ದೀಪಾವಳಿ -ಬಿಹಾರ ಚುನಾವಣೆ ಎಫೆಕ್ಟ್: ಬರಿದಾಗುತ್ತಿರುವ ಬೆಂಗಳೂರು, ಕಣ್ಣೀರಿಡುತ್ತಿರುವ ಪ್ರಯಾಣಿಕ!

ಸತತ ರಜೆ ಇರುವ ಕಾರಣ ಸ್ವಗ್ರಾಮದಲ್ಲಿ ಬೆಳಕಿನ ಹಬ್ಬ ಆಚರಿಸಲು ಜನತೆ ತೆರಳುತ್ತಿದ್ದಾರೆ. ಇದರ ಲಾಭ ಮಾಡಿಕೊಳ್ಳಲು ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಮೂರು ಪಟ್ಟು ಹಣ ವಸೂಲಿಯಲ್ಲಿ ತೊಡಗಿದ್ದಾರೆ.

Update: 2025-10-18 14:22 GMT
Click the Play button to listen to article

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಹಾಗೂ ಬಿಹಾರ ವಿಧಾನಸಭಾ ಚುನಾವಣೆಯ ಕಾವು—ಈ ಎರಡೂ ಪ್ರಮುಖ ವಿದ್ಯಮಾನಗಳು ಸಿಲಿಕಾನ್ ಸಿಟಿ ಬೆಂಗಳೂರಿನ ಚಿತ್ರಣವನ್ನೇ ತಾತ್ಕಾಲಿಕವಾಗಿ ಬದಲಿಸಿವೆ. ಸದಾ ವಾಹನ ದಟ್ಟಣೆ ಹಾಗೂ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಮಹಾನಗರಿಯ ರಸ್ತೆಗಳು ಈಗ ನಿರಾಳವಾಗುತ್ತಿವೆ. ಉದ್ಯೋಗ, ಶಿಕ್ಷಣ ಅಂತ ನಗರದಲ್ಲಿ ನೆಲೆಸಿದ್ದ ಲಕ್ಷಾಂತರ ಮಂದಿ ತಮ್ಮ ಊರುಗಳತ್ತ ಮುಖ ಮಾಡಿದ್ದರೆ, ಬಿಹಾರ ಮೂಲದ ಕಾರ್ಮಿಕರು ಮತದಾನಕ್ಕಾಗಿ ತಮ್ಮ ತಾಯ್ನಾಡಿಗೆ ದೌಡಾಯಿಸಿದ್ದಾರೆ. ಈ ಮಹಾ ವಲಸೆಯು ಒಂದು ಕಡೆ ಖಾಸಗಿ ಬಸ್ ಮಾಲೀಕರಿಗೆ 'ಸುಗ್ಗಿ'ಯಾದರೆ, ಇನ್ನೊಂದೆಡೆ ಸಾಮಾನ್ಯ ಪ್ರಯಾಣಿಕನ ಜೇಬಿಗೆ ಕತ್ತರಿ ಹಾಕಿದೆ.

ಖಾಸಗಿ ಬಸ್‌ಗಳ ಹಗಲು ದರೋಡೆ: ಮುಗಿಲು ಮುಟ್ಟಿದ ಟಿಕೆಟ್ ದರ

ದೀಪಾವಳಿಗೆ ಸತತವಾಗಿ ಬಂದಿರುವ ರಜೆಗಳನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಕಂಪನಿಗಳು, ಟಿಕೆಟ್ ದರವನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಿವೆ. ಸಾಮಾನ್ಯ ದಿನಗಳಲ್ಲಿ 700- 800 ರೂಪಾಯಿಗೆ ಸಿಗುತ್ತಿದ್ದ ಬೆಂಗಳೂರು-ಹುಬ್ಬಳ್ಳಿ ಎಸಿ ಸ್ಲೀಪರ್ ಬಸ್ ಟಿಕೆಟ್ ದರ, ಇದೀಗ 3,000 ದಿಂದ 4,500ರ ರೂಪಾಯಿ ಗಡಿ ಮುಟ್ಟಿದೆ. ಅದೇ ರೀತಿ, 900- 1,100 ರೂಪಾಯಿ ಇರುತ್ತಿದ್ದ ಬೆಂಗಳೂರು-ಬೆಳಗಾವಿ ಟಿಕೆಟ್ ಬೆಲೆ 2,600 ರಿಂದ 4,000 ರೂಪಾಯಿಗೆ ಜಿಗಿದಿದೆ. ಬೆಂಗಳೂರು-ಮಂಗಳೂರು ಮಾರ್ಗದ ದರವು 2,500 ದಾಟಿದರೆ, ಬೆಂಗಳೂರು-ಹೈದರಾಬಾದ್ ದರ 2,000ಕ್ಕೆ ಏರಿದೆ. ಈ ಅನಿರೀಕ್ಷಿತ ದರ ಏರಿಕೆಯಿಂದಾಗಿ, ಹಬ್ಬಕ್ಕೆ ಊರಿಗೆ ಹೊರಟಿದ್ದ ಮಧ್ಯಮ ವರ್ಗದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.

