ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಹಗರಣ: ಪ್ರಾಸಿಕ್ಯೂಷನ್‌ ದೂರು ದಾಖಲಿಸಿದ ಇಡಿ

ಆರೋಪಿ ಅಧಿಕಾರಿಗಳು ಕೆಬಿಡಿಸಿಯಿಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಿಗಮದ ಹಣವನ್ನು ವಿವಿಧ ನಕಲಿ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ ತಿರುಗಿಸಲಾಗಿದೆ ಎಂದು ಇಡಿ ಹೇಳಿದೆ.;

Update: 2025-06-08 09:13 GMT

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ(ಕೆಬಿಡಿಸಿ) ಕೋಟ್ಯಂತರ ರೂಪಾಯಿ ದುರುಪಯೋಗಪಡಿಸಿಕೊಂಡ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ. ಕೆಬಿಡಿಸಿ ಹಗರಣದಲ್ಲಿ ವಿಶೇಷ ನ್ಯಾಯಾಲಯದಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್‌  ದೂರು ದಾಖಲಿಸಿದೆ. 

ಕೆಬಿಡಿಸಿ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ, ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆರ್‌.ಲೀಲಾವತಿ, ಪಿ.ಡಿ.ಸುಬ್ಬಪ್ಪ ಮತ್ತು ಇತರ ಕೆಲವು ಆರೋಪಿಗಳು ನಿಗಮದಲ್ಲಿ ಅವ್ಯವಹಾರ ನಡೆಸಿದ್ದು, ತನಿಖೆಯಲ್ಲಿ ಆರೋಪವು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿಚಾರಣೆ ನಡೆಸಬೇಕಿದೆ  ಎಂದು ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. 

ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ದಾಖಲಿಸಿದ ವಿವಿಧ ಎಫ್‌ಐಆರ್‌ಗಳ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ. ಆರೋಪಿ ಅಧಿಕಾರಿಗಳು  ಮಧ್ಯವರ್ತಿಗಳು ಮತ್ತವರ ಸಹಚರರೊಂದಿಗೆ ಶಾಮೀಲಾಗಿ ಕೆಬಿಡಿಸಿಯಿಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಿಗಮದ ಹಣವನ್ನು ವಿವಿಧ ನಕಲಿ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ ತಿರುಗಿಸಲಾಗಿದೆ ಎಂದು ಇಡಿ ಹೇಳಿದೆ. 

ಆದಿತ್ಯ ಎಂಟರ್‌ಪ್ರೈಸಸ್, ಸೋಮನಾಥೇಶ್ವರ ಎಂಟರ್‌ಪ್ರೈಸಸ್, ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್, ಹರಂತಿಹಾ ಕ್ರಿಯೇಷನ್ಸ್, ಅನ್ನಿಕಾ ಎಂಟರ್‌ಪ್ರೈಸಸ್‌ ಹೆಸರಲ್ಲಿ ಆರೋಪಿಗಳು ಸಂಸ್ಥೆಗಳನ್ನು ನಡೆಸಿ ಕೆಬಿಡಿಸಿ ಫಲಾನುಭವಿಗಳ ಹಣವನ್ನು ಲೂಟಿ ಮಾಡಿದ್ದಾರೆ. ಬೆಂಗಳೂರಿನ ವಿವಿ ಟವರ್‌ನಲ್ಲಿರುವ ಕೆಬಿಡಿಸಿ ಕಚೇರಿಯಲ್ಲಿ ಕುಳಿತು ಕೋಟ್ಯಂತರ ರೂಪಾಯಿ ಲಪಾಟಿಸಿದ್ದಾರೆ ಈ ಸಂಬಂಧ ಹಲವೆಡೆ ದಾಳಿ ನಡೆಸಲಾಯಿತು ಎಂದು ತಿಳಿಸಿದೆ.


 

ಆರೋಪಿಗಳ ಆಸ್ತಿ ಮುಟ್ಟುಗೋಲು: 

ಹಗರಣದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಕಾರಣ ಪ್ರಕರಣದಲ್ಲಿ ಇಡಿ ಪ್ರವೇಶಿಸಿ ತನಿಖೆ ಕೈಗೊಂಡಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಆರೋಪಿಗಳಾದ ಬಿ.ಕೆ.ನಾಗರಾಜಪ್ಪ, ಆರ್‌.ಲೀಲಾವತಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಬಿ.ಕೆ.ನಾಗರಾಜಪ್ಪ, ಆರ್.ಲೀಲಾವತಿಗೆ ಸೇರಿದ 26 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ 26.27 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ.  ಪ್ರಸ್ತುತ ಮಾರುಕಟ್ಟೆ ಮೌಲ್ಯ 40 ಕೋಟಿ ರೂಪಾಯಿ ಆಗಿದೆ. ಮಧ್ಯವರ್ತಿಗಳು ಮತ್ತು ಅವರ ಸಹಚರರೊಂದಿಗೆ ಶಾಮೀಲಾಗಿ, 750 ಕ್ಕೂ ಹೆಚ್ಚು ನಕಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸಾಲ, ಸಬ್ಸಿಡಿ ಮತ್ತು ಹಣಕಾಸಿನ ನೆರವು ನೀಡುವ ಮೂಲಕ ಕೆಬಿಡಿಸಿಯಿಂದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದೆ. 

ಕೆಬಿಡಿಸಿಯಿಂದ ಮಂಜೂರು ಮಾಡಿದ ಮೊತ್ತವನ್ನುಆರೋಪಿಗಳು ನಿಯಂತ್ರಿಸುವ ಸಂಸ್ಥೆಗಳ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲಾಗಿದೆ.  ನಿಗಮದ ಹಣವನ್ನು ಆರೋಪಿಗಳು ಆಸ್ತಿಗಳ ಖರೀದಿ, ಮಧ್ಯವರ್ತಿಗಳಿಗೆ ಪಾವತಿ ಮಾಡುವುದು ಸೇರಿದಂತೆ ವಿವಿಧ ಕಾರಣಕ್ಕಾಗಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕೆಬಿಡಿಸಿಯಿಂದ ದುರುಪಯೋಗಪಡಿಸಿಕೊಂಡ ಹಣವನ್ನುಐಷಾರಾಮಿ ಜೀವನಶೈಲಿಯನ್ನು ಹೊಂದಲು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಕುಟುಂಬ ಸದಸ್ಯರ ಹೆಸರಿನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಗಳಿಸಲು ಬಳಸಿಕೊಳ್ಳಲಾಗಿದೆ ಎಂಬುದು ಇಡಿ ಆರೋಪವಾಗಿದೆ. 

ಏನಿದು ಹಗರಣ: 

2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದೆ. ಲಕ್ಷಾಂತರ ರೂಪಾಯಿ ಸಾಲ ಕೊಡಿಸುವುದಾಗಿ ಸಾರ್ವಜನಿಕರ ದಾಖಲೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲ, 10 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ನಿಗಮದ ಅಧಿಕಾರಿಗಳು ಸಾಲ ನೀಡುವ ನೆಪದಲ್ಲಿ ಅನ್ನಿಕಾ ಎಂಟರ್‌ಪ್ರೈಸಸ್‌, ಹರ್ನಿತಾ ಕ್ರಿಯೇಷನ್ಸ್‌, ನ್ಯೂ ಕ್ರೀಮ್, ಆದಿತ್ಯಾ ಕಂಪನಿ, ಸೋಮೇಶ್ವರ ಎಂಟರ್‌ಪ್ರೈಸಸ್‌ ಸೇರಿದಂತೆ ಹಲವು ನಕಲಿ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾಯಿಸಿದ್ದರು.


ಕಂಪನಿಗಳಲ್ಲಿ ನಾಗರಾಜಪ್ಪ, ಲೀಲಾವತಿ ಮತ್ತು ಅವರ ಆಪ್ತರು ಪಾಲುದಾರರಾಗಿದ್ದರು. ಪ್ರಕರಣ ಮುಚ್ಚಿಹಾಕಲು ಆರೋಪಿಗಳು ಭೋವಿ ಅಭಿವೃದ್ಧಿ ನಿಗಮದ ಲೆಕ್ಕಪತ್ರ ಕಡತ, ನಗದು ಪುಸ್ತಕಗಳು, ಬ್ಯಾಂಕ್ ಚೆಕ್ ಸೇರಿ 200ಕ್ಕೂ ಹೆಚ್ಚು ಕಡತಗಳನ್ನು ಕಳವು ಮಾಡಿದ್ದರು.  ಈ ಸಂಬಂಧ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ ಜಿಲ್ಲೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದ್ದು, ಹಗರಣದಲ್ಲಿ ಹಲವರನ್ನು ಬಂಧಿಸಿತ್ತು. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ, ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೋಟ್ಯಂತರ ರು. ಹಗರಣವಾಗಿದ್ದರಿಂದ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 



Tags:    

Similar News