ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ: ಸಚಿವ ಸಂಪುಟ ನಿರ್ಣಯ

ಕೇಂದ್ರ ಸರ್ಕಾರದ ಸುತ್ತೋಲೆಯ ನಿರ್ದೇಶನಗಳನ್ನೇ ರಾಜ್ಯಪಾಲರು ಪಾಲಿಸಿಲ್ಲ. ಆದ್ದರಿಂದ ರಾಜ್ಯಪಾಲರ ನಿರ್ಣಯ ಕಾನೂನುಬಾಹಿರ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ

Update: 2024-08-18 03:16 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಅವರ ಕ್ರಮ ಕಾನೂನು ಬಾಹಿರವಾಗಿದ್ದು, ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಧಕ್ಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಪ್ರಜಾತಂತ್ರಕ್ಕೆ ಧಕ್ಕೆ ಎಂದು ಶುಕ್ರವಾರ ಸಂಜೆ ನಡೆದ ರಾಜ್ಯ ಸಚಿವ ಸಂಪುಟ ನಿರ್ಣಯಿಸಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ತೀರ್ಮಾನ ಅಸಂವಿಧಾನಿಕ, ಕಾನೂನುಬಾಹಿರ ಎಂದು ಖಂಡಿಸಲಾಗಿದ್ದು, ಅವರ ಕ್ರಮ ಸಂವಿಧಾನಬಾಹಿರ ಎಂದು ನಿರ್ಣಯಿಸಿದೆ.

"ರಾಜ್ಯಪಾಲರು ರಾಷ್ಟ್ರಪತಿ, ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ ಹೊರತು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಚುನಾಯಿತ ಸರ್ಕಾರವನ್ನು ಅಸ್ತಿರಗೊಳಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಧಕ್ಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಪ್ರಜಾತಂತ್ರಕ್ಕೆ ಧಕ್ಕೆ," ಎಂಬ ನಿರ್ಣಯಕ್ಕೆ ಬರಲಾಗಿದೆ.

"ಎಲ್ಲಾ ರಾಜ್ಯ ಸರ್ಕಾರಗಳ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಸೆಪ್ಟೆಂಬರ್‌ 3, 2021 ಕ್ಕೆ ಕೇಂದ್ರ ಸರ್ಕಾರವೇ ಕಳುಹಿಸಿರುವ ಸುತ್ತೋಲೆಯನ್ನೇ ರಾಜ್ಯಪಾಲರು ಅನುಸರಿಸಿಲ್ಲ. ಸುತ್ತೋಲೆಯಲ್ಲಿರುವ ನಿರ್ದೇಶನಗಳನ್ನೇ ರಾಜ್ಯಪಾಲರು ಪಾಲಿಸಿಲ್ಲ. ಆದ್ದರಿಂದ ರಾಜ್ಯಪಾಲರ ನಿರ್ಣಯ ಕಾನೂನುಬಾಹಿರ. ಈ ಕಾನೂನುಬಾಹಿರ ತೀರ್ಮಾನದ ವಿರುದ್ಧ ಕಾನೂನು ಹೋರಾಟ ನಡೆಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ."ಚುನಾಯಿತ ಸರ್ಕಾರವನ್ನು ಕಿತ್ತಾಕುವ ಕೇಂದ್ರ ಸರ್ಕಾರದ ದುರುದ್ದೇಶದ ಪ್ರಯತ್ನಕ್ಕೆ ನಾವು ತಡೆಯೊಡ್ಡಬೇಕು ಎಂದು ನಿರ್ಣಯಿಸಿದ್ದೇವೆ," ಎಂದು ಅವರು ಹೇಳಿದ್ದಾರೆ.

"ನಮ್ಮ ಯಶಸ್ವೀ ಗ್ಯಾರಂಟಿ ಯೋಜನೆಗಳನ್ನು ಮೋದಿ ಮತ್ತು ಅಮಿತ್ ಶಾ ಕೂಡ ವಿರೋಧಿಸಿದ್ದರು. ಹೀಗಾಗಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಕುಟಿಲತನವನ್ನು ಯಶಸ್ವಿಯಾಗಿ ವಿರೋಧಿಸಿ ಸತ್ಯವನ್ನು ಗೆಲ್ಲಿಸುತ್ತೇವೆ," ಎಂದರು.

ಸಿಎಂ ಪ್ರಕಾರ ರಾಜ್ಯಪಾಲರಿಂದ ಹೇಗೆ ಉಲ್ಲಂಘನೆ?

*ಅಬ್ರಹಾಂ ಎನ್ನುವವರು 26-7-2024 ರ ಬೆಳಗ್ಗೆ 11:30 ಗೆ ದೂರು ನೀಡಿದರೆ ಅದೇ ದಿನ10 ಗಂಟೆಗೇ ರಾಜ್ಯಪಾಲರ ಶೋ ಕಾಸ್ ನೋಟಿಸ್ ರೆಡಿ ಮಾಡಿದ್ದರು.

