ಚಿಕ್ಕೋಡಿಯಲ್ಲಿ ಸರಣಿ ಅಅಪಘಾತ : ಮೂವರ ದುರ್ಮರಣ
ಅತಿ ವೇಗದಿಂದ ಬಂದ ಎರ್ಟಿಗಾ ಕಾರೊಂದು, ರಸ್ತೆ ದಾಟುತ್ತಿದ್ದ ಈ ಸ್ಕಾರ್ಪಿಯೋ ಚಾಲಕನಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ, ಬೇರೆಯವರ ಜೀವ ಉಳಿಸಲು ಬಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.;
ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯ ಅಥಣಿ ಹೊರವಲಯದಲ್ಲಿ ಶನಿವಾರ (ಜೂನ್14ರಂದು) ಬೆಳಿಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತ ಮೂವರ ಅಮೂಲ್ಯ ಜೀವಗಳನ್ನು ಬಲಿತೆಗೆದುಕೊಂಡಿದೆ. ಅದರಲ್ಲಿ ಒಬ್ಬರು , ಮಾನವೀಯತೆ ತೋರಲು ಹೋಗಿದ್ದವರು. ಅಪಾಯದಲ್ಲಿದ್ದವರ ನೆರವಿಗೆ ಧಾವಿಸಿ ತಾನೇ ದುರಂತಕ್ಕೆ ಬಲಿಯಾಗಿದ್ದಾರೆ.
ಮೊದಲಿಗೆ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಒಂದು ಪಿಕಪ್ ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಪಿಕಪ್ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಪಿಕಪ್ ವಾಹನದ ಚಾಲಕ ಮತ್ತು ಕ್ಲೀನರ್ ಗಂಭೀರವಾಗಿ ಗಾಯಗೊಂಡು ನೋವಿನಲ್ಲಿ ನರಳುತ್ತಿದ್ದರು. ಆ ಕ್ಷಣದಲ್ಲಿ, ಅದೇ ಮಾರ್ಗದಲ್ಲಿ ಬರುತ್ತಿದ್ದ ಒಬ್ಬ ಸ್ಕಾರ್ಪಿಯೋ ಚಾಲಕ ದೃಶ್ಯಕ್ಕೆ ಸಾಕ್ಷಿಯಾದರು. ಅವರು ತಮ್ಮ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ, ಗಾಯಾಳುಗಳಿಗೆ ನೆರವಾಗಲು ರಸ್ತೆ ದಾಟುತ್ತಿದ್ದರು.
ವಿಧಿಯಾಟವೇ ಬೇರೆ ಇತ್ತು. ಅತಿ ವೇಗದಿಂದ ಬಂದ ಎರ್ಟಿಗಾ ಕಾರೊಂದು, ರಸ್ತೆ ದಾಟುತ್ತಿದ್ದ ಈ ಸ್ಕಾರ್ಪಿಯೋ ಚಾಲಕನಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ, ಬೇರೆಯವರ ಜೀವ ಉಳಿಸಲು ಬಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು. ನಿಯಂತ್ರಣ ತಪ್ಪಿದ ಎರ್ಟಿಗಾ ಕಾರು ನಂತರ ಮುಂದೆ ಸಾಗಿ ಲಾರಿಗೆ ಅಪ್ಪಳಿಸಿತು. ಈ ದುರಂತದ ಸರಣಿಯಲ್ಲಿ ಎರ್ಟಿಗಾ ಕಾರಿನಲ್ಲಿದ್ದ ಇಬ್ಬರು ಸಹ ಸ್ಥಳದಲ್ಲೇ ಸಾವನ್ನಪ್ಪಿದರು.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರನ್ನು ಮಹಾರಾಷ್ಟ್ರದ ಮಿರಜ್ ಮತ್ತು ಕೊಲ್ಲಾಪುರ ಮೂಲದವರಾದ ಮಹೇಶ ಗಾತಾಡೆ (30), ಶಿವಮ್ ಚೌಹಾನ್ (24), ಮತ್ತು ಸಚಿನ ಮಾಳಿ (40) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇನ್ನೂ ಮೂವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಥಣಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅನ್ಯರ ಜೀವ ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಸ್ಕಾರ್ಪಿಯೋ ಚಾಲಕನ ಕುಟುಂಬದವರ ದುಃಖ ಮೇರೆ ಮೀರಿದೆ.