನನ್ನ ಗುರಿ" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ತಂದೆ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯದ ಕುರಿತು ಯಾವುದೇ ಆತಂಕ ಬೇಡ ಎಂದಿರುವ ನಿಖಿಲ್ ಕುಮಾರಸ್ವಾಮಿ. "ಅವರು ಆರೋಗ್ಯವಾಗಿಯೇ ಇದ್ದಾರೆ. ಯಾರೂ ಆತಂಕಪಡುವ ಅಗತ್ಯ ಇಲ್ಲ. ಹಿಂದಿನ ಕೆಲವು ಚಿಕಿತ್ಸೆಗಳ ವೇಳೆ ಕೆಲ ಅಡ್ಡ ಪರಿಣಾಮಗಳು ಬೀರಿದ್ದವು. ಆದರೆ ಈಗ ಎಲ್ಲವೂ ಸರಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಾನು ಪಕ್ಷದ ಟ್ರಬಲ್ ಶೂಟರ್
''ಪಕ್ಷದಲ್ಲಿ ಒಂದಷ್ಟು ಸಮಸ್ಯೆಗಳಿವೆ, ಇಲ್ಲಿ ಒಬ್ಬ ಟ್ರಬಲ್ ಶೂಟರ್ ಬೇಕಾಗಿದೆ. ನಾನು ಆ ಪಾತ್ರವನ್ನು ನಿರ್ವಹಿಸುತ್ತೇನೆ," ಎಂದು ನಿಖಿಲ್ ಕುಮಾರಸ್ವಾಮಿ ದೃಢವಾಗಿ ಹೇಳಿದ್ದಾರೆ. "ಪ್ರವಾಸದ ವೇಳೆ ಎಲ್ಲೆಲ್ಲಿ ಸಮಸ್ಯೆ ಆಗಿದೆ, ಅದನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತೇನೆ. ಪಕ್ಷದ ಸಂಘಟನೆಗೆ ಒತ್ತು ನೀಡಿ, ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಬಗೆಹರಿಸುವತ್ತ ಗಮನ ಹರಿಸುತ್ತೇನೆ" ಎಂದು ತಿಳಿಸಿದ್ದಾರೆ.
ಪಕ್ಷದ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಅವರೊಂದಿಗೆ ಇರುವ ಅಸಮಾಧಾನದ ಬಗ್ಗೆ ಮಾತನಾಡಿದ ನಿಖಿಲ್, "ನಾನೇ ಖುದ್ದಾಗಿ ಅವರಿಗೆ ದೂರವಾಣಿ ಕರೆ ಮಾಡಿ, ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೇನೆ" ಎಂದು ಹೇಳಿದ್ದಾರೆ. ಜಿ.ಟಿ. ದೇವೇಗೌಡ ಅವರಿಗೆ ಒಂದಷ್ಟು ಅಸಮಾಧಾನ ಇದೆ ಎಂದು ಒಪ್ಪಿಕೊಂಡಿರುವ ನಿಖಿಲ್, ಅವರೊಂದಿಗೆ ಮಾತನಾಡಿದ್ದು, ಪ್ರವಾಸದ ಮೂಲಕ ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿರುವೆ. ಇದು ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.
ಮಧ್ಯಂತರ ಚುನಾವಣೆ ನಿಶ್ಚಿತ
ರಾಜ್ಯ ರಾಜಕೀಯದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನಿಖಿಲ್ ಕುಮಾರಸ್ವಾಮಿ, "ಈಗಿನ ರಾಜಕೀಯ ಬೆಳವಣಿಗೆ ನೋಡಿದರೆ ಮಧ್ಯಂತರ ಚುನಾವಣೆ ನಿಶ್ಚಿತ" ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ತಿಂಗಳಲ್ಲಿ ಹಲವಾರು ಬೆಳವಣಿಗೆಗಳು ನಡೆಯಲಿವೆ. ಅವುಗಳ ಬಗ್ಗೆ ಕುತೂಹಲಗಳಿವೆ ಎಂದಿರುವ ಅವರು, ಜೆಡಿಎಸ್ ಪಕ್ಷವು ಮಾತ್ರ ಯಾವುದೇ ಪರಿಸ್ಥಿತಿಗೂ ಸಿದ್ಧವಾಗಿದ್ದು, ಪಕ್ಷದ ಸಂಘಟನೆ ಕಡೆ ಗಮನ ನೀಡುತ್ತಿದ್ದೇವೆ,'' ಎಂದು ತಿಳಿಸಿದ್ದಾರೆ.