*ಆದರೆ ಶಶಿಕಲಾ ಜೊಲ್ಲೆ, ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದರೂ ಅವರ ವಿರುದ್ಧದ ತನಿಖೆಗೆ ಅನುಮತಿ ನೀಡಿಲ್ಲ.

*ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ತನಿಖೆ ನಡೆದು ಕುಮಾರಸ್ವಾಮಿ ತಪ್ಪಿತಸ್ಥ ಎಂದು ಉಲ್ಲೇಖವಾಗಿದ್ದರೂ , ತನಿಖೆಯ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದ್ದರೂ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿಲ್ಲ.

*ಹಾಗೆಯೇ ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ಅವರ ವಿರುದ್ಧ ತನಿಖೆ ನಡೆದು ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿ, ತನಿಖಾ ವರದಿ ಉಲ್ಲೇಖವಾಗಿದ್ದರೂ ಇದೇ ರಾಜ್ಯಪಾಲರು ಕ್ರಮಕ್ಕೆ ಅನುಮತಿ ನೀಡಿಲ್ಲ.

*ಆದರೆ ನನ್ನ ವಿಚಾರದಲ್ಲಿ ಮಾತ್ರ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ.

ರಾಜೀನಾಮೆ ಯಾಕೆ ನೀಡಬೇಕು?

"ನನ್ನ ವಿರುದ್ಧ ತನಿಖೆ ನಡೆದಿಲ್ಲ. ತನಿಖೆಯಲ್ಲಿ ನನ್ನ ಪಾತ್ರದ ಉಲ್ಲೇಖವಿಲ್ಲ. ನನ್ನ ಪಾತ್ರದ ಬಗ್ಗೆ ಯಾರೂ ಯಾವುದೇ ದಾಖಲೆ ಕೊಟ್ಟಿಲ್ಲ.

ನನ್ನ ಸರ್ಕಾರದ ಅವಧಿಯಲ್ಲಿ ನಡೆದ ವಿಚಾರ ಇದಲ್ಲ. ನನ್ನಿಂದ ಒಂದೂ ಪತ್ರ ಹೋಗಿಲ್ಲ. ನನ್ನ ಸಹಿ ಎಲ್ಲೂ ಇಲ್ಲ. ನನ್ನಿಂದ ಒಂದೂ ಮನವಿ ಪತ್ರವೂ ಹೋಗಿಲ್ಲ. ಎಲ್ಲವೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವುದು," ಎಂದರು.

"ನಾನು ಏಕೆ ರಾಜೀನಾಮೆ ನೀಡಬೇಕು? ನನ್ನ ಪಾತ್ರದ ಬಗ್ಗೆ ಎಲ್ಲೂ, ಯಾರೂ ಹೇಳುತ್ತಿಲ್ಲ. ಆದರೂ ನಾನೇಕೆ ರಾಜೀನಾಮೆ ನೀಡಲಿ ಹೇಳಿ . ಹೀಗೆ ಯಾವುದೇ ದಾಖಲೆ, ಸಾಕ್ಷ್ಯ, ತನಿಖೆ ಇಲ್ಲದಿದ್ದರೂ ರಾಜ್ಯಪಾಲರು ಆಧಾರವಿಲ್ಲದೆ ಅನುಮತಿ ನೀಡಿ ಕೇಂದ್ರದ ಒತ್ತಡಕ್ಕೆ ಒಳಗಾಗಿದ್ದಾರೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ರಾಜೀನಾಮೆ ನೀಡಬೇಕು. ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ನಮಗೆ ಗೊತ್ತಿತ್ತು. ಅದಕ್ಕೆ ನಾವೂ ಹೋರಾಟದ ಸಿದ್ಧತೆ ಮಾಡಿಕೊಂಡಿದ್ದೇವೆ," ಎಂದು ಸಿದ್ದರಾಮಯ್ಯ ಹೇಳಿದರು.

"ಬಿಜೆಪಿ-ಜೆಡಿಎಸ್ ರಾಜ್ಯದ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ನಾವು ಸತ್ಯ ಮುಂದಿಟ್ಟು ಜನರ ನಡುವೆ ಮತ್ತಷ್ಟು ಗಟ್ಟಿ ಆಗುತ್ತೇವೆ. ನಮ್ಮ, ಸಮಾವೇಶಕ್ಕೆ ಒಂದೂವರೆ ಲಕ್ಷ ಜನ‌ ಸೇರಿದ್ದರು. ಬಿಜೆಪಿಗೆ 30 ಸಾವಿರ ಕೂಡ ಸೇರಿಲ್ಲ. ಜನ ನಮ್ಮ ಪರವಾಗಿ ಇರುವುದಕ್ಕೆ ಇದೇ ಸಾಕ್ಷಿ," ಎಂದರು.

Tags:    

Similar News