ಡಾ. ವಿಷ್ಣುವರ್ಧನ್ ಮತ್ತು ಸರೋಜಾದೇವಿಗೆ ಕರ್ನಾಟಕ ರತ್ನ: ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಹಿರಿಯ ನಟಿಯರು
ಜಯಮಾಲಾ, ಮಾಳವಿಕಾ ಅವಿನಾಶ್ ಮತ್ತು ಶೃತಿ ಭೇಟಿ ನೀಡಿ, ಕನ್ನಡ ಚಲನಚಿತ್ರರಂಗದ ದಿಗ್ಗಜರಾದ ಡಾ. ವಿಷ್ಣುವರ್ಧನ್ ಹಾಗೂ ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸಿ.ಎಂಗೆ ಮನವಿ ಸಲ್ಲಿಸಿದರು.;
ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡಬೇಕೆಂದು ಕನ್ನಡದ ಹಿರಿಯ ನಟಿಯರು ಸಿ.ಎಂ ಅವರಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಮಂಗಳವಾರ ಹಿರಿಯ ನಟಿಯರಾದ ಜಯಮಾಲಾ, ಮಾಳವಿಕಾ ಅವಿನಾಶ್ ಮತ್ತು ಶೃತಿ ಭೇಟಿ ನೀಡಿ, ಕನ್ನಡ ಚಲನಚಿತ್ರರಂಗದ ದಿಗ್ಗಜರಾದ ಡಾ. ವಿಷ್ಣುವರ್ಧನ್ ಹಾಗೂ ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದರು.
ಬಳಿಕ ಮಾದ್ಯಮದ ಜತೆ ಮಾತನಾಡಿದ ಹಿರಿಯ ನಟಿ ಜಯಮಾಲಾ, “ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕೆಂದು ಹಾಗೂ ಸರೋಜಾದೇವಿ ಅವರಿಗೆ ಸಹ ಅದೇ ಗೌರವ ನೀಡಬೇಕೆಂದು ನಾವು ಮನವಿ ಮಾಡಿದ್ದೇವೆ. ಜೊತೆಗೆ ಸರೋಜಾದೇವಿ ಅವರ ಹೆಸರನ್ನು ರಸ್ತೆಗೂ ಇಡಬೇಕೆಂದು ವಿನಂತಿಸಿದ್ದೇವೆ. ಸಿಎಂ ಅವರು ಇದನ್ನು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ” ಎಂದು ತಿಳಿಸಿದರು.
“ಡಾ. ವಿಷ್ಣುವರ್ಧನ್ ಅವರ 75ನೇ ವರ್ಷದ ಪ್ರಯುಕ್ತ ನಾವು ಸಿಎಂ ಅವರನ್ನು ಭೇಟಿ ಮಾಡಿದ್ದೇವೆ. ಇದೇ ತಿಂಗಳ 4ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ವಿಷಯವನ್ನು ಸೇರಿಸಿ ಚರ್ಚೆ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಸರೋಜಾ ದೇವಿಯವರಿಗೂ ಕರ್ನಾಟಕ ರತ್ನ ನೀಡಿ, ಮಲ್ಲೇಶ್ವರಂನಲ್ಲಿರುವ ಅವರ ಮನೆಯ ಬಳಿಯ ರಸ್ತೆಗೂ ಅವರ ಹೆಸರಿಡಬೇಕು ಎಂದು ಮನವಿ ಮಾಡಿದ್ದೇವೆ” ಎಂದು ನಟಿ ಮಾಳವಿಕಾ ಅವಿನಾಶ್ ತಿಳಿಸಿದರು.
“ನಾವು ವಿಷ್ಣುವರ್ಧನ್ ಸರ್ ಅವರ ಅಭಿಮಾನಿಗಳಾಗಿ ಬಂದಿದ್ದೇವೆ. ಅವರಿಗೆ ಕರ್ನಾಟಕ ರತ್ನ ನೀಡಬೇಕು, ಸರೋಜಾದೇವಿ ಅವರಿಗೆ ಸಹ ಅದೇ ಗೌರವ ನೀಡಬೇಕು ಎಂದು ವಿನಂತಿಸಿದ್ದೇವೆ. ಸಿಎಂ ಅವರು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಈ ಕುರಿತು ಮಾತಾಡುತ್ತೇನೆ ಎಂದಿದ್ದಾರೆ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ” ಎಂದು ನಟಿ ಶೃತಿ ಹೇಳಿದರು.