ಊರುಗಳತ್ತ ಜನಸಾಗರ: ಸ್ತಬ್ಧವಾದ ಬೆಂಗಳೂರಿನ ರಸ್ತೆಗಳು

ಶುಕ್ರವಾರ ಸಂಜೆಯಿಂದಲೇ ನಗರದ ಹೊರವಲಯದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಹೊಸೂರು ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಬಳ್ಳಾರಿ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಖಾಸಗಿ ಕಾರುಗಳು, ದ್ವಿಚಕ್ರ ವಾಹನಗಳಲ್ಲಿ ಲಕ್ಷಾಂತರ ಮಂದಿ ಊರುಗಳತ್ತ ಪ್ರಯಾಣ ಬೆಳೆಸಿದ್ದರಿಂದ, ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಗಂಟೆಗಟ್ಟಲೆ ಪರದಾಡುವಂತಾಯಿತು. ಮೆಜೆಸ್ಟಿಕ್, ಶಾಂತಿನಗರ, ಯಶವಂತಪುರ ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಜನಸಾಗರವೇ ನೆರೆದಿದ್ದು, ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡಬೇಕಾಯಿತು.

ಮತದಾನಕ್ಕಾಗಿ ತಾಯ್ನಾಡಿಗೆ: ಬಿಹಾರ ಕಾರ್ಮಿಕರ ವಲಸೆ

ದೀಪಾವಳಿ ಹಬ್ಬದ ಜೊತೆಜೊತೆಗೆ, ನವೆಂಬರ್ 6 ಮತ್ತು 11 ರಂದು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯು ಕಾರ್ಮಿಕರ ವಲಸೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಲು, ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಾರು ಬಿಹಾರ ಮೂಲದ ಕಾರ್ಮಿಕರು, ತಮ್ಮ ಕುಟುಂಬ ಮತ್ತು ಸರಕು-ಸರಂಜಾಮುಗಳೊಂದಿಗೆ ರೈಲು ಹತ್ತಿದ್ದಾರೆ. ಇದರಿಂದಾಗಿ ಮೆಜೆಸ್ಟಿಕ್, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ಉತ್ತರ ಭಾರತಕ್ಕೆ ತೆರಳುವ ರೈಲುಗಳು ತುಂಬಿ ತುಳುಕುತ್ತಿದ್ದವು. ‘ಭಾಗಮತಿ ಸೂಪರ್‌ಫಾಸ್ಟ್’ ನಂತಹ ರೈಲುಗಳಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನಸಂದಣಿ ಇತ್ತು.

ಸರ್ಕಾರದ ಕ್ರಮ ಮತ್ತು ಸಚಿವರ ಎಚ್ಚರಿಕೆ

ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಮತ್ತು ಖಾಸಗಿ ಬಸ್‌ಗಳ ಸುಲಿಗೆಗೆ ಕಡಿವಾಣ ಹಾಕಲು ಸರ್ಕಾರ ಕೂಡ ಕ್ರಮ ಕೈಗೊಂಡಿದೆ. ಹೆಚ್ಚುವರಿ ಬಸ್ ವ್ಯವಸ್ಥೆ: ಕೆಎಸ್‌ಆರ್‌ಟಿಸಿಯು ರಾಜ್ಯದ ವಿವಿಧ ಭಾಗಗಳಿಗೆ ಸುಮಾರು 2,500 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಹಬ್ಬದ ನಂತರ, ಅಕ್ಟೋಬರ್ 22 ರಿಂದ 26ರ ವರೆಗೆ ಬೆಂಗಳೂರಿಗೆ ವಾಪಸ್ ಬರಲು ಕೂಡ ವಿಶೇಷ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.

ಖಾಸಗಿ ಬಸ್‌ಗಳ ದುಪ್ಪಟ್ಟು ದರ ವಸೂಲಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, "ನಿಯಮ ಮೀರಿ ದರ ವಸೂಲಿ ಮಾಡಿದರೆ ಬಸ್‌ಗಳನ್ನು ಜಪ್ತಿ ಮಾಡಿ, ಪರ್ಮಿಟ್ ರದ್ದುಗೊಳಿಸಲಾಗುವುದು" ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ 650ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

Tags:    

Similar News