Mysore MUDA Case | ತನಿಖಾಧಿಕಾರಿ ಬದಲಾವಣೆಗೆ ಸ್ನೇಹಮಯಿ ಕೃಷ್ಣ ಮನವಿ
ಮುಡಾ ಹಗರಣ ಸಂಬಂಧ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಲು ಮತ್ತೊಮ್ಮೆ ಕಾಲಾವಕಾಶ ಕೋರಿರುವುದಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಆಕ್ಷೇಪಣೆ ಸಲ್ಲಿಸಿದ್ದಾರೆ. ಅಲ್ಲದೇ ತನಿಖಾಧಿಕಾರಿ ಬದಲಾವಣೆಗೂ ಮನವಿ ಮಾಡಿದ್ದಾರೆ.;
ಸ್ನೇಹಮಯಿ ಕೃಷ್ಣಾ
ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆಗೆ ನಿಯೋಜಿತರಾಗಿರುವ ತನಿಖಾಧಿಕಾರಿಯನ್ನು ಬದಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.
ಮುಡಾ ಹಗರಣ ಸಂಬಂಧ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಲು ಮತ್ತೊಮ್ಮೆ ಕಾಲಾವಕಾಶ ಕೋರಿರುವುದಕ್ಕೂ ಸ್ನೇಹಮಯಿ ಕೃಷ್ಣ ಆಕ್ಷೇಪಣೆ ಸಲ್ಲಿಸಿದ್ದಾರೆ.
ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೈಸೂರು ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಲು ಸಮಯ ನಿಗದಿಯಾಗಿತ್ತು. ಆದರೆ, ಈ ಹಿಂದೆ ಕೂಡ ಕಾಲಾವಕಾಶ ಕೋರಿದ್ದ ಪೊಲೀಸರು ಈಗ ಮತ್ತೆ ವರದಿ ಸಲ್ಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿರುವುದು ಸರಿಯಲ್ಲ. ಪೊಲೀಸರು ಆರೋಪಿಗಳ ಪರ ಇದ್ದು, ಅನಗತ್ಯವಾಗಿ ವರದಿ ಸಲ್ಲಿಕೆಗೆ ವಿಳಂಬ ಮಾಡುತ್ತಿದ್ದಾರೆ. ತನಿಖೆಯ ವಿಧಾನವು ಕಾನೂನಿನ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇತರೆ ನಾಲ್ವರು ಆರೋಪಿಗಳಿಗೆ ಕ್ಲೀನ್ಚಿಟ್ ನೀಡಲು ʻಬಿ ರಿಪೋರ್ಟ್ʼ ಸಲ್ಲಿಸಲು ಅವಕಾಶ ಇಲ್ಲ. ತನಿಖೆ ವಿಳಂಬ ಮಾಡಿ ಪ್ರಕರಣವನ್ನು ಬಾಕಿ ಇಡುವಂತೆ ಮಾಡುವುದು ಸಾಧ್ಯವಿಲ್ಲ, ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ತನಿಖಾಧಿಕಾರಿಯನ್ನು ಬದಲಿಸಬೇಕು ಎಂದು ಕೋರಿದ್ದಾರೆ.
ದೂರುದಾರರ ಮನವಿಗೆ ಅಗತ್ಯ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿತು.