Bangalore Stampede | ಲಕ್ಷಾಂತರ ಅಭಿಮಾನಿಗಳ ದಟ್ಟಣೆ ನಿರ್ವಹಣೆಗೆ ಪೂರ್ವಸಿದ್ಧತೆಯೇ ಇಲ್ಲ! ಪೊಲೀಸರು ತಿಳಿಹೇಳಿದರೂ ಕೇಳದ ಸರ್ಕಾರ?

ಭದ್ರತೆ ಒದಗಿಸಲು ಪೊಲೀಸರ ಪೂರ್ವ ಸಿದ್ಧತೆ ಇರಲಿಲ್ಲ. ತರಾತುರಿಯಲ್ಲಿ ಆರ್‌ಸಿಬಿಗೆ ಅಭಿನಂದನೆ ಸಮಾರಂಭ ಬೇಡ ಎಂಬ ಸಲಹೆ ಸರ್ಕಾರ, ಕೆಎಸ್‌ಸಿಎ ಸ್ವೀಕರಿಸದ ಕಾರಣ ಸ್ಟೇಡಿಯಂನಲ್ಲಿ ದುರಂತ ಸಂಭವಿಸಿತು.;

Update: 2025-06-05 10:17 GMT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ 11 ಅಮಾಯಕ ಜೀವಗಳು ಬಲಿಯಾಗಿವೆ. ಈ ದುರಂತಕ್ಕೆ  ಪೊಲೀಸ್‌ ಇಲಾಖೆಯ ಪೂರ್ವಸಿದ್ಧತೆ ಇಲ್ಲದೆ ಇರುವುದು ಒಂದು ಕಾರಣವಾದರೆ, ಸರ್ಕಾರವು ಅತುರಾತುರವಾಗಿ ಅಭಿನಂದನೆ ಸಮಾರಂಭ ಆಯೋಜನೆ ಮಾಡಿರುವುದು ಮತ್ತೊಂದು ಕಾರಣ ಎಂಬ ಚರ್ಚೆ ಈಗ ಆರಂಭವಾಗಿದೆ.

ಇದರ ಜೊತೆಗೆ ಪೊಲೀಸ್‌ ಇಲಾಖೆ ವಿಧಾನಸೌಧಕ್ಕೆ ನೀಡಿದ ಖಾಕಿ ಭದ್ರತೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೀಡದಿರುವುದು ಇನ್ನೊಂದು ಕಾರಣವಾಗಿದೆ ಎಂದೂ ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಬೃಹತ್‌ ಪ್ರಮಾಣದಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೂ ಪೊಲೀಸ್‌ ಇಲಾಖೆಯು ಭದ್ರತೆಯ ನೀಲನಕ್ಷೆಯನ್ನು ರೂಪಿಸುತ್ತದೆ. ಆದರೆ, ಸರ್ಕಾರವು ಪೊಲೀಸ್‌ ಇಲಾಖೆಗೆ ಕಾಲಾವಕಾಶ ನೀಡದೆ ದಿಢೀರ್‌ ಸಿದ್ಧತೆಗೆ ಸೂಚನೆ ನೀಡಿದ ಕಾರಣ ಸಮರ್ಪಕವಾದ ಭದ್ರತೆಯ ನೀಲನಕ್ಷೆಯನ್ನು ರೂಪಿಸಲು ಸಾಧ್ಯವಾಗಲಿಲ್ಲ. ವಿಧಾನಸೌಧದ ಭವ್ಯಮೆಟ್ಟಿಲುಗಳ ಮೇಲೆ ಅಭಿನಂದನಾ ಸಮಾರಂಭ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ  ಎರಡು ಒಂದೇ ದಿನ, ಅದರಲ್ಲಿಯೂ ಒಂದೆರಡು ಗಂಟೆಗಳ ಅಂತರದಲ್ಲಿ ಆಯೋಜನೆ ಮಾಡಿರುವುದು ಪೊಲೀಸ್‌ ಭದ್ರತೆ ಕೈಗೊಳ್ಳಲು ವಿಫಲವಾಯಿತು ಎಂಬ ಬಗ್ಗೆ ಹೆಸರು ಹೇಳಲಿಚ್ಛಿಸದ ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ. 

ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಭದ್ರತೆ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಸೂಚನೆ ಹೋಗಿದ್ದರಿಂದ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಭದ್ರತೆ ಕುರಿತು ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಸರ್ಕಾರಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸಂಭ್ರಮಾಚರಣೆ ಬೇಡ ಎಂಬ ಸಲಹೆ ನೀಡಿದ್ದರು. ಕೆಎಸ್‌ಸಿಎನಿಂದ ಸಂಭ್ರಮಾಚರಣೆ ಹಾಗು ಸರ್ಕಾರದ ವತಿಯಿಂದ ವಿಧಾನಸೌಧದ ಬಳಿ ಸನ್ಮಾನ ಕಾರ್ಯಕ್ರಮ ಆಯೋಜನೆಗೆ ಪೊಲೀಸ್ ಅಧಿಕಾರಿಗಳು ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಬೇಡ ಎಂಬ ಅಭಿಪ್ರಾಯವನ್ನು ಗೃಹ ಸಚಿವರು ಮತ್ತು ಸರ್ಕಾರಕ್ಕೆ ನೀಡಿದ್ದಾರೆ. ಆದರೆ ಇದರ ಬಗ್ಗೆ ಚರ್ಚೆಮಾಡದೆ ಇನ್ನೂ ತೀರ್ಮಾನ ಮಾಡುವ ಮುನ್ನವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜಕೀಯವಾಗಿ ನಿರ್ಧಾರ ಮಾಡಲಾಗಿತ್ತು. ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಭದ್ರತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿತು ಎಂದು ಹೇಳಲಾಗಿದೆ.

ಸರ್ಕಾರದ ನಿರ್ದೇಶನವು ಪೊಲೀಸ್‌ ಇಲಾಖೆಗೆ ನುಂಗಲಾರದ ತುತ್ತಾಗಿದ್ದು, ದಿಢೀರ್‌ ಸಿದ್ಧತೆಗೆ ಸಜ್ಜಾಯಿತು. ಇರುವ ಪೊಲೀಸ್‌ ಸಿಬ್ಬಂದಿಯನ್ನು ಬಳಸಿಕೊಂಡು ಭದ್ರತೆಗೆ ನಿಯೋಜನೆ ಕೈಗೊಂಡಿತು. ಯಾವ ಪೊಲೀಸ್‌ ಸಿಬ್ಬಂದಿಯನ್ನು ಎಲ್ಲಿ ನಿಯೋಜನೆ ಮಾಡಬೇಕು ಎಂಬುದರ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡದೆ ಅಂದಾಜಿನ ಮೇಲೆ ಭದ್ರತೆ ಕೈಗೊಳ್ಳಬೇಕಾಯಿತು. ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ರಾಜಕೀಯ ನಾಯಕರೇ ಘೋಷಣೆ ಮಾಡಿದ್ದು, ಪೊಲೀಸ್‌ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 

ಸರ್ಕಾರ ಸೂಚನೆ ನೀಡಿದ್ದರಿಂದ ಭದ್ರತೆಗೆ ಮುಂದಾದ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು, ಆರ್‌ಸಿಬಿ ಆಟಗಾರರಿಗೆ ಭದ್ರತೆ ನೀಡಲು ಪೊಲೀಸ್‌ ಇಲಾಖೆಯು ಹೆಚ್ಚಿನ ಗಮನ ನೀಡಿತ್ತು. ಜನರನ್ನು ನಿಯಂತ್ರಿಸಲು ವಿಧಾನಸೌಧದ ಭದ್ರತೆಗಾಗಿ ಅಧಿಕ ಸಂಖ್ಯೆಯಲ್ಲಿ ಖಾಕಿ ಪಡೆಯನ್ನು ನಿಯೋಜಿಸಲಾಗಿತ್ತು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಷ್ಟು ಪ್ರಮಾಣದಲ್ಲಿ ಭದ್ರತೆ ಒದಗಿಸಿರಲಿಲ್ಲ

