ಸರ್ಕಾರದಲ್ಲಿ ಭಾರೀ ಬದಲಾವಣೆ ಇಲ್ಲ; ಸತೀಶ್ ಜಾರಕಿಹೊಳಿ‌

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸತೀಶ್‌ ಜಾರಕಿಹೊಳಿ ಪರೋಕ್ಷವಾಗಿ ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.;

Update: 2025-06-26 08:25 GMT

ಸತೀಶ್‌ ಜಾರಕಿಹೊಳಿ

ರಾಜ್ಯ ಸರ್ಕಾರದಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಣ್ಣ ಪುಟ್ಟ ಬದಲಾವಣೆ ಆಗಲಿದೆ. ಉಳಿದಂತೆ ಅಂತಹ ದೊಡ್ಡ ಬದಲಾವಣೆ ಇಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.  

ಜಲಸಂಪನ್ಮೂಲ ಇಲಾಖೆಯಿಂದಲೂ ಅನುದಾನ ಸಿಗುತ್ತಿಲ್ಲ ಎಂಬ ಶಾಸಕರ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, "ಮೊದಲಿನಿಂದ ನೀರಾವರಿ ಸಮಸ್ಯೆ ಬಗ್ಗೆ ಶಾಸಕ ರಾಜುಕಾಗೆ ಪ್ರಸ್ತಾಪಿಸುತ್ತಿದ್ದಾರೆ. ಈ ವಿಷಯ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿದೆ. ಸಿಎಂ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕರೆದು ಹೇಳುತ್ತಾರೆʼʼ ಎಂದು ತಿಳಿಸಿದ್ದಾರೆ. 

"ಇಲಾಖೆಯಲ್ಲಿ 25 ಸಾವಿರ ಕೋಟಿ ರೂ. ಅನುದಾನವಿದೆ. ಕೆಲ ಬಾಕಿ ಬಿಲ್ಲುಗಳೂ ಇವೆ. ಸರ್ಕಾರದಲ್ಲಿ ಆರಂಭದ ಮೂರು ವರ್ಷಗಳವರೆಗೆ ಬಿಲ್‌ಗಳು ಬಾಕಿ ಇರುತ್ತವೆ. ಯಾವುದೇ ಸರ್ಕಾರ ಬಂದರೂ ಆರಂಭದ ಮೂರು ವರ್ಷ ಬಿಲ್ ಬಾಕಿ ಇದ್ದೆ ಇರುತ್ತದೆ ಎಂದು ತಿಳಿಸಿದ್ದಾರೆ. 

"ಸಿಎಂ ಜೊತೆ ನಾನು ದೆಹಲಿಗೆ ಹೋಗಿರುವುದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದೆವು. ಯಾವತ್ತಾದರೂ ದೆಹಲಿಗೆ ಹೋದಾಗ ಎಲ್ಲರನ್ನೂ ಭೇಟಿಯಾಗುವುದು ಸಹಜ. ಇದರಲ್ಲಿ ರಾಜಕೀಯ ಸಂದೇಶವಿಲ್ಲʼʼ ಎಂದು ಹೇಳಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಜಾರಕಿಹೊಳಿ, "ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಯಾರಿಗೆ ಏನು ಕೊಡಬೇಕೆಂಬುದನ್ನು ಅವರಿಗೆ ತಿಳಿದಿದೆ," ಎಂದು ಹೇಳಿದ್ದಾರೆ.

ಬಿ.ಆರ್. ಪಾಟೀಲ್ ನೀಡಿರುವ ಹೇಳಿಕೆ ಕುರಿತು ದೆಹಲಿಯಲ್ಲಿ ಚರ್ಚೆ ನಡೆದಿದ್ದು, ಹೈಕಮಾಂಡ್ ಈ ವಿಷಯದ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಿದೆ. ಅನುದಾನ, ವರ್ಗಾವಣೆ ಎಂಬುದು ಸ್ಥಳೀಯ ಸಮಸ್ಯೆಗಳು. ರಾಜೀನಾಮೆ ನೀಡುವ ಅಗತ್ಯವಿಲ್ಲ. ಸಿಎಂ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುತ್ತಾರೆ," ಎಂಬ ವಿಶ್ವಾಸವಿದೆ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ.  

Tags:    

Similar News