ಮೂರು ಸೋಲುಗಳಿಂದ ಪಾಠ ಕಲಿತಿರುವೆ
ನಿಖಿಲ್ ಅವರು ತಮ್ಮ ರಾಜಕೀಯ ಪಯಣದಲ್ಲಿ ಅನುಭವಿಸಿದ ಮೂರು ಚುನಾವಣಾ ಸೋಲುಗಳ ಕುರಿತು ಮಾತನಾಡಿದ್ದಾರೆ. ಈ ಸೋಲುಗಳು ತಮಗೆ ಅಮೂಲ್ಯ ಪಾಠಗಳನ್ನು ಕಲಿಸಿವೆ ಎಂದು ಅವರು ಹೇಳಿದ್ದಾರೆ."ಮೂರು ಚುನಾವಣಾ ಸೋಲುಗಳು ನನಗೆ ಅನುಭವದ ಜೊತೆಗೆ ಕೆಲ ಪಾಠಗಳನ್ನು ಕಲಿಸಿವೆ, ಚುನಾವಣೆ ಫುಟ್ಬಾಲ್ ಅಲ್ಲ, ಚೆಸ್ ಎಂಬುದು ಈಗ ಗೊತ್ತಾಗಿದೆ. ಯಾವಾಗ 'ಪಾನ್' (ಪದಾತಿ) ಅನ್ನು ಮೂವ್ ಮಾಡಬೇಕು ಎನ್ನುವುದು ಮುಖ್ಯ," ಎಂದು ತಮ್ಮ ರಾಜಕೀಯ ತಂತ್ರಗಾರಿಕೆಯ ಕುರಿತು ಮಾತನಾಡಿದ್ದಾರೆ. ಅಲ್ಲದೆ, ಈ ಫಲಿತಾಂಶಗಳಿಂದ ತಾನು ಯಾವುದೇ ಕಾರಣಕ್ಕೂ ಧೃತಿಗೆಡಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಭೆ-ಸಮಾರಂಭಗಳಿಲ್ಲದೆ ಸರಳ ಪ್ರವಾಸ
"ಈ 58 ದಿನಗಳ ಪ್ರವಾಸದಲ್ಲಿ ಯಾವುದೇ ಬಹಿರಂಗ ಸಾರ್ವಜನಿಕ ಸಮಾವೇಶಗಳು ಅಥವಾ ಬೃಹತ್ ಸಮಾರಂಭಗಳು ಇರುವುದಿಲ್ಲ. ಬದಲಿಗೆ, ಪ್ರತಿಯೊಂದು ತಾಲೂಕಿನಲ್ಲಿಯೂ ಸ್ಥಳೀಯ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರೊಂದಿಗೆ ‘ಕ್ಲೋಸ್ಡ್ ಡೋರ್’ (ಆಂತರಿಕ) ಸಭೆಗಳನ್ನು ನಡೆಸಲಾಗುವುದು. ಈ ಸಭೆಗಳಲ್ಲಿ ಪಕ್ಷದ ಸಂಘಟನೆ, ಮುಂಬರುವ ಚುನಾವಣೆಗಳ ತಂತ್ರಗಾರಿಕೆ, ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆಗಳನ್ನು ನಡೆಸಲಿದ್ದೇವೆ. ಈ ವೇಳೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು,'' ಎಂದು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ʼದ ಫೆಡರಲ್ ಕರ್ನಾಟಕʼ ಕ್ಕೆ ನೀಡಿದ ವಿಶೇಷ ಸಂದರ್ಶನದ ಪೂರ್ಣ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.