ಗೃಹ ರಕ್ಷಕ ಸಿಬ್ಬಂದಿಗೆ ತರಬೇತಿಯಿಲ್ಲ

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪೊಲೀಸ್‌ ಇಲಾಖೆಯ ಸಿಬ್ಬಂದಿ ಜತೆಗೆ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಎಲ್ಲ ಸೇರಿ 1 ಸಾವಿರದಷ್ಟು ಸಂಖ್ಯೆಯಲ್ಲಿ ಭದ್ರತೆ ಒದಗಿಸಲಾಗಿತ್ತು. ಇದರಲ್ಲಿ ಅಂದಾಜು 100ಕ್ಕೂ ಅಧಿಕ ಸಂಖ್ಯೆಯಲ್ಲಿ ಗೃಹ ರಕ್ಷಕ ಸಿಬ್ಬಂದಿಯನ್ನು ಮಾತ್ರ ನಿಯೋಜನೆ ಮಾಡಲಾಗಿತ್ತು. ಇನ್ನುಳಿದಂತೆ ವಿವಿಧ ಪೊಲೀಸ್‌ ಠಾಣೆಯ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು. ಸಿಎಆರ್‌ನ ಒಂದು ಪಡೆ ಮಾತ್ರ ಕಾರ್ಯನಿರ್ವಹಣೆಯಲ್ಲಿ ತೊಡಗಿತ್ತು. ಇದನ್ನು ಹೊರತು ಪಡಿಸಿದರೆ, ಕೈಗಾರಿಕಾ ಭದ್ರತಾ ಪಡೆಯಾಗಲಿ, ಸಿಆರ್‌ಪಿಎಫ್‌ ಪಡೆಯಾಗಲಿ ನಿಯೋಜನೆ ಮಾಡಲು ಸಾಧ್ಯವಾಗಲಿಲ್ಲ.  ಹಾಗಾಗಿ ಲಕ್ಷಾಂತರ ಮಂದಿ ಕ್ರಿಕೆಟ್‌ ಅಭಿಮಾನಿಗಳ ದಟ್ಟಣೆಯನ್ನು ನಿಯಂತ್ರಿಸಲು ಅಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಸರಿಯಾದ ತರಬೇತಿಯೂ ಇರಲಿಲ್ಲ ಮತ್ತು ಅಭಿಮಾನಿಗಳ ಉನ್ಮಾದವನ್ನು ನಿಯಂತ್ರಿಸಲು ಅವರಿಂದ ಸಾಧ್ಯವೂ ಆಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಕಡಿಮೆ ಸಂಖ್ಯೆಯಲ್ಲಿ ಪೊಲೀಸ್‌ ಭದ್ರತೆ ಇದ್ದು, ಭಾರೀ ಪ್ರಮಾಣದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂಗೆ ಜನರು ಆಗಮಿಸಿದರು. ಲಕ್ಷಾಂತರ ಜನ ಸ್ಟೇಡಿಯಂಗೆ ಆಗಮಿಸಿದ್ದರಿಂದ ಅವರನ್ನು ನಿಯಂತ್ರಿಸಲು ಸಾಧ್ಯವಾಗದೆ ಕೆಲವು ಗೇಟ್‌ಗಳ ಮೂಲಕ ಒಳಗೆ ಬಿಡಲಾಯಿತು. ಪ್ರತಿ ಗೇಟ್‌ ಬಳಿಯು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಭದ್ರತೆ ಇರಲಿಲ್ಲ. ಅಧಿಕ ಸಂಖ್ಯೆಯಲ್ಲಿ ಹಿರಿಯ ಅಧಿಕಾರಿಗಳು ಸಹ ಇರದೆ ಕೆಲವೇ ಸಂಖ್ಯೆಯಲ್ಲಿ ಪೊಲೀಸ್‌ ಕಾನ್ಸ್‌ಟೇಬಲ್‌ಗಳು ಇದ್ದ ಕಾರಣ ಅನಾಹುತಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. 

ಭಾನುವಾರ ಆಯೋಜನೆಗೆ ಸಲಹೆ

18 ವರ್ಷಗಳ ಬಳಿಕ ಆರ್‌ಸಿಬಿ ತಂಡ ಐಪಿಎಲ್‌ ಕಪ್‌ ಮುಡಿಗೇರಿಸಿಕೊಂಡ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಸಹಜವಾಗಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಒಂದು ವೇಳೆ ಸರ್ಕಾರ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದರೆ ಲಕ್ಷಾಂತರ ಜನ ಸೇರುವ ಸಾಧ್ಯತೆ ಇದೆ ಎಂಬುದನ್ನು ಪೊಲೀಸರು ನಿರೀಕ್ಷಿಸಿದ್ದರು. ಹೀಗಾಗಿ ಸರ್ಕಾರಕ್ಕೆ ಪೂರ್ವ ಸಿದ್ಧತೆ ಕೈಗೊಂಡು ಭಾನುವಾರ ಕಾರ್ಯಕ್ರಮ ಆಯೋಜನೆ ಮಾಡಲು ಸಲಹೆ ನೀಡಿದ್ದರು ಎಂಬ ಮಾಹಿತಿಯಿದೆ. 

ಗೆಲುವು ಸಾಧಿಸಿದ ಬೆನ್ನಲ್ಲೇ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದರೆ ಸಂಚಾರ ದಟ್ಟಣೆ, ಜನ ದಟ್ಟಣೆ ನಿಯಂತ್ರಣ ಸುಲಭವಲ್ಲ. ಹೀಗಾಗಿ ಭಾನುವಾರ ರಜೆ ದಿನ ಇದ್ದು, ಅದು ಕಾರ್ಯಕ್ರಮ ಮಾಡಿದರೆ ಸಂಚಾರ ದಟ್ಟಣೆ, ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಭದ್ರತೆ ಬಗ್ಗೆ ನೀಲನಕ್ಷೆ ರೂಪಿಸಿ ಸಿದ್ಧತೆ ಕೈಗೊಳ್ಳಬಹುದು ಎಂಬ ಸಲಹೆ ನೀಡಿದರು ಎನ್ನಲಾಗಿದೆ.

ಈ ಬಗ್ಗೆ ಕೆಎಸ್‌ಸಿಎಗೆ ಮಾಹಿತಿ ನೀಡಲಾಗಿತ್ತು. ಆದರೆ, ಆರ್‌ಸಿಬಿ ವ್ಯವಸ್ಥಾಪಕ ಮಂಡಳಿಯು ಭಾನುವಾರ ಹಾಜರಾಗುವುದಿಲ್ಲ ಎಂಬ ಮಾಹಿತಿ ನೀಡಿತು. ಕೆಲವು ಆಟಗಾರರು ವಿದೇಶಕ್ಕೆ ತೆರಳಲಿದ್ದು, ಕಾರ್ಯಕ್ರಮ ಮಾಡಿದರೆ ಈಗಲೇ ಮಾಡಬೇಕು ಎಂಬ ವಿಷಯವನ್ನು ತಿಳಿಸಿತು. ಈ ಹಿನ್ನೆಲೆಯಲ್ಲಿ ಸರ್ಕಾರವು ಪೊಲೀಸರ ಅಭಿಪ್ರಾಯವನ್ನು ಧಿಕ್ಕರಿಸಿ ಕಾರ್ಯಕ್ರಮ ಆಯೋಜನೆ ಮಾಡಿತು. ಪರಿಣಾಮ ಸಾಗರೋಪಾದಿಯಲ್ಲಿ ಬಂದ ಜನರಿಗೆ ಸೂಕ್ತ ಭದ್ರತೆ ಕಲ್ಪಿಸಲು ಸಾಧ್ಯವಾಗಲಿಲ್ಲ. ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ ಅವಘಡ ನಡೆಯಿತು. ಪೊಲೀಸ್‌ ಭದ್ರತೆ ವೈಫಲ್ಯದಿಂದಾಗಿ ನಡೆದ ಅನಾಹುತಕ್ಕೆ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 


Tags:    

Similar News